ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಶಾಸಕನ ಮಾತಿಗೆ ಕವಡೆ ಕಾಸು ಬೆಲೆಯಿಲ್ಲ
25ಕ್ಷೇತ್ರಕ್ಕೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆ ಮೂರು ಪಕ್ಷಗಳ ಪ್ರತಿಷ್ಠೆಯ ಕಣವಾಗಿ ದಿನದಿಂದ ದಿನಕ್ಕೆ ರಂಗೇರುತ್ತಿದೆ. ನಾಮಪತ್ರ ಸಲ್ಲಿಸಲು ಇಂದು (ನ 23) ಕೊನೆಯ ದಿನವಾಗಿದ್ದು, ಬಂಡಾಯವಾಗಿ ಯಾರು ಸ್ಪರ್ಧಿಸಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಮೂರೂ ಪಕ್ಷಗಳು ಕಣಕ್ಕಿಳಿಸಲಿರುವ ಅಭ್ಯರ್ಥಿಗಳನ್ನು ಅವಲೋಕಿಸಿದಾಗ ಕುಟುಂಬ ರಾಜಕಾರಣ ಯಾವುದೇ ಒಂದು ಪಾರ್ಟಿಗೆ ಸೀಮಿತವಾದಂತಿಲ್ಲ. ಈ ಪೈಕಿ ಕಾಂಗ್ರೆಸ್ ಇತರ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದಿದೆ.
ಲಖನ್ ಜಾರಕಿಹೊಳಿ ಟಿಕೆಟ್ ಕೈತಪ್ಪಿರುವ ಬಗ್ಗೆ ಗೊತ್ತಿಲ್ಲ ಎಂದ ಸತೀಶ್ ಜಾರಕಿಹೊಳಿ
ದ್ವಿಸದಸ್ಯತ್ವವನ್ನು ಹೊಂದಿರುವ ಜಿಲ್ಲೆಗಳ ಪೈಕಿ ಬೆಳಗಾವಿ ಕೂಡಾ ಒಂದು. ಇಲ್ಲಿ, ಕಾಂಗ್ರೆಸ್ಸಿನಿಂದ ಕಾಂಗ್ರೆಸ್ ನಾಯಕಿ/ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಕಣದಲ್ಲಿರುವುದರಿಂದ, ಜಿಲ್ಲೆಯ ಎರಡು ಕುಟುಂಬಗಳಿಗೆ ಈ ಚುನಾವಣೆ ಜಿದ್ದಿನ ಪ್ರಶ್ನೆಯಾಗಿದೆ.
"ಲಖನ್ ಜಾರಕಿಹೊಳೆಗೆ ಬಿಜೆಪಿ ಟಿಕೆಟ್ ಕೈತಪ್ಪಿದ ವಿಚಾರವು ಅವರ ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ. ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದು ಅವರಿಗೆ ಬಿಟ್ಟ ವಿಚಾರವಾಗಿದೆ. ನಾವು ನಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಿದ್ದೇವೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಲಖನ್ ಸಹೋದರರೂ ಆಗಿರುವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಉಳಿದೆಲ್ಲಾ ಜಿಲ್ಲೆಗಳಿಗಿಂತ ಬೆಳಗಾವಿ ರಂಗೇರಲು ಕಾರಣ, ಜಾರಕಿಹೊಳಿ ಕುಟುಂಬದ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿರುವುದು. ಭರ್ಜರಿ ಶಕ್ತಿ ಪ್ರದರ್ಶನದ ಮೂಲಕ ಲಖನ್ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.
ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ
ಬಿಜೆಪಿಯಿಂದ ಮಹಾಂತೇಶ ಕವಟಗಿಮಠ ಅಭ್ಯರ್ಥಿಯಾಗಿ ಘೋಷಣೆ
ಕಾಂಗ್ರೆಸ್ಸಿನಿಂದ ಚನ್ನರಾಜ.ಬಿ.ಹಟ್ಟಿಹೊಳೆ, ಬಿಜೆಪಿಯಿಂದ ಮಹಾಂತೇಶ ಕವಟಗಿಮಠ ಅಭ್ಯರ್ಥಿಯಾಗಿ ಘೋಷಣೆಯಾಗಿದೆ. ದ್ವಿಸದಸ್ಯತ್ವದ ಕ್ಷೇತ್ರವಾಗಿರುವುದರಿಂದ ಎರಡನೇ ಅಭ್ಯರ್ಥಿಯಾಗಿ ಸಹೋದರ ಲಖನ್ ಹೆಸರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭಾರೀ ಒತ್ತಡವನ್ನು ತಂದಿದ್ದರು. ಕೇಂದ್ರದಲ್ಲಿ ಮತ್ತು ರಾಜ್ಯದ ಪ್ರಮುಖ ಮುಖಂಡರನ್ನೂ ಈ ವಿಚಾರದಲ್ಲಿ ಜಾರಕಿಹೊಳಿ ಭೇಟಿಯಾಗಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿದ್ದ ಜಾರಕಿಹೊಳಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನೂ ಕನಿಷ್ಠ ಮೂರು ಬಾರಿ ಸಹೋದರನಿಗೆ ಟಿಕೆಟ್ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದರು. ಆದರೆ, ದ್ವಿಸದಸ್ಯತ್ವ ಇರುವ ಕ್ಷೇತ್ರದಲ್ಲಿ ಒಂದೇ ಟಿಕೆಟ್ ನೀಡಲು ಬಿಜೆಪಿಯ ಕೋರ್ ಕಮಿಟಿ ನಿರ್ಧರಿಸಿದ್ದರಿಂದ, ಲಖನ್ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿಲ್ಲ. ಹಾಗಾಗಿ, ಇಂದು ಸುಮಾರು ಹದಿನೈದು ಸಾವಿರ ಬೆಂಬಲಿಗರ ಮೂಲಕ ಮೆರವಣಿಗೆಯಲ್ಲಿ ತೆರಳಿ ಲಖನ್ ಜಾರಕಿಹೊಳಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಲಖನ್ ಜಾರಕಿಹೊಳಿ ಸ್ಪರ್ಧಿಸುವ ನಿರ್ಧಾರ, ಸಹೋದರ ರಮೇಶ್ ಜಾರಕಿಹೊಳಿ
ಲಖನ್ ಜಾರಕಿಹೊಳಿ ಸ್ಪರ್ಧಿಸುವ ನಿರ್ಧಾರ, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತಲೆಬಿಸಿ ಮಾಡಿದೆ. ಬೆಳಗಾವಿ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಜಾರಕಿಹೊಳಿ ಕುಟುಂಬ, ಯಾವ ಪಕ್ಷದ ಅಭ್ಯರ್ಥಿಯ ಮತವನ್ನು ಸೆಳೆಯಲಿದ್ದಾರೆ ಎನ್ನುವುದು ಒಂದು ಕಡೆಯಾದರೆ, ಗೆದ್ದರೆ ಯಾವ ಪಕ್ಷಕ್ಕೆ ಲಖನ್ ಬೆಂಬಲ ಸೂಚಿಸಲಿದ್ದಾರೆ ಎನ್ನುವುದು ಇನ್ನೊಂದು ಕಡೆ. "ಸಹೋದರನ ವಿಜಯಕ್ಕೆ ಶತಪ್ರಯತ್ನ ನಡೆಸುತ್ತೇನೆ, ಯಾವ ಕಾರಣಕ್ಕಾಗಿ ಬಿಜೆಪಿಯಿಂದ ಟಿಕೆಟ್ ಸಿಗಲಿಲ್ಲ ಎನ್ನುವುದು ಗೊತ್ತಿಲ್ಲ" ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಮಾತಿಗೆ ಸದ್ಯ ಬಿಜೆಪಿಯಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ
ಯಡಿಯೂರಪ್ಪ ನೇತೃತ್ವದ ಸರಕಾರ ಬರಲು ಮಹತ್ವದ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿ ಆಯಕಟ್ಟಿನ ಜಲಸಂಪನ್ಮೂಲ ಖಾತೆಯನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಬಿಜೆಪಿ ಅಧಿಕಾರಕ್ಕೆ ಬರುವಾಗ ರಾಜಕೀಯದ ಉತ್ತುಂಗಕ್ಕೆ ಏರಿದ್ದ ಜಾರಕಿಹೊಳಿ, ಅಶ್ಲೀಲ ಸಿಡಿ ಪ್ರಕರಣದಲ್ಲಿ ಅಷ್ಟೇ ಪತನವನ್ನು ಕಂಡಿದ್ದರು. ಸರಕಾರ ಯಾವಾಗ ಬೇಕಾದರೂ ಉರುಳಿಸಬಲ್ಲೆ ಎಂದು ಹೇಳುತ್ತಿದ್ದ ರಮೇಶ್ ಜಾರಕಿಹೊಳಿ ಮಾತಿಗೆ ಸದ್ಯ ಬಿಜೆಪಿಯಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಎನ್ನುವುದು ರುಜುವಾತಾಗಿದೆ.
Recommended Video