2021ರ ಏಪ್ರಿಲ್: ಕೊರೊನಾವೈರಸ್ ಮಹಾಮಾರಿ ಬಾರಿಸಿದ ಸಾವಿನ ನಗಾರಿ!
ನವದೆಹಲಿ, ಡಿಸೆಂಬರ್ 22: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು 2021ರ ಆರಂಭದಲ್ಲಿ ಕೊಂಚ ತಣ್ಣಗಾಗಿತ್ತು. ಜನವರಿ, ಫೆಬ್ರವರಿ, ಮಾರ್ಚ್ ಮುಗಿಯಿತು. ಏಪ್ರಿಲ್ ಹೊತ್ತಿಗೆ ಕೊವಿಡ್-19 ಮಹಾಮಾರಿ ಸಾವಿನ ನಗಾರಿ ಶುರುವಿಟ್ಟುಕೊಂಡಿತು. ಭಾರತದಲ್ಲಿ ಹೊಸ ರೂಪಾಂತರಿ ಡೆಲ್ಟಾ ಜನರ ಉಸಿರು ಕಿತ್ತುಕೊಳ್ಳಲು ಆರಂಭಿಸಿತು.
ಕಳೆದ ಏಪ್ರಿಲ್ ತಿಂಗಳಿನಲ್ಲಿ ಕೊವಿಡ್-19 ಸೋಂಕಿತರಲ್ಲಿ ಉಸಿರಾಟ ಸಮಸ್ಯೆ ಹೆಚ್ಚಾಯಿತು. ದೇಶದಲ್ಲಿ ಬಹುತೇಕ ಸೋಂಕಿತರಿಗೆ ಆಮ್ಲಜನಕದ ಸಹಾಯವಿಲ್ಲದೇ ಉಸಿರಾಡುವುದೇ ಕಷ್ಟಸಾಧ್ಯ ಆಯಿತು. ಸೋಂಕಿತರ ಮುಖಕ್ಕೆ ವೆಂಟಿಲೇಟರ್ ಕಡ್ಡಾಯ ಎನ್ನುವಂತಾ ದುಸ್ಥಿತಿ ಸೃಷ್ಟಿ ಆಗಿತ್ತು. ಆಕ್ಸಿಜನ್ ಸಮಸ್ಯೆ ಜನರ ಜೀವವನ್ನೇ ತೆಗೆಯುವುದಕ್ಕೆ ಪ್ರಾರಂಭವಾಯಿತು.
2021ರ ಏಪ್ರಿಲ್ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣಗಳ ಆದಿಯಾಗಿ ಎಲ್ಲ ಸುದ್ದಿ ವಾಹಿನಿಗಳು, ಪತ್ರಿಕೆಗಳು, ಮಾಧ್ಯಮಗಳಲ್ಲಿ ಆಮ್ಲಜನಕ ಕೊರತೆ, ಕೊವಿಡ್-19 ಸಾವಿನ ಪ್ರಕರಣ, ಮೃತ ರೋಗಿಗಳ ಸಂಬಂಧಿಕರ ಆಕ್ರಂದನದ ಫೋಟೋಗಳು ಸಾಕಷ್ಟು ಸದ್ದು ಮಾಡಿದವು. ಕೊವಿಡ್-19 ಸೋಂಕಿನಿಂದ ತಮ್ಮವರನ್ನು ಕಳೆದುಕೊಂಡವರ ದುಸ್ಥಿತಿ ಕಣ್ಣೀರು ತರಿಸುವಂತಿತ್ತು. ಏಪ್ರಿಲ್ ತಿಂಗಳಿನಲ್ಲಿ ವೈರಲ್ ಆಗಿರುವ ಪ್ರಮುಖ ಫೋಟೋಗಳ ಹಿಂದಿನ ಕಥೆಯನ್ನು ಮುಂದೆ ಓದಿ.

