ಮಾಧ್ಯಮದ ಮುಂದೆ ಕಾಣಿಸುವ ಧಾವಂತ? ಸಚಿವರಿಬ್ಬರ ಗೊಂದಲ, ತಪ್ಪು ಸಂದೇಶ ರವಾನೆ
ಬೆಂಗಳೂರು, ಜ 18: ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ, ಸಚಿವರುಗಳ ನಡುವೆ ಹೊಂದಾಣಿಕೆಯಿಲ್ಲ ಎನ್ನುವುದು ಹಲವು ಬಾರಿ ಸಾಬೀತಾಗಿದೆ. ಅದು, ಯಡಿಯೂರಪ್ಪನವರ ಸರಕಾರವಿರಲಿ, ಈಗಿನ ಬಸವರಾಜ ಬೊಮ್ಮಾಯಿ ಸರಕಾರವಿರಲಿ.
ಕೋವಿಡ್ ನಿರ್ವಹಣೆಯ ವಿಚಾರದಲ್ಲಂತೂ ಸಚಿವರಾದ ಡಾ.ಅಶ್ವಥ್ ನಾರಾಯಣ, ಡಾ.ಸುಧಾಕರ್ ಮತ್ತು ಆರ್.ಅಶೋಕ್ ನಡುವೆ ಗೊಂದಲವಿರುವುದು ಜಗಜ್ಜಾಹೀರಾಗಿತ್ತು. ಇಂತಹ ಗೊಂದಲದ ಹೇಳಿಕೆ ಸೋಮವಾರದ (ಜ 17) ಕೊರೊನಾ ಸಂಬಂಧ ಮೀಟಿಂಗ್ ನಂತರವೂ ಮತ್ತೆ ಪುನರಾವರ್ತನೆಯಾಗಿದೆ.
ಆರೋಗ್ಯದ ವಿಚಾರಕ್ಕೆ ಸಂಬಂಧಿಸಿದ ಮೀಟಿಂಗ್ ಇದಾಗಿರುವುದರಿಂದ ಅದರಲ್ಲೂ ಜನಜೀವನ ನಿರ್ಧರಿಸುವ ಸಭೆ ಆಗಿರುವುದರಿಂದ, ಸಭೆಯ ನಂತರ ಮಾಧ್ಯಮವರ ಮುಂದೆ ಮೊದಲು ವಿವರಣೆ ಕೊಡಬೇಕಾದವರು ಯಾರು?
ಒಂದೋ ಮುಖ್ಯಮಂತ್ರಿಗಳು ಅಥವಾ ಆರೋಗ್ಯ ಸಚಿವರಾದ ಡಾ.ಸುಧಾಕರ್ ಅವರು. ಆದರೆ, ಇಬ್ಬರು ಬೇರೆ ಬೇರೆ ಕಡೆಯಿಂದ ವರ್ಚುಯಲ್ ಸಭೆಯಲ್ಲಿ ಭಾಗವಹಿಸಿದ್ದರೂ ಕೂಡಾ, ಆರ್.ಅಶೋಕ್ ಮೊದಲಿಗೆ ಮಾಧ್ಯಮದವರಿಗೆ ವಿವರಣೆ ನೀಡಿದ್ದಾರೆ. ಇದಾದ ನಂತರ ಸುಧಾಕರ್. ಆದರೆ, ಇವರಿಬ್ಬರು ನೀಡಿರುವ ಹೇಳಿಕೆ ಕೆಲವೊಂದು ಕಡೆ ತಾಳೆಯಾಗುತ್ತಿರಲಿಲ್ಲ.

ಸಿಎಂ ಬೊಮ್ಮಾಯಿ ವರ್ಚುಯಲ್ ಸಭೆ, ಡಾ.ಸುಧಾಕರ್ ಸಿಎಂ ಮನೆಯಿಂದ
ಕೋವಿಡ್ ಸಭೆಯಲ್ಲಿ ಬೆಂಗಳೂರಿನ ಆರ್.ಟಿ.ನಗರದ ತಮ್ಮ ಮನೆಯಿಂದ ಸಿಎಂ ಬೊಮ್ಮಾಯಿ ವರ್ಚುಯಲ್ ಸಭೆಯಲ್ಲಿ ಭಾಗವಹಿಸಿದ್ದರು. ಡಾ.ಸುಧಾಕರ್ ಕೂಡಾ ಸಿಎಂ ಮನೆಯಿಂದ, ಅಶೋಕ್ ಅವರು ಜಯನಗರದ ನಿವಾಸದಿಂದ, ಅಶ್ವಥ್ ನಾರಾಯಣ್ ಡಾಲರ್ಸ್ ಕಾಲೋನಿ, ಆರಗ ಜ್ಞಾನೇಂದ್ರ ಶಿವಮೊಗ್ಗ, ಶಿಕ್ಷಣ ಸಚಿವ ನಾಗೇಶ್ ಅವರು ತಿಪಟೂರಿನಿಂದ ಸಭೆಯಲ್ಲಿ ಭಾಗವಹಿಸಿದ್ದರು. ಈಗಿನ ಪರಿಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗಿ, ಶುಕ್ರವಾರ (ಜ 21) ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್
ಇದಾದ ನಂತರ, ಆರೋಗ್ಯ ಸಚಿವರ ಮೊದಲೇ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, "ಶುಕ್ರವಾರ ಮತ್ತೊಮ್ಮೆ ಸಭೆ ಸೇರಿ, ವೀಕೆಂಡ್ ಮತ್ತು ನೈಟ್ ಕರ್ಫ್ಯೂ ವಿಚಾರದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ, ಅಲ್ಲಿಯವರೆಗೆ ಈಗಿನ ನಿಯಮವೇ ಜಾರಿಯಲ್ಲಿ ಇರುತ್ತದೆ. ನಮಗೆ ಜನರಿಗೆ ತೊಂದರೆ ಕೊಡುವ ಉದ್ದೇಶವಿಲ್ಲ. ಟೆಸ್ಟಿಂಗ್ ಪ್ರಮಾಣವನ್ನು ಹೆಚ್ವಿಸುವ ಅಗತ್ಯವಿಲ್ಲ" ಎನ್ನುವ ಹೇಳಿಕೆಯನ್ನು ನೀಡಿದ್ದರು.

