ಕರ್ನಾಟಕದ ಪಾಲಿಟಿಕ್ಸ್ ಎಂಬ ಪಕ್ಕಾ ರೂಮರ್ ಬಜಾರ್!

ವಿಧಾನಸಭೆ ಚುನಾವಣೆ ಮುಗಿದು ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ತಿಂಗಳಾಗುತ್ತಾ ಬಂದರೂ ಅದೀಗ ಪಕ್ಕಾ ರೂಮರ್ ಬಜಾರ್ ನಂತಾಗಿ ಹೋಗಿದೆ.

ಅಂದ ಹಾಗೆ ನೂರಾ ನಾಲ್ಕು ಸೀಟುಗಳನ್ನು ಗಳಿಸಿದರೂ ಮುಖ್ಯಮಂತ್ರಿ ಪಟ್ಟವನ್ನು ಉಳಿಸಿಕೊಳ್ಳಲಾಗದ ಕಾರಣಕ್ಕಾಗಿ ಬಿಜೆಪಿಯ ಯಡಿಯೂರಪ್ಪ ಅವರು ಕುಮಾರಸ್ವಾಮಿ ಅವರ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿರುವುದು ಸುಳ್ಳೇನಲ್ಲ.

ನೀವು ಸಿಎಂ ಆಗುವುದೇ ಅದರೆ ಪಾರ್ಲಿಮೆಂಟ್ ಚುನಾವಣೆಯ ಒಳಗೆ ಆಗಬೇಕು. ತದ ನಂತರ ನಿಮ್ಮನ್ನು ಬಿಜೆಪಿ ಹೈಕಮಾಂಡ್ ಆ ಜಾಗದಲ್ಲಿ ಕೂರಿಸುವುದಿಲ್ಲ ಎಂಬ ಅಪ್ತರ ಮಾತು ಯಡಿಯೂರಪ್ಪ ಅವರ ನಿದ್ದೆಗೆಡಿಸಿದೆ ಅನ್ನುವುದೂ ನಿಜ.

ಹೀಗಾಗಿ ಅವರು ಅತ್ತ ಕಡೆ ಹೈಕಮಾಂಡ್ ವರಿಷ್ಠರ ಜತೆ ಮಾತುಕತೆ ನಡೆಸಿ, ನಾನು ಸರ್ಕಾರ ರಚಿಸುತ್ತೇನೆ, ಅವಕಾಶ ಮಾಡಿಕೊಡಿ ಎಂದು ಕೇಳುತ್ತಲೇ ಇದ್ದಾರೆ. ಆದರೆ ಹೈಕಮಾಂಡ್ ವರಿಷ್ಠರು, ಆಪರೇಷನ್ ಕಮಲ ಕಾರ್ಯಾಚರಣೆಯ ಮೂಲಕ ಶಾಸಕರನ್ನು ಸೆಳೆಯಲು ಯತ್ನಿಸಿದರೆ ರಾಷ್ಟ್ರ ಮಟ್ಟದಲ್ಲಿ ಪಕ್ಷದ ವರ್ಚಸ್ಸು ಕುಗ್ಗುತ್ತದೆ. ಹೀಗಾಗಿ ಸಂಸತ್ ಚುನಾವಣೆ ಮುಗಿಯುವವರೆಗೆ ಸುಮ್ಮನಿರಿ ಅನ್ನುತ್ತಿದ್ದಾರೆ.

ಈ ಮಧ್ಯೆ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರಿಗೆ ಅಸಮಾಧಾನವಿರುವುದೂ ನಿಜ. ಆದರೆ ಮುಂದಿನ ಸಂಸತ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಏನೇ ಅಸಮಾಧಾನಗಳಿದ್ದರೂ ಸಹಿಸಿಕೊಂಡು ಹೋಗಿ, ಸರ್ಕಾರವನ್ನು ಬೀಳಿಸಬೇಡಿ ಎಂದು ನಿರಂತರವಾಗಿ ಮೆಸೇಜು ನೀಡುತ್ತಲೇ ಇದ್ದಾರೆ.

