ಗಾಂಧಿಹತ್ಯೆಯ ಕರಾಳ ದಿನ: ನೆನಪಿರಲಿ ಆ ದುರಂತದ 5 ಸಂಗತಿ
"ರಾಷ್ಟ್ರಪಿತ, ಬಾಪೂ, ಮಹಾತ್ಮಾ ಗಾಂಧಿ ಇನ್ನಿಲ್ಲ..." 1948ರ ಜನವರಿ 30 ರಂದು ಸಂಜೆ 6:00 ಗಂಟೆಗೆ ಆಲ್ ಇಂಡಿಯಾ ರೇಡಿಯೋ ಹಾಗೊಂದು ನಂಬಲಸಾಧ್ಯವಾದ, ದಿಗ್ಭ್ರಾಂತಗೊಳಿಸುವಂಥ ಸುದ್ದಿಯನ್ನು ಬಿತ್ತರಗೊಳಿಸಿತ್ತು. ಆ ಸುದ್ದಿ ಕೇಳುತ್ತಿದ್ದಂತೆಯೇ ಇದ್ಯಾವುದೋ ಕೆಟ್ಟ ಕನಸಾ ಎಂದುಕೊಂಡು ತಮಗೇ ತಾವು ಚಿವುಟಿ ನೋಡಿಕೊಂಡವರೆಷ್ಟೋ!
ಕೇಳಿದ್ದು ಸತ್ಯವೇ ಎಂದು ತಿಳಿದ ಮೇಲೆ 'ಅಯ್ಯೋ ಇದೆಂಥ ಕೇಡುಗಾಲ ಬಂತು?' ಎಂದು ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದೆ ತಳಮಳಗೊಂಡವರೆಷ್ಟೋ! ಕೋಟಿ ಕೋಟಿ ಭಾರತೀಯರ ಹೃದಯದಲ್ಲಿ ಮನೆ ಮಾಡಿದ ಅಹಿಂಸೆಯ ಪ್ರತಿಪಾದಕ, ಸತ್ಯ ಶೋಧಕ ಗಾಂಧಿ ಇನ್ನಿಲ್ಲವಂತೆ! ಆ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಇಡೀ ದೇಶವನ್ನು ಶೋಕ ಸಾಗರದಲ್ಲಿ ಮುಳುಗಿಸಿತ್ತು.
ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದಿರಬಹುದು, ಗಾಂಧಿಯವರ ಹಲವು ನಡೆಗಳ ಬಗ್ಗೆ ವಿರೋಧವಿದ್ದಿರಬಹುದು, ಆದರೆ ವಿಶ್ವಕ್ಕೆಲ್ಲ ಅಹಿಂಸೆಯ ಪಾಠ ಹೇಳಿದ ಮಹಾನ್ ನಾಯಕನನ್ನು ಕೊಲೆ ಮಾಡಿದ್ದು ತರವೇ? ಆ ಪ್ರಶ್ನೆಗೆ ಇಂದಿಗೂ ಉತ್ತರವಿಲ್ಲ.
ಅಷ್ಟಕ್ಕೂ 1948ರ ಜ.30 ರಂದು ಬಿರ್ಲಾ ಹೌಸ್ ನಲ್ಲಿ ನಡೆದಿದ್ದೇನು? ಆ ಕರಾಳ ದಿನದ ಮೆಲಕು ಇಲ್ಲಿದೆ...

ಅದೇ ಕೊನೆಯ ಪ್ರಾರ್ಥನೆಯಾಯ್ತು!
ದೆಹಲಿಯ ಬಿರ್ಲಾ ಹೌಸ್ ನಲ್ಲಿ ಸಂಜೆಯ ಪ್ರಾರ್ಥನೆ ಸಲ್ಲಿಸುವುದಕ್ಕಾಗಿ ಬಂದಿದ್ದ ಮಹಾತ್ಮಾ ಗಾಂಧಿಯವರಿಗೆ ಅದೇ ತಮ್ಮ ಕೊನೆಯ ಪ್ರಾರ್ಥನೆ ಎಂಬುದು ಬಹುಶಃ ಅರಿವಿರಲಿಲ್ಲ. ಪ್ರಾರ್ತರಹನೆ ಮುಗಿಸಿ ಬಿರ್ಲಾ ಹೌಸ್ ನಿಂದ ಆಚೆ ಬರುತ್ತಿದ್ದ ಗಾಂಧೀಜಿಯವರ ಮೇಲೆ ನಾಥುರಾಮ್ ಗೋಡ್ಸೆ ಪಾಯಿಂಟ್ ಬ್ಲಾಂಕ್ ರೇಂಜ್ ಪಿಸ್ತೂಲ್ ನಲ್ಲಿ ಗುಂಡು ಹಾರಿಸಿ ಹತ್ಯೆಗೈದಿದ್ದ.

ಗಾಂಧಿ ಎದೆಗೆ ಗುರಿಯಿಟ್ಟ ಗೋಡ್ಸೆ
ಪ್ರಾರ್ಥನೆ ಮುಗಿಸಿ, ತೃಪ್ತ ಮುಖಭಾವ ಹೊತ್ತ ಗಾಂಧಿಯವರನ್ನು ಗೋಡ್ಸೆ ಗುರಿಯಿಟ್ಟ ಮೂರು ಗುಂಡುಗಳು ಜರ್ಝರಿತಗೊಳಿಸಿದ್ದವು. ಅವರ ಕೃಶ ದೇಹದ ಎದೆ, ಹೊಟ್ಟೆ ಮತ್ತು ತೊಡೆಗಳನ್ನು ಗುಂಡು ಹೊಕ್ಕಿತ್ತು. ಮಹಾತ್ಮ ಕುಸಿದರು... ಇದಾಗಿ ಅರ್ಧ ಗಂಟೆಯ ಕಾಲ ನೋವನುಭವಿಸಿದ ರಾಷ್ಟ್ರಪಿತ ಸುಮಾರು 5:40 ರ ಸಮಯದಲ್ಲಿ ಕೊನೆಯುಸಿರೆಳೆದರು.

ನಾಲ್ಕನೇ ಗುಂಡನ್ನು ತನ್ನತ್ತ ತಿರುಗಿಸಿದ್ದ ಗೋಡ್ಸೆ!
ಮೂರು ಗುಂಡುಗಳನ್ನು ಗಾಂಧೀಜಿಯವರಿಗೆ ಹಾರಿಸಿದ ನಂತರ ಪಿಸ್ತೂಲ್ ಅನ್ನು ತನ್ನತ್ತ ತಿರುಗಿಸಿಕೊಂಡ ಗೋಡ್ಸೆ, ನಾಲ್ಕನೇ ಗುಂಡು ತನ್ನ ಎದೆಯನ್ನೋ, ತಲೆಯನ್ನೋ ಸೀಳಿಕೊಂಡು ಹೋಗಲಿ ಎಂದು ಹವಣಿಸುತ್ತಿದ್ದ. ಆದರೆ ಅಷ್ಟರಲ್ಲೇ ರಾಯಲ್ ಇಂಡಿಯನ್ ಫೋರ್ಸ್ ಸೈನಿಕರು ಆತನನ್ನು ತಡೆದರು. ನೆರೆದಿದ್ದ ಜನರೆಲ್ಲ ಗೋಡ್ಸೆಯನ್ನು ಥಳಿಸುವುದಕ್ಕೆ ಆರಂಭಿಸಿದರು. ಕೊನೆಗೆ ಪೊಲೀಸರು ಜನರನ್ನೆಲ್ಲ ನಿಯಂತ್ರಿಸಿ ಗೋಡ್ಸೆಯನ್ನು ಬಂಧಿಸಿ, ಕರೆದೊಯ್ಯುವಲ್ಲಿ ಯಶಸ್ವಿಯಾದರು.

ಪಶ್ಚಾತ್ತಾಪವಿಲ್ಲ ಎಂದ ಗೋಡ್ಸೆ
ಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ವೇಳೆ, 'ಈ ಕೃತ್ಯ ಎಸಗಿದ್ದರ ಕುರಿತು ನನಗೆ ಯಾವ ಪಶ್ಚಾತ್ತಾಪವೂ ಇಲ್ಲ. ನಾನು ಸರಿಯಾದ ಕೆಲಸವನ್ನೇ ಮಾಡಿದ್ದೇನೆ' ಎಂದು ಗೋಡ್ಸೆ ಪೊಲೀಸರ ಬಳಿ ಹೇಳಿಕೊಂಡಿದ್ದ. ಗಾಂಧಿ ಹತ್ಯೆ ಗೋಡ್ಸೆ ಬಳಸಿದ್ದು, ಇಟಲಿಯಲ್ಲಿ ತಯಾರಿಸಲಾದ 38 ಕಾಲಿಬರ್ ಬಿರೆಟ್ಟ ಎಂಬ ಪಿಸ್ತೂಲ್ ಬಳಸಿದ್ದ.

ಮೊದಲು ಸುದ್ದಿ ಕೊಟ್ಟ ಎಐಆರ್
1948ರ ಜನವರಿ 30 ರಂದು ಸಂಜೆ 6:00 ಗಂಟೆಗೆ ಆಲ್ ಇಂಡಿಯಾ ರೇಡಿಯೋ ಈ ಸುದ್ದಿಯನ್ನು ಬಿತ್ತರಿಸಿತ್ತು. ನಂತರ ಈ ಕೃತ್ಯ ಎಸಗಿದ್ದಕ್ಕಾಗಿ 1949 ನವೆಂಬರ್ 15 ರಂದು ನಾಥುರಾಮ್ ಗೋಡ್ಸೆ ಮತ್ತು ಈ ಪಿತೂರಿಯಲ್ಲಿ ಗೋಡ್ಸೆಗೆ ಸಹಾಯ ಮಾಡಿದ ನಾರಾಯಣ ಆಪ್ಟೆಯನ್ನು ಗಲ್ಲಿಗೇರಿಸಲಾಯಿತು.












Click it and Unblock the Notifications