ಸರಣಿ ಹಂತಕ, ಸೈಕೋ ಜೈಶಂಕರ್ ಒಂದು ಕರಾಳ ನೆನಪು!
ಪರಪ್ಪನ ಅಗ್ರಹಾರ ಜೈಲಿನಿಂದ ಸಿನೀಮಯ ರೀತಿಯಲ್ಲಿ ಪರಾರಿಯಾಗಿದ್ದ ಸೈಕೋ ಕಿಲ್ಲರ್ ಜಯಶಂಕರ್ ಕಥೆ ಮುಗಿದಿದೆ. ಈ ಮೂಲಕ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಅಸಂಖ್ಯ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಸೈಕೋ ಶಂಕರ ಎಂದರೆ ಸಾಕು ಬೆಚ್ಚಿಬೀಳುತ್ತಿದ್ದ ಕಾಲ ಇನ್ನಿಲ್ಲವಾದರೂ ಆತನ ಕ್ರೈಂ ಸ್ಟೋರಿ ಎಂಥವರನ್ನು ಬೆಚ್ಚಿ ಬೀಳಿಸುತ್ತದೆ.
ಸೋಮವಾರ ರಾತ್ರಿ ಬ್ಲೇಡಿನಿಂದ ಕತ್ತು ಕುಯ್ದುಕೊಂಡು ನರಳುತ್ತಿದ್ದ ಜೈಶಂಕರ್ ನನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲು ಯತ್ನಿಸಲಾಯಿತು. ಆದರೆ, ಮಾರ್ಗಮಧ್ಯೆ ಜೈಶಂಕರ್ ಅಸುನೀಗಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ, ಜೈಶಂಕರ್ ಸಾವಿಗೆ ನಿಜವಾದ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.
2013ರಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಎಸ್ಕೇಪ್ ಆಗಿದ್ದು ಒಂದು ರೋಚಕ ಕಥೆ. ತಮಿಳುನಾಡೊಂದರಲ್ಲೇ ಸುಮಾರು 20ಕ್ಕೂ ಅಧಿಕ ಅತ್ಯಾಚಾರ ಪ್ರಕರಣಗಳಲ್ಲಿ ಬೇಕಾಗಿದ್ದ ಜೈಶಂಕರ್ ನನ್ನು 2011ರ ಮೇ ತಿಂಗಳಿನಲ್ಲಿ ಬಂಧಿಸಲಾಗಿತ್ತು.
ಆದರೆ, ಸೆಂಟ್ರಲ್ ಜೈಲಿನಿಂದ ಎಸ್ಕೇಪ್ ಆಗುವ ಸಣ್ಣ ಸುಳಿವು ಸಿಕ್ಕಿರಲಿಲ್ಲ. ಜೈಶಂಕರ್ ಎಸ್ಕೇಪ್ ಆದ ಮೇಲೆ ಎಎಸ್ ಪಿ ಸಿ.ವಿ ಮಠ್, ಮೂವರು ಜೈಲರ್ ಗಳು ಸೇರಿದಂತೆ 11 ಸಿಬ್ಬಂದಿ ಅಮಾನತು ಮಾಡಲಾಗಿತ್ತು. ಜೈಶಂಕರ್ ನೋಡಲು ಹೇಗಿದ್ದ? ಆತನ ಕ್ರೂರತನ ಹೇಗಿತ್ತು? ಏನೆಲ್ಲ ಕ್ರೈಂ ಎಸಗಿದ್ದ? ಇನ್ನಷ್ಟು ವಿವರ ಮುಂದಿದೆ...

ಜೈಶಂಕರ್ ಹೇಗಿದ್ದ
* ಹೆಸರು: ಎಂ ಶಂಕರ್ ಅಲಿಯಾಸ್ ಜೈಶಂಕರ್,
* 38 ವರ್ಷ ವಯಸ್ಸು
* ಚಹರೆ: 5.5 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಎಣ್ಣೆಗಂಪು ಬಣ್ಣ, ಬಲ ಹಣೆ ಬಳಿ ಹಳೆಗಾಯದ ಗುರುತು
* ಜಾತಿ: ವನ್ನಿಯಾರ್ ತಮಿಳಿಯನ್ ಎಂಬ ಮಾಹಿತಿ ಇದೆ.
* ತಿಳಿದಿದ್ದ ಭಾಷೆ: ತಮಿಳು, ಹಿಂದಿ, ಕನ್ನಡ, ತೆಲುಗು, ಮರಾಠಿ

