ಕರ್ನಾಟಕದಲ್ಲಿ ಬಿಜೆಪಿ ಐತಿಹಾಸಿಕ ಜಯ, ಕಾಂಗ್ರೆಸ್ ಐತಿಹಾಸಿಕ ಸೋಲು
ಬೆಂಗಳೂರು, ಮೇ 23: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ಬಿಜೆಪಿಯು ಐತಿಹಾಸಿಕ ಜಯ ಸಾಧಿಸಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ 25 ಕ್ಷೇತ್ರವನ್ನು ಬಿಜೆಪಿಯೊಂದೇ ಗೆದ್ದಿದೆ. ಕಾಂಗ್ರೆಸ್ ಅನ್ನು ಕೇವಲ ಒಂದು ಸ್ಥಾನಕ್ಕೆ ನೂಕಿದೆ. ಇಷ್ಟೊಂದು ಕ್ಷೇತ್ರದಲ್ಲಿ ಬಿಜೆಪಿ ಹಿಂದೆಂದೂ ಗೆದ್ದಿರಲಿಲ್ಲ.
ಬಿಜೆಪಿ ಜಯದಲ್ಲಿ ಇತಿಹಾಸ ಸೃಷ್ಟಿಸಿದರೆ, ಕಾಂಗ್ರೆಸ್ ಸೋಲಿನಲ್ಲಿ ಇತಿಹಾಸ ಬರೆದಿದೆ. ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಕೂಡ ಕರ್ನಾಟಕದಲ್ಲಿ ಇಷ್ಟು ಕನಿಷ್ಟ ಸ್ಥಾನಕ್ಕೆ ಅದು ಕುಸಿದಿರಲಿಲ್ಲ. ಮೊದಲ ಬಾರಿಗೆ ಕಾಂಗ್ರೆಸ್ ಕೇವಲ ಒಂದು ಸ್ಥಾನದಲ್ಲಷ್ಟೆ ಜಯಗಳಿಸಿದೆ.
ಕಳೆದ ಬಾರಿ ಎರಡು ಸ್ಥಾನ ಗಳಿಸಿದ್ದ ಜೆಡಿಎಸ್ ಈ ಬಾರಿ ಒಂದು ಸ್ಥಾನಕ್ಕೆ ಕುಸಿದಿದೆ. ಆದರೆ ಜೆಡಿಎಸ್ನ ಇಬ್ಬರು ಮಹಾಘಟಾನುಗಟಿಗಳು ಸೋಲನ್ನನುಭವಿಸಿರುವುದು ಆ ಪಕ್ಷದ ಭವಿಷ್ಯಕ್ಕೆ ಕಂಟಕ ತಂದೊಡ್ಡುವ ಆತಂಕವನ್ನು ಉಂಟುಮಾಡಿದೆ.
ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಸಂಪೂರ್ಣವಾಗಿ ಕೇಸರಿಮಯವಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ನ ಡಿ.ಕೆ.ಸುರೇಶ್ ಗೆದ್ದಿದ್ದರೆ, ಹಾಸನದಲ್ಲಿ ಜೆಡಿಎಸ್ನ ಪ್ರಜ್ವಲ್ ರೇವಣ್ಣ, ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಜಯ ಸಾಧಿಸಿದ್ದಾರೆ.

ಮೈತ್ರಿಯಿಂದ ಕಾಂಗ್ರೆಸ್-ಜೆಡಿಎಸ್ಗೆ ಪೆಟ್ಟು
ಮೈತ್ರಿಯಿಂದಲೇ ಕಾಂಗ್ರೆಸ್-ಜೆಡಿಎಸ್ಗೆ ಪೆಟ್ಟು ಬಿದ್ದಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಮೈತ್ರಿಯಿಂದಲೇ ಬಿಜೆಪಿಗೆ ಸುಲಭ ಗೆಲುವನ್ನು ಮೈತ್ರಿ ಪಕ್ಷಗಳೇ ಕೊಟ್ಟಿವೆ. ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರಗಳಲ್ಲಿ ಮೈತ್ರಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡದಿಲ್ಲದಿರುವುದು ಸ್ಪಷ್ಟವಾಗಿದೆ.

ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪಾರುಪತ್ಯ
ಇನ್ನು ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಧರ್ಮ ವಿವಾದವನ್ನು ಜನ ಇನ್ನೂ ಮರೆತಂತೆ ಕಾಣುತ್ತಿಲ್ಲ, ಜೊತೆಗೆ ಮೋದಿ ಅಲೆಯೂ ಸೇರಿಕೊಂಡು ಹಾಗೂ ಕಾಂಗ್ರೆಸ್ ಪಕ್ಷ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಕಾರಣದಿಂದಾಗಿ ಬಿಜೆಪಿ ಅತ್ಯಂತ ಸುಲಭವಾಗಿ ಗೆಲುವು ತನ್ನದಾಗಿಸಿಕೊಂಡಿದೆ.

ಎಲ್ಲೆಡೆ ಭಾರಿ ಅಂತರದ ಜಯ ಪಡೆದ ಬಿಜೆಪಿ
ಚಾಮರಾಜನಗರ ಕ್ಷೇತ್ರ ಹಾಗೂ ತುಮಕೂರು ಕ್ಷೇತ್ರವನ್ನು ಹೊರತುಪಡಿಸಿದರೆ ಉಳಿದೆಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಭಾರಿ ಅಂತರದಿಂದಲೇ ಗೆದ್ದಿದೆ. ರಾಜ್ಯದ ಜನರು ಬಿಜೆಪಿಗೆ ಮತ ಹಾಕುವ ಸ್ಪಷ್ಟ ನಿರ್ಧಾರ ಮಾಡಿದ್ದರೆಂಬುದು ಇದರಿಂದ ಗೊತ್ತಾಗುತ್ತಿದೆ.

ರಾಜ್ಯ ರಾಜಕಾರಣದ ಮೇಲೆ ಪರಿಣಾಮ
ಇನ್ನು ಈ ಚುನಾವಣೆಯ ಫಲಿತಾಂಶದ ಪರಿಣಾಮ ರಾಜ್ಯ ಸರ್ಕಾರದ ಮೇಲಾಗುವ ಎಲ್ಲ ಲಕ್ಷಣಗಳು ಸುಸ್ಪಷ್ಟವಾಗಿ ಗೋಚರವಾಗುತ್ತಿವೆ. ಕುಮಾರಸ್ವಾಮಿ ಅವರ ಮಗ ಮತ್ತು ತಂದೆ ಇಬ್ಬರೂ ಸೋಲನ್ನು ಅನುಭವಿಸಿದ್ದಾರೆ. ಇದಕ್ಕೆ ಅವರು ಕಾಂಗ್ರೆಸ್ ಕಾರ್ಯಕರ್ತರನ್ನು ದೂರದೆ ಇರಲಾರರು. ಕಾಂಗ್ರೆಸ್ ಸಹ ತನ್ನಭದ್ರ ಕೋಟೆ ಹಳೆ ಮೈಸೂರುಭಾಗದಲ್ಲಿ ಕಳಪೆ ಪ್ರದರ್ಶನಕ್ಕೆ ಜೆಡಿಎಸ್ ಅನ್ನು ದೂರಲೇ ಬೇಕಿದೆ. ಹೀಗಿದ್ದಮೇಲೆ ಮೈತ್ರಿ ಕಷ್ಟಸಾಧ್ಯ.

ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದೆ ಬಿಜೆಪಿ
ಇಂದಿನ ಫಲಿತಾಂಶ ರಾಜ್ಯದ ಶಾಸಕರಲ್ಲೂ ಗಾಬರಿಹುಟ್ಟಿಸಿದೆ. ಅತೃಪ್ತರಿಗೆ ಕಾಂಗ್ರೆಸ್ ಅಥವಾ ಜೆಡಿಎಸ್ ತೊರೆಯಲು ಪ್ರಬಲ ಉದ್ದೇಶವನ್ನು ನೀಡಿದೆ. ಗೆಲುವಿನ ಅಲೆಯಲ್ಲಿ ಉತ್ಸಾಹದಲ್ಲಿರುವ ಬಿಜೆಪಿ ಸಹ ಸರ್ಕಾರ ರಚನೆ ಮಾಡಿಯೇ ಬಿಡುವ ಕಾರ್ಯಕ್ಕೆ ವಿಶ್ವಾಸದಿಂದಲೇ ಕೈ ಹಾಕಲಿದೆ. ಕೆಲವೇ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲೂ ಬದಲಾವಣೆ ಆಗುವುದು ಖಚಿತ ಎನ್ನಲಾಗಿದೆ.












Click it and Unblock the Notifications