ಒಂದೇ ಏಟಿನಲ್ಲಿ ಎರಡೂ ಹಕ್ಕಿ ಹೊಡೆಯುವ ಕುಮಾರಸ್ವಾಮಿ ಲೆಕ್ಕಾಚಾರಗಳೇನು?
Recommended Video
ರಾಜ್ಯ ರಾಜಕಾರಣ ನಿಧಾನಕ್ಕೆ ರಾಷ್ಟ್ರಪತಿ ಆಡಳಿತದ ಕಡೆಗೆ ಸಾಗುತ್ತಿದೆ. ಇದರ ಸೂಚನೆ ಸಿಕ್ಕಿಹೋಗಿರುವ ಕುಮಾರಸ್ವಾಮಿ, ಬಿಜೆಪಿಯವರದೇ ಈ ಆಟ ಎಂದು ಮಾಧ್ಯಮದವರ ಮುಂದೆ ಆರೋಪ ಕೂಡ ಮಾಡಿದ್ದಾರೆ. ಅದರಲ್ಲಿ ಕಾಂಗ್ರೆಸ್ಸಿನವರ ಪಾಲೂ ಇರಲಿ ಎಂದು, ಬಹಳ ಕಷ್ಟಪಟ್ಟು ಈ ಸರಕಾರ ನಡೆಸಿಕೊಂಡು ಹೋಗುತ್ತಿದ್ದೇನೆ ಎಂದಿದ್ದಾರೆ.
ಆದರೆ, ರಾಜ್ಯದಲ್ಲಿ ಮೈತ್ರಿ ಸರಕಾರವನ್ನು ಕೆಡವುವ ಪರಿಸ್ಥಿತಿಯೇ ಬಂದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಏನು ತೀರ್ಮಾನ ತೆಗೆದುಕೊಳ್ಳಬಹುದು ಎಂಬುದೇ ಕುತೂಹಲಕರ. ಆಗ ಬಿಜೆಪಿ ಮುಂದಿರುವ ಆಯ್ಕೆ ಏನು ಗೊತ್ತಾ?
ರೆಸಾರ್ಟ್ ಪಾಲಿಟಿಕ್ಸ್: ಬಿಜೆಪಿ ಕಾಲೆಳೆದ ಮುಖ್ಯಮಂತ್ರಿ ಕುಮಾರಸ್ವಾಮಿ
ಜಮ್ಮು-ಕಾಶ್ಮೀರದಲ್ಲಿ ಏನು ಮಾಡಲಾಯಿತು ಅನ್ನೋದನ್ನು ಒಮ್ಮೆ ನೆನಪಿಸಿಕೊಳ್ಳಿ. ಅದೇ ಪುಸ್ತಕದ ರೂಲನ್ನು ಕರ್ನಾಟಕದಲ್ಲೂ ಜಾರಿಗೆ ತರಬಹುದು. ಸದ್ಯಕ್ಕೆ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು, ಲೋಕಸಭೆ ಚುನಾವಣೆ ನಡೆದು ಫಲಿತಾಂಶ ಬರುವ ತನಕ ಕಾಯುವ ತಂತ್ರವನ್ನು ಅನುಸರಿಸಬಹುದು.
ಕರ್ನಾಟಕದ ರಾಜಕೀಯ ಪರಿಸ್ಥಿತಿ ಏನಾಗಲಿದೆ? ಏನು ಹೇಳುತ್ತದೆ ಜ್ಯೋತಿಷ್ಯ?
ಏಕೆಂದರೆ, ಶಾಸಕರನ್ನು ರೆಸಾರ್ಟ್ ಗಳಲ್ಲಿ ಇರಿಸಿ, ಆಡಳಿತ ನಡೆಸುವುದಕ್ಕೆ ಮೈತ್ರಿ ಸರಕಾರಕ್ಕೆ ಎಷ್ಟು ಕಾಲ ಸಾಧ್ಯ? ಈಗಿರುವುದು ಕರಗಿಹೋಗುವ ಅಸಮಾಧಾನ ಖಂಡಿತಾ ಅಲ್ಲ. ಏಕೆಂದರೆ ಸಂಪುಟ ವಿಸ್ತರಣೆಯೋ ನಿಗಮ-ಮಂಡಳಿ ನೇಮಕಾತಿಯೋ ಏನು ಮಾಡಿದರೂ ಕನಿಷ್ಠ ಮಟ್ಟದ ಅಸಮಾಧಾನ ಸ್ಫೋಟವಾಗುತ್ತದೆ. ಆದ್ದರಿಂದ ಮುಂದಿನ ಚುನಾವಣೆಗೆ ಸಿದ್ಧರಾಗುವುದೇ ಉತ್ತಮ ಎಂಬ ತೀರ್ಮಾನಕ್ಕೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಪ್ರಮುಖರು ಬಂದಂತಿದೆ.