ಕೊರೊನಾವೈರಸ್ ಅಂಟಿದರೆ ವೆಂಟಿಲೇಟರ್ ಕಡ್ಡಾಯ!
ಕಳೆದ ಏಪ್ರಿಲ್ ತಿಂಗಳಿನಲ್ಲಿ ಕೊರೊನಾವೈರಸ್ ಸೋಂಕು ಅಂಟಿಕೊಂಡವರಿಗೆ ವೆಂಟಿಲೇಟರ್ ಕಡ್ಡಾಯ ಎನ್ನುವಂತಾ ದುಸ್ಥಿತಿ ನಿರ್ಮಾಣವಾಗಿತ್ತು. ಕೊವಿಡ್-19 ಸೋಂಕು ತಗುಲಿದ ಬಹುತೇಕದಲ್ಲಿ ಡೆಲ್ಟಾ ರೂಪಾಂತರ ಮಾದರಿ ಪತ್ತೆಯಾಗಿತ್ತು. ಇದು ಮನುಷ್ಯದ ದೇಹದಲ್ಲಿ ಉಸಿರಾಟ ಸಮಸ್ಯೆಯನ್ನು ಹುಟ್ಟು ಹಾಕುತ್ತಿದ್ದು, ರೋಗಿಗಳ ಉಸಿರು ನಿಲ್ಲಿಸುವಷ್ಟು ಅಪಾಯಕಾರಿಯಾಗಿತ್ತು. ಈ ಹಿನ್ನೆಲೆ ಸೋಂಕಿತರಿಗೆ ವೆಂಟಿಲೇಟರ್ ಮೂಲಕ ಆಕ್ಸಿಜನ್ ಒದಗಿಸಲಾಗುತ್ತಿತ್ತು. ಉತ್ತರ ಪ್ರದೇಶದ ಗಜಿಯಾಬಾದ್, ಇಂದಿರಾಪುರಂ ಸೇರಿದಂತೆ ಬಹುತೇಕ ಕಡೆಗಳಲ್ಲಿ ರೋಗಿಗಳು ಮುಖಕ್ಕೆ ವೆಂಟಿಲೇಟರ್ ಹಾಕಿಕೊಂಡಿರುವ ಚಿತ್ರಗಳು ಪರಿಸ್ಥಿತಿಗೆ ಹಿಡಿದ ಕೈಗನ್ನಡಿ ಆಗಿದ್ದವು.

ಭಾರತದಲ್ಲಿ ರೋಗಿಗಳ ಚಿಕಿತ್ಸೆಗೆ ಆಕ್ಸಿಜನ್ ನೆರವು ನೀಡಿದ ಯುಎಸ್
ಕೊರೊನಾವೈರಸ್ ಸೋಂಕಿತರಿಗೆ ಅಗತ್ಯ ಆಮ್ಲಜನಕ ಒದಗಿಸುವುದೇ ದೊಡ್ಡ ಸವಾಲಾಗಿತ್ತು. ಕೊವಿಡ್-19 ಸೋಂಕು ತಗುಲಿದ ಬಹುತೇಕ ಜನರಲ್ಲಿ ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳಲು ಶುರುವಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯೂ ಹೆಚ್ಚಿತು. ಎಲ್ಲ ರೋಗಿಗಳಿಗೆ ಆಕ್ಸಿಜನ್ ಒದಗಿಸಲಾಗದ ಸ್ಥಿತಿಯಲ್ಲಿದ್ದ ಭಾರತಕ್ಕೆ ಅಮೆರಿಕಾ ನೆರವು ನೀಡಿತು. ಏಪ್ರಿಲ್ 30ರಂದು ಯುಎಸ್ ನಿಂದ 423 ಆಮ್ಲಜನಕ ಸಿಲಿಂಡರ್ ಜೊತೆಗೆ ವೈದ್ಯಕೀಯ ಚಿಕಿತ್ಸೆಗೆ ಅಗತ್ಯವಿರುವ ರೆಗ್ಯುಲೇಟರ್ ಹಾಗೂ ಉಪಕರಣಗಳನ್ನು ಉಡುಗೊರೆಯಾಗಿ ಭಾರತಕ್ಕೆ ರವಾನಿಸಲಾಗಿತ್ತು.

ಮನೆ ಯಜಮಾನನ ಸಾವಿನಿಂದ ಕಣ್ಣೀರಿಟ್ಟ ಕುಟುಂಬ
ಉತ್ತರ ಪ್ರದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಅತಿಹೆಚ್ಚು ಜನರ ಸಾವಿಗೆ ಕಾರಣವಾಗಿತ್ತು. ಏಪ್ರಿಲ್ ತಿಂಗಳಿನಲ್ಲಿ ಸಾವಿನ ನಗಾರಿ ಬಾರಿಸಿದ ಕೊವಿಡ್-19 ಕುಟುಂಬಕ್ಕೆ ಆಧಾರವಾಗಿದ್ದವರನ್ನೇ ಬಲಿ ತೆಗೆದುಕೊಂಡಿತ್ತು. ಅದೆಷ್ಟೋ ಕುಟುಂಬಗಳು ಮನೆ ಯಜಮಾನನಿಲ್ಲದೇ ಕಣ್ಣೀರಿಟ್ಟವು. ಬಿಹಾರದ ಪಾಟ್ನಾದಲ್ಲಿ ಮನೆ ಯಜಮಾನನ್ನು ಕಳೆದುಕೊಂಡ ಪತ್ನಿ ಕಣ್ಣೀರು ಹಾಕುತ್ತಿದ್ದರೆ, ತಂದೆಯ ಅಗಲಿಕೆ ನೋವಿನಲ್ಲಿ ಮಗನು ತಾಯಿ ಮಡಿಲಿನಲ್ಲಿ ಮಲಗಿ ಕಣ್ಣೀರು ಹಾಕುತ್ತಿರುವ ಚಿತ್ರ ಮನ ಕಲುಕುವಂತಿದೆ.

