ಮೋದಿ ವಿರುದ್ಧದ ’ಕೈ’ ರಣಕಹಳೆಗೆ ಬಿಎಸ್ವೈ ಕೊಟ್ಟರಾ ಆಯುಧ!
ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಅತಿಹೆಚ್ಚಿನ ಸ್ಥಾನವನ್ನು ಬಯಸಿದ್ದ ಬಿಜೆಪಿಯ ಕೇಂದ್ರದ ನಾಯಕರು ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮಾಡಿಕೊಂಡ ಎಡವಟ್ಟಿನಿಂದ ಆತಂಕಕ್ಕೀಡಾಗಿದ್ದಾರೆ.
ಒಂದೆಡೆ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಕೇಂದ್ರದಲ್ಲಿ ಮತ್ತೊಮ್ಮೆ ಪ್ರಧಾನಿಯಾಗಲು ನರೇಂದ್ರಮೋದಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ ರಾಜ್ಯದಲ್ಲಾದ ಬೆಳವಣಿಗೆಗಳು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ ಎಂದರೆ ತಪ್ಪಾಗಲಾರದು. ಈಗಾಗಲೇ ಹುಬ್ಬಳ್ಳಿಗೆ ಬಂದು (ಚುನಾವಣಾ ಪ್ರಚಾರ ರೀತಿಯ) ಭಾಷಣ ಮಾಡಿ ಹೋಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಹುಬ್ಬಳ್ಳಿ ಕಾರ್ಯಕ್ರಮ ಕೆಲವು ಸಮಯಗಳ ಹಿಂದೆಯೇ ನಿಗದಿಯಾಗಿತ್ತು. ಮತ್ತು ಹುರುಪಿನಿಂದಲೇ ಬಂದು ಜನರನ್ನುದ್ದೇಶಿಸಿ ಭಾಷಣ ಮಾಡುವ ತಯಾರಿಯಲ್ಲಿದ್ದರು. ಆದರೆ ಕಾರ್ಯಕ್ರಮಕ್ಕೆ ಹತ್ತಿರದಲ್ಲಿಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಪರೇಷನ್ ಕಮಲದ ಆಡಿಯೋ ಬಿಡುಗಡೆ ಪ್ರಕರಣ ಮೋದಿ ಅವರ ಉತ್ಸಾಹಕ್ಕೆ ತಣ್ಣೀರೆರಚಿದ್ದಂತು ಸತ್ಯ.
ಮುಂದಿನ ಲೋಕಸಭೆಗೆ ಕರ್ನಾಟಕದಿಂದ ಅತಿ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಹೈಕಮಾಂಡ್ ನಿರೀಕ್ಷೆ ಮಾಡಿತ್ತು. ಆದರೆ ಇತ್ತೀಚೆಗಿನ ಬೆಳವಣಿಗೆಗಳನ್ನು ನೋಡಿದರೆ ಬಿಜೆಪಿಯತ್ತ ಜನರಿಗೂ ನೀರಸ ಭಾವನೆ ಬರತೊಡಗಿದೆ. ಅದಕ್ಕೆ ಕಾರಣ ಬಿಎಸ್ ವೈ ಎಂದರೆ ತಪ್ಪಾಗಲಾರದು.

ಸಿಎಂ ಕುರ್ಚಿಯಲ್ಲಿ ಕೂರಲೇಬೇಕೆಂಬ ಹಠ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಪಡೆದರೂ ರಾಜ್ಯದಲ್ಲಿ ಅಧಿಕಾರ ಹಿಡಿಯಲು ವಿಫಲವಾಗಿತ್ತು. ಇದಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಕಾರಣವಾಗಿತ್ತು. ಸಂವಿಧಾನ ಬದ್ಧವಾಗಿ ಅದೆರಡು ಪಕ್ಷಗಳು ಸೇರಿದರೆ ಆಡಳಿತ ನಡೆಸುವ ಮ್ಯಾಜಿಕ್ ಸಂಖ್ಯೆ ಇರುವುದರಿಂದ ಬಿಜೆಪಿ ಅನಿವಾರ್ಯವಾಗಿ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತು ಕೊಳ್ಳುವಂತಾಗಿತ್ತು. ಬಹುಶಃ ಅವತ್ತು ಬಿಜೆಪಿಯ ರಾಜ್ಯಾಧ್ಯಕ್ಷರು ಮತ್ತು ಹಿರಿಯ ರಾಜಕಾರಣಿಯೂ ಆಗಿರುವ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಕುರ್ಚಿಯ ಆಸೆಯನ್ನು ಬಿಟ್ಟು ದೊಡ್ಡತನ ತೋರಿದ್ದರೆ ಬಹುಶಃ ಇವತ್ತು ರಾಜ್ಯದ ಜನರ ಎದುರು ದೊಡ್ಡ ಮನುಷ್ಯರಾಗಿ ಬಿಡುತ್ತಿದ್ದರೇನೋ? ಆದರೆ ಅವರು ಹಾಗೆ ಮಾಡಲಿಲ್ಲ. ಏನೇ ಆಗಲಿ ತಾನು ಸಿಎಂ ಕುರ್ಚಿಯಲ್ಲಿ ಕೂರಲೇ ಬೇಕೆಂಬ ಹಠಕ್ಕೆ ಬಿದ್ದರು. ತಮ್ಮ ಪಕ್ಷದಿಂದಲೇ ಸರ್ಕಾರ ರಚಿಸಲು ರಾಜ್ಯಪಾಲರನ್ನು ಕೋರಿದರು. (ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿ ಸ್ಥಾನವನ್ನು ಕೂಡ ಅಲಂಕರಿಸಿದರು. ಇದೆಲ್ಲವೂ ರಾಜ್ಯದ ಜನತೆಗೆ ಒಂದು ಕನಸಿನಂತೆ ಕಂಡಿದ್ದರೆ ಅಚ್ಚರಿ ಪಡಬೇಕಾಗಿಲ್ಲ.)

ಲೋಕಸಭಾ ಚುನಾವಣೆ ಕಾಣದಾಯಿತು
ಯಡಿಯೂರಪ್ಪ ಅವರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಶಾಸಕರನ್ನು ಖರೀದಿ ಮಾಡಿ ಬಹುಮತ ಸಾಬೀತು ಪಡಿಸುವ ಆಲೋಚನೆಯಿತ್ತು. ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ನ ನಾಯಕರು ತಮ್ಮ ಶಾಸಕರನ್ನು ರೆಸಾರ್ಟ್ನಲ್ಲಿಟ್ಟು ಜತನದಿಂದ ಕಾಪಾಡಿಕೊಂಡಿದ್ದರಿಂದ ವಿಫಲರಾದ ಯಡಿಯೂರಪ್ಪ ಅವರು ವಿಶ್ವಾಸ ಮತ ಯಾಚಿಸದೆ ಸಿಎಂ ಖುರ್ಚಿ ಬಿಟ್ಟು ಕೆಳಗಿಳಿದಿದ್ದರು. ಆದರೆ ಅಷ್ಟಕ್ಕೆ ಯಡಿಯೂರಪ್ಪ ಸುಮ್ಮನಾಗಿರಲಿಲ್ಲ. ಒಳಗಿಂದೊಳಗ್ಗೆ ಆಪರೇಷನ್ ಕಮಲದ ಯತ್ನವನ್ನು ನಡೆಸುತ್ತಾ ಹೊರ ಪ್ರಪಂಚಕ್ಕೆ ತಾವು ಸಾಚಾ ಎಂಬಂತೆ ನಡೆದುಕೊಂಡರು. ಹೇಗಾದರು ಮಾಡಿ ಸರ್ಕಾರವನ್ನು ಉರುಳಿಸಿ ತಾನೇ ಸಿಎಂ ಆಗಬೇಕೆಂಬ ಕೆಟ್ಟ ಹಠಕ್ಕೆ ಬಿದ್ದ ಅವರು ಅದರಲ್ಲಿಯೇ ಮಗ್ನರಾದರು. ಅವರಿಗೆ ಸಿಎಂ ಕುರ್ಚಿ ಎದುರು ಮುಂಬರುವ ಲೋಕಸಭಾ ಚುನಾವಣೆ ಕಾಣದಾಯಿತು.

ಅನಾವರಣಗೊಂಡ ಸಿಎಂ ಕುರ್ಚಿ ಮೇಲಿನ ದಾಹ
ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟು ಅವರ ಆಡಳಿತದ ವಿಫಲತೆಯನ್ನು ಮುಂದಿಟ್ಟುಕೊಂಡು ರಾಜ್ಯದ ಜನತೆಯ ಮುಂದೆ ಹೋಗಿದ್ದಿದ್ದರೆ ಬಹುಶಃ ಲೋಕ ಸಭಾ ಚುನಾವಣೆಯಲ್ಲಿ ಅದರ ಫಲಿತಾಂಶವನ್ನು ಪಡೆಯಬಹುದಿತ್ತು. ಆದರೆ ಬಿಜೆಪಿಯ ಹೆಚ್ಚಿನ ನಾಯಕರು ತಮ್ಮ ಪಕ್ಷ ಆಡಳಿತ ಮಾಡಬೇಕೆನ್ನುವ ಬಯಕೆಯನ್ನು ಮರೆತು ತಮ್ಮ ಪಾಡಿಗೆ ತಾವು ಎಂಬಂತೆ ಇರುವಾಗಲೇ ಬಿ.ಎಸ್.ಯಡಿಯೂರಪ್ಪ ಒಂದಲ್ಲ ಒಂದು ರೀತಿಯ ತಂತ್ರ ಮಾಡುತ್ತಾ ಅದರಲ್ಲಿ ವಿಫಲತೆ ಕಾಣುತ್ತಾ ರಾಜ್ಯದ ಮತ್ತು ಆಡಳಿತ ಪಕ್ಷದ ಮುಂದೆ ನಗೆಪಾಟಲಿಗೀಡಾದರೂ ಹಿಡಿದ ಕಾರ್ಯವನ್ನು ಬಿಡದೆ ಸಾಧಿಸಲೇ ಬೇಕೆಂಬ ಹಠಕ್ಕೆ ಬಿದ್ದಿದ್ದರು. ಆದರೆ ಇದೀಗ ಆಡಳಿತ ಪಕ್ಷದವರು ಬಿಡುಗಡೆ ಮಾಡಿದ ಆಪರೇಷನ್ ಕಮಲದ ಆಡಿಯೋ ಬಿ.ಎಸ್.ಯಡಿಯೂರಪ್ಪ ಅವರ ಸಿಎಂ ಕುರ್ಚಿ ಮೇಲಿರುವ ದಾಹವನ್ನು ಅನಾವರಣಗೊಳಿಸಿದೆ. ಅಷ್ಟೇ ಅಲ್ಲ ಅವರಾಡಿರುವ ಮಾತುಗಳು ಅಧಿಕಾರಕ್ಕಾಗಿ ಏನು ಮಾಡಲು ಕೂಡ ಇವರು ಹಿಂಜರಿಯಲ್ಲ ಎಂಬುದನ್ನು ಸಾಬೀತುಪಡಿಸಿದೆ.

ಹೆಚ್ಚು ಸ್ಥಾನಗಳನ್ನು ಹೇಗೆ ನಿರೀಕ್ಷಿಸಲು ಸಾಧ್ಯ?
ಅದೊಂದು ನಕಲಿ ಆಡಿಯೋ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಡಿಟ್ ಮಾಡಿ ನನ್ನ ತೇಜೋವಧೆ ಮಾಡಿದ್ದಾರೆ ಎಂದೆಲ್ಲ ಹೇಳುತ್ತಾ ನುಣುಚಿಕೊಳ್ಳಲೆತ್ನಿಸಿದ ಯಡಿಯೂರಪ್ಪ ಅವರ ಮುಖವಾಡ ಇದೀಗ ಬಯಲಾಗಿದೆ. ಮಾಧ್ಯಮಗಳಲ್ಲಿ ಆಡಿಯೋದ ಸಂಪೂರ್ಣ ಭಾಗ ಪ್ರಸಾರವಾಗಿದೆ. ಇದನ್ನು ಆಲಿಸಿದ ಮೇಲೆ ಯಡಿಯೂರಪ್ಪ ನೇತೃತ್ವದ ಬಿಜೆಪಿಯತ್ತ ಜನ ಯಾವ ರೀತಿಯ ಒಲವು ತೋರಲು ಸಾಧ್ಯ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಲೋಕಸಭಾ ಚುನಾವಣೆ ಬರುತ್ತಿರುವಾಗಲೇ ಬಿ.ಎಸ್.ಯಡಿಯೂರಪ್ಪ ಅವರನ್ನು ಹಣಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಆಯುಧ ಸಿಕ್ಕಂತಾಗಿದೆ. ಈಗ ಕೋಲು ಕೊಟ್ಟು ಹೊಡೆಸಿಕೊಳ್ಳುವ ಸರದಿ ಯಡಿಯೂರಪ್ಪರವರದ್ದಾಗಿದೆ. ರಾಜ್ಯದಲ್ಲಿ ಇಂತಹದೊಂದು ಬೆಳವಣಿಗೆ ನಡೆದು ಬಿಜೆಪಿಯ ನಾಯಕರು ಮುಜುಗರಕ್ಕೊಳಗಾಗಿರುವಾಗ ಕೇಂದ್ರದ ಬಿಜೆಪಿ ನಾಯಕರು ರಾಜ್ಯದಿಂದ ಅತಿ ಹೆಚ್ಚು ಸ್ಥಾನಗಳನ್ನು ಹೇಗೆ ನಿರೀಕ್ಷಿಸಲು ಸಾಧ್ಯ? ಯಡಿಯೂರಪ್ಪ ಮಾಡಿರುವ ಎಡವಟ್ಟು ಮುಂದಿನ ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿಗೆ ಮುಳುಗು ನೀರಾದರೆ ಅಚ್ಚರಿಪಡಬೇಕಾಗಿಲ್ಲ.











Click it and Unblock the Notifications