ಪೆಗಾಸಸ್ ಹಗರಣ: ಆರಂಭದಿಂದ ಈವರೆಗೆ ಏನೇನಾಗಿದೆ? ಟೈಮ್ಲೈನ್
ನವದೆಹಲಿ, ಸೆಪ್ಟೆಂಬರ್ 23: ಪೆಗಾಸಸ್ ಹಗರಣದ ಬಗ್ಗೆ ದಿ ವೈರ್ ಮಾಧ್ಯಮವು ಮಾಡಿದ ಒಂದು ವರದಿಯು ಭಾರತದಲ್ಲಿ ಸಂಸತ್ತು ಅಧಿವೇಶನದಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು. ಜೂನ್ 18 ರಂದು ದಿ ವೈರ್ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮೂಲಕ ಸುಮಾರು 40 ಭಾರತೀಯ ಪತ್ರಕರ್ತರ ಫೋನ್ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ವರದಿ ಮಾಡಿದೆ. ಫೋನ್ ಅನ್ನು ಹ್ಯಾಕ್ ಮಾಡಿ ಬೇಹುಗಾರಿಕೆ ನಡೆಸಲಾಗಿದೆ ಎಂದು ವಿಧಿ ವಿಜ್ಞಾನ ಪರೀಕ್ಷೆಯ ವರದಿ ಹೇಳಿದೆ ಎಂದು ದಿ ವೈರ್ನ ಈ ವರದಿಯು ಹೇಳಿತ್ತು.
ಹಾಗೆಯೇ ಪ್ರಮುಖ ಮಾಧ್ಯಮಗಳಾದ ದಿ ಹಿಂದೂ, ದಿ ವೈರ್, ಹಿಂದೂಸ್ತಾನ್ ಟೈಮ್ಸ್, ನ್ಯೂಸ್18, ಇಂಡಿಯಾ ಟುಡೇ, ಇಂಡಿಯನ್ ಎಕ್ಸ್ಪ್ರೆಸ್ನ ಪತ್ರಕರ್ತರ ಮೇಲೆ ಈ ಪೆಗಾಸಸ್ ಸ್ಪೈವೇರ್ ಮೂಲಕ ಫೋನ್ ಟ್ಯಾಪ್ ಮಾಡಿ ಕಣ್ಣಿಡಲಾಗಿದೆ ಎಂದು ಆರೋಪವನ್ನು ಹಲವಾರು ಮಾಧ್ಯಮಗಳು ಬಳಿಕ ಮಾಡಿತು. ಈ ವಿಚಾರವು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು. 2019 ರ ಲೋಕ ಸಭೆ ಚುನಾವಣೆಗೂ ಮುನ್ನ 2018 ರಿಂದಲೇ ಪತ್ರಕರ್ತರ ಫೋನ್ಗಳನ್ನು ಟ್ಯಾಪ್ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದವು.
ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಈ ಪೆಗಾಸಸ್ ಸಾಫ್ಟ್ವೇರ್ ಅನ್ನು ಮಾರಾಟ ಮಾಡುವ ಎನ್ಎಸ್ಒ ಗ್ರೂಪ್ ಈ ಬಗ್ಗೆ ನೀಡಿದ ಒಂದು ಹೇಳಿಕೆಯು ಕೇಂದ್ರ ಸರ್ಕಾರದ ಮೇಲೆ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಲು ಅಸ್ತ್ರವಾಯಿತು. ಎನ್ಎಸ್ಒ "ನಾವು ನಮ್ಮ ಸಾಫ್ಟ್ವೇರ್ಗಳನ್ನು ಅಧಿಕೃತ ಸರ್ಕಾರಕ್ಕೆ ಮಾತ್ರ ಮಾರಾಟ ಮಾಡುತ್ತೇವೆ," ಎಂದು ಹೇಳಿದ್ದು, ಇದು ಸರ್ಕಾರವನ್ನು ಪೇಚಿಗೆ ಸಿಲುಕಿಸಿತು. ಆದರೆ ಕಂಪನಿಯು ತಮ್ಮ ಈ ಪೆಗಾಸಸ್ ಸಾಫ್ಟ್ವೇರ್ ಅನ್ನು ಯಾವೆಲ್ಲಾ ದೇಶಗಳು ಖರೀದಿ ಮಾಡಿದ ಎಂಬುವುದನ್ನು ಬಹಿರಂಗ ಪಡಿಸಲಾಗದು ಎಂದು ಹೇಳಿದೆ. ಸರ್ಕಾರವು ಕೂಡಾ ಈ ಸಾಫ್ಟ್ವೇರ್ ಅನ್ನು ಖರೀದಿ ಮಾಡಲಾಗಿದೆಯೇ, ಇಲ್ಲವೇ ಎಂದು ಹೇಳದೆ, "ಸರ್ಕಾರ ಪೆಗಾಸಸ್ ಮೂಲಕ ಬೇಹುಗಾರಿಕೆ ನಡೆಸುತ್ತಿದೆ ಎಂಬ ಆರೋಪ ಸುಳ್ಳು" ಎಂದು ಮಾತ್ರ ಹೇಳಿಕೊಂಡಿದೆ. ಇನ್ನು ವಾಷಿಂಗ್ಟನ್ ಪೋಸ್ಟ್ ಕೂಡಾ ಈ ಬಗ್ಗೆ ವರದಿಯನ್ನು ಮಾಡಿದೆ. ಪೆಗಾಸಸ್ ಹಗರಣದಲ್ಲಿ ಆರಂಭದಿಂದ ಈವರೆಗೆ ಏನೇನಾಗಿದೆ ಎಂಬ ಟೈಮ್ಲೈನ್ ಇಲ್ಲಿದೆ.

ಪೆಗಾಸಸ್ ಪ್ರಕರಣದ ಟೈಮ್ಲೈನ್
* ಜೂನ್ 18 ರಂದು ದಿ ವೈರ್ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಬಳಸಲಾಗಿದೆ ಎಂದು ಆರೋಪ ಮಾಡಿದೆ
* ಜೂನ್ 18 ರಂದೇ ವರದಿ ಪ್ರಕಟವಾದ ಕೆಲವೇ ನಿಮಿಷಗಳ ನಂತರ ಪ್ರತಿಕ್ರಿಯೆ ನೀಡಿದ್ದು ಈ ಆರೋಪ ಸುಳ್ಳು, ಆಧಾರರಹಿತ ಎಂದು ಹೇಳಿದೆ
* ಪತ್ರಕರ್ತರು ಮಾತ್ರವಲ್ಲದೆ 300 ಸರ್ಕಾರಿ ಅಧಿಕಾರಿಗಳು, ಸಚಿವರುಗಳು, ವಿಪಕ್ಷ ನಾಯಕರು, ಸಾಮಾಜಿಕ ಕಾರ್ಯಕರ್ತರ ಮೇಲೆ ಪೆಗಾಸಸ್ ಕಣ್ಣು ವರದಿ
* ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಐಟಿ ಸಚಿವ ಅಶ್ವಿನಿ ವೈಷ್ಣವ್, ಚುನಾವಣಾ ಚಾಣಕ್ಯ ಎಂದೇ ಹೆಸರಾಗಿರುವ ಪ್ರಶಾಂತ್ ಕಿಶೋರ್, ಮಮತಾ ಬ್ಯಾನರ್ಜಿ ಸಂಬಂಧಿ ಅಭಿಷೇಕ್ ಬ್ಯಾನರ್ಜಿ, ಪ್ರವೀಣ್ ತೋಗಾಡಿಯಾ, ಸೃತಿ ಇರಾನಿ, ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗಾಯಿ ಮೊದಲಾದವರ ಹೆಸರು ವರದಿಯಲ್ಲಿ ಉಲ್ಲೇಖ
* ಬೇಹುಗಾರಿಕೆ ನಡೆಸಿರುವ ಸಾಧ್ಯತೆ ವರದಿ ಬೆನ್ನಲ್ಲೇ ಈ ಆರೋಪ ಸುಳ್ಳು ಎಂದ ಪೆಗಾಸಸ್ ಮಾರಾಟ ಮಾಡುವ ಸಂಸ್ಥೆ ಎನ್ಎಸ್ಒ
* ಜುಲೈ 19 ರಂದು ಸದನದಲ್ಲಿ ಮಾತನಾಡಿದ ಐಟಿ ಸಚಿವ ಅಶ್ವಿನಿ ವೈಷ್ಣವ್ ಮಾನ್ಸೂನ್ ಅಧಿವೇಶನ ಆರಂಭವಾಗುವ ಒಂದು ದಿನಕ್ಕೂ ಮುನ್ನ ಈ ವರದಿ ಪ್ರಕಟ ಕಾಕತಾಳೀಯವಲ್ಲ ಎಂದು ಹೇಳಿದರು. ಹಾಗೆಯೇ ಈ ಆರೋಪ ಆಧಾರ ರಹಿತ ಎಂದರು.
* ಜುಲೈ 19 ರಂದೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದ ತನಿಖೆಗೆ ಕಾಂಗ್ರೆಸ್ ಆಗ್ರಹಿಸಿದೆ.
* ಜುಲೈ 19 ರಂದು ಕಾಂಗ್ರೆಸ್ ನಾಯಕರು ಈ ಬೇಹುಗಾರಿಕೆಗೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಹೊಣೆ ಎಂದು ಹೇಳಿದ್ದಾರೆ.
* ಕಾಂಗ್ರೆಸ್ಗೆ ಬಿಜೆಪಿ ತಿರುಗೇಟು: ಈ ಆರೋಪಕ್ಕೆ ಯಾವುದೇ ಆಧಾರವಿಲ್ಲ ಎಂದ ಬಿಜೆಪಿ. ದೇಶದ ಪ್ರಗತಿ ಸಹಿಸದವರಿಂದ ಪೆಗಾಸಸ್ ಆರೋಪ ಎಂದ ಅಮಿತ್ ಶಾ
* ಜುಲೈ 20 ಭಾರತ ಮಾತ್ರವಲ್ಲದೇ ಸುಮಾರು 50 ದೇಶಗಳ ಸುಮಾರು 50 ಸಾವಿರ ಮಂದಿಯ ಫೋನ್ಗಳನ್ನು ಪೆಗಾಸಸ್ ಬಳಸಿ ಹ್ಯಾಕ್ ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿ, ಈ ಬಗ್ಗೆ 17 ಮಾಧ್ಯಮಗಳಿಂದ ತನಿಖೆ
* ಜುಲೈ 20 ಅಮೆಜಾನ್ ಪೆಗಾಸಸ್ ಮಾಲೀಕ ಎನ್ಎಸ್ಒ ಗ್ರೂಪ್ನ ಮೂಲಸೌಕರ್ಯವನ್ನು ಸ್ಥಗಿತಗೊಳಿಸಿತು
* 2019 ರಲ್ಲಿ ಕರ್ನಾಟಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸುವಲ್ಲಿ ಪೆಗಾಸಸ್ ಪ್ರಮುಖ ಪಾತ್ರ ವಹಿಸಿದೆ ಎಂದು ಜುಲೈ 20 ಮಾಧ್ಯಮಗಳಲ್ಲಿ ವರದಿ.
