ಕೋಲಾರ ಲೋಕಸಭಾ ಕ್ಷೇತ್ರ ಪರಿಚಯ: ಚಿನ್ನದ ಜಿಲ್ಲೆಯ ಮುಕುಟ ಯಾರಿಗೆ?
ಕೋಲಾರ ಬಹು ದೀರ್ಘ ಇತಿಹಾಸ ಇರುವ ಜಿಲ್ಲೆ. ಇದು ಗಂಗರ ರಾಜಧಾನಿ ಆಗಿತ್ತು. ಆದಿವಾಸಿಗಳ ಪ್ರತಿನಿಧಿಗಳಿಂತಿದ್ದ ಗಂಗರು ಕಟ್ಟಿಸಿದ ಹಲವು ದೇವಾಲಯಗಳು ಈಗಲೂ ಈ ಭಾಗದಲ್ಲಿವೆ. ಅದರಲ್ಲಿ ಕೋಲಾರಮ್ಮ ದೇವಾಲಯ ಹೆಚ್ಚು ಪ್ರಸಿದ್ಧ. ಕಾಲಾಂತರದಲ್ಲಿ ಗಂಗರಿಂದ, ಚೋಳರಿಂದ, ಕದಂಪ, ಪಲ್ಲವ, ಚಾಳುಕ್ಯ, ಹೊಯ್ಸಳ, ರಾಷ್ಟ್ರಕೂಟ ಅರಸರು, ಮೈಸೂರು ಅರಸರು, ಹೈದರಾಲಿ ಅವರುಗಳಿಂದ ಆಳ್ವಕೆಗೆ ಒಳಗಾಗಿರುವ ಕೋಲಾರ, ಸಾಂಸ್ಕೃತಿಕವಾಗಿ ವಿವಿಧತೆಯನ್ನು ಹೊಂದಿದೆ.
ಅಭಿವೃದ್ಧಿ ಪಥದಲ್ಲಿ ತೆವಳುತ್ತಿರುವ ಕೋಲಾರಕ್ಕೆ ಈ ಬಾರಿ ನಡೆವ ಲೋಕಸಭೆ ಚುನಾವಣೆ 17ನೇ ಯದ್ದು. ಕರ್ನಾಟಕ ಏಕೀಕರಣದ ಮುಂಚೆ ಮೈಸೂರು ರಾಜ್ಯವಾಗಿದ್ದಾಗ ಕೋಲಾರ ಮೂರು ಚುನಾವಣೆ ಕಂಡಿದೆ. ಈವರೆಗೆ ನಡೆದಿರುವ 16 ಲೋಕಸಭೆ ಚುನಾವಣೆಗಳಲ್ಲಿ 15 ಚುನಾವಣೆಗಳಲ್ಲಿ ಇಲ್ಲಿನ ಜನ ಕಾಂಗ್ರೆಸ್ಗೆ ಅನ್ನು ಗೆಲ್ಲಿಸಿದ್ದಾರೆ. ಕೇವಲ ಒಂದು ಬಾರಿ ಮಾತ್ರ 1984ರಲ್ಲಿ ಜನತಾಪಕ್ಷದ ವಿ.ವೆಂಕಟೇಶ್ ಎಂಬುವರು ಗೆಲುವು ಸಾಧಿಸಿದ್ದರು. ಕೋಲಾರ ಕ್ಷೇತ್ರ ಕಾಂಗ್ರೆಸ್ನ ಬಿಗಿ ಮುಷ್ಠಿಯಲ್ಲಿದೆ.
ಐತಿಹಾಸಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಕೋಲಾರಕ್ಕೆ ಸುದೀರ್ಘ ಇತಿಹಾಸವಿದೆ. ಕೆಜಿಎಫ್ನ ಚಿನ್ನದ ಗಣಿಯಲ್ಲಿ ಒಡಲೊಳಗೆ ಇರಿಸಿಕೊಂಡಿರುವ ಈ ಜಿಲ್ಲೆ ಚಿನ್ನದ ಜಿಲ್ಲೆ ಎಂದು ಕರೆಸಿಕೊಳ್ಳುತ್ತದೆ. ಆದರೆ ದೀಪದ ಕೆಳಗೆ ಕತ್ತಲಿರುವಂತೆ ದೇಶಕ್ಕೆ ಚಿನ್ನ ಸರಬರಾಜು ಮಾಡುವ ಈ ಜಿಲ್ಲೆಗೆ ಹೊಳಪು ಇಲ್ಲ. ಕಿತ್ತ ರಸ್ತೆಗಳು, ಮುರಿದ ಶಾಲೆಗಳು, ನೀರಿಗೆ ತತ್ವಾರ, ಸಾಮಾಜಿಕ ಅಸಮತೋಲನ ಅಡಿಗಡಿಗೆ ಕಾಣಸಿಗುತ್ತದೆ.

ಕೋಲಾರ ಜಿಲ್ಲೆ ಪ್ರಸ್ತುತ ಒಟ್ಟು ಆರು ತಾಲ್ಲೂಕುಗಳನ್ನು ಒಳಗೊಂಡಿದೆ. ಮುಂಚೆ ಕೋಲಾರದ ಭಾಗವಾಗಿದ್ದ ಚಿಕ್ಕಬಳ್ಳಾಪುರವು ಜಿಲ್ಲೆಯಾಗಿ ವಿಂಗಡಣೆ ಆಗುವ ಮುನ್ನಾ ಇದು ಬೃಹತ್ ಜಿಲ್ಲೆಯಾಗಿತ್ತು. ಪ್ರಸ್ತುತ ಕೋಲಾರ ಲೋಕಸಭಾ ವ್ಯಾಪ್ತಿಯಲ್ಲಿ ಎಂಟು ವಿಧಾನಸಭೆ ಕ್ಷೇತ್ರಗಳು ಇವೆ. ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು, ಕೆಜಿಎಫ್, ಬಂಗಾರಪೇಟೆ, ಕೋಲಾರ ಮತ್ತು ಮಾಲೂರು ವಿಧಾನಸಭಾ ಕ್ಷೇತ್ರದ ಜನ ಕೋಲಾರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ.
ಕೋಲಾರ ಲೋಕಸಭೆ ಒಳಗೊಂಡಿರುವ ಎಂಟು ಕ್ಷೇತ್ರಗಳಲ್ಲಿ ಏಳರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಒಂದರಲ್ಲಿ ಜೆಡಿಎಸ್ ಶಾಸಕ ಅಧಿಕಾರದಲ್ಲಿದ್ದಾರೆ. 2011ರ ಜನಗಣತಿ ಪ್ರಕಾರ ಕೋಲಾರ ಜಿಲ್ಲೆಯ ಜನಸಂಖ್ಯೆ 15.30 ಲಕ್ಷ ಆಗಿತ್ತು. ಕೋಲಾರ ಲೋಕಸಭಾ ಕ್ಷೇತ್ರದ 2014ರ ಮತದಾರರ ಸಂಖ್ಯೆ ಅಂದಾಜು 12 ಲಕ್ಷವಿತ್ತು. ಈ ಬಾರಿ ಇದು 13 ದಾಟಿರುತ್ತದೆ.

ಗಡಿ ಜಿಲ್ಲೆಯಾಗಿರುವ ಕೋಲಾರಕ್ಕೆ ಸರ್ಕಾರದ ಯೋಜನೆಗಳು ಪೂರ್ಣವಾಗಿ ತಲುಪುವುದಿಲ್ಲ ಎಂಬ ದೂರು ದಶಕಗಳಿಂದಲೂ ಇದೆ. ಕ್ಷೇತ್ರದ ಮೂಲಭೂತಸೌಲಭ್ಯದ ಕಡೆ ಕಣ್ಣು ಹಾಯಿಸಿದರೆ ಇದು ನಿಜವೂ ಎನಿಸುತ್ತದೆ. ಕೋಲಾರ ಮುಖ್ಯವಾಗಿ ಕೃಷಿ ಮತ್ತು ಹೈನಾಗುರಾಕೆ ಪ್ರಧಾನವಾದ ಜಿಲ್ಲೆ. 'ಮಿಲ್ಕು ಮತ್ತು ಸಿಲ್ಕಿ'ಗೆ ಜಿಲ್ಲೆ ಖ್ಯಾತ. ರೇಷ್ಮೆ ಮತ್ತು ಹಾಲಿನ ಉದ್ಯಮ, ಜಿಲ್ಲೆಯ ಬಹುಮುಖ್ಯ ಆದಾಯದ ಮೂಲ. ತರಕಾರಿ ಬೆಳೆಗೆ ಈ ಜಿಲ್ಲೆ ರಾಜ್ಯದಲ್ಲೇ ಮೊದಲು.
ಆದರೆ ಕೃಷಿ ಪ್ರಧಾನವಾದ ಈ ಜಿಲ್ಲೆಗೆ ನೀರಿನ ಸಮಸ್ಯೆ ಕಾಡುತ್ತಿದೆ. ಚಿಕ್ಕಬಳ್ಳಾಪುರದಂತೆ ಈ ಜಿಲ್ಲೆಯೂ ಸಹ ಎತ್ತಿನ ಹೊಳೆ ಯೋಜನೆಯ ನಿರೀಕ್ಷೆಯಲ್ಲಿದೆ. ಬಹು ವರ್ಷಗಳ ಕಾಯುವಿಕೆಯ ನಂತರ ಈಗಷ್ಟೆ ಕೆ.ಸಿ.ವ್ಯಾಲಿ ಯೋಜನೆ ಪೂರ್ಣಗೊಂಡಿದೆ ಆದರೂ ಅದಕ್ಕೆ ಆಗಾಗ್ಗೆ ಅಡೆತಡೆಗಳು ಬರುತ್ತಲೇ ಇವೆ. 2500 ಅಡಿ ಬೋರು ಕೊರೆದರೂ ನೀರು ಸಿಗುತ್ತಿಲ್ಲ. ಜಿಲ್ಲೆಯ ಹಲವೆಡೆ ಫ್ಲೋರೈಡ್ ಮಿಶ್ರಿತ ನೀರು ಪತ್ತೆ ಆಗಿರುವುದು ಸಹ ಗಾಬರಿಗೊಳಿಸುವ ಅಂಶ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಮುಖ ವಿಷಯ ನೀರಿನದ್ದೇ ಆಗಲಿದೆ.

ಸ್ವಾತಂತ್ರ್ಯ ಬಂದಾಗಿನಿಂದಲೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅರಸನಾಗಿ ಮೆರೆದಿದೆ. ಕೋಲಾರ ಕಾಂಗ್ರೆಸ್ ಸಾಮ್ರಾಜ್ಯದಲ್ಲಿ ಕೆ.ಎಚ್.ಮುನಿಯಪ್ಪ ಅರಸರಾಗಿ ಆಳಿದ್ದಾರೆ. ಬರೋಬ್ಬರಿ ಏಳು ಬಾರಿ ಅವರು ಈ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಆಗಿದ್ದಾರೆ. ಕೇಂದ್ರದಲ್ಲಿ ಮಂತ್ರಿಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಈ ಬಾರಿ ಎಂಟನೇ ಬಾರಿಗೆ ಅವರು ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಉಮೇದು ಹೊಂದಿದ್ದಾರೆ.
ಬಿಜೆಪಿಗೆ ಅಷ್ಟೇನೂ ಅವಕಾಶ ಇರದಿರುವ ಕೋಲಾರದಲ್ಲಿ ಕಾಂಗ್ರೆಸ್ಗೆ ಎದುರಾಗಿ ಜೆಡಿಎಸ್ ಪ್ರಬಲ ಪೈಪೋಟಿ ನೀಡುತ್ತಲೇ ಬಂದಿದೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ನ ಕೋಲಾರ ಕೇಶವ ಅವರು ಮುನಿಯಪ್ಪ ಅವರಿಗೆ ಭಾರಿ ಪೈಪೋಟಿ ನೀಡಿದ್ದರು. ಅಂತಿಮವಾಗಿ ಮುನಿಯಪ್ಪ ಗೆದ್ದಿದ್ದು ಕೇವಲ 42 ಸಾವಿರ ಮತಗಳ ಅಂತರದಿಂದ. ಆದರೆ ಈ ಬಾರಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಆದರೆ ಈ ಕ್ಷೇತ್ರ ಮೈತ್ರಿಯ ಪಾಲಾಗುವುದು ಬಹುತೇಕ ನಿಶ್ಚಿತ.

ದಶಕಗಳಿಂದಲೂ ಕಾಂಗ್ರೆಸ್-ಜೆಡಿಎಸ್ ಕಡು ರಾಜಕೀಯ ವೈರತ್ವ ಪಾಲಿಸಿಕೊಂಡು ಬಂದಿರುವ ಈ ಕ್ಷೇತ್ರದಲ್ಲಿ ಮತದಾರರು ಮತ್ತು ಎರಡೂ ಪಕ್ಷಗಳ ಕಾರ್ಯಕರ್ತರು ಮೈತ್ರಿಯನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಸಹ ಕುತೂಹಲಕರ. ಬಿಜೆಪಿಯು ಪ್ರಭಾವಿ ವ್ಯಕ್ತಿಯನ್ನು ಚುನಾವಣೆಗೆ ನಿಲ್ಲಿಸಿ ಈಗ ಕ್ಷೇತ್ರದಲ್ಲಿ ಇರುವ ಆಡಳಿತ ವಿರೋಧಿ ಅಲೆಯ ಲಾಭವನ್ನು ಪಡೆಯಲು ಸಹ ಚಿಂತಿಸುವ ಸಾಧ್ಯತೆ ಇದೆ. ಅಲ್ಲದೆ ಮೈತ್ರಿಗೆ ಒಪ್ಪದೆ ಪಕ್ಷ ತ್ಯಜಿಸುವ ಮುಖಂಡರು ಮತ್ತು ಕಾರ್ಯಕರ್ತರನ್ನು ತಮ್ಮ ಬತ್ತಳಿಕೆಗೆ ಸೇರಿಸಿಕೊಳ್ಳಲು ಸಹ ಬಿಜೆಪಿ ಸನ್ನದ್ಧವಾಗಿ ನಿಂತಿದೆ.
-
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ












Click it and Unblock the Notifications