ಚಂದ್ರನ ಮೇಲೆ ಮನುಷ್ಯ ವಾಸ ಮಾಡಬಲ್ಲ ಏಕೈಕ ಸ್ಥಳ ಇದು
ಅದಿ ಮಾನವ ಭೂಮಿಯ ಮೇಲೆ ಎಲ್ಲಿ ವಾಸವಿದ್ದ ಎಂದು ಯಾರನ್ನಾದರೂ ಕೇಳಿದರೆ ಮೊದಲು ಹೇಳುವ ಉತ್ತರ ಗುಹೆ. ಮನುಷ್ಯನ ಬೆಳವಣಿಗೆ ಆರಂಭವಾಗಿದ್ದು ಗುಹೆಯಲ್ಲಿ. ಈಗ ಒಂದು ವೇಳೆ ಮನುಷ್ಯ ಚಂದ್ರನ ಮೇಲೆ ಮನೆ ಮಾಡಿದರೆ ವಾಸ ಇರಬೇಕಾದ್ದರೂ ಗುಹೆಯಲ್ಲೇ.
ಇದೆತ್ತಣದಿಂದೆತ್ತಣ ಸಂಬಂಧ ಎನಿಸಬಹುದು. ಚಂದ್ರನಂಥ ಅತಿರೇಕದ ವಾತಾವರಣ ಇರುವ ಗ್ರಹದಲ್ಲಿ ಮನುಷ್ಯ ವಾಸ ಇರಬೇಕಾದ ಪರಿಸ್ಥಿತಿ ಬರುತ್ತಾ ಎನಿಸಬಹುದು. ಚಂದ್ರನ ಮೇಲೆ ವಾಸ ಇರಬೇಕೆಂದೇನಿಲ್ಲ. ಚಂದ್ರನ ಅಧ್ಯಯನ ನಡೆಸಲು, ಆಗಾಗ್ಗೆ ಬಾಹ್ಯಾಕಾಶ ಸಂಚಾರ ಮಾಡಿ ಬರಲಾದರೂ ಮನುಷ್ಯನಿಗೆ ಚಂದ್ರ ಹಾಗೂ ಇತರ ಗ್ರಹಗಳಲ್ಲಿ ಒಂದು ಗೂಡಾದರೂ ಬೇಕಲ್ಲವೇ?
ಆಗಲೇ ಗುಹೆ ಸಂಗತಿಯನ್ನು ತಿಳಿಸಿದ್ದೆವು. ಇದು ಬಹಳ ಕುತೂಹಲ ಹುಟ್ಟಿಸುವ ಸ್ಥಳಗಳಾಗಿವೆ. ಚಂದ್ರನಲ್ಲಿ ಮನುಷ್ಯನಿಗೆ ಸೂಕ್ತವಾದ ವಾತಾವರಣ ಇರುವುದು ಈ ಗುಹೆಯಲ್ಲಿಯೇ. ಅಕಸ್ಮಾತ್ತಾಗಿ ಮನುಷ್ಯ ಚಂದ್ರನಲ್ಲಿ ಇರಬೇಕಾಗಿ ಬಂದರೆ ಈ ಗುಹೆಯಲ್ಲೇ ವಾಸ ಮಾಡಬೇಕಾಗಬಹುದು.
ಚಂದ್ರನ ಗುಹೆಯಲ್ಲಿ ಅಂಥ ವಿಶೇಷತೆ ಏನಿದೆ? ಚಂದ್ರನ ಇತರ ಜಾಗದಲ್ಲಿ ಯಾಕೆ ವಾಸ ಅಸಾಧ್ಯ ಎಂಬಿತ್ಯಾದಿ ಕೆಲ ಕುತೂಹಲಗಳಿಗೆ ಇಲ್ಲಿದೆ ಸಮಾಧಾನ.

