ಬಿಜೆಪಿಯಲ್ಲಿ ಹಠಾತ್ ಬೆಳವಣಿಗೆಗಳು: ಕೇಂದ್ರದಿಂದ ಒಬ್ಬರು ರಾಜ್ಯಕ್ಕೆ, ರಾಜ್ಯದಿಂದ ಒಬ್ಬರು ಕೇಂದ್ರಕ್ಕೆ?
ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲೇ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಸುದ್ದಿಗಳು ಹರಿದಾಡುತ್ತಿರುವುದು ಬಿಜೆಪಿಯ ಯೋಚಿತ ಕಾರ್ಯತಂತ್ರವೇ? ಗೊತ್ತಿಲ್ಲ. ಒಟ್ಟಿನಲ್ಲಿ, ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹಾವೇರಿಯ ಭಾಷಣದ ಹಿನ್ನೆಲೆಯಲ್ಲಿ ಒಂದೊಂದೇ ಸುದ್ದಿಗಳು ಹುಟ್ಟಿಕೊಳ್ಳುತ್ತಿವೆ.
ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ಬೆಟ್ಟು ಅಗೆದು ಇಲಿ ತೆಗೆದರೂ, ಈ ವಿಚಾರವನ್ನು ಕೇಂದ್ರದ ಬಿಜೆಪಿ ವರಿಷ್ಠರು ಸೀರಿಯಸ್ಸಾಗಿ ತೆಗೆದುಕೊಂಡಿರುವುದು ಗೊತ್ತಿರುವ ವಿಚಾರ. ಆ ವೇಳೆ, ಬೊಮ್ಮಾಯಿಯವರನ್ನು ವರಿಷ್ಠರು ದೆಹಲಿಗೆ ಕರೆಸಿಕೊಂಡಿದ್ದು ರಾಜೀನಾಮೆ ವಿಚಾರಕ್ಕೆ ಎಂದು ಹೇಳಲಾಗುತ್ತಿದೆ.
ಆದರೆ, ಕಾಮನ್ ಮ್ಯಾನ್ ಎಂದು ಜನರ ವಿಶ್ವಾಸಗಳಿಸುತ್ತಾ ಸಾಗುತ್ತಿದ್ದ ಬೊಮ್ಮಾಯಿಯವರಿಗೆ ಮಂಡಿ ನೋವು ಹಿನ್ನಡೆ ಉಂಟು ಮಾಡುತ್ತಿದೆ. ಶಸ್ತ್ರಚಿಕಿತ್ಸೆ ನಡೆಸುವ ತುರ್ತು ಅವಶ್ಯಕತೆಯಲ್ಲಿರುವ ಬೊಮ್ಮಾಯಿಯವರು ಪದತ್ಯಾಗ ಮಾಡಲಿದ್ದಾರೆ ಎನ್ನುವ ಸುದ್ದಿಗಳು ವೇಗ ಪಡೆಯಲಾರಂಭಿಸಿವೆ.
ಇವೆಲ್ಲದಕ್ಕೂ ಪೂರಕ ಎನ್ನುವಂತೆ ಕೈಗಾರಿಕ ಸಚಿವ ಮುರುಗೇಶ್ ನಿರಾಣಿಯವರು ಬೊಮ್ಮಾಯಿಯವರು ಇದ್ದ ವೇದಿಕೆಯಲ್ಲಿ ನೀಡಿದ ಹೇಳಿಕೆ, ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಎಂಟ್ರಿಯ ಸುದ್ದಿಯೂ ಚರ್ಚೆಯ ವಿಷಯವಾಗಿದೆ.

ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾರೆ
ಜಾತಿ ಆಧಾರಿತ ರಾಜಕೀಯವೇ ಮುಖ್ಯವಾಗಿರುವ ಈ ವೇಳೆ, ರಾಜ್ಯ ಬಿಜೆಪಿಯಿಂದ ಇಬ್ಬರು ಲಿಂಗಾಯತ ಸಮುದಾಯದ ನಾಯಕರು (ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ) ಮುಖ್ಯಮಂತ್ರಿಗಳಾಗಿದ್ದಾರೆ. ಈಗ, ಬೊಮ್ಮಾಯಿಯವರು ಪದತ್ಯಾಗ ಮಾಡಲಿದ್ದಾರೆ ಎನ್ನುವ ಸುದ್ದಿ ನಿಜವೇ ಆಗಿದ್ದಲ್ಲಿ, ಮತ್ತೆ ಅದೇ ಸಮುದಾಯದ ನಾಯಕರಿಗೆ ಮುಖ್ಯಮಂತ್ರಿ ಭಾಗ್ಯ ಕರುಣಿಸುವುದು ಬಿಜೆಪಿ ಹೈಕಮಾಂಡಿಗೆ ಮನಸ್ಸಿಲ್ಲ.

