Maha Kumbh Mela 2025: ತ್ರಿವೇಣಿ ಸಂಗಮದಲ್ಲಿ ನರೇಂದ್ರ ಮೋದಿ ಪವಿತ್ರ ಸ್ನಾನ
ಹಿಂದೂ ಧರ್ಮದಲ್ಲಿ ಅತ್ಯಂತ ದೊಡ್ಡ ಮತ್ತು ಅತ್ಯಂತ ಪವಿತ್ರವಾದ ಉತ್ಸವಗಳಲ್ಲಿ ಪ್ರಮುಖವಾದ, ಜಾಗತೀಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಮಹಾ ಕುಂಭಮೇಳ ಕಳೆದ ಮೂರು ವಾರಗಳಿಂದ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಈಗಾಗಲೇ ಸುಮಾರು ಮೂವತ್ತು ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ ಮಾಡಿದ್ದು, ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ.
ದೇಶ ಹಾಗೂ ವಿದೇಶದ ಗಣ್ಯರು ಕೂಡ ಮಹಾ ಕುಂಭಮೇಳಲ್ಲಿ ಭಾಗಿಯಾಗುತ್ತಿದ್ದು, ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ನ ಮಹಾ ಕುಂಭಮೇಳಕ್ಕೆ ಭೇಟಿ ನೀಡಿ ಪವಿತ್ರ ಸ್ನಾನ ಕೈಗೊಂಡರು. ಪ್ರಯಾಗ್ ರಾಜ್ಗೆ ಆಗಮಿಸಿದ ಪ್ರಧಾನಿಗಳನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಾಗತಿಸಿಕೊಂಡಿದ್ದು, ಅರೈಲ್ ಘಾಟ್ನಿಂದ ಬೋಟ್ನಲ್ಲಿ ಇಬ್ಬರು ಜೊತೆಯಾಗಿ ಮಹಾ ಕುಂಭಮೇಳ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ್ದಾರೆ.

ಬಳಿಕ ಕೇಸರಿ ಬಟ್ಟೆಯಲ್ಲಿ ಕಾಣಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಬಿಗಿ ಭದ್ರತೆಯಲ್ಲಿ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಕೈಗೊಂಡರು. ತ್ರಿವೇಣಿ ಸಂಗಮದ ನೀರಿನಲ್ಲಿ ಮೂರು ಬಾರಿ ಮುಳುಗು ಹಾಕಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನೀರಿನಲ್ಲೇ ನಿಂತು ಕೈಯಲ್ಲಿ ರುದ್ರಾಕ್ಷಿಯನ್ನು ಹಿಡಿದು ಜಪ ಮಾಡಿ, ಮಂತ್ರ ಪಠಣ ಮಾಡುತ್ತಾ ಗಂಗಾ ನದಿಗೆ ನಮಸ್ಕರಿಸಿದರು.
ಗಂಗಾ ಸ್ನಾನದ ಬಳಿಕ ಪ್ರಧಾನಿ ಮೋದಿ ಪ್ರಧಾನಿ ಅವರು ಪ್ರಯಾಗ್ ರಾಜ್ನ ಮಲಗಿರುವ ಭಂಗಿಯಲ್ಲಿರುವ ಭಗವಾನ್ ಹನುಮಂತನ ದೇವಾಲಯ ಹಾಗೂ ಅಕ್ಷಯವತ್ಗೆ ಭೇಟಿ ನೀಡಿ ದರ್ಶನ ಪಡೆದರು. ಈ ವೇಳೆ ಅರ್ಚಕರು ವಿಶೇಷ ಶಕ್ತಿಯುಳ್ಳ ದಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕೈಗೆ ಕಟ್ಟಿದ್ದಾರೆ. ಇನ್ನು ಮಹಾ ಕುಂಭಮೇಳಕ್ಕೆ ಪ್ರಧಾನಿ ಮೋದಿ ಅವರು ವಿಶೇಷ ಸಿಹಿ ತಿನಿಸನ್ನು ತಂದಿದ್ದು, ತಾವೇ ಸ್ವತಃ ಎಲ್ಲರಿಗೂ ಹಂಚಿದ್ದಾರೆ. ಈ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿದ್ದರು.












Click it and Unblock the Notifications