ಮೋದಿಯವರಿಗೆ ದೇವೇಗೌಡರ ಮೇಲೆ ವಿಶೇಷ ಅಕ್ಕರೆ ಏಕೆ?
ಹಾಸನ - ಅರಸೀಕೆರೆ ನಡುವಿನ ರೈಲ್ವೇ ಇಲಾಖೆಗೆ ಸಂಬಂಧಿಸಿದಂತೆ ನಿಮಗೊಂದು ಮನವಿಯನ್ನು ಕೊಡಬೇಕು ಎಂದು ಕೇಂದ್ರ ಸಚಿವ ಪಿಯೂಶ್ ಗೋಯೆಲ್ ಅವರಿಗೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ್ರು ಹಿಂದೊಮ್ಮೆ ಮನವಿಯನ್ನು ಮಾಡಿದ್ದರು. ಛೇ. ಛೇ.. ನೀವು ಬರುವುದಾ, ಬೇಡ, ನಾನೇ ಬರುತ್ತೇನೆ ಎಂದು ಪಿಯೂಶ್ ಗೋಯೆಲ್ ಅವರು ದೆಹಲಿಯಲ್ಲಿ ಗೌಡ್ರ ನಿವಾಸಕ್ಕೆ ಬಂದು, ಮನವಿ ಸ್ವೀಕರಿಸಿದ್ದರು. ಈ ವಿಚಾರವನ್ನು ದೇವೇಗೌಡ್ರೇ ಹೇಳಿದ್ದರು.
ಇದೇ ರೀತಿಯ ಇನ್ನೊಂದು ಉದಾಹರಣೆ ಎಂದರೆ, ಹಾಸನ ಜಿಲ್ಲೆಗೆ ಸಂಬಂಧಿಸಿದ ಲೊಕೋಪಯೋಗಿ ಇಲಾಖೆಯ ಹೆದ್ದಾರಿ ವಿಚಾರದಲ್ಲೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡಾ ದೇವೇಗೌಡ್ರ ಜೊತೆಗೆ ಇದೇ ರೀತಿ ಸ್ಪಂದಿಸಿದ್ದರು.
ದೇವೇಗೌಡ್ರಿಗೆ ಕೇಂದ್ರ ಸಚಿವರು ವಿಶೇಷ ಗೌರವವನ್ನು ಕೊಡುವುದು ಇದೇನು ಮೊದಲಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಹಲವು ಬಾರಿ ಅವರನ್ನು ಗೌಡ್ರು ಭೇಟಿಯಾಗಿದ್ದರು. ಪ್ರತೀ ಭೇಟಿಯ ವೇಳೆ ಇದೇ ವಿಶ್ವಾಸ ಅವರಿಂದ ಸಿಗುತ್ತಿದೆ ಎಂದು ಖುದ್ದು ಗೌಡ್ರೇ ಹೇಳಿದ್ದಾರೆ.
ಮಂಗಳವಾರ (ನ 30) ದೆಹಲಿಯಲ್ಲಿ ಪ್ರಧಾನಿ ನಿವಾಸಕ್ಕೆ ಗೌಡ್ರು ಹೋಗಿದ್ದಾಗ, ಅವರನ್ನು ಕೈಹಿಡಿದು ಕೂರಿಸಿ, ಮಾತುಕತೆ ನಡೆಸಿ, ಮೋದಿ ಅವರನ್ನು ಬೀಳ್ಕೊಟ್ಟಿದ್ದರು. ಈ ಚಿತ್ರ, ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದವು. ಜೊತೆಗೆ, ಈ ಚಿತ್ರ ವಿರೋಧಿಗಳ ಕಣ್ಣು ಕುಕ್ಕಿದ್ದವು. ಯಾವ ಕಾರಣಕ್ಕಾಗಿ ದೇವೇಗೌಡ್ರ ಮೇಲೆ ಮೋದಿಗೆ ವಿಶೇಷ ಒಲವು ಎಂದು ನೋಡುವುದಾದರೆ..

ಮಾಜಿ ಪ್ರಧಾನಿಯವರನ್ನು ನರೇಂದ್ರ ಮೋದಿ ಹಲವು ಬಾರಿ ಹೊಗಳಿದ್ದುಂಟು
ಮಾಜಿ ಪ್ರಧಾನಿಯವರನ್ನು ನರೇಂದ್ರ ಮೋದಿ ಹಲವು ಬಾರಿ ಹೊಗಳಿದ್ದುಂಟು. ಕಳೆದ ಲೋಕಸಭಾ ಚುನಾವಣೆಯ ವೇಳೆ ಉಡುಪಿಯಲ್ಲಿ ನಡೆದ ಪಕ್ಷದ ಬೃಹತ್ ರ್ಯಾಲಿಯಲ್ಲಿ ಮೋದಿಯವರು ಗೌಡ್ರನ್ನು ಶ್ಲಾಘಿಸಿದ್ದರು. "ದೇವೇಗೌಡ್ರು ಪ್ರತೀಬಾರಿ ನನ್ನನ್ನು ಭೇಟಿ ಮಾಡಲು ಬಂದಾಗ, ಯಾವಾಗಲು ಅವರಿಗೆ ನನ್ನ ನಿವಾಸದಲ್ಲಿ ತೆರೆದಿರುತ್ತದೆ. ಅವರ ಕಾರಿನ ಬಳಿಗೆ ಹೋಗಿ ಕರೆದುಕೊಂಡು ಬಂದು, ಹಾಗೇಯೇ ಬೀಳ್ಕೊಡುತ್ತೇನೆ. ಇದು ಮಾಜಿ ಪ್ರಧಾನಿಯೊಬ್ಬರಿಗೆ ನಾನು ಕೊಡುತ್ತಿರುವ ಗೌರವ, ಇದೆಲ್ಲಾ ರಾಹುಲ್ ಗಾಂಧಿಯಂತಹ ಕಾಂಗ್ರೆಸ್ ನಾಯಕರಿಗೆ ಅರ್ಥವಾಗುವುದಿಲ್ಲ"ಎಂದು ಪ್ರಧಾನಿ ಮೋದಿ ಸಭೆಯಲ್ಲಿ ಹೇಳಿದ್ದರು.

ಕೃಷಿಗೆ ಸಂಬಂಧಿಸಿದ ಚರ್ಚೆ ಕಳೆದ ಫೆಬ್ರುವರಿಯಲ್ಲಿ ರಾಜ್ಯಸಭೆಯಲ್ಲಿ ನಡೆಯುತ್ತಿತ್ತು
ಇನ್ನೊಂದು ಉದಾಹರಣೆಯೆಂದರೆ, ಕೃಷಿಗೆ ಸಂಬಂಧಿಸಿದ ಚರ್ಚೆ ಕಳೆದ ಫೆಬ್ರುವರಿಯಲ್ಲಿ ರಾಜ್ಯಸಭೆಯಲ್ಲಿ ನಡೆಯುತ್ತಿತ್ತು. "ಈ ಚರ್ಚೆಯ ವೇಳೆ ನಾನು ಗೌಡ್ರ ಹೆಸರನ್ನು ಉಲ್ಲೇಖಿಸಲು ಬಯಸುತ್ತೇನೆ. ಅವರದ್ದು ಕೃಷಿ ಪ್ರಧಾನ ಕುಟುಂಬ ಮತ್ತು ಆ ವಿಚಾರದಲ್ಲಿ ಅವರಿಗೆ ಅಗಾಧವಾದ ಅನುಭವವಿದೆ. ಅದನ್ನು ನಾನು ಎಂದಿಗೂ ಗೌರವಿಸುತ್ತೇನೆ" ಎಂದು ಮೋದಿ ಹೇಳಿದ್ದರು. ಇಷ್ಟೇ ಅಲ್ಲದೇ, ಗೌಡ್ರಿಗೆ ದೇಶದ ನೀರಾವರಿ ವಿಚಾರದಲ್ಲಿರುವ ಜ್ಞಾನವನ್ನು ಮೋದಿ ಸ್ಮರಿಸಿಕೊಂಡಿದ್ದುಂಟು.
|
ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣ
ಇದು ಒಂದು ಕಡೆಯಾದರೆ, ದೇವೇಗೌಡ್ರು ಕೂಡಾ ಮೋದಿಯ ಕಾರ್ಯವೈಖರಿಗೆ ಬೆನ್ನು ತಟ್ಟಿದ ಹಲವು ಉದಾಹರಣೆಗಳಿವೆ. ಇತ್ತೀಚೆಗೆ ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣಗೊಳಿಸಿದ್ದಕ್ಕೆ, ಇದಕ್ಕೂ ಮುನ್ನ ಸರ್ದಾರ್ ಪಟೇಲ್ ಅವರ ಪುತ್ಥಳಿ ಸ್ಥಾಪಿಸಿದ್ದಕ್ಕೂ ಮೋದಿಯನ್ನು ಗೌಡ್ರು ಹೊಗಳಿದ್ದರು. "ನಾನು ಶೃಂಗೇರಿ ಮಠದ ಭಕ್ತ, ಶಂಕರಾಚಾರ್ಯರ ಪ್ರತಿಮೆಯನ್ನು ಕೇದಾರನಾಥದಲ್ಲಿ ಅನಾವರಣಗೊಳಿಸಿರುವುದು ಅತೀವ ಸಂತಸ ತಂದಿದೆ. ನಿಮ್ಮ ಈ ಒಳ್ಳೆಯ ಕಾರ್ಯಕ್ಕೆ ಅಭಿನಂದನೆಗಳು"ಎಂದು ಗೌಡ್ರು, ಮೋದಿಯವನ್ನು ಹೊಗಳಿದ್ದರು.

ಮುಂಬರುವ 25 ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆ
ಇದರ ಹೊರತಾಗಿ, ರಾಜಕೀಯ ಆಯಾಮದಲ್ಲಿ ನೋಡುವುದಾದರೆ, ಮುಂಬರುವ 25 ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆ. ಕೆಲವು ದಿನಗಳ ಹಿಂದೆ, ಜೆಡಿಎಸ್ ಎಲ್ಲಿಲ್ಲಿ ಸ್ಪರ್ಧಿಸುತ್ತಿಲ್ಲವೋ, ಅಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಮಾಜಿ ಸಿಎಂ ಯಡಿಯೂರಪ್ಪನವರು, ಎಚ್.ಡಿ.ಕುಮಾರಸ್ವಾಮಿಯವರನ್ನು ಕೋರಿದ್ದರು. ಈಗ, ದೇವೇಗೌಡ್ರು ದೆಹಲಿಯಲ್ಲಿ ಪ್ರಧಾನಿಯನ್ನು ಭೇಟಿಯಾಗಿದ್ದು ಕೂಡ ಒಂದಕ್ಕೊಂದು ಸಿಂಕ್ ಆಗುತ್ತಿದೆ.












Click it and Unblock the Notifications