ಕುಕೃತ್ಯದಲ್ಲಿ ಉಮೇಶ್ ರೆಡ್ಡಿಯನ್ನು ಮೀರುಸುತ್ತಿದ್ದ
ಚಿತ್ರದುರ್ಗ ಮತ್ತು ವಿಜಯಪುರ ಇವನ ಮೇಲೆ ಅನೇಕ ಪ್ರಕರಣಗಳು ದಾಖಲಾಗಿತ್ತು. ವೇಶ್ಯಾವಾಟಿಕೆಗೆ ತೊಡಗಿದವರಲ್ಲದೆ, ಹಳ್ಳಿಯ ಮುಗ್ಧ ಹೆಣ್ಣು ಮಕ್ಕಳನ್ನೂ ಪರಿಚಯ ಮಾಡಿಕೊಂಡು ತನ್ನ ಕಾಮಬೇಟೆಯನ್ನಾಡುತ್ತಿದ್ದ.
ಬಳ್ಳಾರಿಯಲ್ಲಿ 6, ವಿಜಯಪುರದಲ್ಲಿ ಒಂದು ಅತ್ಯಾಚಾರ ಹಾಗೂ ಕೊಲೆ, ವಿಜಯಪುರದಲ್ಲಿ ಕೊಲೆ, ತುಮಕೂರಿನಲ್ಲಿ ಒಂದೇ ಕುಟುಂಬದ ಮೂವರ ಕೊಲೆ ಸೇರಿದಂತೆ ಅನೇಕ ಪಾತಕಗಳನ್ನು ಎಸಗಿದ್ದನು.
ಚಿತ್ರದುರ್ಗ ಜಿಲ್ಲೆಯ ಗೌಲಾಳು ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಒಂಟಿ ಮಹಿಳೆಯನ್ನು ಅತ್ಯಾಚಾರವೆಸಗಿ ಕೊಂದಿದ್ದ. ಇದೇ ಗ್ರಾಮದಲ್ಲಿ ಕೂಲಿ ಕಾರ್ಮಿಕ ದಂಪತಿಯನ್ನೂ ಹತ್ಯೆಗೈದಿದ್ದ. ಒಂಟಿಯಾಗಿದ್ದ ವೃದ್ಧೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಸಾಯಿಸಿದ್ದ.

ಒಂಟಿ ಮಹಿಳೆಯರೇ ಟಾರ್ಗೆಟ್
ಸೇಲಂನ ಈಡಪ್ಪಾಡಿ ಗ್ರಾಮದ ಜೈಶಂಕರ್ ಅಲಿಯಾಸ್ ಶಂಕರ್. 20ಕ್ಕೂ ಹೆಚ್ಚು ಮಹಿಳೆಯರ ಅತ್ಯಾಚಾರ ಮತ್ತು ಕೊಲೆ ಮಾಡಿ ಸಿಕ್ಕಿಬಿದ್ದ ಮೇಲೆ ಸೈಕೋ ಶಂಕರ್ ಎಂತಲೇ ಕುಖ್ಯಾತಿಯಾದ. ಕೊಯಮತ್ತೂರಿನಲ್ಲಿ ಲಾರಿ ಚಾಲಕನಾಗಿದ್ದ ಈತ ಆರು ವರ್ಷಗಳವರೆಗೆ ಮಹಿಳೆಯರನ್ನು ಅತ್ಯಾಚಾರವೆಸಗಿ ಕೊಲ್ಲುವುದನ್ನೇ ಕಾಯಕ ಮಾಡಿಕೊಂಡಿದ್ದ.
ತಮಿಳುನಾಡಿನಲ್ಲಿ 11 ಮಹಿಳೆಯರು, ಕರ್ನಾಟಕದಲ್ಲಿ ನಾಲ್ವರು ಮಹಿಳೆಯರು ಈತನ ಕಾಮದಾಹಕ್ಕೆ ಬಲಿಯಾಗಿದ್ದಾರೆ. ನಗರದ ಹೊರವಲಯದಲ್ಲಿ ನೆಲೆಸಿ ಸಿಕ್ಕಿದವರು ಹರಿದು ಮುಕ್ಕುತ್ತಿದ್ದ.
ಅಪರಾಧ ಕೃತ್ಯ ನಡೆಸಿದ ಕೂಡಲೇ ಆ ಸ್ಥಳವನ್ನು ಬದಲಿಸುತ್ತಿದ್ದ ಈತನನ್ನು ಹಿಡಿಯಲು ತಮಿಳುನಾಡು ಮತ್ತು ಕರ್ನಾಟಕ ಪೊಲೀಸರು ಹರಸಾಹಸವನ್ನೇ ಮಾಡಬೇಕಾಯಿತು. ಈಗ ಎಸ್ಕೇಪ್ ಆಗಿರುವ ಶಂಕರ ಗಡಿಭಾಗದಲ್ಲೇ ನೆಲೆಸಿರುತ್ತಿದ್ದ.

ಮಹಾನ್ ಕ್ರೂರಿ, ವಿಕೃತಕಾಮಿ
ಅತ್ಯಾಚಾರ ಎಸಗುವ ಮುನ್ನ ಮಹಿಳೆಯರನ್ನು ವಿಧವಿಧವಾಗಿ ಹಿಂಸೆ ಮಾಡುತ್ತಿದ್ದ. ಈತ ತನ್ನ ಕ್ರೌರ್ಯ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದುದು ಬಹುತೇಕ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆಯರನ್ನು ಹಾಗೂ ಒಂಟಿ ಮಹಿಳೆಯರನ್ನು ಮಾತ್ರ.
ರಾಷ್ಟ್ರೀಯ ಹೆದ್ದಾರಿಗಳ ಡಾಬಾ, ಟೋಲ್ ಗೇಟ್ ಗಳಲ್ಲಿ ಗಿರಾಕಿಗಳಿಗಾಗಿ ಕಾಯುವ ಮಹಿಳೆಯರನ್ನು ಪರಿಚಯ ಮಾಡಿಕೊಂಡು ತನ್ನ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದ. ನಂತರ ಕೊಂದು ಹಾಕುತ್ತಿದ್ದ. ಕಾನ್ಸ್ ಟೇಬಲ್ ರೊಬ್ಬರ ಪತ್ನಿಯನ್ನೇ ಅತ್ಯಾಚಾರವೆಸಗಿದ್ದ. ಪತ್ನಿ ಎದುರಿನಲ್ಲೇ ಪತಿ ಕೊಂದು ಹಾಕಿದ್ದ. ಇವನ ಕಾಟದಿಂದ ಕರ್ನಾಟಕ, ತಮಿಳುನಾಡಿನ ಕೂಲಿ ಕಾರ್ಮಿಕರು ತತ್ತರಿಸಿದ್ದರು.

ಸೈಕೋ ಶಂಕರ್ ಎಸ್ಕೇಪ್ ಆಗಿದ್ದು ಹೇಗೆ?
ಬೆಂಗಳೂರು ಸ್ಫೋಟ ರುವಾರಿ ಅಬ್ದುಲ್ ಮದನಿ,ಸೇರಿದಂತೆ 4500ಕ್ಕೂ ಅಧಿಕ ಕೈದಿಗಳಿಂದ ತುಂಬಿ ತುಳುಕುತ್ತಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಂಕರ ಎಸ್ಕೇಪ್ ಪೂರ್ವನಿಯೋಜಿತವಾಗಿತ್ತು.
ಬೆಲ್ಟ್ ಬೆಡ್ ಶೀಟ್, ಸರ್ಜಿಕಲ್ ಗ್ಲೋಸ್ ಸೇರಿದಂತೆ ಇನ್ನಿತರ ಸಾಧನಗಳನ್ನು ಬಳಸಿದ್ದ. ಘಟನೆ ದಿನ ರಾತ್ರಿ ಕರೆಂಟ್ ಹೋದ ಸಂದರ್ಭದಲ್ಲಿ ಪೊಲೀಸ್ ವೇಷ ಧರಿಸಿ ಗೋಡೆ ಹಾರಿ ಎಸ್ಕೇಪ್ ಆಗಿದ್ದ. ಗೋಡೆ ಹಾರುವಾಗ ಗಾಯವಾಗಿತ್ತು.
ಗೋಡೆಯ ಮೇಲೆ ರಕ್ತದ ಕಲೆಗಳು ಹೆಪ್ಪುಗಟ್ಟಿತ್ತು. ಜೈಲಿನ ಎಡ ಭಾಗದ ಗೋಡೆ ಹಾರಿ ಪರಾರಿಯಾಗಿದ್ದಾನೆ ಎಂದು ಜೈಲ್ ಸೂಪರಿಂಟೆಂಡೆಂಟ್ ವೀರೇಂದ್ರ ಸಿಂಹ ಅವರಿಗೆ ಮೊದಲಿಗೆ ತಿಳಿದು ಬಂದಿತು. ಆಗ್ನೇಯ ಡಿಸಿಪಿ ಟಿ.ಡಿ.ಪವಾರ್ ಸ್ಥಳಕ್ಕೆ ಧಾವಿಸಿ ಪ್ರಕರಣದ ಕುರಿತು ಪರಿಶೀಲನೆ ನಡೆಸಿದರು. ವಿಶೇಷ ತಂಡ ರಚಿಸಿ ಎಲ್ಲೆಡೆ ನಾಗಾಬಂದಿ ಹಾಕಿ ಜಾಲ ಬೀಸಿದರು.

ಎಸ್ಕೇಪ್ ಕಂಡು ಅಚ್ಚರಿ ಪಟ್ಟಿದ್ದರು
15 ಅಡಿಯ ಎರಡು ಕಾಂಪೌಂಡ್ ಹಾಗೂ 30 ಅಡಿಯ ಮೇನ್ ಗೇಟ್ ನಿಂದ ಹಾರಿ, ಜೈಲಿನ ನಕಲಿ ಕೀ ಬಳಸಿ, ಪೊಲೀಸರ ವೇಷ ತೊಟ್ಟು, ಜೈಲಿನ ಚಕ್ರವ್ಯೂಹ ಭೇದಿಸಿ ಪರಾರಿಯಾಗಿ ಅಚ್ಚರಿ ಮೂಡಿಸಿದ್ದಾನೆ. ಸಿಸಿ ಕ್ಯಾಮೆರಾ, ತಪಾಸಣಾ ಗೋಪುರ, 24 ಗಂಟೆಗಳ ಕಣ್ಗಾವಲು, ಘೋರ ಅಪರಾಧಿಗಳ ತೀವ್ರ ಕಟ್ಟೆಚ್ಚರ ಸಂದರ್ಭದಲ್ಲೂ ಸೈಕೋ ಶಂಕರ್ ಜೈಲಿನಿಂದ ಎಸ್ಕೇಪ್ ಆಗಿದ್ದ.
ಕರ್ನಾಟಕ ಮತ್ತು ತಮಿಳುನಾಡು ಪೊಲೀಸರಿಗೆ ಸವಾಲಾಗಿ ಈತನ ಬಂಧನದ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಕೂಡ್ಲುಗೇಟ್ ಬಳಿಯಿದ್ದ ಪಾಳುಬಿದ್ದಂತಿದ್ದ ಗುಡಿಸಲಿನಲ್ಲಿ ವಾಸವಾಗಿದ್ದ.

ಕೂಡ್ಲುಗೇಟ್ ಬಳಿ ಸಿಕ್ಕಿ ಬಿದ್ದಿದ್ದ್ದ
ಕೂಡ್ಲುಗೇಟ್ ಬಳಿಯ ಕೆರೆಯಲ್ಲಿ ಮೀನುಹಿಡಿಯುವವರು ಮಾಡಿಕೊಂಡಿದ್ದ ಗುಡಿಸಿಲಿನಲ್ಲಿ ಜೈ ಶಂಕರ್ ತಂಗಿದ್ದ. ಮೊಬೈಲ್ ಮೂಲಕ ತನ್ನ ಸ್ನೇಹಿತರಿಗೆ ಕರೆ ಮಾಡಿ ತಾನು ಇಲ್ಲಿದ್ದೇನೆ ಎಂದು ಮಾಹಿತಿ ನೀಡಿದ್ದ. ಮೊಬೈಲ್ ಟವರ್ ಟ್ರೇಸ್ ಮಾಡಿ, ಆತನನ್ನು ಐದು ದಿನಗಳಲ್ಲೇ ಹಿಡಿದಿದ್ದರು.
ಶಂಕರ್ ಬಂಧಿಸಿದ ತಂಡದಲ್ಲಿ ಬೆಂಗಳೂರಿನ ಇನ್ಸ್ ಪೆಕ್ಟರ್ ಗಳಾದ ಬಾಲಾಜಿ ಸಿಂಗ್, ಲಕ್ಷ್ಮೀನಾರಾಯಣ್, ಶ್ರೀನಿವಾಸ್, ಬಾಪು, ಮಹೇಶ್, ಶಿರಾದ ರವಿ ಮತ್ತು ಚಿತ್ರದುರ್ಗದ ಪಿಎಸ್ಐ ಉಮೇಶ್ ಮುಂತಾದವರಿದ್ದರು.











Click it and Unblock the Notifications