ಹೀಗೆ ಎಲ್ಲರೂ ಸೇಫ್ ಗೇಮ್ ಆಡುತ್ತಿರುವುದರಿಂದಲೇ ಕರ್ನಾಟಕದ ರಾಜಕಾರಣದಲ್ಲಿ ಒಂದರ ಹಿಂದೊಂದರಂತೆ ರೂಮರ್ ಗಳನ್ನು ಹಬ್ಬಿಸುವುದು ಹಲವರಿಗೆ ಒಂದು ಕೆಲಸವೇ ಆಗಿ ಹೋಗಿದೆ. ಅಂದ ಹಾಗೆ ಕರ್ನಾಟಕದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಗಾತ್ರದ ಪ್ರತಿಪಕ್ಷವೂ ಬಂದಿರಲಿಲ್ಲ. ಇಷ್ಟು ಸಣ್ಣ ಶಕ್ತಿಯ ನಾಯಕರೊಬ್ಬರು ಮುಖ್ಯಮಂತ್ರಿಯಾದ ಉದಾಹರಣೆಯೂ ಇಲ್ಲ.

ಸಿದ್ದುವಿಗೆ ಉಪರಾಷ್ಟ್ರಪತಿ ಹುದ್ದೆಯ ಭರವಸೆ?

ಸಿದ್ದುವಿಗೆ ಉಪರಾಷ್ಟ್ರಪತಿ ಹುದ್ದೆಯ ಭರವಸೆ?

ಹೀಗಾಗಿ ಇವತ್ತಿನ ಪರಿಸ್ಥಿತಿಯಲ್ಲಿ ಒಂದರ ಹಿಂದೊಂದರಂತೆ ರೂಮರುಗಳನ್ನು ಹಬ್ಬಿಸುವುದು ಸುಲಭವಾಗಿ ಹೋಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಹದಿನೇಳು ಮಂದಿ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬುದು ಮೊದಲ ರೂಮರ್.

ಇದಕ್ಕೆ ಪೂರಕವಾದ ರೂಮರ್ ಎಂದರೆ, ಕುಮಾರಸ್ವಾಮಿ ಸರ್ಕಾರದ ಬಗ್ಗೆ ಸಿದ್ದರಾಮಯ್ಯ ಅವರಿಗೆ ಅಸಮಾಧಾನವಿದೆ. ಹೀಗಾಗಿ ತಾವು ಪಕ್ಷ ತೊರೆಯದಿದ್ದರೂ ತಮ್ಮ ಬೆಂಬಲಿಗರನ್ನು ಬಿಜೆಪಿ ಕಡೆ ಕಳಿಸಲು ಅವರು ಮಾನಸಿಕವಾಗಿ ಸಜ್ಜಾಗಿದ್ದಾರೆ ಎಂಬುದು.

ಸಿದ್ದರಾಮಯ್ಯ ಏಕೆ ಈ ಕೆಲಸ ಮಾಡುತ್ತಾರೆ ಎಂದರೆ ಅವರಿಗೆ ಆಪ್ತರಾದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನೀಡಿದ ಒಂದು ಭರವಸೆ. ಈ ಭರವಸೆ ಎಂದರೆ 2022ರ ವೇಳೆಗೆ ನಿಮ್ಮನ್ನು ಉಪರಾಷ್ಟ್ರಪತಿ ಹುದ್ದೆಯ ಮೇಲೆ ಕೂರಿಸಲು ಬಿಜೆಪಿ ರೆಡಿ ಇದೆ. ಹೀಗಾಗಿ ಸಿಗುವ ಅವಕಾಶವನ್ನು ಬಿಡಬೇಡಿ ಎಂಬುದು. ಆದರೆ ಇದು ಕೂಡಾ ರೂಮರ್.