ಚಂದ್ರನ ಮೇಲಿನ ವಾತಾವರಣ
ಚಂದ್ರನ ಮೇಲೆ ಐದು ದಶಕಗಳ ಹಿಂದೆ ಮನುಷ್ಯ ಮೊದಲ ಬಾರಿಗೆ ಝಂಡಾ ಹಾರಿಸಿದ್ದ. ಅಲ್ಲಿ ಬಲೂನಿನಂತೆ ಮನುಷ್ಯ ತೇಲಾಡುವ ದೃಶ್ಯಗಳನ್ನು ನಾವು ಆಗಾಗ್ಗೆ ಡಿಸ್ಕವರಿ ಚಾನಲ್ನಲ್ಲಿ ನೋಡಿರಬಹುದು. ಭೂಮಿಯಲ್ಲಿರುವಷ್ಟು ಗುರುತ್ವಾಕರ್ಷಣ ಶಕ್ತಿ ಚಂದ್ರನಲ್ಲಿ ಇಲ್ಲದಿರುವುದು ಇದಕ್ಕೆ ಕಾರಣ.
ಇದನ್ನು ಬದಿಗಿರಿಸಿ ನೋಡಿದರೆ ಚಂದ್ರನಲ್ಲಿ ಇನ್ನೂ ಅತಿರೇಕದ ವಾತಾವರಣ ಇದೆ. ಚಂದ್ರನಲ್ಲಿ ಹಗಲಲ್ಲಿ 127 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದ್ದರೆ ರಾತ್ರಿಯಲ್ಲಿ ಮೈನಸ್ 173ಕ್ಕೆ ಇಳಿಯುತ್ತದೆ.
ನಮ್ಮ ಭೂಮಿಯ ಅತಿ ಶೀತ ಪ್ರದೇಶ ಎಂದರೆ ಭೂಮಿಯ ಧ್ರುವ ಸಮೀಪ. ಇಲ್ಲಿ ಮೈನಸ್ 90 ಡಿಗ್ರಿಯವರೆಗೂ ಉಷ್ಣಾಂಶ ಕುಸಿಯುತ್ತದೆ. ಇಲ್ಲಿ ಜೀವಿಗಳು ವಾಸ ಇರುವುದಿಲ್ಲ ಎನ್ನುತ್ತಾರೆ. ಭಾರತದಲ್ಲಿ ಕಾರ್ಗಿಲ್, ಸಿಯಾಚಿನ್ ಇತ್ಯಾದಿ ಕಡೆ ಮೈನಸ್ 25 ಡಿಗ್ರಿಯವರೆಗೆ ಚಳಿ ಇರುತ್ತದೆ. ಅಲ್ಲಿನ ವಾತಾವರಣ ಅದೆಷ್ಟು ಘೋರ ಎಂಬುದನ್ನು ನೀವು ಯಾರನ್ನಾದರೂ ಸೈನಿಕರನ್ನು ಕೇಳಿ ನೋಡಿದರೆ ತಿಳಿಯಬಹುದು.

ಚಂದ್ರನ ಗುಹೆ
ಇತ್ತೀಚಿನ ಕೆಲ ವರ್ಷಗಳ ಹಿಂದೆ ನಾಸಾದ ಲೂನಾರ್ ರೀಕಾನೈಸನ್ಸ್ ಆರ್ಬಿಟರ್ (ಎಲ್ಆರ್ಒ) ಗಗನನೌಕೆ ಚಂದ್ರನಲ್ಲಿ ನೆರಳಲಿನಂಥ ಸ್ಥಳಗಳ ಇರುವಿಕೆಯನ್ನು ಪತ್ತೆ ಮಾಡಿತ್ತು. ಈ ಸ್ಥಳಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದ್ದು ಕೆಲ ಕುತೂಹಲಕಾರಿ ಮಾಹಿತಿ ಲಭಿಸಿದೆ.
ನಮ್ಮ ಗೋಡೆಗೆ ಮೊಳೆ ಹೊಡೆದಾಗ ಉಂಟಾಗುವ ರಂಧ್ರದಂತಹ ರೀತಿಯ ಸ್ಥಳ ಇದು. ಗುಹೆ, ಆಳ ಕುಳಿ ಇತ್ಯಾದಿ ಎಂದೂ ಕರೆಯಲಡ್ಡಿ ಇಲ್ಲ. ಈ ಆಳದ ಗುಂಡಿಗಳು ಅಥವಾ ಗುಹೆಗಳು ಚಂದ್ರನಲ್ಲಿ ೨೦೦ಕ್ಕೂ ಕಡೆ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಗುಹೆಗಳಲ್ಲಿ ಮನುಷ್ಯ ಇರಲು ಸಾಧ್ಯವಾಗುವಂತಹ ಸಹನೀಯ ವಾತಾವರಣ ಇದೆಯಂತೆ.
ಇಲ್ಲಿ ಅತಿಯಾಗಿ ಬಿಸಿ ಇರುವುದಿಲ್ಲ, ಅತಿಯಾಗಿ ಚಳಿಯೂ ಇರುವುದಿಲ್ಲ. 17 ಡಿಗ್ರಿ ಸೆಲ್ಸಿಯಸ್ನಷ್ಟು ಸರಾಸರಿ ಉಷ್ಣಾಂಶ ಇರುತ್ತದೆ. 17 ಡಿಗ್ರಿ ಎಂದರೆ ನಮ್ಮ ಬೆಂಗಳೂರಿನಲ್ಲಿ ಚಳಿಗಾಲದಲ್ಲಿ ರಾತ್ರಿಯ ಹೊತ್ತು ಇರುವ ವಾತಾವರಣ. ಮೈಗೆ ಒಂದು ಸ್ವೆಟರ್ ಹಾಕಿಕೊಂಡರೆ ಆರಾಮವಾಗಿ ಇರಬಹುದಾದಂಥ ಉಷ್ಣಾಂಶ ಅದು.

ಉಷ್ಣಾಂಶ ಮಾತ್ರವಲ್ಲ
2009ರಲ್ಲಿ ಮೊದಲ ಬಾರಿಗೆ ಈ ಗುಹೆಗಳನ್ನು ಕಂಡುಹಿಡಿಯಲಾಗಿದ್ದು. ಅಧ್ಯಯನ ನಡೆಯುತ್ತಿರುವಂತೆಯೇ ಇನ್ನೂ ಕೆಲ ಇಂಟರೆಸ್ಟಿಂಗ್ ಸಂಗತಿ ಬೆಳಕಿಗೆ ಬಂದಿದೆ. ಈ ಗುಹೆಗಳಲ್ಲಿ ಇದ್ದರೆ ಹಾನಿಕಾರಕ ಸೌರ ವಿಕಿರಣ, ಕಾಸ್ಮಿಕ್ ಕಿರಣ, ಪುಟ್ಟ ಉಲ್ಕೆಗಳಿಂದ ರಕ್ಷಣೆ ಪಡೆಯಲು ಸಾಧ್ಯ ಎನ್ನುತ್ತಾರೆ.
ಲಾವಾ ಪ್ರವಾಹಗಳಿಂದ ಇಂಥ ಕೆಲ ಗುಹೆಗಳು ಅಥವಾ ರಂಧ್ರಗಳು ಉಂಟಾಗಿರಬಹುದು ಎಂದು ತಜ್ಞರು ಹೇಳುತ್ತಾರೆ. ಈ ಲೂನಾರ್ ಲಾವಾ ಟ್ಯೂಬ್ಗಳು 500 ಮೀಟರ್ಗಳಷ್ಟು ಅಗಲ ಇದ್ದರೂ ಇರಬಹುದು. ಮೇಲ್ಮೈನಿಂದ ಸಾಕಷ್ಟು ಆಳದಲ್ಲಿ ಇವು ಇರುವುದರಿಂದ ಉಷ್ಣಾಂಶ ಅತಿರೇಕವಾಗದೇ ಉಳಿಯಲು ಸಾಧ್ಯವಾಗುತ್ತದೆ ಎಂಬುದು ಲಾಜಿಕ್. ಸೂರ್ಯನ ವಿಕಿರಣ ಕೂಡ ಇಲ್ಲಿಗೆ ರಾಚಿ ಬೀಳುವುದಿಲ್ಲ. ಇಡೀ ವರ್ಷ ಇಲ್ಲಿ ನೆರಳೇ ಇರುತ್ತದೆ.