ಕೊವಿಡ್-19 ಸಾವಿನಿಂದ ಸ್ಮಶಾನದಲ್ಲೂ ಜಾಗವಿಲ್ಲ
ಏಪ್ರಿಲ್ ತಿಂಗಳಿನಲ್ಲಿ ಕೊವಿಡ್-19 ಸಾವಿನ ಪ್ರಮಾಣ ಎಷ್ಟರ ಮಟ್ಟಿಗಿತ್ತು ಎಂದರೆ ಅಂದು ಸೋಂಕಿನಿಂದ ಪ್ರಾಣ ಬಿಟ್ಟರೆ, ಅಂತ್ಯಸಂಸ್ಕಾರಕ್ಕೂ ಕ್ಯೂ ಹಚ್ಚಬೇಕಾದ ದುಸ್ಥಿತಿ ಇತ್ತು. ಸ್ಮಶಾನಗಳ ಎದುರಿಗೆ ಅಂತ್ಯಕ್ರಿಯೆ ನೆರವೇರಿಸುವುದಕ್ಕೂ ಸಾಲುಗಟ್ಟಿ ನಿಲ್ಲಬೇಕಾಗಿತ್ತು. ಇದರ ಮೃತರನ್ನು ಮಣ್ಣು ಮಾಡುವುದಕ್ಕೆ ಸ್ಥಳದ ಕೊರತೆ ಸೃಷ್ಟಿಯಾಗುವ ಮಟ್ಟಕ್ಕೆ ಸಾವಿನ ಪ್ರಕರಣಗಳಲ್ಲಿ ಏರಿಕೆ ಕಂಡು ಬಂತು. ಪ್ರತಿನಿತ್ಯ 1,000ಕ್ಕೂ ಹೆಚ್ಚು ಮಂದಿ ಸೋಂಕಿತರು ಸಾವಿನ ಮನೆ ಸೇರಿದರು. ನಂತರದಲ್ಲಿ ಸೋಂಕಿತರ ಮೃತದೇಹವನ್ನು ಸಮಾಧಿ ಬದಲಿಗೆ ಅಗ್ನಿಸ್ಪರ್ಶ ಮಾಡಲಾಯಿತು. ನವದೆಹಲಿಯ ಘಾಜಿಪುರ್ ಸ್ಮಶಾನದಲ್ಲಿ ತಮ್ಮ ಸಂಬಂಧಿಕರ ಅಂತ್ಯಸಂಸ್ಕಾರವನ್ನು ಮುಗಿಸಿಕೊಂಡು ಪಿಪಿಇ ಕಿಟ್ ನಲ್ಲಿಯೇ ವಾಪಸ್ಸಾಗುತ್ತಿರುವ ಸಂಬಂಧಿಕರ ಚಿತ್ರ ಹೀಗಿದೆ.

ಕೊವಿಡ್-19 ಚಿಂತೆ ಜೊತೆ ಲಸಿಕೆಗಳಿಗೂ ಕೊರತೆ
ಒಂದು ಕಡೆಯಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಚಿಂತೆರ ಎಡೆಬಿಡದೇ ಕಾಡುತ್ತಿತ್ತು. ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬ ಕೊವಿಡ್-19 ಸೋಂಕಿತರು ಮೊದಲ ಹಂತವನ್ನು ಮೀರಿದರೆ ಎರಡನೇ ಹಂತದಲ್ಲಿ ಆಕ್ಸಿಜನ್ ಅನಿವಾರ್ಯ ಎನ್ನುವಂತಾ ಸ್ಥಿತಿ ನಿರ್ಮಾಣವಾಗಿತ್ತು. ಇದರ ಮಧ್ಯೆ ಲಸಿಕೆಗಳ ವಿತರಣೆಯು ಕೊಂಚ ಸಮಾಧಾನ ನೀಡಿತ್ತು. ಆದರೆ ಏಪ್ರಿಲ್ ಹೊತ್ತಿಗೆ ಕೊರೊನಾವೈರಸ್ ಲಸಿಕೆಗಳಿಗೂ ಕೊರತೆ ಸೃಷ್ಟಿ ಆಯಿತು. ದೇಶದ ಹಲವು ರಾಜ್ಯಗಳು ಮತ್ತು ಮಹಾನಗರಳಲ್ಲೇ ಲಸಿಕೆಗಳು ಸಿಗದೇ ಹೋದವು. ಲಸಿಕೆ ಕೇಂದ್ರಗಳ ಎದುರು ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ಖಾಲಿ ಆಗಿದೆ ಎಂಬ ಬೋರ್ಡ್ ರಾರಾಜಿಸುವುದಕ್ಕೆ ಶುರುವಾಯಿತು.












Click it and Unblock the Notifications