ಸಿದ್ದು ಮೇಲೆ ಮೋದಿಗೆ ಮೃದು ಧೋರಣೆ

ಸಿದ್ದು ಮೇಲೆ ಮೋದಿಗೆ ಮೃದು ಧೋರಣೆ

ಈ ಮಧ್ಯೆ ಬಿಜೆಪಿ ಹೈಕಮಾಂಡ್ ಗೇ ಕರ್ನಾಟಕದಲ್ಲಿ ತಮ್ಮ ಪಕ್ಷದ ಸರ್ಕಾರ ಬರಬೇಕು ಎಂಬ ಮಹತ್ವಾಕಾಂಕ್ಷೆಯಿಲ್ಲ. ಅದೇ ರೀತಿ ಸಿದ್ದರಾಮಯ್ಯ ಅವರನ್ನು ಬಿಜೆಪಿಯ ಕಡೆ ಸೆಳೆಯುವ ಯತ್ನ ಹಿಂದಿನಿಂದಲೂ ನಡೆಯುತ್ತಿದೆ ಅನ್ನುವುದು ನಿಜವಾದರೂ ಅದಕ್ಕಿರುವ ಕಾರಣ ಬೇರೆ.

ಅದೆಂದರೆ, ಮೋದಿ ಅವರನ್ನು ದೇಶದಲ್ಲಿ ಸಮರ್ಥವಾಗಿ ಎದುರಿಸಿದ ಮುಖ್ಯಮಂತ್ರಿ ಎಂದರೆ ಸಿದ್ದರಾಮಯ್ಯ. ಹಿಂದುಳಿದ ವರ್ಗಗಳಿಂದ ಬಂದವರಾದುದರಿಂದ ನರೇಂದ್ರ ಮೋದಿಯವರಿಗೂ ಸಿದ್ದರಾಮಯ್ಯ ಅವರ ವಿಷಯದಲ್ಲಿ ಮೃದು ಧೋರಣೆ ಇದೆ.

ಈ ಮಧ್ಯೆ ಅವರೇನಾದರೂ ಬಿಜೆಪಿಯ ಕಡೆ ಬಂದರೆ 2019ರ ವೇಳೆ ಸಂಸತ್ ಚುನಾವಣೆಯ ವೇಳೆಗೆ ಕಮಲ ಪಾಳೆಯಕ್ಕೆ ಲಾಭವಾಗಬಹುದು ಎಂಬ ಲೆಕ್ಕಾಚಾರವಿದೆ. ಆದರೆ ಸಿದ್ದರಾಮಯ್ಯ ಅವರು ಕೈ ಪಾಳೆಯವನ್ನು ತೊರೆಯುವ ಮಟ್ಟಕ್ಕೆ ಹತಾಶರಾಗಿಲ್ಲ.

ಸಿದ್ದು ಕಾಂಗ್ರೆಸ್ ತೊರೆಯದಿರಲು ಕಾರಣವಿದೆ

ಸಿದ್ದು ಕಾಂಗ್ರೆಸ್ ತೊರೆಯದಿರಲು ಕಾರಣವಿದೆ

ಕಾಂಗ್ರೆಸ್ ತೊರೆಯದೆ ಇರಲು ಅವರಿಗೊಂದು ಕಾರಣವೂ ಇದೆ. ಅದೆಂದರೆ, ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಐದು ವರ್ಷಗಳ ಕಾಲ ಯಾವ ಕಿರಿ ಕಿರಿಯೂ ಆಗದಂತೆ ರಾಹುಲ್ ಗಾಂಧಿ ನೋಡಿಕೊಂಡರು ಎಂಬ ಗೌರವ. ಅಲ್ಲದೆ, ಹಲವಾರು ಸಂಗತಿಗಳಲ್ಲಿ, ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಮುಕ್ತ ನಿರ್ಧಾರ ತಳೆಯಲು ಅವಕಾಶ ನೀಡಿದ್ದರು.

ಹೀಗಾಗಿ ಸಿದ್ದರಾಮಯ್ಯ ಅವರು ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ತೊರೆಯುವ ಯೋಚನೆಯಲ್ಲಿಲ್ಲ. ಮಂತ್ರಿ ಮಂಡಲ ವಿಸ್ತರಣೆಯ ವಿಷಯದಲ್ಲಿ ಅವರಿಗೆ ಕೆಲ ತಲೆನೋವುಗಳಿವೆಯಾದರೂ ಅವರಿರುವ ಸ್ಥಿತಿಯಲ್ಲಿ ಅದು ಅನಿವಾರ್ಯವೂ ಹೌದು. ಅವರು ಕಾಂಗ್ರೆಸ್ ತೊರೆಯುತ್ತಾರೆ ಎಂದು ಯಾರಾದರೂ ನಂಬಿದ್ದರೆ ಅದು ನಿಜವಾಗುವುದು ಸದ್ಯದ ಪರಿಸ್ಥಿತಿಯಲ್ಲಿ ಬಲುಕಷ್ಟ.

ಅದೆಂದರೆ, ಶೀಘ್ರದಲ್ಲಿಯೇ ಬಿಎಸ್ವೈ ಮತ್ತೆ ಸಿಎಂ

ಅದೆಂದರೆ, ಶೀಘ್ರದಲ್ಲಿಯೇ ಬಿಎಸ್ವೈ ಮತ್ತೆ ಸಿಎಂ

ಈ ಮಧ್ಯೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲರು, ಶ್ರಾವಣದ ಕಡೆಯ ಸೋಮವಾರ ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದ್ದಾರೆ. ಆದರೆ ಅವರ ಹೇಳಿಕೆಗೊಂದು ಸೇಫೆಸ್ಟ್ ಜೋನ್ ಇದೆ.

ಅದೆಂದರೆ, ಜ್ಯೋತಿಷಿಗಳು ಹೇಳಿದ ಮಾತನ್ನು ನಂಬಿ ಅವರದನ್ನು ಹೇಳಿದ್ದಾರೆ. ಹೇಗಿದ್ದರೂ ಸಿಎಂ ಹುದ್ದೆಗೇರಲು ಯಡಿಯೂರಪ್ಪ ತರಾತುರಿ ತೋರಿಸುತ್ತಿರುವುದು ನಿಜ. ಹಾಗೆಯೇ ಅವರು ಕಾಂಗ್ರೆಸ್ ನ ಬಹುತೇಕ ಶಾಸಕರೊಂದಿಗೆ ಮಾತನಾಡಿರುವುದು ಕೂಡಾ ನಿಜ.

ಹೀಗಿರುವಾಗ ಅಕಸ್ಮಾತ್ ಈ ಮಾತು ಯಶಸ್ವಿಯಾದರೆ, ನಾನು ಮುಂಚಿತವಾಗಿಯೇ ಹೇಳಿದ್ದೆ ಎಂದವರು ಹೇಳಿಕೊಳ್ಳಬಹುದು. ಆಗದೆ ಇದ್ದರೆ ಅದು ಜ್ಯೋತಿಷಿಯ ಮಾತು ಎಂದು ಮೌನವಾಗಿಬಿಡಬಹುದು.

ಕಮರ್ಷಿಯಲ್ ಕೆಟಗರಿಯ ಜ್ಯೋತಿಷಿಗಳು

ಕಮರ್ಷಿಯಲ್ ಕೆಟಗರಿಯ ಜ್ಯೋತಿಷಿಗಳು

ಜ್ಯೋತಿಷ್ಯ ಶಾಸ್ತ್ರದ ಕುರಿತ ಪರ-ವಿರೋಧಗಳೇನೇ ಇರಲಿ, ಆದರೆ ಇತ್ತೀಚಿನ ವರ್ಷಗಳಲ್ಲಿ ಒಂದು ಕೆಟಗರಿಯ ಜ್ಯೋತಿಷಿಗಳು ಹೆಚ್ಚಾಗಿದ್ದಾರೆ. ಸಾಮಾನ್ಯವಾಗಿ ಅವರನ್ನು ಕಮರ್ಷಿಯಲ್ ಜ್ಯೋತಿಷಿಗಳು ಎಂದು ಗುರುತಿಸಲಾಗುತ್ತದೆ.