* ಜುಲೈ 20 ಫ್ರಾನ್ಸ್ನಲ್ಲಿ ಫ್ರೆಂಚ್ ವಕೀಲರುಗಳಿಂದ ಪೆಗಾಸಸ್ ಹಗರಣದ ತನಿಖೆ
* ಆರೋಪವನ್ನು ಸುಳ್ಳು ಎಂದು ಪ್ರಚಾರ ಮಾಡಲು ಬಿಜೆಪಿಯಿಂದ ಭಾರೀ ಪ್ರಚಾರ
* 15 ದೇಶಗಳ ಮುಖ್ಯಸ್ಥರು ಪೆಗಾಸಸ್ ಬಲೆಗೆ ಆರೋಪ
* ಜುಲೈ 21 ರಂದು ತುರ್ತು ಪರಿಸ್ಥಿತಿಗಿಂತ ಪೆಗಾಸಸ್ ದಾಳಿ ಅಪಾಯಕಾರಿ ಎಂದು ಶಿವಸೇನೆ ಹೇಳಿದ್ದು, ಜೆಪಿಸಿ ತನಿಖೆಗೆ ಆಗ್ರಹ ಮಾಡಿದೆ.
* ಜುಲೈ 21 ರಂದು ದೆಹಲಿ ಪ್ರವಾಸದಲ್ಲಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ
* ಜುಲೈ 22: ಪೆಗಾಸಸ್ ಬೇಹುಗಾರಿಕೆ ತನಿಖೆಗಾಗಿ ಸಚಿವರ ಸಮಿತಿ ರಚನೆ ಮಾಡಿದ ಇಸ್ರೇಲ್
* ಜುಲೈ 22: ಪೆಗಾಸಸ್ ಬೇಹುಗಾರಿಕೆ ಬಗ್ಗೆ ಎಸ್ಐಟಿ ತನಿಖೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್ಗೆ ವಕೀಲರ ಅರ್ಜಿ
* ಜುಲೈ 22: ಪ್ರಶಾಂತ್ ಕಿಶೋರ್ ಫೋನ್ ಹ್ಯಾಕ್ ಎಂದು ದೀದಿ ಆರೋಪ, ದಲೈ ಲಾಮಾ ಸಲಹೆಗಾರರು ಕೂಡಾ ಪೆಗಾಸಸ್ ಪಟ್ಟಿಯಲ್ಲಿದ್ದರು ಎಂದು ವರದಿ, ಸಿಬಿಐ ಮುಖ್ಯಸ್ಥರ ಮೇಲೂ ಕಣ್ಣಿರಿಸಲಾಗಿತ್ತು ಎಂದು ವರದಿ
* ಪೆಗಾಸಸ್ ತನಿಖೆಗೆ ಸಮಿತಿ ರಚಿಸುವಂತೆ ಮಾಧ್ಯಮಗಳ ಸಂಪಾದಕರಿಂದು ಸುಪ್ರೀಂ ಕೋರ್ಟ್ಗೆ ಅರ್ಜಿ
* ಜುಲೈ 26: ಪೆಗಾಸಸ್ ಹಗರಣದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದ ತನಿಖೆಗೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಆಗ್ರಹ
* ಜುಲೈ 27: ಪೆಗಾಸಸ್ ಹಗರಣದಲ್ಲಿ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಸುಪ್ರೀಂ ಮೆಟ್ಟಿಲೇರಿದ ಹಿರಿಯ ಪತ್ರಕರ್ತರು
* ಜುಲೈ 27: ಪ್ರಧಾನಿ ಮೋದಿಯನ್ನು ಭೇಟಿಯಾದ ಬಳಿಕ, ಪೆಗಾಸಸ್ ಬಗ್ಗೆ ತನಿಖೆ ಅಗತ್ಯ ಎಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
* ಜುಲೈ 28: ಕಾಂಗ್ರೆಸ್ ಹಾಗೂ ವಿರೋಧ ಪಕ್ಷದಿಂದ ಪ್ರತಿಭಟನೆ
* ಜುಲೈ 28: ನನ್ನ ಫೋನ್ ಕೂಡಾ ಹ್ಯಾಕ್ ಮಾಡಲಾಗಿದೆ ಎಂದ ಮಮತಾ ಬ್ಯಾನರ್ಜಿ
