Happiness: ಸುಖವಷ್ಟೇ ಸಾಕು: ದುಃಖ ಬೇಡ ಎನ್ನುವುದೆಷ್ಟು ಸರಿ?
ಒಂದು ಕಾಲದಲ್ಲಿ ಮನುಷ್ಯನಿಗೆ ಮೂರು ಹೊತ್ತು ಊಟ ಮತ್ತು ಉಡಲು ಬಟ್ಟೆಯಿದ್ದರೆ ಸಾಕಿತ್ತು ತೃಪ್ತಿಯ ಜೀವನ ನಡೆಸಿಕೊಂಡು ಹೋಗುತ್ತಿದ್ದರು. ಆದರೆ ಇವತ್ತಿನ ಕಾಲದಲ್ಲಿ ಅಂತಹ ಮನೋಭಾವ ಯಾರಿಗಿದೆ? ಒಂದು ವೇಳೆ ನಮ್ಮೆಲ್ಲರ ಬದುಕು ಹೊಟ್ಟೆ, ಬಟ್ಟೆಗಷ್ಟೇ ಸೀಮಿತವಾಗಿದ್ದರೆ ಸುಖಿಗಳಾಗಿ, ನೆಮ್ಮದಿಯಾಗಿಯೇ ಬದುಕನ್ನು ಸಾಗಿಸಿಕೊಂಡು ಹೊಗುತ್ತಿದ್ದೆವೇನೋ. ಆದರೀಗ ಆ ರೀತಿಯ ಬದುಕು ಸಾಧ್ಯವಿಲ್ಲ. ಎಷ್ಟಿದ್ದರೂ ಮತ್ತಷ್ಟು ಬೇಕೆಂಬುದೇ ಬದುಕಾಗಿದೆ.
ದೇವರು ನಮಗೆ ಎಲ್ಲವನ್ನು ಕೊಟ್ಟಿದ್ದರೂ ಇನ್ನು ಬೇಕೆಂಬ ಬಯಕೆಯಿಂದ ಬದುಕುತ್ತೇವೆ. ಅದರ ಜೊತೆಗೆ ಎಲ್ಲವೂ ಇದ್ದಾಗ ಇಂದ್ರಿಯ ಸುಖಗಳ ಬೆನ್ನು ಹತ್ತಿ ಸಂಕಷ್ಟಗಳನ್ನು ಮೈಮೇಲೆ ಎಳೆದುಕೊಂಡು ನೆಮ್ಮದಿಯಿಲ್ಲದ ಬದುಕಿಗೆ ಬೀಳುತ್ತೇವೆ. ಕಷ್ಟದಲ್ಲಿದ್ದಾಗ ಅದರಿಂದ ಹೊರ ಬರುವುದರ ಬಗ್ಗೆ ಯೋಚಿಸುತ್ತೇವೆ ಮತ್ತು ಅದಕ್ಕಾಗಿ ಹಗಲಿರುಳು ಶ್ರಮವಹಿಸುತ್ತೇವೆ. ಆದರೆ ಸುಖದ ದಿನಗಳು ಹಾಗಿಲ್ಲ. ಅದು ನಮಗೆ ಅಮಲೇರಿಸುತ್ತದೆ.

ಒಂದು ವೇಳೆ ಹಣದ ಜತೆಗೆ ಅಧಿಕಾರವೂ ಸೇರಿಕೊಂಡರೆ ನಾವು ಮನುಷ್ಯರಾಗಿ ಉಳಿಯದೆ ನಾನೇನು ಮಾಡಿದರೂ ನಡೆಯುತ್ತದೆ ಎಂಬ ಅಹಂಕಾರದಿಂದ ಮೆರೆಯುತ್ತೇವೆ. ಅಷ್ಟೇ ಅಲ್ಲದೆ ಹಣದ ಮದದಿಂದ ಮೆರೆಯುತ್ತಾ ಅಹಂಕಾರ ತುಂಬಿಕೊಂಡರೆ ಅದು ಇಂದ್ರಿಯ ಸುಖದ ಕಡೆಗೆ ಹಾತೊರೆಯುವಂತೆ ಮಾಡುತ್ತದೆ. ಒಂದು ವೇಳೆ ಇಂದ್ರಿಯ ಹೇಳಿದಂತೆ ಮನಸ್ಸು ಅದರತ್ತ ವಾಲಿದ್ದೇ ಆದರೆ ಅದರಿಂದ ಆತ ಹಲವು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ವಿಷಯ ವಸ್ತುಗಳಿಂದ ದೂರವಿರಿ
ಹಣ ಮತ್ತು ಸಂಪತ್ತಿನಿಂದ ಬರುವ ದುರಂಹಕಾರವು ವ್ಯಕ್ತಿಯನ್ನು ವಿಷಯ ವಸ್ತುಗಳತ್ತ ಬಹುಬೇಗ ಆಕರ್ಷಿತವಾಗುತ್ತದೆ. ಅದೇ ವೇಳೆಗೆ ಇಂದ್ರಿಯ ಸುಖಗಳ ಬಗೆಗಿನ ಬಯಕೆ ಸೇರಿಕೊಂಡರಂತು ಬದುಕು ಮುಗಿದೇ ಹೋಯಿತು. ನೀರಿನ ಮೇಲೆ ಚಲಿಸುವ ದೋಣಿಯನ್ನು ಪ್ರಚಂಡವಾದ ಗಾಳಿಯು ತಳ್ಳಿಕೊಂಡು ಹೋಗಿ ಗುರಿತಪ್ಪಿಸುತ್ತದೆಯೋ ಬದುಕು ಕೂಡ ಆಗಿಬಿಡುತ್ತದೆ. ಇವತ್ತು ನಡೆಯುತ್ತಿರುವ ಹಲವಾರು ಅಪರಾಧ ಪ್ರಕರಣಗಳಿಗೆ ಮೂಲ ಇಂದ್ರಿಯಗಳ ಬೆನ್ನತ್ತಿ ಹೋಗುತ್ತಿರುವುದೇ ಆಗಿದೆ. ಇಂದ್ರಿಯಗಳೇ ಹಾಗೆ ಅವು ಯಾವಾಗ ಯಾವ ಕಡೆಗೆ ಸೆಳೆಯುತ್ತವೆ ಎನ್ನಲಾಗುವುದಿಲ್ಲ.