ಪ್ರಸ್ತುತ ವಿದ್ಯಮಾನಗಳನ್ನು ಪತ್ರಿಕೆಗಳ ಮೂಲಕ, ಟಿವಿಯ ಮೂಲಕ, ತಮಗೆ ಪರಿಚಿತರಿರುವ ಗಣ್ಯರ ಜೊತೆ ಚರ್ಚಿಸುವ ಮೂಲಕ ಅವರು ಚತುರ ರಾಜಕೀಯ ವಿಶ್ಲೇಷಕರಂತಾಗಿಬಿಟ್ಟಿದ್ದಾರೆ. ತಮಗೆ ಗೊತ್ತಿರುವ ಅರ್ಧಮರ್ಧ ರಾಜಕೀಯ ಮಾಹಿತಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಹೀಗಾಗಿಯೇ ಮುಖ್ಯಮಂತ್ರಿಯಾಗುವ ಸಂಭವನೀಯ ಕ್ಯಾಂಡಿಡೇಟುಗಳ ಲಿಂಕು ಹಿಡಿದುಕೊಂಡು, ನಿಮ್ಮ ಜಾತಕದಲ್ಲಿ ಇಂತಿಂತಹ ಗ್ರಹಗಳು ಪೂರಕವಾಗಿವೆ. ಹೀಗಾಗಿ ನಿಮಗೆ ಮುಖ್ಯಮಂತ್ರಿಯಾಗುವ ಯೋಗವಿದೆ ಅನ್ನುತ್ತಾರೆ. ಅಂದ ಹಾಗೆ ಈ ಮಾತನ್ನು ಅವರು ಯಡಿಯೂರಪ್ಪ ಅವರೊಬ್ಬರಿಗೇ ಅಲ್ಲ, ಇನ್ನೂ ಹತ್ತಾರು ಜನರಿಗೆ ಹೇಳಿರುತ್ತಾರೆ.

ಜ್ಯೋತಿಷಿ ಮಾತು ನಂಬಿದವರ ಪಟ್ಟಿ ದೊಡ್ಡದಿದೆ

ಜ್ಯೋತಿಷಿ ಮಾತು ನಂಬಿದವರ ಪಟ್ಟಿ ದೊಡ್ಡದಿದೆ

ಇವರು ಹೇಳಿದ ಮಾತನ್ನು ನಂಬಿ ಮುಖ್ಯಮಂತ್ರಿಯಾಗುವ ಕನಸು ಕಂಡವರ ಪಟ್ಟಿ ಸಣ್ಣದಲ್ಲ. ಹಿಂದೆ ಜನತಾ ಪರಿವಾರದಲ್ಲಿ ಪ್ರಬಲರಾಗಿದ್ದ ಜೀವರಾಜ್ ಆಳ್ವ, ಪಿ.ಜಿ.ಆರ್.ಸಿಂಧಿಯಾ ಅವರಂತಹ ನಾಯಕರು ತಮ್ಮ ಆಪ್ತರೊಡನೆ ಮಾತನಾಡುತ್ತಾ, ಮುಂದೊಂದು ದಿನ ನಿಮಗೆ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ಗೋಲಿ ಮಠದ ಸ್ವಾಮಿ ಹೇಳಿದ್ದಾರೆ ಅಂತ ಹೇಳಿಕೊಳ್ಳುತ್ತಿದ್ದರು.

