ಜೂನ್ 21, ಇಂದಿನಿಂದ ರೈಲಿನಲ್ಲಿ ರಾಮಾಯಣ ಯಾತ್ರೆ- ಟಿಕೆಟ್ ದರ ಇತ್ಯಾದಿ ವಿವರ
ನವದೆಹಲಿ, ಜೂನ್ 22: ಭಾರತೀಯ ರೈಲ್ವೆ ಇಲಾಖೆಗೆ ಸೇರಿದ ಐಆರ್ಸಿಟಿಸಿ ಸಂಸ್ಥೆ ಇಂದು ಬುಧವಾರದಿಂದ ರೈಲಿನಲ್ಲಿ ಶ್ರೀರಾಮಾಯಣ ಯಾತ್ರೆ ಯೋಜನೆ ಆರಂಭಿಸಿದೆ. ಅದಕ್ಕಾಗಿ ಭಾರತ್ ಗೌರವ್ ಟೂರಿಸ್ಟ್ ರೈಲಿನಲ್ಲಿ 18 ದಿನಗಳ ರಾಮಾಯಣ ಯಾತ್ರೆ ಚಾಲನೆಗೊಳ್ಳುತ್ತಿದೆ. ದೆಹಲಿಯ ಸಫ್ದರ್ಜಂಗ್ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಸಂಜೆ ರೈಲು ಹೊರಡಲಿದೆ.
ನೇಪಾಳದ ಜನಕಪುರದಿಂದ ಹಿಡಿದು ತಮಿಳುನಾಡಿನ ಭದ್ರಾಚಲಂವರೆಗೆ ಶ್ರೀರಾಮನಿಗೆ ಸಂಬಂಧಿಸಿದ ಪವಿತ್ರ ಸ್ಥಳಗಳನ್ನು ಈ ಯಾತ್ರೆಯಲ್ಲಿ ವೀಕ್ಷಿಸಬಹುದಾಗಿದೆ. ಈ ಮೊದಲ ಯಾತ್ರೆಯಲ್ಲಿ 500 ಭಾರತೀಯ ಪ್ರವಾಸಿಗರನ್ನು ಹೊತ್ತೊಯ್ಯುವ ರೈಲು ದೆಹಲಿಯಿಂದ ಜೂನ್ 23ರಂದು ಜನಕಪುರ ಧಾಮ್ ನಿಲ್ದಾಣಕ್ಕೆ ತಲುಪಲಿದೆ. ಹಾಗೆಯೇ, ಭಾರತ ಮತ್ತು ನೇಪಾಳವನ್ನು ಪ್ರವಾಸಿ ರೈಲು ಸಂಪರ್ಕಿಸುತ್ತಿರುವುದು ಇದೇ ಮೊದಲೆನ್ನಲಾಗಿದೆ. ಈ ಯಾತ್ರೆ ಒಟ್ಟು ಎಂಟು ಸಾವಿರ ಕಿಮೀ ದೂರದ್ದಾಗಿದೆ.
ರಾಮಾಯಣ ಯಾತ್ರೆ ಬಳಿಕ ಕೃಷ್ಣ ಯಾತ್ರೆ, ಬೌದ್ಧ ಯಾತ್ರೆ ಹಾಗೂ ಇತರೆ ಧಾರ್ಮಿಕ ಯಾತ್ರೆಗಳನ್ನು ಕೈಗೊಳ್ಳಲು ಐಆರ್ಸಿಟಿಸಿ ಯೋಜಿಸಿದೆ. ಅದಕ್ಕಾಗಿ ಭಾರತ್ ಗೌರವ್ ಟ್ರೈನುಗಳನ್ನು ಅಣಿಗೊಳಿಸಲಾಗುತ್ತಿದೆ.
