ಮಹಾರಾಷ್ಟ್ರದಲ್ಲಿ ಮತ್ತೆ ಡಿಸಿಎಂ ಸ್ಥಾನ ಪಡೆದ ಅಜಿತ್ ಪವಾರ್ ವ್ಯಕ್ತಿಚಿತ್ರ

ಮಹಾರಾಷ್ಟ್ರದಲ್ಲಿ ನವೆಂಬರ್ 23ರಂದು ಬಿಜೆಪಿ- ಎನ್ಸಿಪಿ ಸರ್ಕಾರ ಸ್ಥಾಪನೆಯಾಗಿದೆ. ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಿ, ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ತಮ್ಮ ಕಚೇರಿಯಲ್ಲೇ ಇಬ್ಬರಿಗೂ ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮತ್ತೆ ಡಿಸಿಎಂ ಆಗಿರುವ ಅಜಿತ್ ಅನಂತ್ ರಾವ್ ಪವಾರ್ ವ್ಯಕ್ತಿಚಿತ್ರ ಇಲ್ಲಿದೆ

288 ಮಂದಿ ವಿಧಾನಸಭಾ ಸದಸ್ಯರನ್ನು ಒಳಗೊಂಡ ಮಹಾರಾಷ್ಟ್ರದಲ್ಲಿ ಯಾವೊಂದು ಪಕ್ಷವು ಅಧಿಕಾರ ಸ್ಥಾಪಿಸಲು ಅಗತ್ಯವಾದ ಮ್ಯಾಜಿಕ್ ನಂಬರ್ 145 ದಾಟಲು ಸಾಧ್ಯವಾಗಿಲ್ಲ. 105 ಸದಸ್ಯ ಬಲದ ಬಿಜೆಪಿ ಜೊತೆ 54 ಸದಸ್ಯ ಬಲದ ಎನ್ಸಿಪಿ ಕೈ ಜೋಡಿಸಿದರೆ 159 ಸ್ಥಾನದೊಂದಿಗೆ ಸುಲಭವಾಗಿ ಸರ್ಕಾರ ರಚಿಸಬಹುದು ಎಂಬ ಲೆಕ್ಕಾಚಾರಕ್ಕೆ ಈಗ ಬೆಲೆ ಸಿಕ್ಕಿದೆ.

ಶಿವಸೇನಾ- ಎನ್ಸಿಪಿ-ಕಾಂಗ್ರೆಸ್ ಸರ್ಕಾರ ರಚನೆ ಬಗ್ಗೆ ಸುದ್ದಿ ಹಬ್ಬಿತ್ತು. ಶನಿವಾರದಂದು ಹೊಸ ಮೈತ್ರಿಕೂಟದ ಸರ್ಕಾರದ ನಿರೀಕ್ಷೆಯೂ ಇತ್ತು. ಆದರೆ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಬೆಳಗ್ಗೆ 5:40ರ ಸುಮಾರಿಗೆ ರಾಷ್ಟ್ರಪತಿ ಆಳ್ವಿಕೆಯನ್ನು ಅಂತ್ಯಗೊಳಿಸಲಾಗಿದ್ದು, ಹೊಸ ಸರ್ಕಾರ ರಚನೆಯಾಗಿದೆ. ಒಂದು ವೇಳೆ ಶಿವಸೇನಾ-ಎನ್ಸಿಪಿ- ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದರೂ ಅಜಿತ್ ಪವಾರ್ ಅವರಿಗೆ ಡಿಸಿಎಂ ಸ್ಥಾನ ನಿಗದಿಯಾಗಿತ್ತು.

