Karnataka 7th Pay Commission; ಸರ್ಕಾರಿ ನೌಕರರು ನೀಡಿರುವ ಉತ್ತರಗಳು
7ನೇ ರಾಜ್ಯ ವೇತನ ಆಯೋಗದ ಪ್ರಶ್ನಾವಳಿಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘ ನೀಡಿರುವ ಉತ್ತರಗಳು ಹೀಗಿವೆ. ರಾಜ್ಯ ಸರ್ಕಾರಿ ನೌಕರರ ಸಂಘದ ಬೇಡಿಕೆಯಂತೆ ಹಣಕಾಸು ಸಚಿವ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕ ರಾಜ್ಯ 7ನೇ ವೇತನ ಆಯೋಗ ರಚನೆ ಮಾಡಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಬೇಡಿಕೆಯಂತೆ ಹಣಕಾಸು ಸಚಿವ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕ ರಾಜ್ಯ 7ನೇ ವೇತನ ಆಯೋಗ ರಚನೆ ಮಾಡಿದ್ದರು. ರಾಜ್ಯದಲ್ಲಿ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆಯಾಗಲಿದೆ. ಇದಕ್ಕೂ ಮೊದಲು ಆಯೋಗ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡುವ ನಿರೀಕ್ಷೆ ಇದೆ.
ಸರ್ಕಾರಿ ನೌಕರರು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳ ವೇತನ, ತುಟ್ಟಿಭತ್ಯೆ ಹಾಗೂ ಇತರ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ, ಪರಿಷ್ಕರಿಸಿ ಸರ್ಕಾರಕ್ಕೆ ವರದಿ ನೀಡಲು 7ನೇ ರಾಜ್ಯ ವೇತನ ಆಯೋಗವನ್ನು ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ.
ಆಯೋಗ ಸಾರ್ವಜನಿಕರು, ಸೇವಾ ಸಂಘಗಳು ಹಾಗೂ ಸರ್ಕಾರಿ ನೌಕರರು ಅಲ್ಲದೇ, ಇಲಾಖೆಗಳಿಂದ, ಸಂಸ್ಥೆಗಳಿಂದ ಮಾಹಿತಿ ಹಾಗೂ ಮುಕ್ತ ಸಲಹೆಗಳನ್ನು ಪಡೆಯುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನಾವಳಿಗಳನ್ನು ತಯಾರು ಮಾಡಿತ್ತು. ಇದರಲ್ಲಿ ವೇತನ, ಬಡ್ತಿ, ಭತ್ಯೆ, ಮನೆ ಬಾಡಿಗೆ ಭತ್ಯೆ, ರಜಾ ದಿನಗಳು, ಪಿಂಚಣಿ, ಸಮಾನ ಕೆಲಸಕ್ಕೆ ಸಮಾನ ವೇತನ, ಆಡಳಿತಾತ್ಮಕ ವೆಚ್ಚಗಳಿಗೆ ಕಡಿವಾಣ ಸೇರಿದಂತೆ ಹಲವು ಅಂಶಗಳಿತ್ತು.
7ನೇ ರಾಜ್ಯ ವೇತನ ಆಯೋಗದ ಪ್ರಶ್ನಾವಳಿಗಳಿಗೆ ಫೆಬ್ರವರಿ 10ರ ತನಕ ಉತ್ತರ ನೀಡಲು ಅವಕಾಶವಿತ್ತು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ವೇತನ ಆಯೋಗದ ಪ್ರಶ್ನಾವಳಿಗಳಿಗೆ ನೀಡಿದ ಉತ್ತರ ಹೀಗಿದೆ. ಈ ಉತ್ತರಗಳನ್ನು ಪರಿಶೀಲನೆ ಮಾಡಿಕೊಂಡು ವೇತನ ಆಯೋಗ ತನ್ನ ವರದಿಯನ್ನು ಸಿದ್ಧಪಡಿಸಲಿದೆ.

ವೇತನ ಶ್ರೇಣಿಗಳ ಮಾನದಂಡಗಳು
ಸಮಾನ ಕೆಲಸಕ್ಕೆ ಸಮಾನ ವೇತನ ಪರಿಶೀಲನೆ ವೇಳೆ ವಿದ್ಯಾರ್ಹತೆ, ಜವಾಬ್ದಾರಿಯ ಗುಣಮಟ್ಟ, ಕಾರ್ಯಕ್ಷಮತೆ, ಕಾರ್ಯಕ್ಷೇತ್ರದ ವ್ಯಾಪ್ತಿ ಜೊತೆಗೆ ನೆರೆ ರಾಜ್ಯ ಮತ್ತು ಕೇಂದ್ರ ವೇತನ ಮತ್ತು ಭತ್ಯೆಗಳ ಹೋಲಿಕೆ ಮಾಡುವುದು.
ಕಚೇರಿ ವೇಳೆಯನ್ನು ಹೆಚ್ಚಿಸಿ, ವಾರದ ಕರ್ತವ್ಯ ದಿನಗಳನ್ನು ಕಡಿಮೆ ಮಾಡುವ ಬಗ್ಗೆ. ಸರ್ಕಾರಕ್ಕೆ ಸಾರಿಗೆ, ವಿದ್ಯುತ್, ನೀರು, ಟ್ರಾಫಿಕ್, ಸರ್ಕಾರಿ ವಾಹನಗಳ ಇಂಧನ ಹಾಗೂ ನಿರ್ವಹಣೆ ವೆಚ್ಚದಲ್ಲಿ ಆರ್ಥಿಕ ಮಿತವ್ಯಯ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಿ ನೌಕರರಿಗಿರುವಂತೆ ಬೆಳಗ್ಗೆ 10.00 ಕ್ಕೆ ಬದಲಾಗಿ ಬೆಳಗ್ಗೆ 9.30ರಿಂದ ಹಾಗೂ ಸಂಜೆ 5.30ಕ್ಕೆ ಬದಲಾಗಿ ಸಂಜೆ 6.00 ರವರೆಗೆ ಬದಲಾಯಿಸುವುದು. ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಸಾರ್ವತ್ರಿಕ ರಜೆ ನೀಡುವುದು.

ಅನಗತ್ಯ ವೆಚ್ಚಗಳಿಗೆ ಕಡಿವಾಣ
ರಾಜ್ಯ ಸರ್ಕಾರಿ ನೌಕರರ ಸಂಘ ಆಡಳಿತದಲ್ಲಿ ತಂತ್ರಜ್ಞಾನವನ್ನು ಹೆಚ್ಚಿಸುವುದು. ನೌಕರರಲ್ಲಿ ದಕ್ಷತೆ ಮತ್ತು ನೈಪುಣ್ಯತೆ ಹಾಗೂ ಕ್ರಿಯಾಶೀಲತೆಯನ್ನು ಹೆಚ್ಚಿಸಲು ಎಟಿಐ ಮಾದರಿ ತರಬೇತಿ ನೀಡುವುದು ಎಂದು ಉತ್ತರದಲ್ಲಿ ಹೇಳಿದೆ.
ವೇತನ ಪರಿಷ್ಕರಣೆಗೆ ಅನುಕೂಲವಾಗುವ ಕೇಂದ್ರ ಮತ್ತು ಕೇರಳ ರಾಜ್ಯ ನೌಕರರ ವೇತನ-ಭತ್ಯೆಗಳನ್ನು ಪರಿಗಣಿಸುವುದು. 6ನೇ ವೇತನ ಆಯೋಗದಲ್ಲಿ ಪ್ರಸ್ತುತ ಮೂಲ ವೇತನಕ್ಕೆ ಹಾಲಿ ಇರುವ ಶೇ 31ರಷ್ಟು ತುಟ್ಟಿಭತ್ಯೆಯನ್ನು ವಿಲೀನಗೊಳಿಸಿ ಶೇ 40 ರಷ್ಟು ಫಿಟ್ಮೆಂಟ್ ಸೌಲಭ್ಯವನ್ನು ದಿನಾಂಕ 01/07/2022ರಿಂದ ಜಾರಿಗೆ ತರುವುದು ಎಂದು ಹೇಳಿದೆ.
2026ರಲ್ಲಿ ಪರಿಷ್ಕರಣೆಯಾಗಲಿರುವ ಕೇಂದ್ರ ವೇತನ ಮತ್ತು ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಈಗಾಗಲೇ 26 ರಾಜ್ಯಗಳಲ್ಲಿರುವಂತೆ ಯಥಾವತ್ತಾಗಿ ಅನ್ವಯಗೊಳಿಸಲು ಆಯೋಗವು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ತಿಳಿಸಿದೆ.

ಮುಖ್ಯ ವೇತನ ಶ್ರೇಣಿ, ಪ್ರತ್ಯೇಕ ವೇತನ ಶ್ರೇಣಿ
ರಾಜ್ಯ ಸರ್ಕಾರಿ ನೌಕರರ ಸಂಘ ಹಾಲಿ ಇರುವ 25 ಮಾಸ್ಟರ್ ವೇತನ ಶ್ರೇಣಿ ಹಾಗೂ 92 ವೇತನ ಹಂತಗಳನ್ನು ಮುಂದುವರೆಸುವುದು.ಹೊಸ ವೇತನ ಶ್ರೇಣಿಗಳನ್ನು 2022ನೇ ಸಾಲಿನ ಬೆಲೆ ಸೂಚ್ಯಾಂಕದ 12 ತಿಂಗಳ ಸರಾಸರಿಯ ಆಧಾರದ ಮೇಲೆ ವೇತನ ಶ್ರೇಣಿಗಳ ದರಗಳನ್ನು ನಿಗದಿಪಡಿಸುವುದು. ಕನಿಷ್ಟ ಶೇ 40 ಫಿಟ್ಮೆಂಟ್ ನೊಂದಿಗೆ ಹಾಗೂ ಜೀವನ ನಿರ್ವಹಣೆಯನ್ನಾಧರಿಸಿ ಗ್ರೂಪ್ 'ಡಿ' ನೌಕರನ ಕನಿಷ್ಠ ಮೂಲ ವೇತನ ರೂ. 31,000ಕ್ಕೆ ನಿಗದಿಗೊಳಿಸುವುದು ಎಂದು ಹೇಳಿದೆ.
ಪರಿಷ್ಕರಿಸಲಿರುವ ವೇತನ ಶ್ರೇಣಿಗಳಲ್ಲಿನ ಕನಿಷ್ಠ ಹಾಗೂ ಗರಿಷ್ಠ ವೇತನದ ನಡುವಿನ ಈಗಿರುವ ಅನುಪಾತ 1:5,20 ರ ಬದಲಾಗಿ 1:8.86ಕ್ಕೆ ನಿಗದಿಪಡಿಸಿ ಶಿಫಾರಸ್ಸು ಮಾಡುವುದು. ವೇತನ ಶ್ರೇಣಿಗಳ ನಡುವಿನ ಸಾಪೇಕ್ಷೆಗಳನ್ನು (Relativity) ಸಾಧ್ಯವಾದಷ್ಟು ಮಟ್ಟಿಗೆ ಹಾಗೆಯೇ ಮುಂದುವರಿಸುವುದು ಸಮಂಜಸವಾಗಿರುತ್ತದೆ ಎಂದು ನೌಕರರ ಸಂಘ ಉತ್ತರದಲ್ಲಿ ಹೇಳಿದೆ.

ನೌಕರರಿಗೆ ಸೇವೆಯಲ್ಲಿ ಎಷ್ಟು ಮುಂಬಡ್ತಿಗಳು?
ಒಬ್ಬ ಸರ್ಕಾರಿ ನೌಕರನಿಗೆ ಸೇವಾವಧಿಯಲ್ಲಿ ಕನಿಷ್ಠ 3-4 ಮುಂಬಡ್ತಿ ಅವಕಾಶಗಳು ಲಭ್ಯವಾಗುವಂತೆ ಶಿಫಾರಸ್ಸು ಮಾಡುಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಹೇಳಿದೆ. ಕನಿಷ್ಟ ವಾರ್ಷಿಕ ವೇತನ ಬಡ್ತಿ ದರವನ್ನು ಕೇರಳ ರಾಜ್ಯದ ಮಾದರಿಯಲ್ಲಿ ಮೂಲ ವೇತನಕ್ಕೆ ಶೇ 3.04 ರಷ್ಟು ನಿಗದಿ ಪಡಿಸುವುದು. ಸ್ಥಗಿತ ವೇತನ ಬಡ್ತಿಯನ್ನು ಹಾಲಿ ಇರುವ 8 ರಿಂದ 12 ಕ್ಕೆ ಹೆಚ್ಚಿಸುವುದು ಹಾಗೂ ಕಚೇರಿ ಮುಖ್ಯಸ್ಥರು ಮಂಜೂರು ಮಾಡುವುದು ಎಂದು ಹೇಳಿದೆ.
ಸಚಿವಾಲಯ-ಸಚಿವಾಲಯೇತರ ಸಮಾನ ಹುದ್ದೆಗಳ ವೇತನವನ್ನು ಸಮಾನಗೊಳಿಸಲು ಶಿಫಾರಸ್ಸು ಮಾಡುವುದು. ಕೇಂದ್ರ ಸಚಿವಾಲಯದ ಮಾದರಿಯಲ್ಲಿ ಹಾಗೂ ವಿಧಾನಸಭೆ/ ವಿಧಾನ ಪರಿಷತ್ ಸಚಿವಾಲಯಗಳ ನೌಕರರಿಗೆ ಲೋಕಸಭೆ/ ರಾಜ್ಯಸಭೆ ಸಚಿವಾಲಯ ಮಾದರಿಯಲ್ಲಿ ಪ್ರತ್ಯೇಕ ವೇತನ ಶ್ರೇಣಿ ಮತ್ತು ಭತ್ಯೆಗಳನ್ನು ಮಂಜೂರು ಮಾಡಲು ಶಿಫಾರಸ್ಸು ಮಾಡುವುದು ಎಂದು ನೌಕರರ ಸಂಘ ಹೇಳಿದೆ.
ಅತ್ಯಂತ ವಿಶೇಷ-ಕ್ಲಿಷ್ಟಕರ, ಅನಾರೋಗ್ಯಕರ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಪ್ರಸ್ತುತ ನೀಡುತ್ತಿರುವ ವಿಶೇಷ ಭತ್ಯೆಯನ್ನು ದ್ವಿಗುಣಗೊಳಿಸುವುದು. ಪ್ರತಿ 6 ತಿಂಗಳಿಗೆ ನೀಡಲಾಗುವ ತುಟ್ಟಿಭತ್ಯೆಯನ್ನು ಪರಿಷ್ಕೃತ ವೇತನದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾಗಿ ರಾಜ್ಯ ಸರ್ಕಾರಿ ನೌಕರರಿಗೆ ವಿಳಂಬವಿಲ್ಲದೆ ನೀಡುವುದು.

ಮನೆ ಬಾಡಿಗೆ ಭತ್ಯೆ ಎಷ್ಟಿರಬೇಕು?
ರಾಜ್ಯ ಸರ್ಕಾರಿ ನೌಕರರ ಸಂಘ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ ಲಭ್ಯವಿರುವ 2021ರ ಜನಸಂಖ್ಯೆಯ ಮಾಹಿತಿಯನ್ನಾಧರಿಸಿ ನಗರ ಹಾಗೂ ಪಟ್ಟಣ ಪ್ರದೇಶಗಳನ್ನು ಪುನರ್ವರ್ಗೀಕರಿಸುವುದು ಹಾಗೂ ಬಿಬಿಎಂಪಿ ವ್ಯಾಪ್ತಿಯನ್ನು ಬೆಂಗಳೂರು ನಗರ ಜಿಲ್ಲೆ ಗಡಿ ವ್ಯಾಪ್ತಿಗೆ ವಿಸ್ತರಿಸುವುದು. ಪ್ರಸ್ತುತ ಜೀವನ ನಿರ್ವಹಣೆ ಆಧಾರದ ಮೇಲೆ ಮನೆ ಬಾಡಿಗೆ ಭತ್ಯೆ ನೀಡಬೇಕು ಎಂದು ಹೇಳಿದೆ. 'ಎ' ವರ್ಗಕ್ಕೆ -ಶೇ 24 ರಿಂದ ಶೇ 30, 'ಬಿ' ವರ್ಗಕ್ಕೆ ಶೇ 16 ರಿಂದ ಶೇ 20, 'ಸಿ' ವರ್ಗಕ್ಕೆ ಶೇ 8 ರಿಂದ ಶೇ 15 ನೀಡಬೇಕು. ಕೇಂದ್ರ ಮಾದರಿಯಲ್ಲಿ ತುಟ್ಟಿಭತ್ಯೆಯು ಶೇ 25 ಮತ್ತು ಶೇ 50ರ ಹಂತವನ್ನು ತಲುಪಿದಾಗ ಮನೆ ಬಾಡಿಗೆ ಭತ್ಯೆಗಳನ್ನು ಸ್ವಯಂಚಾಲಿತವಾಗಿ ಶೇ. 3ರಷ್ಟು ಹೆಚ್ಚಿಸುವುದು ಎಂದು ಹೇಳಿದೆ.
ರಜಾ ಪ್ರಯಾಣ ರಿಯಾಯಿತಿ ನಮ್ಮ ರಾಜ್ಯದಲ್ಲಿ ಸೇವಾವಧಿಯಲ್ಲಿ 2 ಬಾರಿ ಇದ್ದು, ಕೇಂದ್ರ ಸರ್ಕಾರದಲ್ಲಿ ಸೌಲಭ್ಯವು ಪ್ರತಿ 4 ವರ್ಷಕ್ಕೊಮ್ಮೆ ನೀಡುತ್ತಿದ್ದು, ಆದರಂತೆ ನೀಡುವುದು. ಹಾಗೂ ದಿನಭತ್ಯೆಯನ್ನು ಸಹ ನೀಡುವುದು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾರ್ಯೋನ್ಮುಖವಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ತನ್ನ ಉತ್ತರದಲ್ಲಿ ತಿಳಿಸಿದೆ.












Click it and Unblock the Notifications