ನರೇಂದ್ರ ಮೋದಿಯವರು ಕಾಡಿಗೆ ಹೋಗುತ್ತಿದ್ದುದಾದರೂ ಏತಕ್ಕೆ?
Recommended Video
ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಸಂದರ್ಶನದ ಮೂರನೇ ಭಾಗದಲ್ಲಿ ನರೇಂದ್ರ ಮೋದಿ ಅವರು, ಧ್ಯಾನದ ಮಹತ್ವ ಮತ್ತು ಜೀವನದಲ್ಲಿ ಅದು ತರುವ ಧನಾತ್ಮಕ ಪರಿವರ್ತನೆಯ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದಾರೆ. ಹಿಮಾಲಯದಿಂದ ಹಿಂತಿರುಗಿದ ಮೇಲೆ ನರೇಂದ್ರ ಮೋದಿ ಅವರು, ಇತರರ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಡಲು ಸಮಯ ವ್ಯರ್ಥ ಮಾಡಲಿಲ್ಲ. ಬದಲಿಗೆ ಅವರು ಅಹ್ಮದಾಬಾದಿಗೆ ತೆರಳಿ ಅಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ಣಪ್ರಮಾಣದ ಸದಸ್ಯರಾದರು.
"ನಾವೆಲ್ಲ ಆರೆಸ್ಸೆಸ್ ಕಚೇರಿಯನ್ನು ಸ್ವಚ್ಛಗೊಳಿಸುತ್ತಿದ್ದೆವು, ಸಹೋದ್ಯೋಗಿಗಳಿಗೆ ಚಹಾ ಮತ್ತು ಖಾದ್ಯ ತಯಾರಿಸುತ್ತಿದ್ದೆವು ಮತ್ತು ಪಾತ್ರೆಗಳನ್ನೂ ತೊಳೆಯುತ್ತಿದ್ದೆವು" ಎಂದು ಅವರು ಗತಕಾಲದ ನೆನಪುಗಳ ಮೆಲುಕುಹಾಕಿದ್ದಾರೆ. "ಹಿಮಾಲಯದಲ್ಲಿ ನಾನು ಕಂಡುಕೊಂಡಿದ್ದ ಮನಃಶ್ಶಾಂತಿಯ ಮೇಲೆ ಇಲ್ಲಿನ ಜೀವನದ ಹೊಸ ಅನುಭವ ಸವಾರಿ ಮಾಡದಂತೆ, ಪ್ರತಿವರ್ಷ ಸ್ವಲ್ಪ ಸಮಯ ನನಗಾಗಿಯೇ ಮೀಸಲಿಟ್ಟು, ನನ್ನನ್ನು ನಾನು ವಿಮರ್ಶೆ ಮಾಡಿಕೊಳ್ಳುತ್ತಿದ್ದೆ. ಅದು ನಾನು ನನ್ನ ಜೀವನವನ್ನು ಸಮದೂಗಿಸಿಕೊಳ್ಳುವ ರೀತಿಯಾಗಿತ್ತು" ಎಂದು ಹೇಳಿದ್ದಾರೆ.
ಆರೆಸ್ಸೆಸ್ ನಲ್ಲಿ ಬಿಡುವಿಲ್ಲದ ಕೆಲಸಗಳ ನಡುವೆ ಅವರು ನಿಭಾಯಿಸುತ್ತಿದ್ದ ಮತ್ತೊಂದು ಕರ್ತವ್ಯವೆಂದರೆ, "ಆಗಾಗ ಅಂಕಲ್ ಗೆ ಕ್ಯಾಂಟೀನ್ ನಲ್ಲಿ ಸಹಾಯ ಮಾಡುವುದು." ನಗರ ಜೀವನದ ಜಂಜಾಟದ ನಡುವೆ ಕಳೆದುಹೋಗಬಾರದೆಂದು ಮೋದಿಯವರು ದೃಢಸಂಕಲ್ಪ ಮಾಡಿದ್ದರು. ಅವರು ಹಿಮಾಲಯ ಪ್ರಯಾಣದಲ್ಲಿ ಅಳವಡಿಸಿಕೊಂಡಿದ್ದ ಜೀವನದ ತತ್ತ್ವಗಳನ್ನು ಪಾಲಿಸಲು ನಿರ್ಧರಿಸಿದ್ದರು.