ಎನ್ಸಿಪಿ ಜೊತೆ ಕೈಜೋಡಿಸಿ ಸರ್ಕಾರ ರಚಿಸುವ ಮೂಲಕ ಶಿವಸೇನಾದ ಬಹುಕಾಲದ ಉಪಟಳಕ್ಕೆ ಹಾಗೂ ಕಾಂಗ್ರೆಸ್ಸಿನ ಅವಕಾಶಗಳಿಗೆ ಒಂದೇ ಬಾರಿಗೆ ಕಡಿವಾಣ ಹಾಕಬಹುದು. ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರ. ಆದರೆ, ಎನ್ಸಿಪಿಯ ಎಲ್ಲಾ ಶಾಸಕರು ಅಜಿತ್ ಬೆನ್ನಿಗೆ ನಿಲ್ಲುತ್ತಾರಾ ಎಂಬುದನ್ನು ಮುಂದೆ ಕಾದು ನೋಡಬೇಕಿದೆ.

ಅಜಿತ್ ಪವಾರ್ ವೈಯಕ್ತಿಕ ಬದುಕು;

ಅಜಿತ್ ಪವಾರ್ ವೈಯಕ್ತಿಕ ಬದುಕು;

1959ರ ಜುಲೈ 22 ರಂದು ಅಹಮದ್ ನಗರ್ ಜಿಲ್ಲೆಯ ದೇವಲಾಲಿ ಪ್ರವರ ಎಂಬಲ್ಲಿ ಅಜ್ಜನ ಮನೆಯಲ್ಲಿ ಅಜಿತ್ ಅನಂತ್ ರಾವ್ ಪವಾರ್ ಜನಿಸಿದರು.

ಪುಣೆಯ ಬಾರಮತಿ ತಾಲೂಕಿನ ಕಾತೇವಾಡಿ ಗ್ರಾಮದಲ್ಲಿ ಬೆಳೆದ ಅಜಿತ್ ಪವಾರ್ ಅವರ ತಂದೆ ಅನಂತ್ ರಾವ್ ಪವಾರ್ ಅವರು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ದೊಡ್ಡಣ್ಣ.

ಅನಂತ್ ರಾವ್ ಅವರು ಚಿತ್ರಕರ್ಮಿ ವಿ ಶಾಂತಾರಾಮ್ ಅವರ ಜೊತೆ ರಾಜ್ ಕಮಲ್ ಸ್ಟುಡಿಯೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ತಂದೆಯ ಅಕಾಲಿಕ ಮರಣದಿಂದ ಕಾಲೇಜು ವ್ಯಾಸಂಗ ತೊರೆದ ಅಜಿತ್ ಅವರು ಕುಟುಂಬ ನಿರ್ವಹಣೆಗೆ ನಿಲ್ಲಬೇಕಾಯಿತು.

ಅಜಿತ್ ಅವರು ಮಾಜಿ ಸಚಿವ ಪದಮ್ ಸಿಂಗ್ ಪಾಟೀಲ್ ತಂಗಿ ಸುನೇತ್ರಾ (ನಿಂಬಾಳ್ಕರ್ ಪಾಟೀಲ್) ರನ್ನು ವರಿಸಿದರು. ಪಾರ್ಥ್ ಪವಾರ್ ಹಾಗೂ ಜಯ್ ಪವಾರ್ ಎಂಬ ಪುತ್ರರನ್ನು ಹೊಂದಿದ್ದಾರೆ.

ಅಜಿತ್ ಪವಾರ್ ರಾಜಕೀಯ ಪಯಣ:

ಅಜಿತ್ ಪವಾರ್ ರಾಜಕೀಯ ಪಯಣ:

* ನವೆಂಬರ್ 10, 2010 ರಿಂದ ಸೆಪ್ಟೆಂಬರ್ 26, 2014ರ ತನಕ ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಎರಡನೇ ಬಾರಿಗೆ ಡಿಸಿಎಂಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

* ಬಾರಮತಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಅಜಿತ್ ಪವಾರ್ ಅವರು ಎನ್ಸಿಪಿಯ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ.

