ಅಮೆಜಾನ್ಗೆ ಒಎನ್ಡಿಸಿ ಸೆಡ್ಡು- ಇದು ನಂದನ್ ನಿಲೇಕಣಿ ಮಾಸ್ಟರ್ಮೈಂಡು
ಬೆಂಗಳೂರು, ಏ. 29: ದೇಶದ ಬಹು ವ್ಯಾಪಕ ಯೋಜನೆಯಾದ ಆಧಾರ್ ಬಯೋಮೆಟ್ರಿಕ್ ಕಾರ್ಡ್ ಯೋಜನೆಯ ರೂವಾರಿ ನಂದನ್ ನಿಲೇಕಣಿ ಇದೀಗ ಮತ್ತೊಂದು ದೊಡ್ಡ ಸಾಹಸದ ಮೂಲಕ ಕೇಂದ್ರ ಸರಕಾರದ ನೆರವಿಗೆ ಧಾವಿಸಿದ್ದಾರೆ. ಅಮೆರಿಕದ ಬಹುರಾಷ್ಟ್ರೀಯ ರೀಟೇಲ್ ಮಾರಾಟ ಕಂಪನಿಗಳಾದ ಅಮೆಜಾನ್ ಮತ್ತು ವಾಲ್ಮಾರ್ಟ್ ಭಾರತ ಇ ವಾಣಿಜ್ಯ ಮಾರುಕಟ್ಟೆಯಲ್ಲಿ ಸಾಧಿಸಿರುವ ಪ್ರಾಬಲ್ಯವನ್ನು ಕೊನೆಗಾಣಿಸಲು ಕೇಂದ್ರ ಸರಕಾರ ಒಎನ್ಡಿಸಿ ಎಂಬ ಮುಕ್ತ ಜಾಲ ಮಾರಾಟ ವ್ಯವಸ್ಥೆ ರೂಪಿಸಿದೆ. ಇದರ ಹಿಂದಿನ ಶಕ್ತಿಯಾಗಿ ನಂದನ್ ನಿಲೇಕಣಿ ನಿಂತಿದ್ದಾರೆ.
ಇನ್ಫೋಸಿಸ್ನ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರು ಈ ಮಹತ್ವಾಕಾಂಕ್ಷಿ ಯೋಜನೆಯ ತಾಂತ್ರಿಕ ರೂಪುರೇಖೆಗಳನ್ನ ಸಿದ್ಧಪಡಿಸಿದ್ದಾರೆ. ಕಳೆದ ವರ್ಷ ಕೇಂದ್ರ ಸರಕಾರ ಇಂತಹದ್ದೊಂದು ಯೋಜನೆಯ ಕನಸು ಕಂಡಿತ್ತು. ಇದೀಗ ಇದು ಚಾಲನೆಗೊಂಡಿದೆ. ಈಗ ಪ್ರಾಯೋಗಿಕ ಹಂತದಲ್ಲಿದ್ದು ಮುಂಬರುವ ದಿನಗಳಲ್ಲಿ ಯೋಜನೆಯ ಉದ್ದೇಶದಂತೆ ದೇಶಾದ್ಯಂತ ಬಹುತೇಕ ಎಲ್ಲಾ ರೀಟೇಲ್ ಮಾರಾಟಗಾರರನ್ನ ಒಂದೇ ವೇದಿಕೆಗೆ ತರುವ ಪ್ರಯತ್ನವಾಗಲಿದೆ.

ಅಮೆಜಾನ್, ಫ್ಲಿಪ್ಕಾರ್ಟ್ಗಿಂತ ಹೇಗೆ ಭಿನ್ನ?
ಅಮೆಜಾನ್, ಫ್ಲಿಪ್ ಕಾರ್ಟ್ನಂಥ ಇ-ಕಾಮರ್ಸ್ ಕಂಪನಿಗಳಲ್ಲಿ ಕಾಣಿಸುವ ಮಾರಾಟಗಾರರದ್ದು ಸೀಮಿತ ಸಂಖ್ಯೆ. ಕಮಿಷನ್ ಇತ್ಯಾದಿ ಆಧಾರದ ಮೇಲೆ ಮಾರಾಟಗಾರರಿಗೆ ಆದ್ಯತೆ ಕೊಡಲಾಗುತ್ತದೆ. ಇದರಿಂದ ಇತರೆ ಸಣ್ಣಪುಟ್ಟ ಮಾರಾಟಗಾರರಿಗೆ ವೇದಿಕೆ ಇಲ್ಲದಂತಾಗುತ್ತದೆ. ಅಮೇಜಾನ್, ವಾಲ್ಮಾರ್ಟ್ ಮೊದಲಾದ ದೈತ್ಯ ರೀಟೇಲ್ ಕಂಪನಿಗಳ ವ್ಯವಹಾರದಿಂದಾಗಿ ಅಮೆರಿಕದ ಅನೇಕ ಸಣ್ಣ ವ್ಯಾಪಾರಿಗಳು ಹೇಳಹೆಸರಿಲ್ಲದಂತೆ ಹೋದರೆಂದು ಹೇಳಲಾಗುತ್ತದೆ.

ರೀಟೇಲ್ ಮಾರುಕಟ್ಟೆಯಲ್ಲಿ ಆನ್ಲೈನ್ ವ್ಯವಹಾರ
ಭಾರತದಲ್ಲಿರುವ ಒಟ್ಟಾರೆ ರೀಟೇಲ್ ಮಾರುಕಟ್ಟೆಯಲ್ಲಿ ಆನ್ಲೈನ್ ವ್ಯವಹಾರ ಶೇ. 6 ಮಾತ್ರ ಸದ್ಯ ಇರುವುದು. ಆದರೆ, ಡಿಜಿಟಲ್ ವಹಿವಾಟು ಹೆಚ್ಚುತ್ತಿರುವಂತೆಯೇ ಭಾರತದಲ್ಲಿ ಇ-ಕಾಮರ್ಸ್ ಬಹಳ ವೇಗ ಪಡೆದುಕೊಳ್ಳುವುದು ನಿಶ್ಚಿತ. ಸದ್ಯ ಇರುವ ಭಾರತದ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಅಮೆಜಾನ್ ಮತ್ತು ವಾಲ್ಮಾರ್ಟ್ ಸಂಸ್ಥೆಗಳು ಶೇ. 80ರಷ್ಟು ವ್ಯವಹಾರ ನಡೆಸುತ್ತಿರುವುದು ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಇ-ಕಾಮರ್ಸ್ ಬೆಳೆದಂತೆಲ್ಲಾ ಸಣ್ಣಪುಟ್ಟ ಅಂಗಡಿ, ಮಳಿಗೆಗಳು ಬಹುರಾಷ್ಟ್ರೀಯ ಕಂಪನಿಗಳ ಬಲಕ್ಕೆ ಕುಸಿದುಬೀಳುವ ಅಪಾಯ ಇದೆ. ಅಮೆರಿಕದಲ್ಲಿ ಆದಂತೆ ಭಾರತದಲ್ಲೂ ಅಂಥದ್ದೊಂದು ಪರಿಸ್ಥಿತಿ ಉದ್ಭವಿಸಬಾರದು ಎಂದು ಸರಕಾರ ಮುನ್ನೆಚ್ಚರಿಕೆಯಾಗಿ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ಎಂಬ ವೇದಿಕೆ ರೂಪಿಸಿದೆ.