ಪ್ರಬಲ ಒಕ್ಕಲಿಗ ಸಮುದಾಯದ ನಾಯಕರನ್ನು ಸಿಎಂ ಮಾಡುವ ಚಿಂತನೆ
ಹಾಗಾಗಿ, ರಾಜ್ಯದ ಮತ್ತೊಂದು ಪ್ರಬಲ ಒಕ್ಕಲಿಗ ಸಮುದಾಯದ ನಾಯಕರನ್ನು ಸಿಎಂ ಮಾಡುವ ಚಿಂತನೆಯನ್ನು ವರಿಷ್ಠರು ನಡೆಸುವ ಸಾಧ್ಯತೆಗಳಿವೆ ಎಂಬುದಕ್ಕೆ ಹಿನ್ನೆಲೆಯೂ ಕಾರಣ. ಅದಕ್ಕೆ ಪೂರಕವಾದ ಬೆಳವಣಿಗೆಗಳು ನಡೆಯುತ್ತಿರುವುದು ಗಮನಿಸಬೇಕಾದ ವಿಚಾರ. ಇದೇ ವೇಳೆ, ದಲಿತ ಸಿಎಂ, ಒಕ್ಕಲಿಗ ಸಮುದಾಯದವರು ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಮಾಡುವ ಆಯ್ಕೆಯೂ ಹೈಕಮಾಂಡ್ ಮುಂದಿದೆ ಎಂಬುದು ಮೂಲಗಳು ತಿಳಿಸುವ ಮಾಹಿತಿ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾಗಿರುವ ಶೋಭಾ ಕರಂದ್ಲಾಜೆ
ಹಾಗಾಗಿ, ಉಡುಪಿ - ಚಿಕ್ಕಮಗಳೂರು ಸಂಸದೆ ಮತ್ತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾಗಿರುವ ಶೋಭಾ ಕರಂದ್ಲಾಜೆಯವರ ಹೆಸರು ಮುನ್ನಲೆಗೆ ಬರಲು ಆರಂಭಿಸಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಾಳು ಆಗಿರುವ ಶೋಭಾ ಕರಂದ್ಲಾಜೆ ಒಕ್ಕಲಿಗ ಸಮುದಾಯದವರು. ಜೊತೆಗೆ, ಇತ್ತೀಚಿನ ದಿನಗಳಲ್ಲಿ ಯಾವುದೇ ವಿವಾದದಿಂದ ದೂರವಿರುವ ಶೋಭಾಗೆ ಆ ಸ್ಥಾನ ನೀಡಿದ್ದೇ ಆದಲ್ಲಿ, ಮಹಿಳೆಯರಿಗೆ ಬಿಜೆಪಿಯಲ್ಲಿ ಪ್ರಾತಿನಿಧ್ಯತೆಯಿದೆ ಎಂದೂ ಚುನಾವಣೆ ಎದುರಿಸಬಹುದು ಎನ್ನುವ ಲೆಕ್ಕಾಚಾರವೂ ಬಿಜೆಪಿ ವರಿಷ್ಠರ ತಲೆಯಿಲ್ಲಿದೆ ಎಂದು ಹೇಳಲಾಗುತ್ತಿದೆ.

ಪೂರ್ಣಾವಧಿಗೆ ಬೊಮ್ಮಾಯಿಯವರೇ ಸಿಎಂ, ನಿರಾಣಿ
ಸಿಎಂ ಬೊಮ್ಮಾಯಿ ಇದ್ದ ಸಭೆಯಲ್ಲಿ ಮಾತನಾಡುತ್ತಿದ್ದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, "ಪೂರ್ಣಾವಧಿಗೆ ಬೊಮ್ಮಾಯಿಯವರೇ ಮುಖ್ಯಮಂತ್ರಿಯಾಗಿರುತ್ತಾರೆ. ಈ ಬಗ್ಗೆ ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ. ಮುಂದಿನ ದಿನಗಳಲ್ಲಿ ಬೊಮ್ಮಾಯಿ ಕೇಂದ್ರ ಸಚಿವರಾಗುತ್ತಾರೆ. ನನ್ನ ಮತ್ತು ಬೊಮ್ಮಾಯಿಯವರ ಒಡನಾಟ ಮೂವತ್ತು ವರ್ಷದ್ದು, 2023ರಲ್ಲಿ ಬೊಮ್ಮಾಯಿ ಇರುತ್ತಾರೆ. ನನ್ನ ಮಾತಿನಲ್ಲಿ ಯಾರೂ ಅನ್ಯಥಾ ಭಾವಿಸಬಾರದು"ಎಂದು ನಿರಾಣಿ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಹೊಗೆಯ ಹಿಂದಿನ ಕಿಡಿ ಏನು ಎಂಬುದನ್ನು ಕಾಲವೇ ಹೇಳಲಿದೆ
ಜನಸಾಮಾನ್ಯರಲ್ಲಿ ಮತ್ತು ರಾಜಕೀಯ ವಲಯದಲ್ಲಿ ಬಸವರಾಜ ಬೊಮ್ಮಾಯಿ ಉತ್ತಮ ಹೆಸರನ್ನು ಹೊಂದಿದ್ದಾರೆ. ಹಾಗಾಗಿ, ಅವರ ಸೇವೆ ಮತ್ತು ಅನುಭವವನ್ನು ಕೇಂದ್ರದಲ್ಲಿ ಬಳಸಿಕೊಳ್ಳಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನುವ ಸುದ್ದಿ ಒಂದು ಕಡೆ, ಇನ್ನೊಂದು ಕಡೆ, ಕೇಂದ್ರದಲ್ಲಿ ಸಚಿವೆಯಾಗಿರುವ ಶೋಭಾ ಕರಂದ್ಲಾಜೆಯವರನ್ನು ರಾಜ್ಯಕ್ಕೆ ಕಳುಹಿಸುವ ಸುದ್ದಿಗಳೂ ಹರಿದಾಡುತ್ತಿವೆ. ರಾಜಕೀಯದ ಸುದ್ದಿಗಳ ವಿಚಾರಕ್ಕೆ ಬಂದರೆ, ಕಿಡಿ ಇಲ್ಲದಿದ್ದರೆ ಹೊಗೆ ಆಡಲು ಸಾಧ್ಯವಿಲ್ಲ. ಈಗ ಎದ್ದಿರುವ ಹೊಗೆಯ ಹಿಂದಿನ ಕಿಡಿ ಏನು ಎಂಬುದನ್ನು ಕಾಲವೇ ಹೇಳಲಿದೆ.












Click it and Unblock the Notifications