ಸಂಕ್ಷಿಪ್ತ ವ್ಯಕ್ತಿಚಿತ್ರ : ಭಾರತದ 'ಕಾಫಿ ಕಿಂಗ್' ವಿ. ಜಿ. ಸಿದ್ದಾರ್ಥ ಹೆಗ್ಡೆ from ಚೇತನಹಳ್ಳಿ ಎಸ್ಟೇಟ್
ಭಾರತದ 'ಕಾಫಿ ಕಿಂಗ್' ಎಂದು ಕರೆಸಿಕೊಳ್ಳುವ ಅರ್ಹತೆಯುಳ್ಳ ಕೆಫೆ ಕಾಫಿ ಡೇ ಸ್ಥಾಪಕ, ಮಾಲೀಕ ವಿ. ಜಿ. ಸಿದ್ದಾರ್ಥ ಹೆಗ್ಡೆ ನಿಗೂಢ ನಾಪತ್ತೆ ಪ್ರಕರಣ ಕಣ್ಮುಂದೆ ಇರುವಾಗ ಸಿದ್ದಾರ್ಥ ಅವರ ಪರಿಚಯಾತ್ಮಕ ಲೇಖನ ಇಲ್ಲಿದೆ.
ಸುಮಾರು 140 ವರ್ಷಗಳಿಂದ ಪ್ಲಾಂಟರ್ ಗಳಾಗಿ ಬೆಳೆದು ಬಂದಿರುವ ಗಂಗಯ್ಯ ಹೆಗ್ಡೆ ಎಂದರೆ ಎಲ್ಲರೂ ಭಕ್ತಿ ಭಾವದಿಂದ ನೋಡುವಂಥ ಹಿರಿಯ ಜೀವ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಚೇತನಹಳ್ಳಿ ಎಸ್ಟೇಟ್ ಮಾಲೀಕರು ಎಂದು ಅವರನ್ನು ಕಾಣುವುದಕ್ಕಿಂತ ಊರಿನ ಹಿರಿಯರು, ಸ್ವಾತಂತ್ರ್ಯ ಹೋರಾಟಗಾರರು ಎಂದೇ ಎಲ್ಲರೂ ಇಂದಿಗೂ ಕಾಣುತ್ತಾರೆ.
ಚಿಕ್ಕಮಗಳೂರಿನ ಒಕ್ಕಲಿಗರು ಕಾಫಿ, ಏಲಕ್ಕಿ, ಮೆಣಸು ಬೆಳೆದು ಉದ್ಧಾರ ಆಗಿದ್ದು ಅಷ್ಟರಲ್ಲೇ ಇದೆ ಎಂದು ಹೊರಗಿನವರು ಮೂದಲಿಸುವುದನ್ನು ಕೇಳಿರಬಹುದು. ಕಾಫಿ, ಏಲಕ್ಕಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ತೇಜಸ್ವಿ ಹಲವು ಬಾರಿ ಬರೆದಿದ್ದಾರೆ, ಹೋರಾಟ ಕೂಡಾ ಮಾಡಿದ್ದರು. ಇಂಥ ಹಿನ್ನಲೆಯುಳ್ಳ ಕಾಫಿ ಬೆಳೆಗಾರರ ನಡುವೆ ಸಣ್ಣ ಊರಿನಿಂದ ಬಂದು ಜಾಗತಿಕ ಮಟ್ಟದ ಕಾಫಿ ಬ್ರ್ಯಾಂಡ್ ಬೆಳೆಸಿದ ಸಾಧನೆ ಸಿದ್ದಾರ್ಥ ಹೆಗ್ಡೆ ಅವರಿಗೆ ಸಲ್ಲುತ್ತದೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಳಿಯರಾದ ಬಳಿಕವೂ, ಖ್ಯಾತ ಉದ್ಯಮಿಯಾದ ಬಳಿಕವೂ ಸುಪರಿಚಿತರಾಗಿಯೂ ಅಪರಿಚಿತರಾಗಿ ಉಳಿದ್ದ ಸರಳ ಉದ್ಯಮಿ ಸಿದ್ದಾರ್ಹ ಹೆಗ್ಡೆ, ದೇಶ-ವಿದೇಶಗಳಲ್ಲಿ ಹೆಸರುವಾಸಿಯಾದರೂ ಊರು ಮನೆಗೆ ಬಂದ್ರೆ ಎಲ್ಲರೊಡನೆ ಸಹಜವಾಗಿ ಬೆರೆತು ಮಾತನಾಡಿಸುತ್ತಿದ್ದ ಗುಣ ಅಪ್ಪನಿಂದ ಬಂದಿದ್ದ ಬಳುವಳಿ. ಯುವ ಜನಾಂಗಕ್ಕೆ ಹಾಟ್ ಸ್ಪಾಟ್, ಉದ್ಯಮಿಗಲ ಮೀಟಿಂಗ್ ತಾಣವಾಗಿ ಕೆಫೆ ಕಾಫಿ ಡೇ ರೂಪಿಸಿದ ಸಿದ್ದಾರ್ಥ, A lot can happen over coffee ಎಂಬ ಸ್ಲೋಗನ್ ಜೊತೆಗೆ ಕಾಫಿಯ ಬ್ರ್ಯಾಂಡ್, ಸಂಸ್ಕೃತಿಗೆ ಹೊಸ ಮಾರ್ಗ ತೋರಿದವರು.