ವಿಶ್ವದಲ್ಲಿ ಬೇರೆಲ್ಲೂ ಇಲ್ಲದ ವಿಶೇಷ ವೇದಿಕೆ:
ಭಾರತ ರೂಪಿಸುತ್ತಿರುವ ಡಿಜಿಟಲ್ ಕಾಮರ್ಸ್ ಮುಕ್ತ ನೆಟ್ವರ್ಕ್ ವೇದಿಕೆ ಪ್ರತಿಯೊಂದು ಸಣ್ಣ ಅಂಗಡಿಗಳು, ವರ್ತಕರಿಗೆ ಸಮಾನ ವೇದಿಕೆ ಕಲ್ಪಿಸುತ್ತದೆ. ಅಂದುಕೊಂಡಂತೆ ಇದು ಸಾಕಾರಗೊಂಡರೆ ವಿಶ್ವದಲ್ಲೇ ಒಂದು ವಿಶೇಷ ಮತ್ತು ಮಾದರಿ ವ್ಯವಸ್ಥೆಯಾಗಲಿದೆ. ಯಾವುದೇ ದೇಶದಲ್ಲೂ ಇಂಥದ್ದೊಂದು ಪ್ರಯತ್ನ ಆಗಿಲ್ಲ. ಲಕ್ಷಾಂತರ ಅಂಗಡಿ, ಮಳಿಗೆಗಳು ಆನ್ಲೈನ್ಗೆ ತೆರೆದುಕೊಳ್ಳುವ ಅವಕಾಶ ಹೊಂದಿವೆ. ಒಎನ್ಡಿಸಿ ಈ ಕ್ಷೇತ್ರಕ್ಕೆ ಒಂದು ಗೇಮ್ ಚೇಂಜರ್ ಎನ್ನುತ್ತಾರೆ ಕೆಲ ವರ್ತಕರು.
ಡಿಜಿಟಲ್ ವಹಿವಾಟು ಹೆಚ್ಚಲು ಯುಪಿಐ ವ್ಯವಸ್ಥೆ ಕ್ರಾಂತಿ ಮಾಡಿತ್ತು. ಅದೇ ರೀತಿ ಇ-ಕಾಮರ್ಸ್ಗೆ ಒಎನ್ಡಿಸಿಯಿಂದ ಬಲ ಸಿಗುವ ನಿರೀಕ್ಷೆ ಇದೆ. ಅದೇ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ. ನಂದನ್ ನಿಲೇಕಣಿ ನೇತೃತ್ವದಲ್ಲಿ ನಡೆದ ಆಧಾರ್ ಯೋಜನೆಯಲ್ಲಿ ಕೋಟಿ ಜನರ ಬಯೋಮೆಟ್ರಿಕ್ ವ್ಯವಸ್ಥೆ ಮಾಡಲು 9 ವರ್ಷ ಬೇಕಾಯಿತು. ಯುಪಿಐ ವ್ಯವಸ್ಥೆ ಅಡಿಯಲ್ಲಿ ಕೇವಲ 5 ವರ್ಷದಲ್ಲಿ 400 ಕೋಟಿಗೂ ಹೆಚ್ಚು ಡಿಜಿಟಲ್ ವಹಿವಾಟು ನಡೆದಿದೆ. ಈಗ ಒಎನ್ಡಿಸಿ ವೇದಿಕೆ ಇನ್ನೂ ವೇಗವಾಗಿ ಎಲ್ಲಾ ವರ್ತಕರನ್ನ ತಲುಪುವ ನಿರೀಕ್ಷೆ ಇದೆ. ನಂದನ್ ನಿಲೇಕಣಿ ಅವರು ಈ ಯೋಜನೆ ಮುನ್ನಡೆಸಲು ಸಮರ್ಥ ವ್ಯಕ್ತಿ ಎಂಬುದು ಉದ್ಯಮತಜ್ಞರ ಅನಿಸಿಕೆ. ಈ ಯೋಜನೆಗೆ ಸಲಹೆಗಾರರಾಗಿ ನಂದನ್ ನಿಲೇಕಣಿ ಜೊತೆ ಮೆಕಿನ್ಸೇ ಕಂಪನಿಯ ಮಾಜಿ ಮುಖ್ಯಸ್ಥ ಅದಿಲ್ ಜೈನುಲ್ಭಾಯ್, ನ್ಯಾಷನಲ್ ಹೆಲ್ತ್ ಅಥಾರಿಟಿಯ ಸಿಇಒ ಆರ್ ಎಸ್ ಶರ್ಮಾ ಮೊದಲಾದವರು ಇದ್ದಾರೆ.
ಅಮೆಜಾನ್ ಮತ್ತಿತರ ದೈತ್ಯ ಸಂಸ್ಥೆಗಳ ಆಟಕ್ಕೆ ಒಎನ್ಡಿಸಿ ಸರಿಯಾದ ಉತ್ತರ ಆಗಬಲ್ಲುದು. ಅಮೆಜಾನ್ನ ಡಿಸ್ಕೌಂಟ್ ಯುದ್ಧ ಎದುರಿಸಲು ನಾನೂ ಸಿದ್ಧನಿದ್ದೇನೆ ಎಂದು ಬೆಂಗಳೂರಿನ 42 ವರ್ಷದ ವರ್ತಕ ಕೌಸರ್ ಚೆರುವಂತೋಡಿ ಹೇಳುತ್ತಾರೆ.

ಒಎನ್ಡಿಸಿ ರೂಪಿಸುವುದು ಅಷ್ಟು ಸುಲಭವಲ್ಲ:
ಅಮೇಜಾನ್ ಮತ್ತು ಫ್ಲಿಪ್ಕಾರ್ಟ್ ಸಂಸ್ಥೆಗಳು ಗ್ರಾಹಕರನ್ನು ಸೆಳೆಯುವಂತಹ ತಂತ್ರಜ್ಞಾನವನ್ನು ರೂಪಿಸಿವೆ. ಆ ಪ್ರಾಬಲ್ಯ ಮುರಿಯಬೇಕೆಂದರೆ ಅಷ್ಟೇ ಸಮರ್ಥವಾದ ಅಥವಾ ಅದಕ್ಕಿಂತಲೂ ಮುಂದುವರಿದ ತಂತ್ರಜ್ಞಾನದ ವೇದಿಕೆಯನ್ನ ಸರಕಾರ ರೂಪಿಸಬೇಕು.
"ದೊಡ್ಡ ಸಂಖ್ಯೆಯಲ್ಲಿ ಮಾರಾಟಗಾರರು, ಖರೀದಿದಾರರು ಈ ಜಾಲದಲ್ಲಿರಬೇಕು. ಪೇಮೆಂಟ್ ವ್ಯವಸ್ಥೆ ಸಮರ್ಪಕವಾಗಿರಬೇಕು. ರಿಟರ್ನ್ಸ್, ರೀಫಂಡ್ ಇತ್ಯಾದಿ ಎಲ್ಲವೂ ಸರಾಗವಾಗಿರಬೇಕು. ಇಲ್ಲಿ ಪ್ರತಿಯೊಬ್ಬರೂ ಗೆಲ್ಲುವಂಥ ಒಂದು ಮುಕ್ತ ನೆಟ್ವರ್ಕ್ ರೂಪುಗೊಳ್ಳಬೇಕು" ಎಂದು ಬೆಂಗಳೂರಿನ ರೆಡ್ಸೀರ್ ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್ ಕಂಪನಿಯ ಸಿಇಒ ಅನಿಲ್ ಕುಮಾರ್ ಹೇಳುತ್ತಾರೆ.

ಬೆಂಗಳೂರು ಸೇರಿ ಕೆಲವೇ ನಗರಗಳಲ್ಲಿ ಸದ್ಯ ಪ್ರಯೋಗ:
ಬೆಂಗಳೂರು, ದೆಹಲಿ, ಕೊಯಮತ್ತೂರು, ಭೋಪಾಲ್ ಮತ್ತು ಶಿಲಾಂಗ್ ನಗರಗಳಲ್ಲಿ ಒಎನ್ಡಿಸಿಯ ಪ್ರಯೋಗ ಸದ್ಯ ನಡೆಯಲಿದೆ. ಈ ನಗರಗಳಲ್ಲಿ ೧೫೦ ಮಾರಾಟಗಾರನ್ನ ಜಾಲದೊಳಗೆ ಕರೆತರುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಆಗಸ್ಟ್ ತಿಂಗಳೊಳಗೆ ನೂರು ನಗರಗಳಿಗೆ ಇದನ್ನ ವಿಸ್ತರಿಸುವ ಗುರಿ ಇದೆ. ಗೋಫ್ರೂಗಲ್, ಇಸಮುದಾಯ್ ಮೊದಲಾದ ತಂತ್ರಜ್ಞಾನ ಕಂಪನಿಗಳನ್ನು ಮಾರಾಟಗಾರರ ಸಹಾಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಖರೀದಿದಾರರಿಗೆ ಪೇಟಿಎಂ ಕಂಪನಿ ಸಹಾಯವಾಗಲಿದೆ.
(ಒನ್ಇಂಡಿಯಾ ಸುದ್ದಿ)
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications