Karnataka Assembly Election 2023: ಚಾಮರಾಜನಗರ ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು
ಚುನಾವಣೆಗೆ ಇನ್ನೇನು ಕೆಲವು ತಿಂಗಳುಗಳು ಬಾಕಿ ಉಳಿದಿದ್ದು ಕಾಂಗ್ರೆಸ್, ಬಿಜೆಪಿ ಟಿಕೆಟ್ ಪಡೆಯಲು ಆಕಾಂಕ್ಷಿಗಳ ಸರತಿ ಸಾಲೇ ನಿರ್ಮಾಣವಾಗಿದೆ. ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಿದ್ದು, ಹೈಕಮಾಂಡ್ ನಾಯಕರು ಯಾರತ್ತ ಒಲವು ತೋರಲಿದ್ದಾರೆ ಎನ್ನುವುದು ಕಾದು ನೋಡಬೇಕಿದೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದು ಕಳೆದ ಮೂರು ಅವಧಿಯಿಂದ ಕೈ ಶಾಸಕ ಸಿ.ಪುಟ್ಟರಂಗಶೆಟ್ಟಿ ಇಲ್ಲಿ ಶಾಸಕರಾಗಿದ್ದು ಬೇರೆ ಪಕ್ಷಗಳು ಬೇಧಿಸದ ಚಕ್ರವ್ಯೂಹ ನಿರ್ಮಿಸಿಕೊಂಡಿದ್ದಾರೆ.
Karnataka Assembly Elections 2023: ಬೆಂಗಳೂರು ಕೇಂದ್ರದ ಟಿಕೆಟ್ ಆಕಾಂಕ್ಷಿಗಳು
ಜನರಿಗೆ ಸುಲಭವಾಗಿ ಸಿಗುವುದು, ತುರ್ತು ಸ್ಪಂದನೆ, ನಿತ್ಯ ಕ್ಷೇತ್ರದಲ್ಲಿ ಓಡಾಟ, ಎಲ್ಲಾ ವರ್ಗದವರ ಜೊತೆ ವಿಶ್ವಾಸ ಇಟ್ಟುಕೊಂಡಿರುವುದು ಜೊತೆಗೆ ಉಪ್ಪಾರ, ದಲಿತ ಮತಗಳ ಬುಟ್ಟಿ ಇವರಿಗಿರುವುದು ಪ್ಲಸ್ ಪಾಯಿಂಟಾಗಿದ್ದು ಕ್ಷೇತ್ರದಲ್ಲಿ ಹ್ಯಾಟ್ರಿಕ್ ಬಾರಿಸಿರುವ ಮೊದಲ ಶಾಸಕ ಎನಿಸಿಕೊಂಡಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ವಿಧಾನಸಭಾ ಕ್ಷೇತ್ರದಿಂದ ಯಾರ್ಯಾರು ಟಿಕೆಟ್ ಬಯಸಿದ್ದಾರೆ ಎನ್ನುವ ಮಾಹಿತಿಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:
ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು
ಬದಲಾದ ಸನ್ನಿವೇಶದಲ್ಲಿ ದಲಿತ ಮುಖಂಡರ ಅಸಮಾಧಾನ, ಬಿಜೆಪಿ ಪರ ಅಲೆ ಹಾಗೂ ಸಂಘಟನೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಮೈಸೂರು ಜಿಲ್ಲೆಗೆ ಹೆಚ್ಚು ಒಲುವು ತೋರಿರುವುದು ಧನಾತ್ಮಕ ಅಂಶಗಳು. ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಚಾಮರಾಜನಗರದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಗುಲ್ಲಿದ್ದು ಒಂದು ವೇಳೆ ನಿಜವಾದರೆ ಪುಟ್ಟರಂಗಶೆಟ್ಟರ ಗೆಲುವಿನ ಓಟಕ್ಕೆ ತೊಡಕಾಗಿ ಪರಿಣಮಿಸಬಹುದು.
ಕಾಂಗ್ರೆಸ್ನಿಂದ ಹಾಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಇರುವುದರಿಂದ ಬೇರೆ ಆಕಾಂಕ್ಷಿಗಳಿಲ್ಲ ಆದರೆ ಬಿಜೆಪಿಯಲ್ಲಿ ಸರತಿ ಸಾಲೇ ಇದೆ. ನಾಯಕ ಸಮುದಾಯದ ಮುಖಂಡ ಎಂ.ರಾಮಚಂದ್ರು ಬಿಜೆಪಿ ಟಿಕೆಟ್ನ ಪ್ರಬಲ ಆಕಾಂಕ್ಷಿ. ಉಳಿದಂತೆ, ಜಿಪಂ ಮಾಜಿ ಅಧ್ಯಕ್ಷೆ, ಮಾಜಿ ಶಾಸಕ ಗುರುಸ್ವಾಮಿ ಪುತ್ರಿ ನಾಗಶ್ರೀ ಪ್ರತಾಪ್, ಕಾಡಾ ಅಧ್ಯಕ್ಷ ನಿಜಗುಣರಾಜು ಟಿಕೆಟ್ ಆಕಾಂಕ್ಷಿಗಳು.