ವಿದ್ಯೆ ಕಲಿಸಿದ ಬದುಕಿನ ಪಾಠ
ಮಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಪದವಿ ಮುಗಿಸಿಕೊಂಡು 1983-84ರಲ್ಲಿ ಮುಂಬೈಗೆ ತೆರಳಿ ಜೆಎಂ ಫೈನಾನ್ಶಿಯಲ್ ಸರ್ವಿಸಸ್ ಸ್ಟಾಕ್ ಬ್ರೋಕರ್ ಕಚೇರಿಯಲ್ಲಿ ಮ್ಯಾನೇಜ್ಮೆಂಟ್ ಟ್ರೈನಿಯಾಗಿ ಉದ್ಯೋಗ ಹಿಡಿದರು.
24 ವರ್ಷಕ್ಕೆ ಸ್ಟಾಕ್ ಮಾರ್ಕೆಟ್ ಕಂಪನಿ ಕಲಿಸಿದ ಪಾಠ ಅಪ್ಪ ಕೊಟ್ಟ ಹಣ, ಕೈಲಿದ್ದ 30,000ರು ಬಳಸಿ ಸಿವಾನ್ ಸೆಕ್ಯುರಿಟೀಸ್ ಎಂಬ ಕಂಪನಿ ಆರಂಭಿಸಿದರು. ನಂತರ ಅದೇ ಕಂಪನಿ ವೇ2 ವೆಲ್ತ್ ಎಂಬ ದೊಡ್ಡ ಹಣಕಾಸು ಸಂಸ್ಥೆಯಾಗಿ ಬದಲಾಯಿತು, ಆಮೇಲೆ ಗ್ಲೋಬಲ್ ಟೆಕ್ನಾಲಜೀಸ್ ವೆಂಚುರ್ಸ್ ಎಂದಾಗಿದೆ.
ಮುಂಬೈನಲ್ಲಿ ಕಲಿತ ಪಾಠದಿಂದ ಕಾಫಿಗೆ ವ್ಯವಹಾರಿಕ ಸ್ಪರ್ಶ ನೀಡಿ, ಬ್ರ್ಯಾಂಡ್ ಕಟ್ಟುವುದು ಹೇಗೆ ಎಂಬುದರ ನೀಲ ನಕ್ಷೆ ರೂಪಿಸಿದಾಗ 1990ರ ಕಾಲ ಘಟ್ಟವಾಗಿತ್ತು. ಇದೇ ಸಮಯದಲ್ಲಿ ಎಸ್ಎಂ ಕೃಷ್ಣ ಅವರ ಪುತ್ರಿ ಮಾಳವಿಕಾರನ್ನು ವರಿಸಿದ ಸಿದ್ದಾರ್ಥ ಅವರಿಗೆ ವಿವಿಧ ಬ್ಯಾಂಕುಗಳಿಂದ ಸಾಲ ಪಡೆದು ತಮ್ಮ ಕನಸು ಸಾಕಾರಗೊಳಿಸಲು ಸಾಧ್ಯವಾಯಿತು.

ಕಾಫಿ ರಫ್ತು ಮಾಡುವ ಸಂಸ್ಥೆ ಸ್ಥಾಪಕ
1993ರಲ್ಲಿ ಅಮಾಲ್ಗಮೇಟೆಡ್ ಬೀನ್ ಕಾಫಿ ಟ್ರೇಡಿಂಗ್ ಕಂಪನಿ ಲಿಮಿಟೆಡ್ (ಎಬಿಸಿಟಿಸಿಎಲ್) ಸ್ಥಾಪಿಸಿದರು. ಇದರ ಮುಖ್ಯ ಉದ್ದೇಶ ಕಾಫಿ ರಫ್ತು ಮಾಡುವುದು ಮಾತ್ರವಾಗಿತ್ತು . ಪಿತ್ರಾರ್ಜಿತವಾಗಿ ಬಂದಿದ್ದ ಪ್ಲಾಂಟೇಷನ್ ನಿಂದ ಸುಮಾರು 3,000 ಟನ್ ಕಾಫಿ ಹಾಗೂ ಎಬಿಸಿ ಕಂಪನಿಯಿಂದ ಸೇರಿ 20,000 ಟನ್ ಕಾಫಿ ರಫ್ತು ಮಾಡಲು ಆರಂಭಿಸಿ, ಕೆಲ ವರ್ಷಗಳಲ್ಲೇ ಭಾರತದ ಎರಡನೇ ಅತಿ ದೊಡ್ಡ ರಫ್ತುದಾರರೆನಿಸಿದರು.
ಟಾಟಾ ಸೇರಿದಂತೆ ಹಲವು ಸಂಸ್ಥೆಗಳು ಆಗಿನ್ನೂ ಕಾಫಿಗೆ ದೊಡ್ಡ ಮಾರುಕಟ್ಟೆ ಇದೆ ಎಂದು ನಂಬಲು ಸಾಧ್ಯವಾಗದ ಕಾಲ. ಟೀ ನಂಬಿಕೊಂಡು ಕೊಡಗಿನಲ್ಲಿ ಟಾಟಾ ಹೂಡಿಕೆ ಮಾಡಲು ಯೋಚಿಸುತ್ತಿದ್ದ ಕಾಲ. ಕಾಫಿ ರಫ್ತು ಆಧಾರವಾಗಿಟ್ಟುಕೊಂಡು ಹೇಗೆಲ್ಲ ವಿವಿಧ ಸಂಬಂಧಿತ ಕ್ಷೇತ್ರಗಳ ಮೇಲೆ ಹೂಡಿಕೆ ಮಾಡಬಹುದು ಎಂಬುದನ್ನು ಸಿದ್ದಾರ್ಥ ತೋರಿಸಿಕೊಟ್ಟರು.

ಸಿಸಿಡಿ ಎಂಬ ಕಾಫಿ ಮಳಿಗೆ ಬ್ರ್ಯಾಂಡ್
ಸಿಸಿಡಿ ಎಂಬ ಬ್ರ್ಯಾಂಡ್ : 1996ರಲ್ಲಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕೆಫೆ ಕಾಫಿ ಡೇ ಮಳಿಗೆ ಆರಂಭವಾಯಿತು. ಗಂಟೆಗೆ 10 0ರೂ ಕೊಟ್ಟು ಇಂಟರ್ನೆಟ್ ನೋಡುವ, ಮೊಬೈಲ್ ಫೋನ್ ಬಳಸುವುದೇ ದುಬಾರಿ ಎನ್ನುತ್ತಿದ್ದ ಕಾಲದಲ್ಲಿ 'ಕಾಫಿಗೆ ನೂರಾರು ರುಪಾಯಿ ತೆತ್ತು ಯಾರು ಕುಡಿಯುತ್ತಾರೆ' ಎಂಬ ಮಾತಿನ ನಡುವೆ ಬೆಳೆದ ಕಾಫಿ ಡೇ ಇಂದು ದೇಶ-ವಿದೇಶದಲ್ಲಿ ಎಲ್ಲರ ಅಚ್ಚುಮೆಚ್ಚಾಗಿದೆ. ಸ್ಟಾರ್ ಬಕ್ಸ್ ನಂಥ ದೈತ್ಯ ಕಂಪನಿಗೆ ಸವಾಲು ಹಾಕಿದೆ. ದೇಶಿ ಬ್ರ್ಯಾಂಡ್ ಆಗಿ ಜಾಗತಿಕವಾಗಿ ಎಲ್ಲರ ಕಣ್ಣರಳಿಸಿದೆ.
ಮಾರ್ಚ್ 2019ರ ಎಣಿಕೆಯಂತೆ ಭಾರತದಲ್ಲಿ ಸುಮಾರು 1,752 ಕೆಫೆಗಳನ್ನು ಹೊಂದಿರುವ ಕೆಫೆ ಕಾಫಿ ಡೇ, 48000 ವೆಂಡಿಂಗ್ ಮಷಿನ್, 532 ಕಿಸೋಸ್ಕ್, 403 ಕಾಫಿ ಮಾರಾಟ ಔಟ್ಲೆಟ್ ಹೊಂದಿದ್ದು, ಸದ್ಯ ದೇಶದಲ್ಲಿ ಮುಂಚೂಣಿಯಲ್ಲಿರುವ ಕಾಫಿ ಸಂಸ್ಥೆಯಾಗಿದೆ. ಭಾರತದಲ್ಲಿ ವಿಸ್ತೃತವಾದ ಕಾಫಿ ಮಳಿಗೆಯನ್ನು ವಿಸ್ತರಿಸುವಲ್ಲಿ ಸಂಸ್ಥೆಯ ಸ್ಥಾಪಕ ಸಿದ್ದಾರ್ಥ ಅವರ ಪಾತ್ರ ದೊಡ್ಡದು.

ಕೋಕ ಕೋಲಾ ಕಂಪನಿ ಪಾಲಾಗುವ ಹೊತ್ತಿಗೆ
1996ರಿಂದ ಇಲ್ಲಿ ತನಕ ಹಲವು ಏರಿಳಿತ ಕಂಡಿರುವ ಸ್ವದೇಶಿ ಬ್ರ್ಯಾಂಡ್ ಕೆಫೆ ಕಾಫಿ ಡೇ ಈಗ ಅಮೆರಿಕದ ಕೋಕ ಕೋಲಾ ಕಂಪನಿ ಪಾಲಾಗುವ ಮಾತುಕತೆ ನಡೆದಿತ್ತು. ಕಾಫಿ ಡೇ ಸಂಸ್ಥೆ ಒಟ್ಟಾರೆ ಆದಾಯ 4,264 ಕೋಟಿ ರು, 12,000 ಎಕರೆ(4047 ಹೆಕ್ಟೇರು) ಕಾಫಿ ತೋಟ ಹಾಗೂ 2020ರ ವೇಳೆಗೆ ಎಸಿಬಿಯೊಂದರ ಗಳಿಕೆಯನ್ನೇ 2250 ಕೋಟಿ ರು ಗಳಿಕೆ ಗುರಿ ಹೊಂದಿದೆ ಎಂದು ಮನಿ ಕಂಟ್ರೋಲ್ ಲೆಕ್ಕಾಚಾರ ಬಿಚ್ಚಿಟ್ಟಿದೆ.
ಇನ್ನು ಉದ್ಯಮಿಯಾಗಿ ಸಿದ್ದಾರ್ಥ 2015ರ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಾಗ 8200 ಕೋಟಿ ರು ಒಡೆಯ ಎಂಬುದು ತಿಳಿದು ಬಂದಿದೆ. ಒಟ್ಟಾರೆ, ಸಿಸಿಡಿ ಮಾರುಕಟ್ಟೆ ಮೌಲ್ಯ 8 ರಿಂದ 10 ಸಾವಿರ ಕೋಟಿ ರು ಇದ್ದು, ಕೋಕಾ ಕೋಲಾಕ್ಕೆ ಅಷ್ಟೇ ಮೌಲ್ಯಕ್ಕೆ ಮಾರಾಟವಾಗುವ ಸಾಧ್ಯತೆಯಿದೆ.