ಅದೇ ರೀತಿ ಈಗಲೂ ಹಲ ಪಕ್ಷಗಳ ನಾಯಕರು, ತಮಗೆ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ಪೋಡಿ ಮಠದ ಸ್ವಾಮೀಜಿ ಹೇಳಿದ್ದಾರೆ, ಗೋಲಿ ಮಠದ ಸ್ವಾಮೀಜಿ ಹೇಳಿದ್ದಾರೆ ಅನ್ನುವುದು ಕೂಡಾ ರಹಸ್ಯವೇನಲ್ಲ. ಇಂತವರ ಪಟ್ಟಿ ಮಾಡುತ್ತಾ ಹೋದರೆ ಮುಖ್ಯಮಂತ್ರಿ ಹುದ್ದೆಗೇರಲಾಗದೆ ಮೂಲೆಗುಂಪಾದ ನೂರಾರು ನಾಯಕರ ಹೆಸರುಗಳು ಸಿಗುತ್ತವೆ.

ಕುತೂಹಲಕಾರಿ ಸಂಗತಿ ಎಂದರೆ, ಈ ಜ್ಯೋತಿಷಿಗಳು ಹೇಳಿದವರ ಪೈಕಿ ಕೆಲವರು ಮುಖ್ಯಮಂತ್ರಿಗಳೂ ಆಗುತ್ತಾರೆ. ಸಹಜವಾಗಿ ಅಂತಹ ಸಂದರ್ಭದಲ್ಲಿ ಸದರಿ ಜ್ಯೋತಿಷಿಯ ಮಾರುಕಟ್ಟೆ ವ್ಯಾಲ್ಯೂ ಜಾಸ್ತಿ ಆಗುತ್ತದೆ. ಆದರೆ ಒಟ್ಟಾರೆಯಾಗಿ ಗಮನಿಸಿದರೆ ಜ್ಯೋತಿಷ್ಯಕ್ಕಿಂತ ಮುಖ್ಯವಾಗಿ ಸಂದರ್ಭವನ್ನು ತಮ್ಮ ಪರವಾಗಿ ಬಳಸಿಕೊಳ್ಳುವವರು, ನಿರಂತರವಾಗಿ ಶ್ರಮಿಸುವವರಿಗೆ ಹೆಚ್ಚಾಗಿ ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆಯುತ್ತಾರೆ.

ಡಿಕೆಶಿಗೆ ಉಪಮುಮಂ ಹುದ್ದೆಯ ಆಮಿಷ

ಡಿಕೆಶಿಗೆ ಉಪಮುಮಂ ಹುದ್ದೆಯ ಆಮಿಷ

ದೇವೇಗೌಡರಿರಬಹುದು, ಕುಮಾರಸ್ವಾಮಿ ಇರಬಹುದು, ಯಡಿಯೂರಪ್ಪ ಇರಬಹುದು, ಇವರೆಲ್ಲರೂ ಅಪಾರ ಶ್ರಮಜೀವಿಗಳು. ರಾಜಕೀಯವನ್ನೇ ಉಸಿರಾಡುವವರು. ಹೀಗಾಗಿ ಅವರು ಮಾಡುವ ಪ್ರಯತ್ನಗಳಿಗೆ ಗೆಲುವೋ? ಸೋಲೋ? ಆಗುತ್ತಲೇ ಇರುತ್ತದೆ. ಕಮರ್ಷಿಯಲ್ ಜ್ಯೋತಿಷಿಗಳು ಇದನ್ನು ಎನ್ ಕ್ಯಾಶ್ ಮಾಡಿಕೊಳ್ಳುತ್ತಾರೆ.

ಈಗ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನೇ ತೆಗೆದುಕೊಳ್ಳಿ. ಇತ್ತೀಚೆಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗಲೂ ಆ ಹುದ್ದೆಯನ್ನು ಉಳಿಸಿಕೊಳ್ಳಲು ಅವರು ಅಪಾರ ಪ್ರಯತ್ನ ಮಾಡಿದರು. ಈಗಲೂ ಮತ್ತೆ ಮುಖ್ಯಮಂತ್ರಿ ಆಗುವ ಆ ಪ್ರಯತ್ನ ಮುಂದುವರಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಅವರಿಗಿದ್ದ ನಂಬಿಕೆ ಎಂದರೆ ಸಕಾಲಕ್ಕೆ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ತಮ್ಮ ನೆರವಿಗೆ ಬರುತ್ತಾರೆ ಎಂಬುದು. ಹಾಗಂತಲೇ, ಶಿವಕುಮಾರ್, ಹದಿನೇಳು ಮಂದಿ ಶಾಸಕರ ಕೈಲಿ ರಾಜೀನಾಮೆ ಕೊಡಿಸಿ, ನೀವು ಈ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗುವಂತೆ ನಾನು ನೋಡಿಕೊಳ್ಳುತ್ತೇನೆ ಎಂದಿದ್ದರು.

ಕುಮಾರಸ್ವಾಮಿಯೇನು ಸುಮ್ಮನೆ ಕುಳಿತಿಲ್ಲ

ಕುಮಾರಸ್ವಾಮಿಯೇನು ಸುಮ್ಮನೆ ಕುಳಿತಿಲ್ಲ

ಡಿಕೆಶಿ ಜತೆ ಆ ಪ್ರಮಾಣದ ಶಾಸಕರು ಬರಲಿಲ್ಲ. ಹೀಗಾಗಿ ಯಡಿಯೂರಪ್ಪನವರ ಆ ಪ್ರಯತ್ನ ಸಂಪೂರ್ಣ ವಿಫಲವಾಯಿತು. ಹೀಗಾಗಿ ಈಗ ಸಿದ್ದರಾಮಯ್ಯ ಅವರ ಹೆಸರು ಚಾಲ್ತಿಗೆ ಬಂದಿದೆ. ಏನೇ ಆದರೂ ಪ್ರಯತ್ನ ಪ್ರಯತ್ನವೇ. ರಾಜಕಾರಣದಲ್ಲಿ ಅದು ನಿರಂತರ ಪ್ರಕ್ರಿಯೆ. ಅದು ಯಶಸ್ವಿಯಾಗುತ್ತದೋ? ಇಲ್ಲವೋ? ಬೇರೆ ಮಾತು. ಆದರೆ ಯಡಿಯೂರಪ್ಪ ಅದನ್ನು ಮುಂದುವರಿಸುತ್ತಲೇ ಇರುತ್ತಾರೆ.

ಈ ವಿಷಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಸುಮ್ಮನೆ ಕುಳಿತಿಲ್ಲ. ಬದಲಿಗೆ, ಬಿಜೆಪಿಯವರು ನಮ್ಮ ಸರ್ಕಾರದ ಬೆಂಬಲಕ್ಕಿರುವ ಶಾಸಕರನ್ನು ಸೆಳೆದು ನೋಡಲಿ, ನಾವೂ ಕೂಡಾ ಬಿಜೆಪಿಯ ಡಜನ್ನಿಗೂ ಹೆಚ್ಚು ಶಾಸಕರನ್ನು ಸೆಳೆಯುತ್ತೇವೆ ಎನ್ನುತ್ತಿದ್ದಾರೆ.

ಹೀಗೆ ಒಂದು ಅನಿಶ್ಚಿತ ರಾಜಕೀಯ ಸನ್ನಿವೇಶ ಹಲವು ರೀತಿಯ ಗೊಂದಲಗಳನ್ನು ಸೃಷ್ಟಿಸುತ್ತಾ, ಕರ್ನಾಟಕದ ಪಾಲಿಟಿಕ್ಸ್ ಎಂದರೆ ರೂಮರ್ ಬಜಾರ್ ಅನ್ಜುವಂತೆ ಮಾಡಿರುವುದು ಮಾತ್ರ ನಿಜ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+