* ಅಜಿತ್ ಅವರು ತಮ್ಮ ಚಿಕ್ಕಪ್ಪ ಶರದ್ ಹಾದಿಯಲ್ಲೇ ಸಾಗಿ ರಾಜಕೀಯ ಮುಖಂಡರಾಗುವ ಕನಸು ಹೊತ್ತುಕೊಂಡು ಮುಂಬೈಗೆ ಕಾಲಿಟ್ಟವರು. 1982ರಲ್ಲಿ ಸಕ್ಕರೆ ಕಾರ್ಖಾನೆಗಳ ಸಹಕಾರಿ ಸಂಘಕ್ಕೆ ಆಯ್ಕೆಯಾದರು. ಪುಣೆ ಜಿಲ್ಲಾ ಸಹಕಾರಿ ಬ್ಯಾಂಕ್ ಚೇರ್ಮನ್ ಆಗಿ 1991 ರಿಂದ 16 ವರ್ಷಗಳ ಕಾಲ ಅಧಿಕಾರ ಅನುಭವಿಸಿದರು.

* ಈ ಅವಧಿಯಲ್ಲೇ ಬಾರಮತಿಯಿಂದ ಸಂಸತ್ತಿಗೂ ಆಯ್ಕೆಯಾದರು. ಆಗ ಪಿ.ವಿ ನರಸಿಂಹ್ ರಾವ್ ಸರ್ಕಾರದಲ್ಲಿ ಶರದ್ ಪವಾರ್ ರಕ್ಷಣಾ ಸಚಿವರಾಗಿದ್ದರು.

* ನಂತರ 1995, 1999, 2004, 2009 ಹಾಗೂ 2014ರಲ್ಲಿ ಬಾರಮತಿಯಿಂದ ಶಾಸಕರಾದರು. 1991 ರಿಂದ 1992 ರ ಅವಧಿಯಲ್ಲಿ ಸುಧಾಕರ್ ನಾಯ್ಕ್ ಸರ್ಕಾರದಲ್ಲಿ ಕೃಷಿ, ಇಂಧನ ಸಚಿವರಾಗಿದ್ದರು.

* ಶರದ್ ಪವಾರ್ ಸಿಎಂ ಆದಾಗ ಮತ್ತೊಮ್ಮೆ 1992 ರಿಂದ 1993 ಅವಧಿಯಲ್ಲಿ ಇಂಧನ, ಯೋಜನೆ ಖಾತೆ ಸಚಿವರಾದರು.

* 1999ರಿಂದ 2003 ಅವಧಿಯಲ್ಲಿ ನೀರಾವರಿ ಖಾತೆ ನಂತರ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ವಿಲಾಸ್ ರಾವ್ ದೇಶ್ ಮುಖ್, ಸುಶೀಲ್ ಕುಮಾರ್ ಶಿಂಧೆ, ಅಶೋಕ್ ಚವಾಣ್ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಭ್ರಷ್ಟಾಚಾರದ ಆರೋಪ

ಭ್ರಷ್ಟಾಚಾರದ ಆರೋಪ

* ನ್ಯಾಷಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ಸಿಪಿ)ಯ ಪ್ರಮಖ ಮುಖಂಡ ಅಜಿತ್ ಪವಾರ್ ವಿರುದ್ಧ 1000 ಕೋಟಿ ಬ್ಯಾಂಕಿಂಗ್ ಅವ್ಯವಹಾರ ಆರೋಪ ಕೇಳಿ ಬಂದಿದೆ. ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕಿನಲ್ಲಿ ಅಜಿತ್ ಪವಾರ್ ಹಾಗೂ 70 ಮಂದಿ ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂದು ಮುಂಬೈ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ವಿಭಾಗದ ತಂಡ ಪ್ರಕರಣ ದಾಖಲಿಸಿಕೊಂಡಿದೆ.

* ಲಾವಸಾಗಾಗಿ ಮಹಾರಾಷ್ಟ್ರ ಕೃಷ್ಣಾ ಕಣಿವೆ ಅಭಿವೃದ್ಧಿ ನಿಗಮಕ್ಕೆ 348.8 ಎಕರೆ ಭೂಮಿಯನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ಖರ್ಚಿನಲ್ಲಿ ಮಂಜೂರು. ವಾರಸ್ ಗಾಂವ್ ಜಲಾಶಯದ ಕೆಲ ಭಾಗವನ್ನು ಇದು ಹೊಂದಿತ್ತು.

ಪವಾರ್ ಕುಟುಂಬದ ಒಡೆತನದಲ್ಲಿ ದೊಡ್ಡ ಪ್ರಮಾಣದಲ್ಲಿ ಕಬ್ಬು ಅರೆಯುವ ಕಾರ್ಖಾನೆಗಳಿರುವುದರಿಂದ ಕಬ್ಬಿನ ಉತ್ಪಾದನೆಗಾಗಿ ಅಣೆಕಟ್ಟುಗಳಲ್ಲಿ ನೀರಿನ ಹಂಚಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂಬ ಆರೋಪ ಮುಂದುವರೆಯುತ್ತಲೇ ಇದೆ.

ಹಲವು ವಿವಾದಿತ ಹೇಳಿಕೆ ನೀಡಿರುವ ಅಜಿತ್

ಹಲವು ವಿವಾದಿತ ಹೇಳಿಕೆ ನೀಡಿರುವ ಅಜಿತ್

* 2013ರಲ್ಲಿ ಸೊಲ್ಲಾಪುರ ಭಾಗದ ಬರಪೀಡಿತ ರೈತರು ಭೈಯ್ಯಾ ದೇಶಮುಖ್ ನೇತೃತ್ವದಲ್ಲಿ ಮುಂಬೈನ ಆಜಾದ್ ಮೈದಾನದಲ್ಲಿ ಎರಡು ತಿಂಗಳಿಂದ ನಿರಶನ ಕೈಗೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಂದಿನ ಡಿಸಿಎಂ ಅಜಿತ್, 'ಕುಡಿಯೋಕ್ಕೆ ಎಲ್ಲಿಂದ ನೀರು ತಂದು ಕೊಡೋದು? ನಾನೇನು ಸು ಸೂ ಮಾಡಿ ಡ್ಯಾಮ್‌ ಗಳನ್ನು ತುಂಬಿಸಲಿಕ್ಕಾಗುತ್ತಾ? ಕುಡಿಯಲು ನೀರು ಸಿಗದಿರುವಾಗ ಮೂತ್ರ ಬರುವುದೂ ಕಷ್ಟವೇ, ತಿಳಿದುಕೊಳ್ಳಿ' ಎಂದಿದ್ದರು.
'ರಾತ್ರಿ ವೇಳೆ ಕರೆಂಟ್ ಇಲ್ಲಾಂದ್ರೆ ಜನರ ಕೈಯಲ್ಲಿ ಇನ್ನೇನು ಮಾಡೋಕೆ ಸಾಧ್ಯ. ಕೇವಲ ಜನಸಂಖ್ಯೆಯನ್ನು ಹೆಚ್ಚಿಸಬಲ್ಲರು ಅಷ್ಟೇ' ಎಂದೂ ಲೇವಡಿಯಾಡಿದ್ದಾರೆ.

* 2014ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಸಿನ್ ಸುಪ್ರೀಯಾ ಸುಳೆ ಪರ ಪ್ರಚಾರಕ್ಕಾಗಿ ಮಸಲ್ ವಾಡಿ ಗ್ರಾಮಕ್ಕೆ ತೆರಳಿದ್ದ ಅಜಿತ್, ಅಲ್ಲಿನ ಜನರಿಗೆ ಬೆದರಿಕೆ ಹಾಕಿ, ನೀರು ಪೂರೈಕೆ ಬಂದ್ ಮಾಡಿಸುವುದಾಗಿ ಹೇಳಿದ್ದು ಭಾರಿ ಟೀಕೆಗೆ ಕಾರಣವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+