* ಜುಲೈ 29: ಪೆಗಾಸಸ್ ಹಗರಣ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿ 500 ಕ್ಕೂ ಅಧಿಕ ಅರ್ಜಿ
* ಆಗಸ್ಟ್02: ಪೆಗಾಸಸ್ ಮಾಹಿತಿ ಬಹಿರಂಗಕ್ಕೆ ಕೋರಿ ಐವರು ಪತ್ರಕರ್ತರು ಸುಪ್ರೀಂ ಕೋರ್ಟ್ ಮೊರೆ
* ಆಗಸ್ಟ್ 03: ಪೆಗಾಸಸ್ ಪ್ರಕರಣದ ಹಿನ್ನೆಲೆ ವಿಪಕ್ಷಗಳಿಂದ ಸಭೆ
* ಆಗಸ್ಟ್ 03: ಪೆಗಾಸಸ್ ಹಗರಣ ತನಿಖೆಗೆ ಬಿಹಾರ ಸಿಎಂದ ನಿತೀಶ್ ಕುಮಾರ್ ಆಗ್ರಹ
* ಆಗಸ್ಟ್ 04: ಎನ್ಡಿಎ ವಿರುದ್ದವೇ ಎನ್ಡಿಎ ಒಕ್ಕೂಟದ ಹಿರಿಯ ನಾಯಕ ಹಾಗೂ ಹಿಂದೂಸ್ತಾನಿ ಅವಂ ಮೋರ್ಚಾ ಮುಖ್ಯಸ್ಥ ಜಿತನ್ ರಾಮ್ ಮಾಂಝಿ ಕಿಡಿ
* ಆಗಸ್ಟ್ 05: ಪೆಗಾಗಸ್ ಕುರಿತ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್
* ಆಗಸ್ಟ್ 05: ಕೇಂದ್ರಕ್ಕೆ ಪ್ರತಿ ನೀಡಲು ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಸೂಚನೆ
* ಆಗಸ್ಟ್ 10: ಪೆಗಾಸಸ್ ಬಗ್ಗೆ ಬಹಿರಂಗ ಚರ್ಚೆ ನಡೆಸದಂತೆ ಸುಪ್ರೀಂ ಕೋರ್ಟ್ ಆದೇಶ, ಸರ್ಕಾರಕ್ಕೆ ಸಮಯಾವಕಾಶ ನೀಡಿದ ಸುಪ್ರೀಂ ಕೋರ್ಟ್
* ಆಗಸ್ಟ್ 16: ಪೆಗಾಸಸ್ ಆರೋಪ ಆಧಾರರಹಿತ. ಆದರೆ ತನಿಖೆಗೆ ತಜ್ಞರ ಸಮಿತಿ ರಚನೆ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರ ಹೇಳಿದೆ.
* ಆಗಸ್ಟ್ 17: ಪೆಗಾಸಸ್ ಹಗರಣ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
* ಸೆಪ್ಟೆಂಬರ್ 13: ಪೆಗಾಸಸ್ ಹಗರಣ ಪ್ರಕರಣದಲ್ಲಿ ಸ್ವತಂತ್ರ ತನಿಖೆ ನಡೆಸಲು ಕೋರಿ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿ ವಿಸ್ತೃತ ಅಫಿಡವಿಟ್ ಸಲ್ಲಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಹೇಳಿದೆ
ಸೆಪ್ಟೆಂಬರ್ 23: ಪೆಗಾಸಸ್ ಬೇಹುಗಾರಿಕೆ ಬಗ್ಗೆ ತನಿಖೆಗೆ ಸುಪ್ರೀಂಕೋರ್ಟ್ ತಜ್ಞರ ಸಮಿತಿಯನ್ನು ರಚನೆ ಮಾಡಿದೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications