ಕೊರೊನಾವೈರಸ್ ನಂತರದಲ್ಲಿ ಓದು-ಬರಹವನ್ನೇ ಮರತೆರಾ ವಿದ್ಯಾರ್ಥಿಗಳು?
ನವದೆಹಲಿ, ಡಿಸೆಂಬರ್ 19: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಮತ್ತು ಲಾಕ್ ಡೌನ್ ನಂತರ ಶೈಕ್ಷಣಿಕ ವಲಯದಲ್ಲಿ ಕೆಲವು ಸುಧಾರಣೆಗಳು ಕಂಡು ಬರುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಹಲವು ಲೋಪ-ದೋಷಗಳೂ ಕಾಣಿಸಿಕೊಂಡಿವೆ.
ಕಳೆದ ಫೆಬ್ರವರಿ ತಿಂಗಳಿನಲ್ಲಿ ಶಾಲೆಗಳು ಆರಂಭವಾಗಿದ್ದು, ಅತಿಹೆಚ್ಚು ವಿದ್ಯಾರ್ಥಿಗಳು ಓದುವುದು ಮತ್ತು ಬರೆಯುವುದನ್ನೇ ಮರೆತು ಹೋಗಿದ್ದಾರೆ ಎಂಬ ಸತ್ಯವು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಇದರ ಜೊತೆಗೆ ಶಾಲೆಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳು ಕೂಡ ಸಮೀಕ್ಷೆಯಲ್ಲಿ ಪತ್ತೆಯಾಗಿವೆ.
ಕತ್ತರಿಯಿಂದ ಚುಚ್ಚಿದ ನಂತರ 5 ನೇ ತರಗತಿ ವಿದ್ಯಾರ್ಥಿನಿಯನ್ನು ಮಹಡಿಯಿಂದ ಎಸೆದ ಶಿಕ್ಷಕಿ
ಜಾರ್ಖಂಡ್ನ ಶಾಲೆಗಳಲ್ಲಿ ಕೋವಿಡ್ ಸಾಂಕ್ರಾಮಿಕದ ನಂತರ ಅಸಮರ್ಪಕ ಮೂಲಸೌಕರ್ಯ, ಕಡಿಮೆ ಹಾಜರಾತಿ, ಶಿಕ್ಷಕರ ಕೊರತೆ ಮತ್ತು ಅಸಮರ್ಪಕ ಧನಸಹಾಯದಿಂದ ಹೆಣಗಾಡುತ್ತಿವೆ. 138 ಪ್ರಾಥಮಿಕ ಮತ್ತು ಉನ್ನತ-ಪ್ರಾಥಮಿಕ ಶಾಲೆಗಳಲ್ಲಿ ನಡೆಸಿದ ಇತ್ತೀಚಿನ ಸಮೀಕ್ಷೆಯುೃಲ್ಲಿ ಈ ಅಂಶವು ಗೊತ್ತಾಗಿದೆ. ಹೆಚ್ಚಿನ ಶಾಲೆಗಳು ಫೆಬ್ರವರಿ 2022ರಲ್ಲಿ ಪುನಃ ತೆರೆಯುವ ಹೊತ್ತಿಗೆ "ಹೆಚ್ಚಿನ" ವಿದ್ಯಾರ್ಥಿಗಳು ಓದುವುದು ಮತ್ತು ಬರೆಯುವುದು ಹೇಗೆ ಎಂಬುದನ್ನೇ ಮರೆತು ಹೋಗಿದ್ದಾರೆ ಎಂದು ಶಿಕ್ಷಕರು ತಿಳಿಸಿದ್ದಾರೆ. ಹಾಗಾದರೆ ಶಿಕ್ಷಣ ಮತ್ತು ಶಿಕ್ಷಕರು ಸಮೀಕ್ಷೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಾಲಾ ವ್ಯವಸ್ಥೆ ಬಗ್ಗೆ ಹೇಳಿದ್ದೇನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಜ್ಞಾನ ವಿಜ್ಞಾನ ಸಮಿತಿ ಜಾರ್ಖಂಡ್ ನಡೆಸಿದ ಸಮೀಕ್ಷೆ
ಸಮುದಾಯ-ಆಧಾರಿತ ಸ್ವಯಂಸೇವಕರು ನಡೆಸುತ್ತಿರುವ ಸಾಮಾಜಿಕ ಚಳುವಳಿಯಾದ ಜಾರ್ಖಂಡ್ ಜ್ಞಾನ ವಿಜ್ಞಾನ ಸಮಿತಿ(GVSJ) ಈ ಸಮೀಕ್ಷೆಯನ್ನು ನಡೆಸಿದೆ. ಅದರ ಮಾದರಿಯಲ್ಲಿ ಕೇವಲ ಶೇ.53ರಷ್ಟು ಪ್ರಾಥಮಿಕ ಶಾಲೆಗಳು ಮತ್ತು ಶೇ.19ರಷ್ಟು ಉನ್ನತ-ಪ್ರಾಥಮಿಕ ಶಾಲೆಗಳು ಶೇ.30ಕ್ಕಿಂತ ಕಡಿಮೆ ವಿದ್ಯಾರ್ಥಿ-ಶಿಕ್ಷಕರ ಅನುಪಾತವನ್ನು ಹೊಂದಿವೆ ಎಂದು ಹೇಳಿದೆ. ಶಿಕ್ಷಣ ಹಕ್ಕು ಕಾಯಿದೆಯಡಿ ಸೂಚಿಸಿದಂತೆ ಸಮೀಕ್ಷೆಯು ಸರ್ಕಾರಿ ಪ್ರಾಥಮಿಕ ಮತ್ತು ಉನ್ನತ-ಪ್ರಾಥಮಿಕ ಶಾಲೆಗಳ ಮೇಲೆ ಕೇಂದ್ರೀಕರಿಸಿದೆ. ಅಲ್ಲಿ ದಾಖಲಾದ ಕನಿಷ್ಠ ಶೇ.50ರಷ್ಟು ಮಕ್ಕಳು ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡ (ST) ಕುಟುಂಬಗಳಿಂದ ಬಂದವರೇ ಆಗಿದ್ದಾರೆ.
ಶಾಲೆಗಳು ಎರಡು ವರ್ಷಗಳ ಕಾಲ ಬಂದ್
"ಕಳೆದ 2020-21ರಲ್ಲಿ ಕೋವಿಡ್ ಬಿಕ್ಕಟ್ಟಿನಿಂದ ಶಾಲಾ ವ್ಯವಸ್ಥೆಯು ತೀರಾ ದುರ್ಬಲವಾಗಿದೆ. ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ಎರಡು ವರ್ಷಗಳ ಕಾಲ ಮುಚ್ಚಲಾಯಿತು. ಇದು ಇಡೀ ಜಗತ್ತಿನಲ್ಲೇ ಅತಿಹೆಚ್ಚು ಅವಧಿ ಎಂದು ವರದಿಯಲ್ಲಿ ಹೇಳಲಾಗುತ್ತಿದೆ. ಶಾಲೆಗಳ ನಿರ್ವಹಣೆ ಲೋಪದಿಂದ ಅತಿಹೆಚ್ಚು ಪರಿಸ್ಥಿತಿ ಹದಗೆಟ್ಟಿದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯನ್ನು ಸಂಶೋಧಕ ಪರನ್ ಅಮಿತವಾ ಮತ್ತು ಭಾರತದ ಪ್ರಮುಖ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾದ ಜೀನ್ ಡ್ರೆಜ್ ಅವರು ಸಿದ್ಧಪಡಿಸಿದ್ದಾರೆ.
ರಾಜ್ಯದ ಶೇ.40ರಷ್ಟು ಶಾಲೆಗಳಲ್ಲಿ ಖಾಯಂ ಶಿಕ್ಷಕರೇ ಇಲ್ಲ
ಜಾರ್ಖಂಡ್ನ ಒಟ್ಟು 138 ಶಾಲೆಗಳ ಪೈಕಿ ಶೇ.20ರಷ್ಟು ಶಾಲೆಗಳಲ್ಲಿ ಕೇವಲ ಒಬ್ಬ ಶಿಕ್ಷಕರಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಅವರೂ ಅರೆ-ಶಿಕ್ಷಕರೇ ಆಗಿದ್ದಾರೆ. ಈ ರೀತಿ ಒಬ್ಬರೇ ಶಿಕ್ಷಕರಿಂದ ನಡೆಯುವ ಶಾಲೆಗಳಲ್ಲಿ ಶೇ.90ರಷ್ಟು ವಿದ್ಯಾರ್ಥಿಗಳು ದಲಿತ ಅಥವಾ ಆದಿವಾಸಿ ಮಕ್ಕಳಾಗಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಅದೇ ಮಾದರಿಯಲ್ಲಿ ಶೇ.40ರಷ್ಟು ಪ್ರಾಥಮಿಕ ಶಾಲೆಗಳು ಸಂಪೂರ್ಣವಾಗಿ ಅರೆ-ಶಿಕ್ಷಕರಿಂದ ನಡೆಸಲ್ಪಡುತ್ತವೆ ಎಂದು ಸಮೀಕ್ಷೆಯು ತಿಳಿಸಿದೆ.
ಸರ್ಕಾರಿ ಶಾಲೆಗಳಲ್ಲಿ ಏನೆಲ್ಲಾ ಅವ್ಯವಸ್ಥೆ?
ಕಳೆದ ಸೆಪ್ಟೆಂಬರ್-ಅಕ್ಟೋಬರ್ 2022ರಲ್ಲಿ ನಡೆದ ಸಮೀಕ್ಷೆಯ ಪ್ರಕಾರ, ಪ್ರಾಥಮಿಕ ಶಾಲೆಗಳಲ್ಲಿ ಶೇ.68 ಮತ್ತು ಉನ್ನತ-ಪ್ರಾಥಮಿಕ ಶಾಲೆಗಳಲ್ಲಿ ಶೇ.58 ವಿದ್ಯಾರ್ಥಿಗಳ ಹಾಜರಾತಿ ಇತ್ತು. ಆದರೆ ಸೂಕ್ತ ರೀತಿಯಲ್ಲಿ ಶೌಚಾಲಯ, ವಿದ್ಯುತ್ ಮತ್ತು ನೀರಿನ ಪೂರೈಕೆಯನ್ನು ಹೊಂದಿರುವ ಒಂದೇ ಒಂದು ಶಾಲೆಯೂ ಇರಲಿಲ್ಲ. ಇನ್ನು ಮೂರನೇ ಎರಡರಷ್ಟು ಪ್ರಾಥಮಿಕ ಶಾಲೆಗಳು ಕಾಂಪೌಂಡ್ ಅನ್ನು ಹೊಂದಿಲ್ಲ. ಶೇ.64ರಷ್ಟು ಶಾಲೆಗಳಲ್ಲಿ ಆಟದ ಮೈದಾನವೂ ಇಲ್ಲ. ಶೇ.37ರಷ್ಟು ಶಾಲೆಗಳ ಗ್ರಂಥಾಲಯಗಳಲ್ಲಿ ಪುಸ್ತಕಗಳೂ ಇಲ್ಲ ಎಂದು ಸಮೀಕ್ಷೆಯು ತಿಳಿಸಿದೆ.
ಇದೆಲ್ಲದರ ಹೊರತಾಗಿ ಮೂರನೇ ಎರಡರಷ್ಟು ಶಿಕ್ಷಕರು, ಸಮೀಕ್ಷೆಯ ಸಮಯದಲ್ಲಿ ಶಾಲೆಯಲ್ಲಿ ಮಧ್ಯಾಹ್ನದ ಊಟಕ್ಕೆ ಸಾಕಷ್ಟು ಹಣವಿಲ್ಲ ಎಂದು ಹೇಳಿದ್ದಾರೆ. ಹಲವು ಶಾಲೆಗಳಲ್ಲಿ ಇನ್ನೂ ವಾರಕ್ಕೆ ಎರಡು ಬಾರಿ ಮೊಟ್ಟೆ ನೀಡುತ್ತಿಲ್ಲ ಎಂದು ಸಮೀಕ್ಷೆ ಹೇಳಿದೆ.
2011ರಲ್ಲಿ ವಾರ್ಷಿಕ ಶಿಕ್ಷಣ ವರದಿಯ ಪ್ರಕಾರ, 8-11 ವರ್ಷ ವಯಸ್ಸಿನ ಅರ್ಧದಷ್ಟು ಮಕ್ಕಳು ಸರಳ ಪ್ಯಾರಾಗ್ರಾಫ್ ಅನ್ನು ಓದಲು ಸಾಧ್ಯವಾಗದ ಬಿಹಾರ, ಅಸ್ಸಾಂ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಜಾರ್ಖಂಡ್ ಕೂಡಾ ಒಂದಾಗಿದೆ.