ದೀಪಾವಳಿಯ ಸಮಯದಲ್ಲಿ ಅವರು ಐದು ದಿನಗಳ ಬಿಡುವು ತೆಗೆದುಕೊಂಡು, ಯಾವುದೇ ಜನರ ಸಂಪರ್ಕ, ರೇಡಿಯೋ, ಸುದ್ದಿಪತ್ರಿಕೆ ಅಥವಾ ಟಿವಿಯ ಗೊಡವೆ ಇಲ್ಲದಂತೆ ತಮಗಾಗಿಯೇ ಸಮಯ ಮೀಸಲಿಡುತ್ತಿದ್ದರು. ಆತ್ಮವಿಮರ್ಶೆ ಮಾಡಿಕೊಳ್ಳಲು ಆ ಐದು ದಿನಗಳ ಕಾಲ ಕಾಡಿಗೆ ತೆರಳಿ ಏಕಾಂಗಿಯಾಗಿ ಸಮಯ ಕಳೆಯುತ್ತಿದ್ದರು.
"ಆ ಏಕಾಂಗಿತನದ ಸಮಯ ನಾನು ತೊಡಗಿಸಿಕೊಂಡ ಜೀವನ ಮತ್ತು ಅಲ್ಲಿ ಪಡೆಯುತ್ತಿರುವ ವಿವಿಧ ಅನುಭವಗಳನ್ನು ಅರಿಯಲು ಮತ್ತು ನಿಭಾಯಿಸಲು ನನಗೆ ಶಕ್ತಿ ನೀಡುತ್ತಿದ್ದವು." ನೀವು ಯಾರನ್ನು ಭೇಟಿಯಾಗಲು ಈ ಬಿಡುವಿನ ಸಮಯ ತೆಗೆದುಕೊಳ್ಳುತ್ತಿದ್ದಿರಿ ಎಂದು ಜನರು ಕೇಳಿದಾಗ : "ನಾನು ನನ್ನನ್ನೇ ಭೇಟಿ ಮಾಡಲು ಹೋಗುತ್ತಿದ್ದೆ" ಎಂದು ಅವರು ಉತ್ತರಿಸುತ್ತಿದ್ದುದಾಗಿ ಅವರು ತಿಳಿಸಿದ್ದಾರೆ.
ಆತ್ಮವಿಮರ್ಶೆಗಾಗಿ ಜನರು ಕೆಲ ಕಾಲ ದೈನಂದಿನ ಜೀವನದಿಂದ ಬಿಡುವು ತೆಗೆದುಕೊಳ್ಳುವುದು ಅತ್ಯಂತ ಮಹತ್ವದ್ದು ಎಂಬುದನ್ನು ಮೋದಿ ಅಪಾರವಾಗಿ ನಂಬುತ್ತಾರೆ. ಇದು ಮೋದಿಗಾದಂತೆ ಜೀವನದ ಬಗ್ಗೆ ನಾವು ಇಟ್ಟುಕೊಂಡ ಪರಿಕಲ್ಪನೆಯನ್ನೇ ಬದಲಿಸಬಲ್ಲದು. ಸ್ವಹುಡುಕಾಟದ ಪಯಣಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ಯುವಜನತೆಗೆ ಮೋದಿ ಸಲಹೆ ನೀಡುತ್ತಾರೆ. "ಇದು ಎಂಥಾ ವ್ಯತಿರಿಕ್ತ ಪರಿಸ್ಥಿತಿಯನ್ನೂ ಎದುರಿಸಲು ಸಾಮರ್ಥ್ಯ ನೀಡುತ್ತದೆ. ಈ ವೇಗದ ಯುಗದಲ್ಲಿ ನಮ್ಮನ್ನು ನಾವು ಅರಿತುಕೊಳ್ಳುವುದು ಬಹುಮುಖ್ಯ. ಅದರಿಂದ ಜೀವನವನ್ನು ನಿಭಾಯಿಸಲು ಮತ್ತು ವಿಭಿನ್ನ ಅನುಭವ ಗಳಿಸಲು ಉಪಯುಕ್ತವಾಗುತ್ತದೆ" ಎಂದು ಮೋದಿ ಹೇಳುತ್ತಾರೆ.
"ಹಾಗಾದಾಗ ಮಾತ್ರ ನೀವು ನಿಜವಾದ ಜಗತ್ತಿನಲ್ಲಿ ಬದುಕಲು ಆರಂಭಿಸುತ್ತೀರಿ" ಎಂದು ಹೇಳುವ ಅವರು, "ಇದು ನಮ್ಮಲ್ಲಿ ಅಗಾಧ ಆತ್ಮವಿಶ್ವಾಸ ತುಂಬುತ್ತದೆ ಮತ್ತು ಯಾರು ಏನೇ ಹೇಳಿದರೂ ಅಲುಗಾಡದಂತೆ ಮಾಡುತ್ತದೆ. ಈ ಎಲ್ಲ ಸಂಗತಿಗಳು ಮುಂದಿನ ದಿನಗಳಲ್ಲಿ ನಿಮಗೆ ಸಹಾಯ ಮಾಡುತ್ತವೆ. ಆದ್ದರಿಂದ ನೀವು ಪ್ರತಿಯೊಬ್ಬರೂ ನೀವು ವಿಶೇಷ ವ್ಯಕ್ತಿತ್ವದವರು ಎಂದು ನೆನಪಿಟ್ಟುಕೊಳ್ಳಬೇಕು ಮತ್ತು ಬೆಳಕಿಗಾಗಿ ನೀವು ಎಂದೂ ಹೊರಗಡೆ ನೋಡುವ ಅಗತ್ಯವೇ ಇಲ್ಲ.... ಏಕೆಂದರೆ ಅದು ಈಗಾಗಲೆ ನಿಮ್ಮ ಆಂತರ್ಯದಲ್ಲಿಯೇ ಇರುತ್ತದೆ."
ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಸಂದರ್ಶದ ಐದು ಭಾಗಗಳಲ್ಲಿ ನರೇಂದ್ರ ಮೋದಿಯವರು ಜೀವನದ ಪಯಣದಲ್ಲಿ ಸಂಪಾದಿಸಿದ ಜ್ಞಾನ, ಪಡೆದ ಅನುಭವಗಳ ಬಗ್ಗೆ ಹಂಚಿಕೊಂಡಿದ್ದಾರೆ. ಮೊದಲ ಭಾಗದಲ್ಲಿ, ತಮ್ಮ ಕುಟುಂಬದ ಬಗ್ಗೆ ಮತ್ತು ತಮ್ಮ ತಾಯಿಯ ಬಗ್ಗೆ ಎಷ್ಟು ಮಮತೆ ಹೊಂದಿದ್ದಾರೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. ಎರಡನೇ ಭಾಗದಲ್ಲಿ, ಅವರು ಜೀವನೋದ್ದೇಶದ ಅನಿಶ್ಚಿತತೆ ಮತ್ತು ಜೀವನದಲ್ಲಿ ಸಾಗುತ್ತಿರುವ ಮಾರ್ಗದ ಬಗ್ಗೆ ಸ್ಪಷ್ಟತೆ ಕಂಡುಕೊಳ್ಳಲು ಮಾಡಿದ ಪ್ರಯಾಣದ ಬಗ್ಗೆ ವಿವರಿಸಿದ್ದಾರೆ.
'ಮಗನೆ, ಲಂಚ ತೆಗೆದುಕೊಳ್ಳುವ ತಪ್ಪು ಎಂದೂ ಮಾಡಬೇಡ'!