ಮಹಾಕುಂಭ ಮೇಳದಲ್ಲಿ ಬಂಡವಾಳವಿಲ್ಲದೆ ದಿನಕ್ಕೆ ₹5,000 ಸಂಪಾದನೆ, ಈತ ಮಾಡೋದೇನು ಗೊತ್ತಾ?
ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾಕುಂಭ ಮೇಳವು ಅದ್ಧೂರಿಯಾಗಿ ನೆರವೇರುತ್ತಿದೆ. ಪ್ರತಿದಿನವೂ ಕೋಟ್ಯಂತರ ಮಂದಿ ಭಕ್ತಾದಿಗಳು ಪ್ರಯಾಗ್ರಾಜ್ನಲ್ಲಿ ಪವಿತ್ರ ಸ್ನಾನ ಮಾಡಿ ಪುಣ್ಯ ಕಟ್ಟಿಕೊಳ್ಳುತ್ತಿದ್ದಾರೆ. ಈ ಮಹಾಕುಂಭ ಮೇಳವು ಸಾವಿರಾರು ಜನರಿಗೆ ಬದುಕು ಕಟ್ಟಿಕೊಳ್ಳುವ ಅವಕಾಶ ಕಲ್ಪಿಸಿದೆ. ಆದರೆ, ಕಿಲಾಡಿ ವ್ಯಕ್ತಿಯೊಬ್ಬ ಯಾವುದೇ ಬಂಡವಾಳವಿಲ್ಲದೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವ ಮಾರ್ಗ ಕಂಡುಕೊಂಡಿದ್ದಾನೆ.
ದೇಶದಲ್ಲಿ ಸದ್ಯ ಒಳ್ಳೆಯ ಕೆಲಸ ಹಾಗೂ ಸಂಬಳ ಕನಸಿನ ಮಾತು ಎಂದು ಹೇಳುವವರೇ ಹೆಚ್ಚು. ಆದರೆ, ಮಹಾಕುಂಭ ಮೇಳದಲ್ಲಿ ವ್ಯಕ್ತಿಯೊಬ್ಬ ದಿನಕ್ಕೆ 4,000 ರೂಪಾಯಿಂದ 5,000 ರೂಪಾಯಿ ಸಂಪಾದನೆ ಮಾಡುತ್ತಿದ್ದಾನೆ. ಆದರೆ ಇದಕ್ಕೆ ಈತ ಒಂದು ರೂಪಾಯಿ ಕೂಡ ಬಂಡವಾಳವೇ ಹಾಕಿಲ್ಲ. ಇಷ್ಟಕ್ಕೂ ಈತ ಮಾಡ್ತೀರೋ ಉದ್ಯೋಗ ಏನು ಅಂತ ಗೊತ್ತಾದ್ರೆ ನೀವೆಲ್ಲ ಶಾಕ್ ಆಗೋದು ಗ್ಯಾರಂಟಿ.

ಅಲಹಾಬಾದ್ ನಿವಾಸಿ ದಿನೇಶ್ ಕುಮಾರ್ ಎಂಬಾತ ಕುಂಭಮೇಳದ ದೊಡ್ಡ ಬಿಸಿನೆಸ್ಮನ್ ಆಗಿ ಗಮನ ಸೆಳೆದಿದ್ದಾರೆ. ಈತ ಹಣ ಗಳಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ಪ್ರಯಾಗ್ರಾಜ್ನಲ್ಲಿ ಮಹಾಕುಂಭ ಮೇಳದ ನಿಮಿತ್ತ ಕೋಟ್ಯಂತರ ಮಂದಿ ಭಕ್ತಾದಿಗಳು ಇಲ್ಲಿನ ತ್ರಿವೇಣಿ ಸಂಗಮಕ್ಕೆ ಬಂದು ದೇವರನ್ನು ಪ್ರಾರ್ಥಿಸಿ, ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ.
ಆದರೆ, ಭಕ್ತರು ನೀರಿಗೆ ನಾಣ್ಯಗಳನ್ನು ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ತೋರುವುದು ಮೊದಲಿನಿಂದಲೂ ವಾಡಿಕೆ. ಅದರಂತೆ ಪ್ರಯಾಗ್ರಾಜ್ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನದ ವೇಳೆ ಭಕ್ತರು ನಾಣ್ಯಗಳನ್ನು ದೇವರ ಹೆಸರಲ್ಲಿ ನೀರಿಗೆ ಹಾಕುತ್ತಿದ್ದಾರೆ. ಇದನ್ನು ಗಮನಿಸಿದ ದಿನೇಶ್ ಕುಮಾರ್ ಯಾಕೆ ಕೈತುಂಬಾ ಕಾಸು ಮಾಡಬಾರದು? ಎಂದು ಯೋಚಿಸಿ ಚಾಲಾಕಿ ಪ್ಲ್ಯಾನ್ ಮಾಡಿದ್ದಾನೆ.

ನೀರಿನ ಒಳಗೆ ಹೋಗಿ ನಾಣ್ಯಗಳನ್ನು ಸಂಗ್ರಹಿಸುವುದು ಕಷ್ಟ ಸಾಧ್ಯ ಎಂದು ಅರಿತುಕೊಂಡ ದಿನೇಶ್, ವಿಜ್ಞಾನಿಯಂತೆ ತಲೆಗೆ ಕೆಲಸ ಕೊಟ್ಟು ಉಪಾಯ ಕಂಡುಕೊಂಡಿದ್ದಾನೆ. ಅದೇನಪ್ಪಾ ಅಂದ್ರೆ, ಒಂದಷ್ಟು ಮ್ಯಾಗ್ನೆಟ್ಗಳನ್ನು ಒಟ್ಟುಗೂಡಿಸಿ ಅದರಿಂದ ನಾಣ್ಯ ಸಂಗ್ರಹಿಸುವ ಪ್ಲ್ಯಾನ್ ಮಾಡಿದ್ದು, ಇದರಲ್ಲಿ ಯಶಸ್ಸು ಕೂಡ ಕಂಡಿದ್ದಾನೆ.
ಸಾಮಾನ್ಯವಾಗಿ ಸ್ಪೀಕರ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಮ್ಯಾಗ್ನೆಟ್ ಇರುತ್ತದೆ. ಇವು ಹೆಚ್ಚಾಗಿ ಗುಜುರಿ ಅಂಗಡಿಗಳಲ್ಲಿಯೂ ಸಿಗುತ್ತದೆ. ಇಂತಹ ಹಳೆಯ ಮ್ಯಾಗ್ನೆಟ್ಗಳನ್ನೆಲ್ಲ ಒಗ್ಗೂಡಿಸಿ, ಅದನ್ನು ಒಂದಕ್ಕೊಂದು ಕಟ್ಟಿ ಹಗ್ಗದ ಸಹಾಯದಿಂದ ತ್ರಿವೇಣಿ ಸಂಗಮದ ನೀರಿಗೆ ಬಿಟ್ಟಿದ್ದೇ ನೋಡಿ. ದೇವರಿಗೆ ಬಿಟ್ಟಿದ್ದ ನಾಣ್ಯಗಳೆಲ್ಲ ಮ್ಯಾಗ್ನೆಟ್ಗೆ ಅಂಟಿಕೊಂಡು ಬಂದಿವೆ. ಈ ರೀತಿ ಮ್ಯಾಗ್ನೆಟ್ ಬಳಸಿ ಪ್ರತಿದಿನ 4,000 ರೂಪಾಯಿಂದ 5,000 ರೂಪಾಯಿ ಮೊತ್ತದ ನಾಣ್ಯಗಳನ್ನು ಈತ ಸಂಗ್ರಹಿಸುತ್ತಿದ್ದಾನೆ.
ಮ್ಯಾಗ್ನೆಟ್ನಿಂದಲೇ ಈತನ ಒಂದು ತಿಂಗಳ ಸಂಪಾದನೆ ಸುಮಾರು ಒಂದೂವರೆ ಲಕ್ಷ ಎಂದು ತಿಳಿದುಬಂದಿದೆ. ಸದ್ಯ ಯಾರಿಗೂ ತಿಳಿಯದಂತೆ ದಿನೇಶ್ ಈ ಕಸುಬು ಆರಂಭಿಸಿದ್ದನು. ಆದರೆ, ಈ ಬಿಸಿನೆಸ್ ಐಡಿಯಾ ಅಲ್ಲಿದ್ದ ಕೆಲವರಿಗೆ ಕಣ್ಣಿಗೆ ಬಿದ್ದೇಬಿಟ್ಟಿದೆ. ಕೊನೆಗೆ ದಿನೇಶ್ ನಾಣ್ಯ ಸಂಗ್ರಹಿಸುವ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈತನ ಐಡಿಯಾಗೆ ಜನ ಸಲಾಂ ಹೊಡೆದಿದ್ದಾರೆ. "ಇದು ಮೊದಲೇ ಗೊತ್ತಿದ್ರೆ ಕೆಲಸಕ್ಕೆ ರಜೆ ಹಾಕಾದ್ರೂ ಪ್ರಯಾಗ್ರಾಜ್ಗೆ ಹೋಗ್ತಿದ್ವಿ ಎಂದು ನೆಟ್ಟಿಗರು ಜೋಕ್ ಮಾಡಿದ್ದಾರೆ. ನಿಜವಾದ ಉದ್ಯಮಿ ಅಂದ್ರೆ ಈತನೇ, ಒಂದು ರೂಪಾಯಿ ಬಂಡವಾಳವಿಲ್ಲದೆ ದಿನಕ್ಕೆ ಸಾವಿರಾರು ರೂಪಾಯಿ ಸಂಪಾದನೆ ಮಾಡುವುದು ಇಷ್ಟು ಸುಲಭನಾ?" ಎಂದು ಹುಬ್ಬೇರಿಸಿದ್ದಾರೆ.











Click it and Unblock the Notifications