ವಿವಿಧ ಸಂಸ್ಥೆಗಳಲ್ಲಿ ಸಿದ್ದಾರ್ಥ ಹೂಡಿಕೆ: ಕೆಫೆ ಕಾಫಿ ಡೇ ಮಾಲೀಕತ್ವದಲ್ಲಿ ಸೆರಾಯ್ ಹಾಗೂ ಸಿಕಾಡಾ ರೆಸಾರ್ಟ್ ಚಿಕ್ಕಮಗಳೂರು, ನಾಗರಹೊಳೆ ಸೇರಿದಂತೆ ವಿವಿಧೆಡೆ ಇವೆ. ಇದಲ್ಲದೆ ಜಿಟಿವಿ, ಮೈಂಡ್ ಟ್ರೀ, ಲಿಕ್ವಿಡ್ ಕ್ರಿಸ್ಟಲ್, ವೇ2 ವೆಲ್ತ್, ಇಟ್ಟಿಯಂ ಮುಂತಾದ ಕಂಪನಿಗಳಲ್ಲಿ ಸಿದ್ದಾರ್ಥ ಪಾಲು ಹೊಂದಿದ್ದಾರೆ. ಮೈಂಡ್ ಟ್ರೀ ಸಂಸ್ಥೆಯಲ್ಲಿದ್ದ ತಮ್ಮ 20.3% ಪಾಲನ್ನು ಸಿದ್ದಾರ್ಥ ಮಾರಿದ್ದು, ಎಲ್ ಅಂಡ್ ಟೀ ಕಂಪನಿ ಖರೀದಿಸಲು ಮುಂದಾಗಿದೆ.

ಐಟಿ ದಾಳಿ ಸಂದರ್ಭ
2017ರಲ್ಲಿ ತೆರಿಗೆ ವಂಚನೆ ಆರೋಪದ ಮೇಲೆ ವಿಜಿ ಸಿದ್ದಾರ್ಥ ಅವರ ಒಡೆತನದ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸರಣಿ ದಾಳಿ ನಡೆಸಿದ್ದರು. ಬೆಂಗಳೂರು, ಮುಂಬೈ, ಚೆನ್ನೈ, ಚಿಕ್ಕಮಗಳೂರಿನಲ್ಲಿ ದಾಳಿ ನಡೆದಿತ್ತು.
ಸಿದ್ದಾರ್ಥ್ ಹಾಗೂ ಅವರ ಸಂಬಂಧಿಗಳಾದ ನಿತಿನ್ ಬಾಗ್ ಮನೆ, ರಾಜಾ ಬಾಗ್ ಮನೆ, ನಾಗವೇಣಿ ಹಾಗೂ ಗುರುಚರಣ್ ಎಂಬುವವರ ಹೆಸರುಗಳನ್ನು ಉಲ್ಲೇಖಿಸಿ ದೂರು ಸಲ್ಲಿಸಲಾಗಿತ್ತು. ಸುಮಾರು 21 ಕಂಪನಿಗಳ ಹೆಸರು ಇದರಲ್ಲಿತ್ತು.
ಸಿದ್ದಾರ್ಥ ಅವರ ತಂದೆ ಗಂಗಯ್ಯ ಹೆಗ್ಗಡೆ ಹಾಗೂ ತಾಯಿ ವಾಸಂತಿ ವಾಸವಿರುವ ಚೇತನಹಳ್ಳಿ ಎಸ್ಟೇಟ್ ಹಾಗೂ ಅವರು ನಿರ್ಗತಿಕ, ಆರ್ಥಿಕವಾಗಿ ಹಿಂದುಳಿದ ಯುವತಿಯರಿಗಾಗಿ ನಡೆಸುತ್ತಿರುವ ಶಾಲೆ, ಕಾಲೇಜುಗಳಲ್ಲಿ ಐಟಿ ರೇಡ್ ಬಗ್ಗೆ ಸಿದ್ದಾರ್ಥ ಅವರಿಗೆ ತೀವ್ರ ನೋವಾಗಿತ್ತು ಎಂದು ಆಪ್ತರು ಹೇಳಿದ್ದಾರೆ.
25 ಸಾವಿರಕ್ಕೂ ಅಧಿಕ ಕಾಫಿ ತೋಟದಲ್ಲಿನ ಕೆಲಸಗಾರರಿಗೆ ಈ ದಾಳಿಯಿಂದ ಈ ಕುಟುಂಬದ ಗೌರವಕ್ಕೇನು ಧಕ್ಕೆಯಾಗಲ್ಲ, ಅವರ ಗಳಿಕೆ ಬಗ್ಗೆ ಗೊತ್ತಿಲ್ಲ. ಜಿಲ್ಲೆಯಲ್ಲಿ ಅನೇಕ ಕುಟುಂಬಗಳ ಜೀವನೋಪಾಯಕ್ಕೆ ದಾರಿಯಾದವರು ಎಂಬ ನಂಬಿಕೆ, ಸತ್ಯ ಅವರಲ್ಲಿ ಇಂದಿಗೂ ದೃಢವಾಗಿದೆ.

ಸಿದ್ದಾರ್ಥ ಹಿಂದೆ ಬಿದ್ದಿದ್ದ ಹಿರೇಮಠ
ಸಾಮಾಜಿಕ ಕಾರ್ಯಕರ್ತ ಎಸ್. ಆರ್. ಹಿರೇಮಠ ಅವರು ಎಸ್ ಐಟಿಗೆ ಹಿಂದೆಯೇ ಸಲ್ಲಿಸಿದ್ದ ದೂರಿನಲ್ಲಿ ಉಲ್ಲೇಖಿಸಿದ್ದ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆಸಲಾಗಿ 650 ಕೋಟಿ ರು ಗೂ ಅಧಿಕ ಬೇನಾಮಿ ಹೆಸರಿನ ಆಸ್ತಿ ಪತ್ತೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ವ್ಯಾಪ್ತಿಯಲ್ಲಿ ದುಬಾರಿ ಬೆಲೆಯ 200 ಎಕರೆಗೂ ಅಧಿಕ ಸರಕಾರಿ ಜಮೀನನ್ನು ಸಿದ್ಧಾರ್ಥ ಒತ್ತುವರಿ ಮಾಡಿದ್ದಾರೆ. ಅರಣ್ಯ ಭೂಮಿ ಒತ್ತುವರಿ ಸರಿಪಡಿಸಿ ಎಂದು ಹಿರೇಮಠ್ ದೂರು ನೀಡಿದ್ದರು.
ಸಿದ್ದಾರ್ಥ ಅವರ ಆಸ್ತಿ ಪಾಸ್ತಿ ಉಳಿಸಲಿಕ್ಕೆಂದೇ ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಅವರು ಬಿಜೆಪಿ ಸೇರಿದ್ದು ಎಂದು ಕೂಡಾ ಹಿರೇಮಠ್ ಆರೋಪಿಸಿದ್ದರು. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಬೇರೆಯ ವಿಚಾರ. ಮಲೆನಾಡು ಭಾಗದಿಂದ ಬಂದು ಜಾಗತೀಕರಣದ ಯುಗದಲ್ಲಿ ಯುವ ಜನತೆ ಪಾಲಿಗೆ ಮಾದರಿ ಎನ್ನಿಸಿಕೊಂಡಿದ್ದ ಸಿದ್ಧಾರ್ಥ ಅವರ ವ್ಯಕ್ತಿತ್ವ ಇಂದು ತೆರೆದುಕೊಂಡ ಆಯಾಮ ಮಾತ್ರ ನಿಜಕ್ಕೂ ದುರಂತ ಮತ್ತು ಆಲೋಚನೆ ಮಾಡಬೇಕಾದ ಸಂಗತಿ.
-
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
Rain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Dhurandhar 2: ದುರಂಧರ್ 2 ಸಿನಿಮಾ: ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ದಾಖಲೆಯ ನಡುವೆ ಹೊಸ ಸಂಕಷ್ಟ -
Zombis Drug: ಬೆಂಗಳೂರಲ್ಲಿ ಜಾಂಬಿ ಡ್ರಗ್ಸ್ ಸೇವಿಸಿ ಯುವಕನ ವಿಚಿತ್ರ ವರ್ತನೆ: ನಟ ದುನಿಯಾ ವಿಜಯ್ ವಿಡಿಯೋ ವೈರಲ್ -
Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ -
Karnataka 2nd Puc Results 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ? -
Chandrika Dixit: ಒಂದು ರಾತ್ರಿ ನನ್ನ ಜೊತೆ ಮಲಗಿದ್ರೆ 50 ಲಕ್ಷ ಕೊಡ್ತೇನೆ; ಚಂದ್ರಿಕಾಗೆ ಖ್ಯಾತ ಉದ್ಯಮಿ ಆಫರ್












Click it and Unblock the Notifications