ಭರವಸೆ ಈಡೇರಿಸಲು ಸಾಧ್ಯವಾಗದೆ ಸರಕಾರದಿಂದ ಹೊರಗೆ
ಆದರೆ, ಕುಮಾರಸ್ವಾಮಿ ಅವರ ಮುಂದೆ ಹಲವು ಆಯ್ಕೆಗಳಿವೆ. ಒಂದೋ ತಾವಾಗಿಯೇ ವಿಧಾನಸಭೆ ವಿಸರ್ಜಿಸುವುದು. ಅದಕ್ಕೆ ಕಾಂಗ್ರೆಸ್ ನೊಳಗಿನ ಶಾಸಕರ ಅಸಮಾಧಾನ, ಅಸಹಕಾರ, ಜನಪರ ಯೋಜನೆಗಳಿಗೆ ಬೆಂಬಲ ಇಲ್ಲ ಹೀಗೆ ನಾನಾ ಕಾರಣಗಳನ್ನು ನೀಡಿ, ಪಕ್ಷದ ಮಾನ-ಮರ್ಯಾದೆ ಉಳಿಸಿಕೊಳ್ಳುವ ಸಲುವಾಗಿ ಹಾಗೂ ವಿಧಾನಸಭಾ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸಲು ಆಗುತ್ತಿಲ್ಲ ಎಂಬ ನೈತಿಕ ಹೊಣೆ ಹೊತ್ತು ಸರಕಾರದಿಂದ ಹೊರಗೆ ಬರುತ್ತಿದ್ದೇನೆ ಎಂದು ಹೇಳಬಹುದು. ಅಂಥ ಸನ್ನಿವೇಶದಲ್ಲಿ ಸಹಜವಾಗಿಯೇ ಕಾಂಗ್ರೆಸ್ ಪಕ್ಷ ಜನರ ಕಣ್ಣಲ್ಲಿ ವಿಲನ್ ಆಗುತ್ತದೆ. ಈಗಾಗಲೇ ಆ ಪಕ್ಷದೊಳಗಿನ ಅಸಮಾಧಾನ ಹಾಗೂ ಅಧಿಕಾರಕ್ಕಾಗಿನ ಕಿತ್ತಾಟ ಮತ್ತು ಆಡಳಿತ ವ್ಯವಸ್ಥೆ ಹಳ್ಳ ಹಿಡಿದಿರುವುದು ಕಂಡು ಜನರೂ ಬೇಸತ್ತಿದ್ದಾರೆ. ಇಂಥ ಸನ್ನಿವೇಶ ಏರ್ಪಟ್ಟಲ್ಲಿ ಕುಮಾರಸ್ವಾಮಿ ಮಾತನ್ನು ತೆಗೆದುಹಾಕುವ ಸ್ಥಿತಿಯಲ್ಲಿ ಜನರೂ ಇರುವುದಿಲ್ಲ.
