ಮಾಗಡಿ ತಾಲ್ಲೂಕಿನಲ್ಲೊಂದು ಮಾದರಿ ಶಾಲೆ: 60 ವಿದ್ಯಾರ್ಥಿಗಳಿದ್ದ ಶಾಲೆಯಲ್ಲೀಗ 430 ಮಕ್ಕಳು!
ಮಾಗಡಿ, ಜು.13: ವಿದ್ಯಾರ್ಥಿಗಳ ತೀವ್ರ ಕೊರತೆ ಎದುರಿಸುತ್ತಿದ್ದ ಎಂಟು ಶಾಲೆಗಳನ್ನು ವಿಲೀನಗೊಳಿಸಿ, ಮಾಗಡಿ ತಾಲ್ಲೂಕು ಸಂಕೀಘಟ್ಟದ ಗ್ರಾಮ ಪಂಚಾಯಿತಿ ಪಬ್ಲಿಕ್ ಶಾಲೆಯನ್ನು ಗುಣಮಟ್ಟದ ಶಾಲೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಮಂಗಳವಾರ ಶಾಲೆಗೆ ಭೇಟಿ ನೀಡಿ, ಪೋಷಕರೊಂದಿಗೆ ಸಂವಾದ ನಡೆಸಿದ ಅವರು, ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿದ್ದರಿಂದ ಈಗ ಈ ಶಾಲೆಯಲ್ಲಿ 430 ವಿದ್ಯಾರ್ಥಿಗಳು ಇದ್ದಾರೆ. ಜತೆಗೆ ಆ ಶಾಲೆಗಳ ಶಿಕ್ಷಕರೂ ಸಂಕೀಘಟ್ಟದ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ, ಅಡೆತಡೆ ಇಲ್ಲದೆ ಕಲಿಕೆ ಸಾಧ್ಯವಾಗಿದೆ. ವಿಷಯಾಧಾರಿತವಾಗಿ ಬೋಧನೆ ನಡೆಯುತ್ತಿದೆ ಎಂದರು.
ಬಿಕಾಂ ಪದವಿಯಲ್ಲಿ 7 ಚಿನ್ನದ ಪದಕ ಪಡೆದ ಬಿಡದಿ ವಿದ್ಯಾರ್ಥಿನಿ
ಶಾಲೆಯಲ್ಲಿ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಭಾಷಾ ಲ್ಯಾಬ್ ಗಳಿವೆ. ಜತೆಗೆ ಮಕ್ಕಳನ್ನು ಮನೆ ಬಾಗಿಲಿಗೆ ಹೋಗಿ ಕರೆದುಕೊಂಡು ಮತ್ತು ಬಿಟ್ಟು ಬರಲು ಉಚಿತ ವಾಹನ ವ್ಯವಸ್ಥೆ ಮಾಡಲಾಗಿದೆ. ಇದು ರಾಜ್ಯದಲ್ಲೇ ಇಂತಹ ಮೊಟ್ಟಮೊದಲ ಶಾಲೆಯಾಗಿದ್ದು, ರಾಜ್ಯಕ್ಕೆ ಮಾದರಿಯಾಗಿದೆ ಎಂದು ಅವರು ಬಣ್ಣಿಸಿದರು.
ವಿದ್ಯಾರ್ಥಿಗಳಿಗೆ ಬಿಸಿಯೂಟದ ವ್ಯವಸ್ಥೆ
ಶಾಲೆಯನ್ನು ಅಭಿವೃದ್ಧಿಪಡಿಸಲು ಗ್ರಾಮ ಪಂಚಾಯಿತಿ, ಜಿಲ್ಲಾಡಳಿತ, ಶಾಸಕರು, ಮಹಿಳಾ ಸ್ವಸಹಾಯ ಸಂಘಗಳು, ಸಮಾಜ ಸೇವಾಸಕ್ತರು ಹೀಗೆ ಎಲ್ಲರ ಸಹಕಾರವನ್ನು ಪಡೆಯಲಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ವ್ಯವಸ್ಥೆ ಇದೆ. ಜೊತೆಗೆ, ಆಟದ ಮೈದಾನ, ಶೌಚಾಲಯ ವ್ಯವಸ್ಥೆ ಎಲ್ಲದಕ್ಕೂ ಗಮನ ಕೊಡಲಾಗಿದೆ. ವಾಹನದ ನಿರ್ವಹಣೆ ಮಾಡಲು ಮಹಿಳಾ ಸ್ವಸಹಾಯ ಸಂಘಗಳ ನೆರವು ತೆಗೆದುಕೊಳ್ಳುವ ಚಿಂತನೆ ಇದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಶಾಲೆ ಅಭಿವೃದ್ಧಿಗೆ ಮೆಚ್ಚುಗೆ
ಶಾಲೆಗೆ ಗೋಮಾಳಕ್ಕೆ ಸೇರಿದ 5 ಎಕರೆ ಜಮೀನನ್ನು ಹಾಗೂ ಧನಂಜಯ ಎಂಬುವವರು ನೀಡಲು ಮುಂದಾಗಿರುವ 2 ಎಕರೆ ಜಮೀನನ್ನು ಮಂಜೂರು ಮಾಡಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು. ಸಂವಾದದಲ್ಲಿ ಭಾಗವಹಿಸಿದ್ದ ಪೋಷಕರು ಕೂಡ ಈ ರೀತಿ ಶಾಲೆ ಅಭಿವೃದ್ಧಿ ಪಡಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಕೂಡ ಸಂತಸ ವ್ಯಕ್ತಪಡಿಸಿ, ಸಚಿವರನ್ನು ಅಭಿನಂದಿಸಿದರು.
