ಚುನಾವಣೆಗೆ ಮಾಡಿದ ಸಿದ್ಧತೆಯೆಲ್ಲ ಈಗ ನೀರಲ್ಲಿ ಮಾಡಿದ ಹೋಮ
ಬೆಂಗಳೂರು, ಸೆಪ್ಟೆಂಬರ್ 26: ಶಾಸಕರ ಅನರ್ಹತೆಯಿಂದ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಸೆ. 21ರಂದು ಚುನಾವಣಾ ಆಯೋಗ ಘೋಷಣೆ ಮಾಡಿದ ಕೂಡಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿತ್ತು. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ಪ್ರಮುಖ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಚುರುಕಾಗಿದ್ದವು. ಆದರೆ ಚುನಾವಣೋತ್ಸಾಹಕ್ಕೆ ಸುಪ್ರೀಂಕೋರ್ಟ್ ಆದೇಶ ತಣ್ಣೀರು ಸುರಿದಿದೆ. ಚುನಾವಣೆ ಎಂಬುದು ಸಂಕಟವಾಗಿದ್ದ ಹಲವರಿಗೆ ನೆಮ್ಮದಿ ಸಿಕ್ಕಿದೆ.
ಅಕ್ಟೋಬರ್ 21ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿತ್ತು. ಅ. 24ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಚುನಾವಣಾ ಆಯೋಗ ಪ್ರಕಟಿಸಿತ್ತು. ಸೆ. 30ರ ಒಳಗೆ ನಾಮಪತ್ರ ಸಲ್ಲಿಕೆಯಾಗಬೇಕಿತ್ತು. ಅಷ್ಟರೊಳಗೆ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಮಾಡಿ ಬಂಡಾಯ ಶಮನಗೊಳಿಸಿ ಗೆಲ್ಲಿಸುವುದು ಸವಾಲಾಗಿತ್ತು.
ಚುನಾವಣೆಯ ಘೋಷಣೆ ಅನರ್ಹ ಶಾಸಕರಿಗೆ ಮತ್ತು ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಬಿಜೆಪಿಗೆ ಒಂದು ರೀತಿಯಲ್ಲಿ ನಿರಾಳತೆ ನೀಡಿದರೂ ಅದು ತಾತ್ಕಾಲಿಕ ಮಾತ್ರ.

ಬಿಜೆಪಿಗೆ ಹೆಚ್ಚು ನೆಮ್ಮದಿ
ಉಪ ಚುನಾವಣೆ ಎಲ್ಲ ರಾಜಕೀಯ ಪಕ್ಷಗಳಿಗೂ ಹೊರೆಯಾಗಿದ್ದರೂ, ಶಾಸಕರು ರಾಜೀನಾಮೆ ನೀಡುವಂತೆ 'ಆಮಿಷ' ಒಡ್ಡಿದ ಕಳಂಕ ಹೊತ್ತಿರುವ ಬಿಜೆಪಿಗೆ ಸಮ್ಮಿಶ್ರ ಸರ್ಕಾರದ ಪತನದ ಬಳಿಕ ರಚಿಸಿದ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಈ ಚುನಾವಣೆಯಲ್ಲಿ ಗೆಲುವು ಅನಿವಾರ್ಯವಾಗಿತ್ತು. ಹಾಗೆಯೇ ಚುನಾವಣೆ ನಡೆಯದಿದ್ದರೇ ಸರ್ಕಾರ ಹೆಚ್ಚು ಸುರಕ್ಷಿತ ಎಂಬ ಸ್ಥಿತಿ ಇತ್ತು. ಸದ್ಯದ ಪರಿಸ್ಥಿತಿಯಲ್ಲಿ ಸುಪ್ರೀಂಕೋರ್ಟ್ ತೀರ್ಪು ಬಿಜೆಪಿಗೆ ಹೆಚ್ಚು ನೆಮ್ಮದಿ ನೀಡಿದೆ.