ಏಕೆಂದರೆ ವಿಷಯ ವಸ್ತುಗಳ ನಡುವೆ ಮನುಷ್ಯನ ಇಂದ್ರಿಯಗಳು ಸದಾ ಸಂಚಲನಶೀಲವಾಗಿರುತ್ತದೆ. ಹೀಗಾಗಿ ಯಾವ ಇಂದ್ರಿಯಗಳ ಜೊತೆಗೆ ಮನಸ್ಸು ಸಂಪೂರ್ಣವಾಗಿ ಕ್ರಿಯಾಶೀಲವಾಗುತ್ತದೆಯೋ ಆ ಒಂದೇ ಇಂದ್ರಿಯ ನಮ್ಮ ಬುದ್ದಿಯನ್ನು ಹಾಳು ಮಾಡುತ್ತದೆ. ಬಿರುಗಾಳಿಯ ಹೊಡೆತಕ್ಕೆ ಬಲಿಯಾದ ನಾವೆಯು ಗುರಿ ಮಾರ್ಗದಿಂದ ಮತ್ತೆಲ್ಲಿಗೋ ಒಯ್ಯಲ್ಪಟ್ಟು ದುರಂತ ಸಂಭವಿಸುವ ಹಾಗೆ ಯಾವ ಇಂದ್ರಿಯದೊಂದಿಗೆ ಮನಸ್ಸು ಕ್ರಿಯಾಶೀಲವಾಗಿ ಸಂಚಲನಗೊಳ್ಳುತ್ತದೆಯೋ ಅವನ ಬುದ್ದಿ ವಿನಾಶದ ಅಂಚಿಗೆ ತಲುಪಿತೆಂದೇ ಅರ್ಥ. ಅಂದರೆ ಬುದ್ದಿ ವಿನಾಶದ ದುರಂತಕ್ಕೆ ಕೆಡಹಲ್ಪಟ್ಟನೆಂದೇ ಅರ್ಥ.
ಮನಸ್ಸು ದಾರಿ ತಪ್ಪದಂತೆ ನೋಡಿಕೊಳ್ಳಿ
ವಿಷಯಗಳೇ ನದಿ ನೀರು. ಮನಸ್ಸೇ ನಾವೆ. ಇಂದ್ರಿಯಗಳು ಮತ್ತು ವಿಷಯಾಸಕ್ತಿಗಳೇ ಅಪ್ಪಳಿಸಿ ಬರುವ ಪ್ರಚಂಡ ಬಿರುಗಾಳಿ ಎಂದು ಹೋಲಿಸಬಹುದು. ವಿಷಯ ವಸ್ತುಗಳಲ್ಲಿ ಮನಸ್ಸು ಸಂಚರಿಸುತ್ತಿದ್ದರೆ, ವಿಷಯಾಸಕ್ತಿಯು ಮನಸ್ಸನ್ನು ದಾರಿ ತಪ್ಪಿಸಿ ಇನ್ನೆಲ್ಲಿಗೋ ಸೆಳೆಯುತ್ತದೆ. ಮನಸ್ಸೆಂಬ ನಾವೆಯ ಅಂಬಿಗನಾದ ಪರಮಾತ್ಮನು ನಾವೆಯಲ್ಲಿದ್ದರೆ, ವಿಷಯಾಸಕ್ತಿಯೆಂಬ ಬಿರುಗಾಳಿಯು ನಾವೆಯನ್ನು ಬಲವಂತವಾಗಿ ಎಲ್ಲಿಗೂ ಸೆಳೆದೊಯ್ಯಲು ಸಾಧ್ಯವಿಲ್ಲ.
