ದೀದಿ ಮಹಾಮೈತ್ರಿಕೂಟದ ಟ್ರಬಲ್ ಶೂಟರ್!ಸಿದ್ಧವಾಗಿದೆ ಹೊಸ ಅಸ್ತ್ರ!
Recommended Video

ಕೋಲ್ಕತ್ತಾ, ಅಕ್ಟೋಬರ್ 06: ಕಟ್ಟುವ ಮುನ್ನವೇ ಕುಸಿದುಬೀಳುತ್ತಿರುವ ಮಹಾಘಟಬಂಧನಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಸರೆಯಾಗುತ್ತಾರಾ?
ಬಿಎಸ್ಪಿ ನಾಯಕಿ ಮಾಯಾವತಿಯವರ ಅನಿರೀಕ್ಷಿತ ನಿಲುವು ಕಾಂಗ್ರೆಸ್ಸಿಗರಲ್ಲಿ ಆಘಾತವನ್ನುಂಟು ಮಾಡಿದೆ. ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಸ್ವತಂತ್ರವಾಗಿಯೇ ಸ್ಪರ್ಧಿಸುವ ಅವರ ನಿರ್ಧಾರದಿಂದ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ರೂಪುಗೊಳ್ಳಬೇಕಿದ್ದ ಮಹಾಘಟಬಂಧನಕ್ಕೂ ಗ್ರಹಣ ಕವಿದಂತಾಗಿದೆ!
ಕಾಂಗ್ರೆಸ್ಸಿಗರ ಓಲೈಕೆಗೆ ಬಗ್ಗುವವರಲ್ಲ ಮಾಯಾವತಿ. ಆದರೆ ಅವರೊಂದಿಗೆ ರಾಜೀ ಸಂಧಾನ ಮಾಡುವುದಕ್ಕೆ ಸಾಧ್ಯವಿರುವುದು ಯಾರಿಗೆ? ಮಹಾಮೈತ್ರಿಕೂಟದ ಟ್ರಬಲ್ ಶೂಟರ್ ಆಗಿ ಸದ್ಯಕ್ಕೆ ಕಾಣಿಸುತ್ತಿರುವುದು ದೀದಿ ಮಮತಾ ಬ್ಯಾನರ್ಜಿ!

ಮಮತಾ ಬ್ಯಾನರ್ಜಿಗೆ ಪ್ರಧಾನಿ ಪಟ್ಟ?
ಅಕಸ್ಮಾತ್ ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟ ಒಂದಾಗಿ ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದರೆ ಪ್ರಧಾನಿಯಾಗುವವರು ಯಾರು? ತಾನು ಪ್ರಧಾನಿ ಅಭ್ಯರ್ಥಿಯಲ್ಲ, ಎಲ್ಲರೂ ಒಪ್ಪಿದರೆ ಮಾತ್ರ ಪ್ರಧಾನಿಯಾಗುತ್ತೇನೆ ಎಂದು ಈಗಾಗಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಮಹಾಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿಯಾಗಬಲ್ಲ ಸಮರ್ಥರ ಪಟ್ಟಿಯಲ್ಲಿ ಮಮತಾ ಬ್ಯಾನರ್ಜಿಯವರ ಹೆಸರೂ ಅಗ್ರಪಂಕ್ತಿಯಲ್ಲಿದೆ. ಹೀಗಿರುವಾಗ ಮಹಾಮೈತ್ರಿಕೂಟ ಮುರಿಯದಂತೆ, ಒಗ್ಗಟ್ಟನ್ನು ರೂಪಿಸುವುದರಿಂದ ಹೆಚ್ಚು ಲಾಭವಿರುವುದೇ ದೀದಿಗೆ!

ಜನವರಿಯಲ್ಲಿ ಬೃಹತ್ ಸಮಾವೇಶ
ಜನವರಿ 19 ರಂದು ಕೋಲ್ಕತ್ತಾದಲ್ಲೊಂದು ಬೃಹತ್ ಸಮಾವೇಶ ನಡೆಸಲು ಮಮತಾ ಬ್ಯಾನರ್ಜಿ ನಿರ್ಧರಿಸಿದ್ದಾರೆ. ಈ ಸಮಾವೇಶಕ್ಕೆ ಬಿಜೆಪಿ ಹೊರತಾಗಿ ಬಹುತೇಕ ಎಲ್ಲಾ ಪಕ್ಷಗಳಿಗೂ ಆಮಂತ್ರಣವಿರುತ್ತದೆ. ಅಚ್ಚರಿ ಎಂದರೆ ಸಿಪಿಎಂ, ಸಿಪಿಐ ಪಕ್ಷದ ಮುಖಂಡರನ್ನೂ ಮಮತಾ ಬ್ಯಾನರ್ಜಿ ಈ ಸಮಾವೇಶಕ್ಕೆ ಈಗಾಗಲೇ ಆಮಂತ್ರಿಸಿದ್ದಾರೆ. ಈ ಸಮಾವೇಶ ಲೋಕಸಭಾ ಚುನಾವಣೆ ಹತ್ತಿರದಲ್ಲಿರುವವಾಗ ಮಹಾಘಟಬಂಧನದ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಲಿದೆ ಎಂದೇ ಭಾವಿಸಲಾಗಿದೆ.

ಆಹ್ವಾನಿತ ಗಣ್ಯರು ಯಾರು?
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ಗಣ್ಯರು, ಪಾಟೀದಾರ್ ಆಂದೋಲನದ ಮುಖಂಡ ಹಾರ್ದಿಕ್ ಪಟೇಲ್, ದಲಿತ ಮುಖಂಡ ಜಿಗ್ನೇಶ್ ಮೆವಾನಿ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಓಮರ್ ಅಬ್ದುಲ್ಲಾ ಮತ್ತು ಫಾರೂಖ್ ಅಬ್ದುಲ್ಲಾ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೊತೆಗೆ ಬಿಎಸ್ಪಿ ಅಧಿನಾಯಕಿ ಮಾಯಾವತಿ ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಕರ್ನಾಟಕದಿಂದ ಜೆಡಿಎಸ್ ಮುಖಂಡ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಆಹ್ವಾನವಿದೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶ
ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದೇ ಮಹಾಘಟಬಂಧನದ ಉದ್ದೇಶವಾಗಿದ್ದು, 'ನರೇಂದ್ರ ಮೊದಿಯವರನ್ನು ಪ್ರಧಾನಿ ಹುದ್ದೆಯಿಂದ ಕಿತ್ತೆಸೆಯಿರಿ' ಎಂಬುದೇ ಈ ಸಮಾವೇಷದ ಘೋಷವಾಕ್ಯವಾಗಿದೆ! ಈ ಕುರಿತು ಮಾತನಾಡಿದ ಮಮತಾ ಬ್ಯಾನರ್ಜಿ, 'ನಮ್ಮ ಆದ್ಯ ಉದ್ದೇಶ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು. ಮಾಯಾವತಿಯವರ ನಿರ್ಧಾರದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ನಾನು ಈ ಸಮಾವೇಶಕ್ಕೆ ಕಾಂಗ್ರೆಸ್ ನಾಯಕರು ಮತ್ತು ಮಾಯಾವತಿಯನ್ನೂ ಆಮಂತ್ರಿಸುತ್ತೇನೆ. ನಾವೆಲ್ಲರೂ ಒಂದಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬಹುದು' ಎಂದಿದ್ದಾರೆ.












Click it and Unblock the Notifications