ಬಿಜೆಪಿಗೆ ಒಕ್ಕಲಿಗರ ವಿರೋಧಿ ಪಟ್ಟ
ಇನ್ನು ಬಿಜೆಪಿಯಿಂದ ಸರಕಾರ ಉರುಳಿಸಲು ನಿರಂತರವಾಗಿ ಆಪರೇಷನ್ ನಡೆಯುತ್ತಿದೆ. ಈ ತೊಡಕಿನ ಕಾರಣಕ್ಕೆ ಪರಿಣಾಮಕಾರಿಯಾದ ಆಡಳಿತ ನೀಡಲು ಸಾಧ್ಯವಾಗುತ್ತಿಲ್ಲ. ಕೇಂದ್ರದಿಂದ ಕೂಡ ಸರಿಯಾದ ಬೆಂಬಲ ದೊರೆಯುತ್ತಿಲ್ಲ. ದಿನಕ್ಕೊಂದು ಹೊಸ ಬಗೆಯಲ್ಲಿ ತೊಂದರೆ ಕೊಡುತ್ತಾ ಅಸಮಾಧಾನ ಬಗೆಹರಿಸುವುದಕ್ಕೇ ಹೆಚ್ಚಿನ ಸಮಯ ಹೋಗುತ್ತಿದೆ. ಇನ್ನು ಒಕ್ಕಲಿಗ ಸಮುದಾಯದ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಆಗಿರುವುದನ್ನು ಸಹಿಸಲು ಬಿಜೆಪಿಗೆ ಆಗುತ್ತಿಲ್ಲ. ಆ ಪಕ್ಷವು ಒಕ್ಕಲಿಗ ವಿರೋಧಿ ಎಂದು ಬಿಂಬಿಸಬಹುದು. ಇದು ಎಂಥ ಸನ್ನಿವೇಶ ಅಂದರೆ, ಈ ಹಿಂದೆ ಟ್ವೆಂಟಿ-ಟ್ವೆಂಟಿ ಸರಕಾರ ನಡೆಸಿದವಲ್ಲಾ ಬಿಜೆಪಿ-ಜೆಡಿಎಸ್, ಆಗ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡದ ಜೆಡಿಎಸ್ ವಿರುದ್ಧ ಪ್ರಚಾರ ಮಾಡಿದ್ದೇ ಲಿಂಗಾಯತವಿರೋಧಿ ಹಾಗೂ ವಚನಭ್ರಷ್ಟ ಎಂಬ ಆರೋಪದೊಂದಿಗೆ. ಈಗ ಜೆಡಿಎಸ್ ನಿಂದ 'ಒಕ್ಕಲಿಗರ ವಿರೋಧಿ' ಬಿಜೆಪಿ ಎಂದು ದೊಡ್ಡ ಮಟ್ಟದ ಹುಯಿಲೆಬ್ಬಿಸಬಹುದು.
ಲೋಕಸಭೆ ಚುನಾವಣೆಗೆ ಮುನ್ನವೇ ಬಿಎಸ್ ವೈಗೆ ಬಿಜೆಪಿ ಬೈ ಬೈ?
ಲಿಂಗಾಯತ ಸಮುದಾಯದವರ ಆಯ್ಕೆ ಯಾರಾಗಲಿದ್ದಾರೆ?
ಯಡಿಯೂರಪ್ಪ ವಿಫಲ ನಾಯಕ ಎಂದು ಸಾಬೀತು ಮಾಡುವುದಷ್ಟೇ ಕುಮಾರಸ್ವಾಮಿ ಅವರ ಜವಾಬ್ದಾರಿ. ಹೇಗಾದರೂ ಲೋಕಸಭೆ ಹಾಗೂ ಮುಂದಿನ ವಿಧಾನಸಭೆಯಲ್ಲಿ ಯಡಿಯೂರಪ್ಪ ಫ್ಯಾಕ್ಟರ್ ಕೆಲಸ ಮಾಡದಿದ್ದರೆ ಅಷ್ಟರ ಮಟ್ಟಿಗೆ ಕರ್ನಾಟಕದಲ್ಲಿ ಬಿಜೆಪಿಯ ಶಕ್ತಿ ಕುಂದುವಂತೆ ಆಗುತ್ತದೆ. ಇನ್ನು ಲಿಂಗಾಯತ- ವೀರಶೈವ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಲಿಂಗಾಯತರಿಗೆ ಕಾಂಗ್ರೆಸ್ ಮೇಲೆ ಸಿಟ್ಟಿದೆ. ಯಡಿಯೂರಪ್ಪನವರು ಬಿಜೆಪಿಯಲ್ಲಿ ಇಲ್ಲ ಎಂದಾಗ ಆ ಸಮುದಾಯದ ಆಯ್ಕೆ ಯಾವುದಾಗಲಿದೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೆಚ್ಚು ಆಲೋಚಿಸುವ ಅಗತ್ಯ ಇಲ್ಲ. ಹೇಗಿದ್ದರೂ ಇನ್ನೊಂದು ತಿಂಗಳಿಗೆ ರಾಜ್ಯ ಬಜೆಟ್ ಇದೆ. ಆ ವೇಳೆ ಲಿಂಗಾಯತ ಸಮುದಾಯದ ಓಲೈಕೆಗೆ ಬೇಕಾದ ಕೆಲವು ಘೋಷಣೆಗಳನ್ನು ಮಾಡಬಹುದು. ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ.
ಒಂದು ವೇಳೆ ಸಮ್ಮಿಶ್ರ ಸರಕಾರ ಬಿದ್ದರೆ ಶ್ರೇಯಸ್ಸು ಯಾರಿಗೆ ಸಲ್ಲಬೇಕು?
ಲೋಕಸಭೆ ಚುನಾವಣೆ ಫಲಿತಾಂಶ ಬರುವ ತನಕ ಕಾಯುವ ತಂತ್ರ
ಲೋಕಸಭೆ ಚುನಾವಣೆಯ ಫಲಿತಾಂಶದ ತನಕ ಕಾಯುವುದೇ ಸದ್ಯಕ್ಕೆ ಕುಮಾರಸ್ವಾಮಿ ತಂತ್ರವಾಗಿದೆ. ಒಂದು ವೇಳೆ ತೃತೀಯ ರಂಗ ಅಧಿಕಾರಕ್ಕೆ ಏರಿದರೂ ಅಥವಾ ಕಾಂಗ್ರೆಸ್ ನೇತೃತ್ವದಲ್ಲಿ ಸರಕಾರ ರಚನೆಯಾದರೂ ಯಾವ ಅವಕಾಶವನ್ನೂ ತಪ್ಪಿಸಿಕೊಳ್ಳಬಾರದು ಎಂಬುದು ಸದ್ಯಕ್ಕೆ ಅವರ ಲೆಕ್ಕಾಚಾರ. ಆ ಕಾರಣದಿಂದಲೇ ಮಮತಾ ಬ್ಯಾನರ್ಜಿ ಕೋಲ್ಕತ್ತಾದಲ್ಲಿ ಆಯೋಜಿಸಿದ್ದ ಬೃಹತ್ ಶಕ್ತಿ ಪ್ರದರ್ಶನದಲ್ಲಿ ಪಾಲ್ಗೊಂಡು, ಬಂದಿದ್ದಾರೆ. ತೃತೀಯ ರಂಗ ಅಂತಾದರೂ ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲ ಸೂಚಿಸುವ ಸಾಧ್ಯತೆ ಇದ್ದೇ ಇದೆ. ಇನ್ನು ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲೇನಾದರೂ ಜಯಿಸಿದರೆ ತೃತೀಯ ರಂಗದೊಳಗಿರುವ ಪಕ್ಷಗಳಲ್ಲೇ ಕೆಲವು ಕಾಂಗ್ರೆಸ್ ಜತೆ ಕೈ ಜೋಡಿಸಬಹುದು. ಅಂಥ ಸನ್ನಿವೇಶದಲ್ಲಿ ಕಾಂಗ್ರೆಸ್ ಜತೆಗೆ ಸರಕಾರ ಮಾಡುವುದು ಅಪಥ್ಯವೇನಲ್ಲ. ಒಂದು ವೇಳೆ ಬಿಜೆಪಿ ಅಧಿಕಾರ ಹಿಡಿದು, ರಾಜ್ಯದಲ್ಲೂ ಬಿಜೆಪಿ ಬಲಿಷ್ಠವಾಗಿ, ಕಾಂಗ್ರೆಸ್ ನೊಳಗಿನ ಅಸಮಾಧಾನ ಹೆಚ್ಚಾದರೆ ಏನು ಮಾಡಬೇಕು ಎಂದು ಅದಾಗಲೇ ಲೆಕ್ಕ ಹಾಕಿಟ್ಟಿದ್ದಾರೆ ಕುಮಾರಸ್ವಾಮಿ.