ಚುನಾವಣೆಗೆ ತಯಾರಿ
ಇನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಚುನಾವಣೆಯನ್ನು ಎದುರಿಸುವ ಮೂಡ್ನಲ್ಲಿಲ್ಲ. ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ರಚನೆಯಾದ ಬಿಜೆಪಿ ಸರ್ಕಾರವನ್ನು ಉರುಳಿಸುವುದು ಮತ್ತು ಮುಖ್ಯವಾಗಿ ಪಕ್ಷಕ್ಕೆ ದ್ರೋಹ ಎಸಗಿದ ಶಾಸಕರಿಗೆ ತಕ್ಕಪಾಠ ಕಲಿಸುವುದೇ ಈ ಪಕ್ಷಗಳ ಪ್ರಮುಖ ಗುರಿ. ಆ ನಿಟ್ಟಿನಲ್ಲಿಯೇ ಉಭಯ ಪಕ್ಷಗಳು ಕೂಡ ತಯಾರಿ ನಡೆಸಿದ್ದವು. ಈ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಹಾಕುವ ಮೂಲಕ ಅವರನ್ನು ಗೆಲ್ಲಿಸಿ ಅನರ್ಹ ಶಾಸಕರಿಗೆ ಮುಖಭಂಗ ಉಂಟುಮಾಡುವುದು ಅವರ ಉದ್ದೇಶವಾಗಿತ್ತು. ಅದಕ್ಕೀಗ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

ಉತ್ತರ ಕರ್ನಾಟಕದ ಪ್ರವಾಹವೇ ಮುಳುಗು
ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಭಾರಿ ಹಾನಿಯಾಗಿರುವ ಸಂದರ್ಭದಲ್ಲಿ ಚುನಾವಣೆ ಎದುರಾಗಿದ್ದು ಬಿಜೆಪಿ ಸರ್ಕಾರಕ್ಕೆ ತಲೆನೋವಾಗಿತ್ತು. ಏಕೆಂದರೆ ಅನರ್ಹ ಶಾಸಕರು ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯವೇಳಲು ಮೂಲ ಕೇಂದ್ರವೇ ಉತ್ತರ ಕರ್ನಾಟಕ. ಬೆಳಗಾವಿ ಜಿಲ್ಲೆಯೇ ಇದರ ಕೇಂದ್ರಬಿಂದು. ಜತೆಗೆ ಬಿಜೆಪಿಗೆ ಹೆಚ್ಚಿನ ಶಾಸಕರನ್ನು ಉತ್ತರ ಕರ್ನಾಟಕ ನೀಡಿದೆ. ಆದರೆ, ಪ್ರವಾಹ ಪರಿಹಾರಕ್ಕೆ ಕೇಂದ್ರ ಸರ್ಕಾರದಿಂದ ಹಣ ಸಿಗದೆ ಇರುವುದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಬಂಡಾಯ, ಪ್ರವಾಹಗಳು ಬಿಜೆಪಿಗೆ ಹಿನ್ನಡೆಯುಂಟುಮಾಡುವ ಸಾಧ್ಯತೆ ಇತ್ತು.

ಕಾಂಗ್ರೆಸ್ ಸಭೆಯಲ್ಲಿ ಅಸಮಾಧಾನ ಸ್ಫೋಟ
ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಸ್ಪರ್ಧಾಕಾಂಕ್ಷಿಗಳು ಅದಕ್ಕೆ ಅಖಾಡ ಸಿದ್ಧಪಡಿಸಲು ಆರಂಭಿಸಿದ್ದರು. ಸೆ. 30 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದರಿಂದ ತರಾತುರಿಯ ತಯಾರಿ ನಡೆದಿತ್ತು. ಪಕ್ಷಗಳು ಅಭ್ಯರ್ಥಿಗಳ ಆಯ್ಕೆಗೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದ್ದವು. ಗುರುವಾರ ಕಾಂಗ್ರೆಸ್ನಲ್ಲಿ ನಡೆದ ನಾಯಕರ ಸಭೆಯಲ್ಲಿ ಪ್ರಮುಖ ಮುಖಂಡರ ನಡುವಿನ ವೈಮನಸ್ಸು ಸ್ಫೋಟಗೊಂಡಿತ್ತು. ಅದು ಇನ್ನೊಂದು ಹಂತಕ್ಕೆ ತಲುಪುವ ಮೊದಲೇ ಚುನಾವಣೆಗೆ ತಡೆ ಬಿದ್ದಿದೆ.

ನಾಮಪತ್ರ ಸಲ್ಲಿಕೆ
ಉಪ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಕೆ ಆರಂಭವಾದ ಮೊದಲ ದಿನವೇ ಹುಣಸೂರು ಕ್ಷೇತ್ರದಲ್ಲಿ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಹತ್ತು ಮಂದಿ ನಾಮಪತ್ರ ಸಲ್ಲಿಸಿದ್ದರು. ಆದರೆ ಯಾವುದೇ ಪ್ರಮುಖ ಪಕ್ಷಗಳೂ ಈ 15 ಕ್ಷೇತ್ರಗಳಿಗೂ ತಮ್ಮ ಅಭ್ಯರ್ಥಿಯನ್ನು ಅಧಿಕೃತವಾಗಿ ಪ್ರಕಟಿಸಿರಲಿಲ್ಲ.

ಬಿಜೆಪಿ ಮುಟ್ಟಿದ್ದ ಬಂಡಾಯದ ಬಿಸಿ
2018ರಲ್ಲಿ ವಿಧಾನಸಭೆ ಚುನಾವಣೆ ನಡೆದಾಗಿನಿಂದಲೂ ರಾಜ್ಯ ರಾಜಕೀಯ ನಿರಂತರ ಬಂಡಾಯಗಳಿಗೆ ಸಾಕ್ಷಿಯಾಗುತ್ತಿದೆ. ಚುನಾವಣಾ ಪೂರ್ವ ಟಿಕೆಟ್ ಸಿಗದ ಬಂಡಾಯದ ಬಳಿಕ ಸಮ್ಮಿಶ್ರ ಸರ್ಕಾರದೊಳಗೆ ಆರಂಭದಿಂದಲೇ ಶುರುವಾದ ಬಂಡಾಯದ ಸದ್ದು ಅದು ಸಂಪೂರ್ಣ ಉರುಳುವವರೆಗೂ ಅಡಗಿರಲಿಲ್ಲ.
ಈಗ ಆ ಬಂಡಾಯದ ಬಿಸಿ ಬಿಜೆಪಿ ಸರ್ಕಾರಕ್ಕೆ ತಟ್ಟಿತ್ತು. ಇಷ್ಟು ದಿನ ತಮ್ಮ ವಿರುದ್ಧವೇ ಮಾತನಾಡಿ, ಸ್ಪರ್ಧಿಸಿ ಗೆದ್ದಿದ್ದ ಅನರ್ಹ ಶಾಸಕರು ಅಥವಾ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡುವುದಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ನೀಡುವುದಕ್ಕೆ ವಿರೋಧಿಸಿದ್ದ ಶರತ್ ಬಚ್ಚೇಗೌಡ ಬಂಡಾಯದ ಕಹಳೆ ಮೊಳಗಿಸಿದ್ದರು. ಕೆಆರ್ ಪುರದಲ್ಲಿ ಬೈರತಿ ಬಸವರಾಜ್ ಅವರಿಗೆ ಮಣೆ ಹಾಕುವುದರ ವಿರುದ್ಧ ನಂದೀಶ್ ರೆಡ್ಡಿ ತೊಡೆತಟ್ಟಿದ್ದರು.

ಇದು ತಾತ್ಕಾಲಿಕ ನೆಮ್ಮದಿ
ಸುಪ್ರೀಂಕೋರ್ಟ್ ನಿರ್ಧಾರ ಅನರ್ಹ ಶಾಸಕರು ಮತ್ತು ಬಿಜೆಪಿಗೆ ಮಾತ್ರವಲ್ಲದೆ, ಚುನಾವಣೆಯ ಸಿದ್ಧತೆ ನಡೆಸಿದ್ದ ಇತರೆ ಪಕ್ಷಗಳಿಗೂ ತುಸು ನಿರಾಳತೆ ನೀಡಿದೆ. ಹಾಗೆಂದು ಇದೇ ಅಂತಿಮವಲ್ಲ. ಸುಪ್ರೀಂಕೋರ್ಟ್ನಿಂದ ಸಿಕ್ಕಿರುವುದು ತಾತ್ಕಾಲಿಕ ತಡೆಯಷ್ಟೇ. ಅ. 22ರಂದು ಅನರ್ಹ ಶಾಸಕರ ಅರ್ಜಿ ಮತ್ತೆ ವಿಚಾರಣೆಗೆ ಬರಲಿದೆ. ಬಳಿಕ ಅವರ ಪರವಾಗಿ ತೀರ್ಪು ಬರಲಿದೆಯೋ ಅಥವಾ ವಿರುದ್ಧವಾಗಿ ತೀರ್ಪು ಬರಲಿದೆಯೋ ಎಂಬುದರ ಮೇಲೆ ರಾಜ್ಯ ರಾಜಕಾರಣದ ಭವಿಷ್ಯ ನಿರ್ಧಾರವಾಗಲಿದೆ.
-
ಮಾರ್ಚ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ -
SSLC Hindi Exam: ಮಾರ್ಚ್ 30ರ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆಗೆ ಹೊಸ ಸಮಸ್ಯೆ: ಪರೀಕ್ಷಾ ಮಂಡಳಿ ಹೇಳಿದ್ದೇನು -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ









Click it and Unblock the Notifications