ಈ ಬಾರಿ ಎಸ್ಟಿಪಿಐ ಸ್ಪರ್ಧಿಸಿದರೆ ಗಾಳಿಪುರ ಮಹೇಶ್ ಇಲ್ಲವೇ, ಅಬ್ರಾರ್ ಅಹ್ಮದ್ ಸ್ಪರ್ಧಿಗಳಾಗಬಹುದು. ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್, ಜೆಡಿಎಸ್ ನಿಂದ ಸೈಯದ್ ಅಕ್ರಂ ಸ್ಪರ್ಧಿಸುವುದು ಬಹುತೇಕ ನಿಗೂಢವಾಗಿದೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು
ಹಿಂದೆಂದಿಗಿಂತ ಈ ಬಾರಿ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಿದ್ದು ಕಾರ್ಯಕರ್ತರ ನಡುವೆಯೇ ಜಿದ್ದಾಜಿದ್ದಿ ಏರ್ಪಟ್ಟಿದೆ. ಕುಟುಂಬ ಹಾಗೂ ಪಕ್ಷದ ಪರ ಅಭಿಮಾನಿಗಳು ಇಲ್ಲಿನ ವಿಶೇಷ. ಬಿಜೆಪಿಯಿಂದ ಸಿ.ಎಸ್.ನಿರಂಜನಕುಮಾರ್ ಶಾಸಕರಾಗಿದ್ದು ಕಾಂಗ್ರೆಸ್ನಿಂದ ಗಣೇಶ್ ಪ್ರಸಾದ್ ಮತ್ತು ಹಂಗಳ ನಂಜಪ್ಪ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಲಿಂಗಾಯತ ಸಮುದಾಯ ಇಲ್ಲಿನ ನಿರ್ಣಾಯಕವಾಗಿದ್ದು ಕಮಲ ಹಾಗೂ ಕಾಂಗ್ರೆಸ್ ನ ಎರಡೂ ಅಭ್ಯರ್ಥಿಗಳು ಲಿಂಗಾಯತ ಸಮುದಾಯವರೇ ಆದ್ದರಿಂದ ಬಿರುಸಿನ ಸ್ಪರ್ಧೆ ಇರಲಿದೆ. ಜೆಡಿಎಸ್ ನಿಂದ ಕಡಬೂರು ಮಂಜುನಾಥ್ ಘೋಷಿತ ಅಭ್ಯರ್ಥಿಯಾಗಿದ್ದು ಇವರು ಲಿಂಗಾಯತ ಸಮುದಾಯದವರಾಗಿದ್ದಾರೆ.
ಲಿಂಗಾಯತ ಸಮುದಾಯದ ಜೊತೆ ದಲಿತರು, ನಾಯಕ ಸಮುದಾಯ ಕೈ ಹಿಡಿಯುವ ಪಕ್ಷಧ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮಾತ್ರ ನೇರ ಹಣಾಹಣಿ ಇರಲಿದ್ದು ತ್ರಿಕೋನ ಸ್ಪರ್ಧೆ ಇರಲಾರದು ಎಂಬುದು ಸದ್ಯದ ವಾತಾವರಣ.
ಹನೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು
ಹನೂರು ಕ್ಷೇತ್ರ ವಿಶಿಷ್ಟ ಕ್ಷೇತ್ರವಾಗಿದ್ದು ಇಲ್ಲಿಯವರೆಗೆ ದಿ. ನಾಗಪ್ಪ ಹಾಗೂ ದಿ.ರಾಜೂಗೌಡ ಅವರ ಕುಟುಂಬದ ನಡುವೆಯೇ ಅಧಿಕಾರ ಹಂಚಿಕೆಯಾಗಿ ಬರುತ್ತಿದೆ. ಕಳೆದ ಮೂರು ಅವಧಿಯಿಂದ ರಾಜೂಗೌಡರ ಮಗ ಆರ್.ನರೇಂದ್ರ ಕೈ ಪಾರ್ಟಿಯಿಂದ ಆರಿಸಿ ಬರುತ್ತಿದ್ದು ಕಳೆದ ಚುನಾವಣೆಯಿಂದ ಜೆಡಿಎಸ್ ಭದ್ರವಾಗಿ ನೆಲೆಯೂರುತ್ತಿದೆ.
ನಾಗಪ್ಪ ಅವರ ಕುಟುಂಬಕ್ಕೆ ಸಿಗುತ್ತಿದ್ದ ಬಿಜೆಪಿ ಟಿಕೆಟ್ ಗೆ ಈ ಬಾರಿ ಅಕಾಂಕ್ಷಿಗಳ ದಂಡೇ ನಿರ್ಮಾಣವಾಗಿದೆ. ಮಾನಸ ಶಿಕ್ಷಣ ಸಂಸ್ಥೆ ರೂವಾರಿ ದತ್ತೇಶ್ ಕುಮಾರ್, ಬಿಜೆಪಿ ಒಬಿಸಿ ಮುಖಂಡ ಜನಧ್ವನಿ ವೆಂಕಟೇಶ್, ಇತ್ತೀಚೆಗೆ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಿಶಾಂತ್ ಹಾಗೂ ನಾಗಪ್ಪ ಅವರ ಮಗ ಡಾ.ನಿಶಾಂತ್ ಬಿಜೆಪಿ ಟಿಕೆಟ್ನ ಪ್ರಬಲ ಆಕಾಂಕ್ಷಿಗಳು.
ಇಲ್ಲಿ ಜೆಡಿಎಸ್ ಈಗಾಗಲೇ ಅಭ್ಯರ್ಥಿಯಾಗಿ ಮಂಜುನಾಥ್ ಅವರನ್ನು ಘೋಷಿಸಿದೆ, ಕಾಂಗ್ರೆಸ್ ನ ಹಾಲಿ ಶಾಸಕ ಆರ್.ನರೇಂದ್ರ ಕೈ ಅಭ್ಯರ್ಥಿ ಆಗಲಿದ್ದು ಕಮಲ ಕಲಿ ಯಾರಾಗುವರು ಎಂಬುದೇ ಪ್ರಶ್ನೆಯಾಗಿದೆ. ಹನೂರಿನಲ್ಲಿ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ನಡೆಯುವ ವಾತಾವರಣ ಇದೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿರುವ ಕೊಳ್ಳೇಗಾಲದಲ್ಲಿ ರಣಕಣ ಜೋರಾಗಿಯೇ ಇದೆ. ಬಿಎಸ್ಪಿಯಿಂದ ಬಿಜೆಪಿಗೆ ಬಂದಿರುವ ಹಾಲಿ ಶಾಸಕ ಎನ್.ಮಹೇಶ್, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಶ್ರೀನಿವಾಸಪ್ರಸಾದ್ ಅಳಿಯ ಡಾ.ಮೋಹನ್ ಕುಮಾರ್ ಬಿಜೆಪಿ ಟಿಕೆಟ್ನ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಕಾಂಗ್ರೆಸ್ನಿಂದ ಮಾಜಿ ಶಾಸಕರುಗಳಾದ ಎ.ಆರ್.ಕೃಷ್ಣಮೂರ್ತಿ, ಬಾಲರಾಜು, ಜಯಣ್ಣ ಆಕಾಂಕ್ಷಿಗಳಾಗಿದ್ದು ಟಿಕೆಟ್ಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಬಿಎಸ್ಪಿ ಉತ್ತಮವಾಗಿ ಸಂಘಟನೆಯಾಗಿದ್ದ ಈ ಕ್ಷೇತ್ರದಲ್ಲಿ ಮಹೇಶ್ ಹೊರನಡೆದ ಬಳಿಕ ಬಿಎಸ್ಪಿ ಹೊಸ ನಾಯಕನ ಉದಯಕ್ಕೆ ಕ್ಷೇತ್ರದಲ್ಲಿ ಸಾಕಾಷ್ಟು ಕೆಲಸ ಮಾಡುತ್ತಿದೆ.
ಇನ್ಸ್ಪೆಕ್ಟರ್ ನೌಕರಿಗೆ ರಾಜೀನಾಮೆ ಕೊಟ್ಟಿರುವ ಬಿ.ಪುಟ್ಟಸ್ವಾಮಿ ಜೆಡಿಎಸ್ ನಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದ್ದು, ತಮ್ಮ ಸಾಮಾಜಿಕ ಕಾರ್ಯಗಳಿಂದ ಬಿ.ಪುಟ್ಟಸ್ವಾಮಿ ಕ್ಷೇತ್ರದಲ್ಲಿ ತಮ್ಮ ಹಿಡಿತ ಸಾಧಿಸಿದ್ದಾರೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಎಸ್ಪಿ ನಡುವೆಯೂ ಇಲ್ಲಿ ಮತ ಯುದ್ಧವಾಗುವ ನಿರೀಕ್ಷೆ ಇದೆ.