ಚಿಕ್ಕಕಲ್ಯಕ್ಕೆ ಸಚಿವರ ಭೇಟಿ
ಸಂಕೀಘಟ್ಟದಲ್ಲಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿ, ಬರುವ ನವೆಂಬರ್ನಲ್ಲಿ ಇದರ ಉದ್ಘಾಟನೆ ನಡೆಯಲಿದೆ ಎಂದರು. ಇದೇ ವೇಳೆ, ಸಚಿವರು ತಮ್ಮ ಹುಟ್ಟೂರು ಚಿಕ್ಕಕಲ್ಯಕ್ಕೆ ಭೇಟಿ ಕೊಟ್ಟು, ರೂ 50 ಕೋಟಿ ವೆಚ್ಚದಲ್ಲಿ ಆಗುತ್ತಿರುವ ಜಿಟಿಟಿಸಿ ನಿರ್ಮಾಣ ಕಾರ್ಯದ ಪ್ರಗತಿಯನ್ನು ಪರಿಶೀಲಿಸಿದರು. ಜನವರಿ ತಿಂಗಳಲ್ಲಿ ಶಂಕುಸ್ಥಾಪನೆಗೊಂಡ ಈ ಕಟ್ಟಡ ಕಾಮಗಾರಿಯನ್ನು ನವೆಂಬರ್ ಹೊತ್ತಿಗೆ ಮುಗಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಇದ್ದರು. ಉಳಿದಂತೆ, ಶ್ರೀರಂಗ ನೀರಾವರಿ ಯೋಜನೆಯನ್ನು ಬೇಗನೇ ಅನುಷ್ಠಾನಗೊಳಿಸಿ ಜನರ ಜಮೀನಿಗೆ ನೀರಾವರಿ ಸೌಲಭ್ಯ ಸಿಗುವಂತೆ ಮಾಡಲಾಗುತ್ತದೆ. ಕೆಂಪಾಪುರವನ್ನು ಕೂಡ ಸಮಗ್ರವಾಗಿ ಅಭಿವೃದ್ಧಿಗೊಳಿಸಲಾಗುತ್ತದೆ ಎಂದು ಹೇಳಿದರು.
ಮಾರ್ಚ್ನಲ್ಲಿ ಲೋಕಾರ್ಪಣೆ
ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿಗೊಂದು ಮಾದರಿ ಪಬ್ಲಿಕ್ ಶಾಲೆ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಸಂಕೀಘಟ್ಟ ಶಾಲೆಯನ್ನು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವರೂ ಆದ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮಾರ್ಚ್ನಲ್ಲಿ ಲೋಕಾರ್ಪಣೆ ಮಾಡಿದ್ದರು. ಈ ಮಾದರಿ ಪಬ್ಲಿಕ್ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲದಂತೆ ಅಭಿವೃದ್ಧಿಪಡಿಸಲಾಗುವುದು. ಈಗ ಇರುವ ಸಂಕೀಘಟ್ಟ ಶಾಲೆಗೆ ಆಟದ ಮೈದಾನ, ಸ್ಮಾರ್ಟ್ ತರಗತಿಗಳು, ಶೌಚಾಲಯ, ಬೋಧಕ ಸಿಬ್ಬಂದಿ ಎಲ್ಲವನ್ನೂ ಒದಗಿಸಲಾಗುವುದು. ಜತೆಗೆ, ಸುತ್ತಮುತ್ತಲಿನ ಹಳ್ಳಿಗಳ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರಲು ಮತ್ತು ಪುನಃ ಮನೆಗೆ ತಲುಪಿಸಲು ವಾಹನ ವ್ಯವಸ್ಥೆಯನ್ನೂ ಮಾಡಲಾಗುವುದು. 2022-23ನೇ ಶೈಕ್ಷಣಿಕ ವರ್ಷದಿಂದ ಈ ಶಾಲೆಯು ಕಾರ್ಯಾರಂಭ ಮಾಡಲಿದೆ ಎಂದು ಹೇಳಿದ್ದರು.
Recommended Video