ಬುಧವಾರ ಆರಂಭವಾಗಿರುವ ರಾಮಾಯಣ ಯಾತ್ರೆ ಕೈಗೊಳ್ಳಲು ಒಬ್ಬ ವ್ಯಕ್ತಿಗೆ ನಿಗದಿ ಮಾಡಿರುವ ದರ, ಯಾವ್ಯಾವ ಸ್ಥಳಗಳಿಗೆ ರೈಲು ಸಾಗಲಿದೆ, ಕರ್ನಾಟಕದ ಯಾವ ಸ್ಥಳಕ್ಕೆ ಬರಲಿದೆ ಎಂಬಿತ್ಯಾದಿ ವಿವರ ಇಲ್ಲಿವೆ.

ಎಲ್ಲೆಲ್ಲಿ ರೈಲು ಪ್ರಯಾಣ?
ರಾಮಾಯಣ ಪುರಾಣದಲ್ಲಿ ವಿವರಿಸಲಾದಂತೆ ಶ್ರೀರಾಮ ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣನ ಜೊತೆ 14 ವರ್ಷ ವನವಾಸಕ್ಕೆ ಹೋದಾಗ ಭೇಟಿ ಮಾಡಿದ ಪ್ರಮುಖ ಸ್ಥಳಗಳನ್ನು ಯಾತ್ರೆಯಲ್ಲಿ ಒಳಗೊಳ್ಳಲಾಗಿದೆ
ಅಯೋಧ್ಯೆ, ಜನಕಪುರ (ನೇಪಾಳ), ಸೀತಾಮಡಿ, ಬುಕ್ಸಾರ್, ವಾರಣಾಸಿ, ಪ್ರಯಾಗರಾಜ್, ಶೃಂಗವೇರಪುರ್, ಚಿತ್ರಕೂಟ, ನಾಶಿಕ (ಪಂಚವಟಿ), ಹಂಪಿ, ರಾಮೇಶ್ವರಂ, ಕಾಂಚಿಪುರಂ ಮತ್ತು ಭದ್ರಾಚಲಂ ಸ್ಥಳಗಳನ್ನು ಭಾರತ್ ಗೌರವ್ ರೈಲು ತಲುಪಲಿದೆ.
ನೇಪಾಳದಲ್ಲಿರುವ ಜನಕಪುರವು ಸೀತೆಯ ತಂದೆ ಜನಕ ಮಹಾರಾಜನ ಸಾಮ್ರಾಜ್ಯವಾಗಿತ್ತು. ಇನ್ನು ಹಂಪಿ ಪ್ರದೇಶವು ವಾಲಿ, ಸುಗ್ರೀವ, ಹನುಮಂತ ಇತ್ಯಾದಿ ವಾನರರ ನಾಡಾಗಿತ್ತು. ಇಲ್ಲಿ ಶ್ರೀರಾಮಚಂದ್ರ ಬಂದು ವಾನರ ಸೇನೆಯನ್ನು ಕಟ್ಟಿದ್ದ.

ಟಿಕೆಟ್ ದರ, ರಿಯಾಯಿತಿ ಇತ್ಯಾದಿ ವಿವರ
ಎಂಟು ಸಾವಿರ ಕಿಮೀ ದೂರದ ಈ ಯಾತ್ರೆ 18 ದಿನಗಳ ಕಾಲ ನಡೆಯುತ್ತದೆ. ಒಂದು ಟ್ರೈನಿನಲ್ಲಿ 600 ಜನರಿಗೆ ಪ್ರಯಾಣಾವಕಾಶ ಇದೆ. ಒಬ್ಬ ವ್ಯಕ್ತಿಗೆ 62,370 ರೂ ಟಿಕೆಟ್ ದರ ಸದ್ಯಕ್ಕೆ ನಿಗದಿ ಮಾಡಲಾಗಿದೆ.
ಪೇಟಿಎಂ ಜೊತೆ ಐಆರ್ಸಿಟಿಸಿ ಒಪ್ಪಂದ ಇರುವುದರಿಂದ ಡಿಜಿಟಲ್ ಪೇಮೆಂಟ್ ಸಾಧ್ಯವಿದೆ. ರೇಜರ್ಪೇ ಪಾವತಿ ವ್ಯವಸ್ಥೆ ಇರುವುದರಿಂದ ಇಎಂಐ ಮೂಲಕ ನೀವು ಟಿಕೆಟ್ ಖರೀದಿಸಬಹುದು.