ಕೋವಿಡ್ ನಿರ್ವಹಣೆ
ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಿಸಬೇಕಿದೆ ಎಂದ ಆರೋಗ್ಯ ಸಚಿವ ಡಾ.ಸುಧಾಕರ್ "ಕೋವಿಡ್ ನಿರ್ವಹಣೆಗೆ ಸಂಬಂಧಿಸಿದ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ನಾಲ್ವರು ಸಚಿವರಲ್ಲಿ ಯಾರಾದರೂ ಮಾತನಾಡಬಹುದು. ನಮ್ಮ ಹಿರಿಯ ಸಚಿವರಾದ ಅಶೋಕ್ ಅವರು ಇವತ್ತಿನ ಸಭೆ ಬಗ್ಗೆ ಮಾತನಾಡಿದ್ದಾರೆ. ಹೋಟೆಲ್ ಉದ್ಯಮಿಗಳು ವೀಕೆಂಡ್ ಕರ್ಫ್ಯೂ ಬೇಡ ಅಂತ ವಿರೋಧ ಮಾಡುತ್ತಿದ್ದಾರೆ. ಪಾಸಿಟೀವ್ ಬಂದು ಹೋಂ ಐಸೋಲೇಷನ್ನಲ್ಲಿರುವವರ ಮೇಲೆ ಮೇಲೆ ಹೆಚ್ಚು ನಿಗಾ ಇಡಲು ಸೂಚನೆ ನೀಡಲಾಗಿದೆ. ಹೆಚ್ಚು ಟೆಸ್ಟಿಂಗ್ ನಮ್ಮಲ್ಲಿ ಆಗುತ್ತಾ ಇರುವುದರಿಂದ ಕೇಸುಗಳು ಹೆಚ್ಚು ಬರುತ್ತಿವೆ. ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಿಸಬೇಕಿದೆ"ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮಾಧ್ಯಮದವರ ಮುಂದೆ ಹೇಳಿದ್ದಾರೆ.

ಕಂದಾಯ ಸಚಿವರು, ಆರೋಗ್ಯ ಸಚಿವರ ನಡುವೆ ಇನ್ನೂ ಹಗ್ಗಜಗ್ಗಾಟ ನಿಂತಿಲ್ಲವೇ?
ಮುಖ್ಯಮಂತ್ರಿಗಳ ಜೊತೆಗಿನ ಸಭೆಯ ನಂತರ ಡಾ.ಸುಧಾಕರ್ ಮತ್ತು ಆರ್.ಅಶೋಕ್ ನಡುವೆ ಸಮನ್ವಯದ ಕೊರತೆ ಎದುರಾಗಿದೆ. ಮಾಧ್ಯಮಗಳ ಮುಂದೆ ಮಾತನಾಡುವ ಧಾವಂತದಲ್ಲಿ ಅಶೋಕ್ ಅವರು ಟೆಸ್ಟಿಂಗ್ ಸಂಖ್ಯೆ ಹೆಚ್ಚಿಸುವ ಅವಶ್ಯಕತೆಯಿಲ್ಲ ಎಂದರೆ, ಸುಧಾಕರ್ ಹೆಚ್ಚಿಸಬೇಕು ಎನ್ನುವ ದ್ವಂದ್ವ ಹೇಳಿಕೆಯನ್ನು ನೀಡಿದ್ದಾರೆ. ಇದರಿಂದ ರಾಜ್ಯದ ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಮತ್ತು ಗೊಂದಲವೂ ಹೆಚ್ಚಾಗುತ್ತದೆ. ಕಂದಾಯ ಸಚಿವರು ಮತ್ತು ಆರೋಗ್ಯ ಸಚಿವರ ನಡುವೆ ಇನ್ನೂ ಹಗ್ಗಜಗ್ಗಾಟ ನಿಂತಿಲ್ಲವೇ ಎನ್ನುವ ಪ್ರಶ್ನೆ ಸಾಮಾನ್ಯರಲ್ಲಿ ಎದುರಾಗಿದೆ.












Click it and Unblock the Notifications