ಎಷ್ಟು ಬೃಹತ್ ಇರುತ್ತೆ ಗುಹೆ?
ನಮ್ಮ ಭೂಮಿಯಲ್ಲೂ ಜ್ವಾಲಾಮುಖಿ, ಲಾವಾ ರಸ ಇತ್ಯಾದಿಯನ್ನು ಆಗಾಗ್ಗೆ ನೋಡುತ್ತಿರುತ್ತೇವೆ. ಭೂಗರ್ಭದಿಂದ ಅಗ್ನಿಸ್ಫೋಟವಾಗಿ ಲಾವಾ ರಸ ಉಕ್ಕೇರುತ್ತದೆ. ಇಂಥ ಲಾವಾಗಳಿಂದ ಅಲ್ಲಲ್ಲಿ ವಿವಿದ ರಚನೆಗಳು ನಿರ್ಮಾಣ ಆಗುತ್ತವೆ. ನಮ್ಮಲ್ಲಿ ಸುಮಾರು 45 ಅಡಿಗಳಗಷ್ಟು ಅಗಲ ಇರುವ ಮತ್ತು 50 ಕಿಲೋ ಮೀಟರ್ಗಳಷ್ಟು ಉದ್ದ ಇರುವ ಲಾವಾ ಟ್ಯೂಬ್ಗಳು ಇವೆ. ತಜ್ಞರ ಪ್ರಕಾರ ಚಂದ್ರನಲ್ಲಿರುವ ಲಾವಾ ಟ್ಯೂಬ್ಗಳು ಇನ್ನೂ ಬೃಹತ್ ಆಗಿರಬಹುದು. ಒಂದು ಇಡೀ ನಗರವನ್ನೇ ತುಂಬಿಕೊಳ್ಳುವಷ್ಟು ವಿಶಾಲವಾಗಿ ಈ ಟ್ಯೂಬ್ ಅಥವಾ ಗುಹೆಗಳು ಇರಬಹುದು ಎಂದು ಭಾವಿಸಲಾಗಿದೆ.
ಇಂಥ ಸ್ಥಳಗಳಲ್ಲಿ ಉಸಿರಾಡಲು ಆಮ್ಲಜನಕದ ವ್ಯವಸ್ಥೆ ಮಾಡಿಕೊಂಡರೆ ಮನುಷ್ಯ ಇರಲು ಅಡ್ಡಿ ಇಲ್ಲ ಎಂದು ಹೇಳಲಾಗುತ್ತದೆ. ಅಲ್ಲದೇ ಚಂದ್ರನಲ್ಲಿ ಮನುಷ್ಯ ಭವಿಷ್ಯದಲ್ಲಿ ಗಣಿಗಾರಿಕೆ ಮಾಡಬೇಕೆಂದು ಹೊರಟರೆ ಈ ಲಾವಾ ಟ್ಯೂಬ್ ಅಥವಾ ಗುಹೆ ಪ್ರಶಸ್ತ ಜಾಗ ಎನಿಸುತ್ತದೆ. ಅಷ್ಟೇ ಅಲ್ಲ, ಗಗನಯಾತ್ರಿಗಳು ಚಂದ್ರನಲ್ಲಿಗೆ ಹೋಗಿ ಬರುವುದಾದರೆ ಇವೇ ಕುಳಿಗಳಲ್ಲಿ ಉಳಿದುಕೊಳ್ಳಬಹುದು. ಹೀಗಾಗಿ, ಜಗತ್ತಿನ ಕುತೂಹಲದ ಕಣ್ಣು ಈಗ ಚಂದ್ರನ ಗುಹೆಗಳ ಮೇಲೆ ನೆಟ್ಟಿದೆ.
(ಒನ್ಇಂಡಿಯಾ ಸುದ್ದಿ)
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications