HP CM Jai Ram Thakur : ಮತ್ತೆ ಗೆದ್ದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಪರಿಚಯ
ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ 2022ರ ಫಲಿತಾಂಶ ಗುರುವಾರ ಪ್ರಕಟವಾಗಿದೆ. ಬಿಜೆಪಿ ನಾಯಕ, ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮಂಡಿ ಜಿಲ್ಲೆಯ ಸೆರಾಜ್ ಕ್ಷೇತ್ರದಲ್ಲಿ 20,425 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
2017ರ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 44, ಕಾಂಗ್ರೆಸ್ 21 ಮತ್ತು ಇತರರು 3 ಸ್ಥಾನಗಳಲ್ಲಿ ಜಯಗಳಿಸಿದ್ದರು. ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಯಿತು. ಆದರೆ ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮ ಕುಮಾರ್ ಧುಮಾಲ್ ಸುಜಾನ್ಪುರ್ ಕ್ಷೇತ್ರದಲ್ಲಿ ಸೋಲು ಕಂಡರು.
Recommended Video
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಸತ್ಪಾಲ್ ಸತ್ತಿ ಊನಾ ಕ್ಷೇತ್ರದಲ್ಲಿ ಸೋತರು. ಆಗ ಬಿಜೆಪಿ ವರಿಷ್ಠರು ಮುಖ್ಯಮಂತ್ರಿ ಹುದ್ದೆಗೆ ಅಚ್ಚರಿಯ ಆಯ್ಕೆ ಮಾಡಲು ಮುಂದಾದರು. ಆಗ 5ನೇ ಬಾರಿಗೆ ಗೆಲುವು ಸಾಧಿಸಿದ್ದ ಜೈರಾಮ್ ಠಾಕೂರ್ ಮುಖ್ಯಮಂತ್ರಿಯಾದರು.
Himachal Pradesh Elections Result 2022: ಹಿಮಾಚಲ ಪ್ರದೇಶ : ಇತಿಹಾಸ ಬರೆಯುವುದೇ ಬಿಜೆಪಿ?
ಹಿಮಾಚಲದಲ್ಲಿ ಅಧಿಕಾರದಲ್ಲಿರುವ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸಂಪ್ರದಾಯವಿದೆ. ಆದರೆ ಇದನ್ನು ಮುರಿಯಬೇಕು ಎಂದು ಬಿಜೆಪಿ 2022ರ ಚುನಾವಣೆ ತಂತ್ರ ಹಣೆದಿತ್ತು. ಜೈರಾಮ್ ಠಾಕೂರ್ ಈಗ ಗೆದ್ದಿದ್ದಾರೆ, ಆದರೆ ಪಕ್ಷ ಅಧಿಕಾರ ಹಿಡಿಯಲಿದೆಯೇ? ಎಂಬುದನ್ನು ಕಾದು ನೋಡಬೇಕಿದೆ.
ಡ್ರೋನ್ ಸೇಬು ಹಣ್ಣು ಬಾಕ್ಸ್ ಸಾಗಣೆ, ಪ್ರಯೋಗ ಯಶಸ್ವಿ
ಜೈರಾಮ್ ಠಾಕೂರ್ ಪರಿಚಯ
57 ವರ್ಷದ ಜೈರಾಮ್ ಠಾಕೂರ್ 1965 ಜೂನ್ 6ರಂದು ಮಂಡಿ ಜಿಲ್ಲೆಯ ಥುನಾಗ್ ತಾಲೂಕಿನ ಟಾಂಡಿ ಗ್ರಾಮದಲ್ಲಿ ರಜಪೂತ ಕುಟುಂಬದಲ್ಲಿ ಜನಿಸಿದರು. ಜೇಥುರಾಮ್ ಅವರ ಐವರು ಮಕ್ಕಳಲ್ಲಿ ನಾಲ್ಕನೇಯವರು ಜೈರಾಮ್ ಠಾಕೂರ್. ತಂದೆ ಕೃಷಿಕರು, ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದರು. ಮಾಧ್ಯಮಿಕ ಶಿಕ್ಷಣವನ್ನು ಬಾಗ್ಸಿಯಾದ್ ಪಟ್ಟಣದಲ್ಲಿ ಮಾಡಿದರು. ಮನೆಯಲ್ಲಿನ ಬಡತನ ಎರಡು ವರ್ಷ ಕಾಲೇಜಿನಿಂದ ದೂರ ಉಳಿಯುವಂತೆ ಮಾಡಿತು.
ಜಿಲ್ಲಾ ಕೇಂದ್ರ ಮಂಡಿಯ ವಲ್ಲಭ ಸರ್ಕಾರಿ ಪದವಿ ಕಾಲೇಜಿಗೆ ಬಿಎ ವ್ಯಾಸಂಗಕ್ಕಾಗಿ ಸೇರಿದರು. ಅಲ್ಲಿಯೇ ಎಬಿವಿಪಿ ಸಂಪರ್ಕಕ್ಕೆ ಬಂದರು. ಎಬಿವಿಪಿಯಲ್ಲಿ ಸಕ್ರಿಯ ಸದಸ್ಯರಾಗಿದ್ದರು. ಬಳಿಕ ಪಂಜಾಬ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು.
ಭಾರತೀಯ ಜನತಾ ಯುವ ಮೋರ್ಚಾ
ಜೈರಾಮ್ ಠಾಕೂರ್ ಎಬಿವಿಪಿಯಲ್ಲಿ ಸಕ್ರಿಯರಾಗಿದ್ದರು, ರಾಜ್ಯ ಕಾರ್ಯದರ್ಶಿಯಾಗಿ ನೇಮಕವಾದರು. 1990ರಲ್ಲಿ ಬಿಜೆಪಿಯ ಯುವ ಸಂಘಟನೆಯಾದ ಭಾರತೀಯ ಜನತಾ ಯುವ ಮೋರ್ಚಾದ ಮೂಲಕ ರಾಜಕೀಯ ಪ್ರವೇಶ ಮಾಡಿದರು. 28ನೇ ವಯಸ್ಸಿನಲ್ಲಿಯೇ ಛಚಿಯೋಟ್ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಮೊದಲ ಬಾರಿಗೆ ಕಣಕ್ಕಿಳಿದರು. 800 ಮತಗಳ ಅಂತರದಿಂದ ಸೋತರು.
1998ರ ಚುನಾವಣೆಯಲ್ಲಿ ಮತ್ತೆ ಛಚಿಯೋಟ್ ಕ್ಷೇತ್ರದಿಂದ ಕಣಕ್ಕಿಳಿದರು. ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಶಾಸಕರಾದರು. 2003ರಲ್ಲಿ ಮತ್ತೆ ಗೆದ್ದರು, 2006ರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಒಲಿದು ಬಂದಿತು. ಚುರುಕಾಗಿ ಪಕ್ಷ ಸಂಘಟನೆ ಮಾಡಿ 2007ರಲ್ಲಿ ಪಕ್ಷ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದರು.
ಕ್ಷೇತ್ರ ಪುನರ್ ವಿಂಗಡನೆ ಆಯಿತು
ಕ್ಷೇತ್ರ ಪುನರ್ ವಿಂಗಡನೆ ಬಳಿಕ ಜೈರಾಮ್ ಠಾಕೂರ್ ಸ್ಪರ್ಧಿಸುತ್ತಿದ್ದ ಛಚಿಯೋಟ್ ಕ್ಷೇತ್ರ ಸೆರಾಜ್ ಕ್ಷೇತ್ರವಾಗಿ ಬದಲಾಯಿತು. ಆ ಕ್ಷೇತ್ರದಿಂದಲೂ ಮೂರು ಬಾರಿ ಗೆಲುವು ಕಂಡರು. 2009-2012ರ ತನಕ ಪ್ರೇಮಕುಮಾರ್ ಧುಮಾಲ್ ಸಂಪುಟ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ಸಚಿವರಾಗಿ ಕೆಲಸ ಮಾಡಿದ್ದಾರೆ.
2017ರಲ್ಲಿ ಪಕ್ಷ ಬಹಮತ ಪಡೆದಾಗ ಜೈರಾಮ್ ಠಾಕೂರ್ಗೆ ಮುಖ್ಯಮಂತ್ರಿಯಾಗುವ ಯೋಗ ಒಲಿದು ಬಂದಿತು. 5 ವರ್ಷ ರಾಜ್ಯದಲ್ಲಿ ಆಡಳಿತ ನಡೆಸಿದರು. 2022ರಲ್ಲಿ ಯಾರು ರಾಜ್ಯದಲ್ಲಿ ಅಧಿಕಾರ ಹಿಡಿಯಲಿದ್ದಾರೆ? ಎಂದು ಕಾದು ನೋಡಬೇಕಿದೆ.
2022ರ ಚುನಾವಣೆ ಫಲಿತಾಂಶ
68 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು ಬೇಕಾದ ಮ್ಯಾಜಿಕ್ ನಂಬರ್ 35. ಜೈರಾಮ್ ಠಾಕೂರ್ ಗೆಲುವು ಸಾಧಿಸಿದ್ದಾರೆ. 33 ಜಿಲ್ಲೆಗಳ 37 ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ.
12.30ರ ಮಾಹಿತಿಯಂತೆ ಬಿಜೆಪಿ 26, ಕಾಂಗ್ರೆಸ್ 38, ಪಕ್ಷೇತರರು 3 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.