ಮನವೆಂಬ ದೋಣಿಯಲ್ಲಿ ಪರಮಾತ್ಮನನ್ನು ಬಿಗಿಯಾಗಿ ಅಂಬಿಗನನ್ನಾಗಿ ಇರಿಸಿಕೊಂಡವನಿಗೆ ಅವನ ಪಾದಗಳಲ್ಲಿ ದೋಣಿಯನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡವನಿಗೆ ಅವನ ದೋಣಿ ಬಿರುಗಾಳಿಯ ಜೊತೆಗೆ, ವಿಷಯಾಸಕ್ತಿಯ ಜೊತೆಗೆ ದಾರಿ ತಪ್ಪಲು ಸಾಧ್ಯವಿಲ್ಲ. ವಿಷಯ ವಸ್ತುಗಳು ಇದ್ದೇ ಇರುತ್ತವೆ. ವಿಷಯ ವಸ್ತುಗಳನ್ನು ಬಿಟ್ಟು ಬದುಕುವುದು ಕಷ್ಟ. ಆದರೆ ವಿಷಯ ವಸ್ತುಗಳ ಜೊತೆಗೆ ಅವುಗಳ ಬೆನ್ನು ಹಿಡಿಯಬಾರದು.
ವಿಷಯ ಸುಖಗಳ ದಾಸರಾಗಬೇಡಿ
ಆಹಾರ ಎಷ್ಟೇ ಸಿಕ್ಕರೂ ಅದು ಪರಮಾತ್ಮನ ಪ್ರಸಾದವೆಂಬ ಭಾವನೆಯಿಂದ ಸ್ವೀಕರಿಸಿದರೆ ಮನಸ್ಸು ವಿಷಯಾಸಕ್ತಿಗಳತ್ತ ಬಲಿಯಾಗುವುದಿಲ್ಲ. ರೂಪ, ರಸ, ಗಂಧ, ಶ್ರವಣ, ಸ್ಪರ್ಶಗಳಲ್ಲಿ ಭಗವಂತನನ್ನೇ ಕಂಡು, ಭಗವಂತನ ಅನುಗ್ರಹವನ್ನು ಪಡೆದರೆ, ಭಗವಂತನ ಪ್ರಸಾದ ಎಂಬ ಪ್ರಸಾದ ಗುಣ ನಮ್ಮಲ್ಲಿ ಉದಯವಾದರೆ ನಾವು ವಿಷಯ ಸುಖಗಳ ಬೆನ್ನತ್ತುವುದಿಲ್ಲ. ಅಷ್ಟೇ ಅಲ್ಲ ವಿಷಯಾಸಕ್ತಿಯ ಪ್ರಪಾತಕ್ಕೆ ಬೀಳುವುದಿಲ್ಲ. ನಮಗೆ ಸುಖ ಬೇಕು ಆದರೆ ನಿಜವಾದ ಸುಖದತ್ತ ನಾವು ಮುಖ ಮಾಡುವುದಿಲ್ಲ. ದುರಂತವೆಂದರೆ ದುಃಖ, ನೋವು, ಪರದಾಟ ಎಲ್ಲಿ ದೊರೆಯುವವೋ ಆ ಕಡೆಗೆ ಹೋಗುತ್ತೇವೆ.
ನಾವು ಮನಸ್ಸೆಂಬ ನಾವೆಯಲ್ಲಿ ಭಗವಂತನನ್ನು ಕುಳ್ಳಿರಿಸಿ ಅವನಲ್ಲಿ ತನ್ನನ್ನು ಸಮರ್ಪಿಸಿಕೊಂಡು ಶರಣಾಗತನಾಗಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು. ಇಂದ್ರಿಯಗಳ ಗುಲಾಮರಾಗಬೇಡಿ. ವಿಷಯಸುಖಗಳ ದಾಸರಾಗಬೇಡಿ, ನೀವು ಜನಿಸಿದ್ದು ನರಕಯಾತನೆ ಅನುಭವಿಸುವುದಕ್ಕಲ್ಲ ಎಂದು ಉಪನಿಷತ್ಗಳಲ್ಲಿ ಹೇಳಿದೆ. ಇಂದ್ರಿಯಗಳನ್ನು ಒಮ್ಮಿಂದೊಮ್ಮೆಗೆ ನಿಗ್ರಹಿಸಲು ಸಾಧ್ಯವಿಲ್ಲ. ಭಗವಂತನ ಒಂದು ಕಿರುಮಿಂಚು ನೋಟ ನಮ್ಮೆಡೆಗೆ ಹರಿಯಿತೆಂದರೆ ಅದೇ ನಮ್ಮ ಪಾಲಿಗೆ ಮಹಾನ್ ಭಾಗ್ಯದ ಬೆಳಕಾಗುತ್ತದೆ. ನಿಜ ಸ್ಥಿತಿಯನ್ನು ಅರಿತು ನಿಜಸ್ಥಿತಿಯಿಂದಲೇ ಬದುಕಬೇಕು ಅದೇ ಜೀವನ.












Click it and Unblock the Notifications