Get Updates
Get notified of breaking news, exclusive insights, and must-see stories!

ಖಾಸಗಿ ದರ್ಬಾರ್‌ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಾಡಿದ ಬದಲಾವಣೆ ಏನು ಗೊತ್ತಾ?

ಮೈಸೂರು, ಅಕ್ಟೋಬರ್ 18: ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಖಾಸಗಿ ದರ್ಬಾರ್ ಅಂದಿನ ಮೈಸೂರು ಅರಸರ ಆಡಳಿತದ ವೈಭವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಅಂದಿನ ಕಾಲದಲ್ಲಿ ನವರಾತ್ರಿಯ ಸಂದರ್ಭ ಮಹಾರಾಜರು ನಡೆಸುತ್ತಿದ್ದ ದರ್ಬಾರ್ ಇತಿಹಾಸವಾಗಿದೆ. ಮೊದಲಿದ್ದ ದರ್ಬಾರ್ ನಲ್ಲಿದ್ದ ಒಂದಷ್ಟು ನೂನ್ಯತೆಗಳನ್ನು ಸರಿಪಡಿಸುವ ಮೂಲಕ ದರ್ಬಾರ್‌ಗೊಂದು ಕಳೆ ಕಟ್ಟಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದರೆ ಅಚ್ಚರಿಯಾಗಬಹುದು. ಹಾಗಾದರೆ ಆಗಿನ ದರ್ಬಾರ್ ಹೇಗಿತ್ತು ಮತ್ತು ಮಹಾರಾಜರು ಮಾಡಿದ ಬದಲಾವಣೆ ಏನು ಎಂಬುದು ಕೂಡ ಕುತೂಹಲಕಾರಿಯಾಗಿದೆ. ಮೈಸೂರು ಮಹಾರಾಜರ ಕಾಲದಲ್ಲಿ ಮೈಸೂರು ದಸರಾ ವೈಭವದಿಂದಲೇ ನಡೆಯುತ್ತಿತ್ತು. ಆಗ ನವರಾತ್ರಿಯ ಸಂದರ್ಭದಲ್ಲಿ ಯೂರೋಪಿಯನ್ನರಿಗಾಗಿ ವಿಶೇಷ ದರ್ಬಾರು ನಡೆಯುತ್ತಿತ್ತು. ದಿವಾನರಾದಿಯಾಗಿ ಅಲ್ಲಿ ಎಲ್ಲ ಗಣ್ಯರು ಪಾಲ್ಗೊಳ್ಳುತ್ತಿದ್ದರೂ ಕೂಡ ಯೂರೋಪಿಯನ್ನರು ಹಾಗೂ ಅತಿಥಿಗಳಿಗೆ ಮಾತ್ರ ಕುರ್ಚಿ ಕುಳಿತುಕೊಳ್ಳಲು ಆಸನ ನೀಡಲಾಗುತ್ತಿತ್ತು. ಉಳಿದವರು ನೆಲದಲ್ಲಿಯೇ ಕುಳಿತುಕೊಳ್ಳಬೇಕಾಗಿತ್ತು. ಈ ಪದ್ಧತಿ ಆರಂಭದಿಂದಲೇ ನಡೆದು ಬಂದಿತ್ತು.

ಮೊದಲು ದರ್ಬಾರ್‌ನಲ್ಲಿ ತಾರತಮ್ಯವಿತ್ತು

ಮೊದಲು ದರ್ಬಾರ್‌ನಲ್ಲಿ ತಾರತಮ್ಯವಿತ್ತು

ಈ ಪದ್ಧತಿ ಅಂದಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಗೆ ಸರಿ ಕಾಣಿಸಲಿಲ್ಲ. ತನ್ನ ದರ್ಬಾರ್‌ನಲ್ಲಿ ಇಂತಹ ತಾರತಮ್ಯ ಇರಕೂಡದು ಎಂದು ಬಯಸಿದ ಅವರು, ಕೂಡಲೇ ತಲೆತಲಾಂತರದಿಂದ ನಡೆದು ಬಂದಿದ್ದ ಪದ್ಧತಿಯನ್ನು ರದ್ದು ಮಾಡಿ, ಎಲ್ಲರೂ ಆಸನದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದರು. ಹಳೆಯ ಪದ್ಧತಿ ಬದಲಾಗಿ ಹೊಸ ಪದ್ಧತಿ 1910 ರಲ್ಲಿ ಜಾರಿಗೆ ಬಂದಿತು. ಮಹಾರಾಜರ ಈ ತೀರ್ಮಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇದಾದ ಬಳಿಕ ಅರಮನೆಯೊಳಗಿನ ದರ್ಬಾರಿಗೆ ದಲಿತರಿಗೆ ಪ್ರವೇಶವಿಲ್ಲದಂತಿದ್ದ ಕಟ್ಟುಪಾಡನ್ನು ಸ್ವತಃ ತಾವೇ ಮುರಿದು, ದಲಿತರೂ ನಮ್ಮಂತೆಯೇ ಮನುಷ್ಯರೇ ಆಗಿರುವಾಗ ಇಲ್ಲಿ ಬೇಧ-ಭಾವ ಇರಬಾರದೆಂದರು. ಅಂತೆಯೇ 1936 ರಲ್ಲಿ ನಡೆದ ದಸರಾ ಮಹೋತ್ಸವದ ದರ್ಬಾರಿನಲ್ಲಿ ದಲಿತರಿಗೆ ಎಲ್ಲ ಸಂದರ್ಭಗಳಲ್ಲೂ ಭಾಗವಹಿಸುವ ಅವಕಾಶ ಕಲ್ಪಿಸಿದರು.

ದಸರಾ ದರ್ಬಾರ್‌ಗೆ ದಲಿತರಿಗೆ ಅವಕಾಶ

ದಸರಾ ದರ್ಬಾರ್‌ಗೆ ದಲಿತರಿಗೆ ಅವಕಾಶ

ದಸರಾ ದರ್ಬಾರಿನಲ್ಲಿ ದಲಿತರಿಗೆ ಮುಕ್ತ ಅವಕಾಶ ನೀಡಿ ಅಸ್ಪಶ್ಯತೆ ಅಳಿಸಲು ಮುಂದಾದ ಇವರ ಸಮಾನ ನೀತಿಜ್ಞ ಆಡಳಿತವನ್ನು 1938ರ ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ವಿಶೇಷ ಸಂಪುಟದಲ್ಲಿ ಬಗೆಬಗೆಯಾಗಿ ಬಣ್ಣಿಸಿ ಶ್ಲಾಘಿಸಲಾಗಿದೆ. ಅಂತೆಯೇ ಪ್ಲೇಟೋನ ರಿಪಬ್ಲಿಕ್ ಗ್ರಂಥದಲ್ಲಿ ಆದರ್ಶ ತತ್ವಜ್ಞಾನಿ ರಾಜ ಇವರೆಂದು ಪಾಲ್‌ಬ್ರಂಟನ್ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಬ್ರಿಟಿಷ್ ರಾಜನೀತಿಜ್ಞ ಲಾರ್ಡ್ ಸ್ಯಾಮ್ಯುಯೆಲ್ ಇವರನ್ನು ಅಶೋಕ ಚಕ್ರವರ್ತಿಗೆ ಹೋಲಿಸಿದ್ದಾರೆ. ಅಷ್ಟೇ ಅಲ್ಲ ದೇಶ-ವಿದೇಶಗಳ ಗಣ್ಯರನೇಕರು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ಆಡಳಿತವನ್ನು ರಾಮರಾಜ್ಯ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಂತಹ ಮಹಾರಾಜರ ಆಡಳಿತ ಮತ್ತು ದರ್ಬಾರ್ ಇವತ್ತಿನ ದಸರಾ ಸಂದರ್ಭ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಖಾಸಗಿ ದರ್ಬಾರ್ ಸಂದರ್ಭದಲ್ಲಿ ನೆನಪಾಗುತ್ತದೆ.

ರಾಜವೈಭವಕ್ಕೆ ಸಾಕ್ಷಿ ಖಾಸಗಿ ದರ್ಬಾರ್

ರಾಜವೈಭವಕ್ಕೆ ಸಾಕ್ಷಿ ಖಾಸಗಿ ದರ್ಬಾರ್

ಹಾಗೆ ನೋಡಿದರೆ ಪ್ರತಿವರ್ಷವೂ ಚಾಮುಂಡಿಬೆಟ್ಟದಲ್ಲಿ ದಸರಾಕ್ಕೆ ವಿದ್ಯುಕ್ತ ಚಾಲನೆ ದೊರೆಯುತ್ತಿದ್ದಂತೆಯೇ, ಇತ್ತ ಮೈಸೂರು ನಗರದ ಅಂಬಾವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭಗೊಳ್ಳುತ್ತದೆ. ಅರಮನೆಯ ಸಂಪ್ರದಾಯದಂತೆ ಪೂಜಾಕಾರ್ಯವನ್ನು ನೆರವೇರಿಸಿ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದರ್ಬಾರ್ ಹಾಲ್‌ನಲ್ಲಿರುವ ಸಿಂಹಾಸನವನ್ನು ಅಲಂಕರಿಸಿ ಸಾಂಪ್ರದಾಯಿಕ ಖಾಸಗಿ ದರ್ಬಾರ್‌ನ್ನು ನಡೆಸಿಕೊಡುತ್ತಾರೆ.

ಕಠಿಣ ವೃತಗಳ ಪಾಲನೆ ಅಗತ್ಯ

ಕಠಿಣ ವೃತಗಳ ಪಾಲನೆ ಅಗತ್ಯ

ನವರಾತ್ರಿಯ ಮೊದಲ ದಿನ ಅಂದರೆ ಪಾಡ್ಯದ ದಿನ ಯದುವೀರ್ ಒಡೆಯರ್‌ಗೆ ಬೆಳಿಗ್ಗೆ ಎದ್ದ ತಕ್ಷಣ ಆರತಿ ಎತ್ತಿ ಎಣ್ಣೆ ಶಾಸ್ತ್ರ ಮಾಡಿ, ಅರಮನೆಗೆ ಬರುವ ಕ್ಷೌರಿಕರಿಂದ ಚೌಲ ಮಾಡಿಸಿ ನಂತರ ಮಂಗಳ ಸ್ನಾನ ಮಾಡಲಾಗುತ್ತದೆ. ಮುತೈದೆಯರು ಹಾಗೂ ಪುರೋಹಿತ ಮನೆತನದ ಮಹಿಳೆಯರು ಆರತಿ ಬೆಳಗುತ್ತಾರೆ. ಇದಾದ ನಂತರ ಪೂಜೆಗೆ ಅಣಿಯಾಗುತ್ತಾರೆ. ಚಾಮುಂಡಿತೊಟ್ಟಿಯಲ್ಲಿ ಗಣಪತಿಗೆ ಪೂಜೆ ಮಾಡಿ ನಂತರ ಕಳಶಪೂಜೆ, ಕಂಕಣಪೂಜೆ ನಡೆಸಿ, ಕುಲದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕಂಕಣ ಧರಿಸಿ, ಯದುವೀರ್ ಅವರೊಂದಿಗೆ ಪತ್ನಿ ತ್ರಿಷಿಕಾಕುಮಾರಿ ಒಡೆಯರ್ ರಾಜಮನೆತನದ ಪದ್ಧತಿಯಂತೆ ಕಂಕಣ ಧರಿಸಿ ಎಲ್ಲಾ ರೀತಿಯ ಕಠಿಣ ವೃತಗಳು ಪಾಲಿಸುತ್ತಾರೆ. ಚಂಡಿಕಾಹೋಮ, ಬಲಿ, ಮಹಿಷವಧೆ, ಶಮೀವೃಕ್ಷ ಪೂಜೆ ಸೇರಿದಂತೆ ಹಲವು ಪೂಜಾವಿಧಿಗಳು ಸಾಂಗೋಪವಾಗಿ ನಡೆಯುತ್ತದೆಯಲ್ಲದೆ, ದೇವಿ ಭಾಗವತವನ್ನು ಪಾರಾಯಣ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಮಹಿಷಾಸುರನನ್ನು ಸಂಹರಿಸಲಾಗುತ್ತದೆ.

ದಿನ ನಿತ್ಯ ಸಿಂಹಾಸನವೇರಿ ದರ್ಬಾರ್

ದಿನ ನಿತ್ಯ ಸಿಂಹಾಸನವೇರಿ ದರ್ಬಾರ್

ಬೆಳಿಗ್ಗೆ ಕಂಕಣಧಾರಿಗಳಾದ ಯದುವೀರ್ ದಂಪತಿಗಳಿಗೆ ಪೂಜೆ, ಜೊತೆಗೆ ದರ್ಬಾರ್‌ಗೆ ಬರುವ ಮುನ್ನ ಪತ್ನಿ ಸುಮಂಗಲೆಯರೊಂದಿಗೆ ಪಾದಪೂಜೆ ಮಾಡಿ ಹಣೆಗೆ ತಿಲಕ ಇಡುತ್ತಾರೆ. ಇದು ಅರಮನೆಯ ಕಲ್ಯಾಣಮಂಟಪದ ಮೇಲ್ಭಾಗದಲ್ಲಿ ದಿನನಿತ್ಯ ನಡೆಯುತ್ತದೆ. ದರ್ಬಾರ್‌ ಹಾಲ್‌ಗೆ ಆಗಮಿಸುವ ಯದುವೀರ್ ಒಡೆಯರ್ ಸಿಂಹಾಸನಕ್ಕೆ ಪೂಜೆ ಮಾಡಿ ಬಳಿಕ ರಾಜಗಾಂಭೀರ್ಯದಿಂದ ಸಿಂಹಾಸನವನ್ನೇರಿ ಆ ಸ್ಥಾನಕ್ಕೆ ಬಲಗೈಯಿಂದ ಸೆಲ್ಯೂಟ್ ಮಾಡಿ ಆಸೀನರಾಗುತ್ತಾರೆ.

ಪಟ್ಟದ ಆನೆ, ಹಸು, ಕುದುರೆಗಳಿಗೆ ಪೂಜೆ

ಪಟ್ಟದ ಆನೆ, ಹಸು, ಕುದುರೆಗಳಿಗೆ ಪೂಜೆ

ಈ ಸಂದರ್ಭ ಹೊಗಳು ಭಟರಿಂದ ಬಹುಪರಾಕ್ ನಡೆಯುತ್ತದೆ. ನವರಾತ್ರಿಯ ಮೊದಲ ದಿನ ಅಂದರೆ ಪಾಡ್ಯದಂದು ಬೆಳಿಗ್ಗೆಯಿಂದ ಖಾಸಗಿ ದರ್ಬಾರ್ ನಡೆದರೆ, ಉಳಿದಂತೆ ಸಂಜೆ ವೇಳೆಯಲ್ಲಿ ನಡೆಯುತ್ತದೆ. ಪ್ರತಿ ದಿನ ಖಾಸಗಿ ದರ್ಬಾರ್ ನಡೆಯುವ ಮುನ್ನ ಕೆಲವು ವಿಧಿವಿಧಾನಗಳನ್ನು ನಡೆಸಲಾಗುತ್ತದೆ. ಪಟ್ಟದ ಆನೆ, ಹಸು, ಕುದುರೆಗಳಿಗೆ ಅಲಂಕಾರ ಮಾಡಿ ಕೋಟೆ ಆಂಜನೇಯ ಸ್ವಾಮಿಗೆ ಪೂಜೆ ಬಳಿಕ ಅರಮನೆಗೆ ಇವುಗಳು ಪ್ರವೇಶ ಮಾಡಿದ ನಂತರ ದರ್ಬಾರ್ ಆರಂಭವಾಗುತ್ತದೆ. ಸುಮಾರು ಹತ್ತು ದಿನಗಳ ಕಾಲ ಖಾಸಗಿ ದರ್ಬಾರ್ ನಡೆಯುತ್ತದೆ. ಇದು ಮೈಸೂರು ಮಹಾರಾಜರ ಆಡಳಿತದ ವೈಭವಕ್ಕೆ ಕನ್ನಡಿಯಾಗಿ ಮುಂದುವರೆಯುತ್ತಾ ಸಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+