ದಯವಿಟ್ಟು ನನ್ನ ಚಿತ್ರ ಬಹಿಷ್ಕರಿಸಬೇಡಿ ಎಂದು ಮನವಿ ಮಾಡಿದ ಅಮೀರ್ ಖಾನ್
'ಲಾಲ್ ಸಿಂಗ್ ಚಡ್ಡಾ' ಸದ್ಯ ಬಾಲಿವುಡ್ನಲ್ಲಿ ಬಹು ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ. ಬಾಲಿವುಡ್ನ ಮಿಸ್ಟರ್ ಪರ್ಫೆಕ್ಟ್ ಎಂದೇ ಕರೆಸಿಕೊಳ್ಳುವ ಅಮೀರ್ ಖಾನ್ ಅಭಿನಯದ ಮಹಾತ್ವಾಕಾಂಕ್ಷೆಯ ಸಿನಿಮಾ 'ಲಾಲ್ ಸಿಂಗ್ ಚಡ್ಡಾ'. ನಾಲ್ಕು ವರ್ಷಗಳ ಸುದೀರ್ಘ ಅವಧಿಯ ನಂತರ ಅಮೀರ್ ಖಾನ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಆದರೆ ಬಾಲಿವುಡ್ ಅನ್ನು ಬಿಟ್ಟೂ ಬಿಡದೆ ಕಾಡುತ್ತಿರುವ ಬಾಯ್ಕಾಟ್ ಅಭಿಯಾನ ಅಮೀರ್ ಖಾನ್ ಚಿತ್ರಕ್ಕೂ ಎದುರಾಗಿದೆ.
ಅದ್ವೈತ್ ಚಂದನ್ ನಿರ್ದೇಶನದ ಈ ಚಿತ್ರವು ಆಗಸ್ಟ್ 11, 2022 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಅವರ ಸಿನಿಮಾ ಬಿಡುಗಡೆಯ ಕೆಲವು ದಿನಗಳ ಮೊದಲು, ಅಮೀರ್ ಖಾನ್ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು ಮತ್ತು ಲಾಲ್ ಸಿಂಗ್ ಚಡ್ಡಾಗೆ ಸಂಬಂಧಿಸಿದ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಸಮೀಪವಾಗುತ್ತಿರುವ ಹಿನ್ನೆಲೆಯಲ್ಲೇ ಟ್ವಿಟರ್ ನಲ್ಲಿ ಅಮೀರ್ ಖಾನ್ ಚಿತ್ರವನ್ನು ಬಹಿಷ್ಕರಿಸಿ ಎನ್ನುವ ಕೂಗು ಕೂಡ ಹೆಚ್ಚಾಗುತ್ತಿದೆ.
ಸಂವಾದದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ 'ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ' ಅಭಿಯಾನದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಅಮೀರ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.

ದಯವಿಟ್ಟು ನನ್ನ ಸಿನಿಮಾ ನೋಡಿ
ಲಾಲ್ ಸಿಂಗ್ ಚಡ್ಡಾ ಚಿತ್ರದ ವಿರುದ್ಧ ನಡೆಯುತ್ತಿರುವ ಬಹಿಷ್ಕಾರ ಅಭಿಯಾನದ ಬಗ್ಗೆ ಮಾತನಾಡಿರುವ ಅಮೀರ್ ಖಾನ್, "ಇದು ತುಂಬಾ ನೋವು ನೀಡು ಸಂಗತಿ" ಎಂದು ಹೇಳಿದ್ದಾರೆ.
"ಹೌದು, ನನಗೆ ಬೇಸರವಾಗಿದೆ. ನಾನು ಭಾರತವನ್ನು ಇಷ್ಟಪಡುವುದಿಲ್ಲ ಎಂದು ಕೆಲವರು ತಮ್ಮ ಹೃದಯದಲ್ಲಿ ಭಾವಿಸಿದ್ದಾರೆ. ಆದರೆ ಇದು ಸುಳ್ಳು, ಕೆಲವರಿಗೆ ಹಾಗೆ ಅನಿಸಿರುವುದು ದುರದೃಷ್ಟಕರ. ದಯವಿಟ್ಟು ನನ್ನ ಸಿನಿಮಾವನ್ನು ಬಹಿಷ್ಕರಿಸಬೇಡಿ, ದಯವಿಟ್ಟು ನನ್ನ ಸಿನಿಮಾ ನೋಡಿ" ಎಂದು ಅಮೀರ್ ಖಾನ್ ಮನವಿ ಮಾಡಿದ್ದಾರೆ.

ಭಾರಿ ನಿರೀಕ್ಷೆ ಮೂಡಿಸಿರುವ ಲಾಲ್ ಸಿಂಗ್ ಚಡ್ಡಾ
ಲಾಲ್ ಸಿಂಗ್ ಚಡ್ಡಾ ಅಮೀರ್ ಖಾನ್ ವೃತ್ತಿ ಜೀವನದ ಮಹತ್ವಾಕಾಂಕ್ಷೆಯ ಸಿನಿಮಾ. ಇದು ಹಾಲಿವುಡ್ನ ಕ್ಲಾಸಿಕ್ ಚಿತ್ರ ಫಾರೆಸ್ಟ್ ಗಂಪ್ನ ಅಧಿಕೃತ ರೀಮೇಕ್ ಚಿತ್ರ. ಅದ್ವೈತ್ ಚಂದನ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಕರೀನಾ ಕಪೂರ್, ಮೋನಾ ಸಿಂಗ್ ಅಮೀರ್ ಖಾನ್ ಜೊತೆ ನಟಿಸಿದ್ದಾರೆ. ತೆಲುಗು ಚಿತ್ರರಂಗದ ಖ್ಯಾತ ನಟ ನಾಗ ಚೈತನ್ಯ ಕೂಡ ಈ ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರ ಮೊದಲ ಬಾಲಿವುಡ್ ಚಿತ್ರವೂ ಹೌದು. ಲಾಲ್ ಸಿಂಗ್ ಚಡ್ಡಾವನ್ನು ಸಿಖ್ಖರ ಹಬ್ಬವಾದ ಬೈಸಾಖಿ ವೇಳೆ ಬಿಡುಗಡೆ ಮಾಡಲು ನಿಗದಿಪಡಿಸಲಾಗಿತ್ತು, ಆದರೆ ತಯಾರಕರು ಚಿತ್ರದ ಬಿಡುಗಡೆಯ ದಿನಾಂಕವನ್ನು ಆಗಸ್ಟ್ 11, 2022 ಕ್ಕೆ ಮುಂದೂಡಿದರು.
|
ಅಮೀರ್ ಖಾನ್ ಚಿತ್ರದ ಮೇಲೆಕೆ ಕೋಪ
2015ರಲ್ಲಿ ಅಮೀರ್ ಖಾನ್ ಆಡಿರುವ ಮಾತುಗಳೇ ಅವರ ಚಿತ್ರದ ವಿರುದ್ಧ ಬಾಯ್ಕಾಟ್ ಅಭಿಯಾನಕ್ಕೆ ಕಾರಣವಾಗಿದೆ. ಸಂದರ್ಶನವೊಂದರ ವೇಳೆ ದೇಶ ತೊರೆಯುವ ಮಾತನಾಡಿದ್ದರು. ಅದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಸಂದರ್ಶನದ ವೇಳೆ ಮಾತನಾಡಿದ್ದ ಅಮೀರ್ ಖಾನ್, "ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯಿಂದಾಗಿ ನನ್ನ ಪತ್ನಿ ಕಿರಣ್ ರಾವ್ ದೇಶ ತೊರೆಯಲು ನನಗೆ ಹೇಳುತ್ತಿದ್ದಾರೆ" ಎಂದು ಹೇಳಿಕೆ ನೀಡಿದ್ದರು. ಸದ್ಯ ಅದೇ ವಿಡಿಯೋ ತುಣುಕಗಳನ್ನು ಪೋಸ್ಟ್ ಮಾಡುವ ಮೂಲಕ ಅಮೀರ್ ಖಾನ್ ಚಿತ್ರವನ್ನು ಬಹಿಷ್ಕಾರ ಮಾಡುವಂತೆ ಕರೆ ನೀಡಲಾಗುತ್ತಿದೆ.

ಬಾಯ್ಕಾಟ್ ಅಭಿಯಾನಕ್ಕೆ ನಲುಗಿದ ಬಾಲಿವುಡ್
ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ, ಹಲವು ಚಿತ್ರಗಳಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ತೋರಿಸಲಾಗುತ್ತಿದೆ ಎಂದು ಚಿತ್ರಪ್ರೇಮಿಗಳು ಇಡೀ ಬಾಲಿವುಡ್ ವಿರುದ್ಧವೇ ತಿರುಗಿಬಿದ್ದಿದ್ದಾರೆ. ದೊಡ್ಡ ಬಜೆಟ್ ಚಿತ್ರ ಬಿಡುಗಡೆಯಾದಾಗಲೆಲ್ಲ ಬಾಯ್ಕಾಟ್ ಅಭಿಯಾನ ದೊಡ್ದ ಮಟ್ಟದಲ್ಲಿ ಟ್ವಿಟರ್ ನಲ್ಲಿ ಟ್ರೆಂಡ್ ಆಗುತ್ತದೆ.
ಅಲಿಯಾ ಭಟ್ ಅಭಿನಯದ ಗಂಗೂಬಾಯಿ ಕಾಠಿಯಾವಾಡಿ, ರಣಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ ಶಂಶೇರಾ ಸೇರಿದಂತೆ ಹಲವು ಚಿತ್ರಗಳು ಬಾಯ್ಕಾಟ್ ಅಭಿಯಾನದಿಂದ ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿದ್ದವು.












Click it and Unblock the Notifications