ಮೊದಲ ಐವತ್ತು ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿ ಶೇ 5ರಷ್ಟು ರಿಯಾಯಿತಿ ಕೊಡಲಾಗಿದೆ. ಅಂದರೆ, ಸುಮಾರು ಮೂರು ಸಾವಿರ ರೂನಷ್ಟು ಡಿಸ್ಕೌಂಟ್ ಸಿಗುತ್ತದೆ.

ರೈಲು ಹತ್ತುವ ಸ್ಥಳಗಳು
ರಾಮಾಯಣ ಯಾತ್ರೆ ಕೈಗೊಳ್ಳಲು ದೆಹಲಿಗೇ ಹೋಗಬೇಕಿಲ್ಲ. ಒಟ್ಟು ಐದು ಸ್ಥಳಗಳಲ್ಲಿ ಯಾತ್ರೆ ಸೇರಲು ಅವಕಾಶ ಕಲ್ಪಿಸಲಾಗಿದೆ. ದೆಹಲಿ, ಆಲಿಗಡ್, ತಂಡ್ಲಾ, ಕಾನಪುರ್ ಮತ್ತು ಲಕ್ನೋನಲ್ಲಿ ನೀವು ರೈಲನ್ನು ಏರಬಹುದು. ಎಲ್ಲೇ ನೀವು ರೈಲು ಹತ್ತಿದರೂ ಟಿಕೆಟ್ ದರದಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ. ದೆಹಲಿ ಹೊರತುಪಡಿಸಿ ಇತರ ನಾಲ್ಕು ಸ್ಥಳಗಳೂ ಉತ್ತರ ಪ್ರದೇಶದಲ್ಲಿಯೇ ಇದೆ. ದೆಹಲಿಯಿಂದ ನೇಪಾಳಕ್ಕೆ ಮೊದಲು ಹೋಗುವ ಈ ರೈಲು ಈ ನಾಲ್ಕು ಸ್ಥಳಗಳನ್ನು ಹಾದಿಯೇ ಹೋಗಬೇಕು. ಹೀಗಾಗಿ, ಅಲ್ಲಿನ ಪ್ರಯಾಣಿಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದೆ.
ದಕ್ಷಿಣ ಭಾರತ ಹಾಗು ಇತರ ಭಾಗಗಳಿಂದ ರಾಮಾಯಣ ಯಾತ್ರೆ ಕೈಗೊಳ್ಳುವವರು ದೆಹಲಿಗೆ ಪ್ರತ್ಯೇಕವಾಗಿ ಹೋಗದೇ ಬೇರೆ ವಿಧಿ ಇಲ್ಲ.

ಶುದ್ಧ ಸಸ್ಯಾಹಾರ
ಭಾರತ್ ಗೌರವ್ ರೈಲುಗಳನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ಭಾರತದ ಸಂಸ್ಕೃತಿಯನ್ನು ಬಿಂಬಿಸುವ ಕಲೆ, ಆಹಾರ, ಹಬ್ಬ, ವನ್ಯಜೀವಿ, ಯೋಗ, ಜಾನಪದ ಇತ್ಯಾದಿಯನ್ನು ರೈಲಿನಲ್ಲಿ ಚಿತ್ರಿಸಾಗಿದೆ. ಟ್ರೈನಿನಲ್ಲಿ 14 ಬೋಗಿಗಳಿದ್ದು 11 ಬೋಗಿಗಳಿಗೆ ಎಸಿ ಅಳವಡಿಸಲಾಗಿದೆ. ಒಂದು ಬೋಗಿ ಪ್ಯಾಂಟ್ರಿ ಕಾರ್ ಆಗಿದೆ, ಎರಡು ಎಸ್ಎಲ್ಆರ್ಗಳಾಗಿವೆ. ಎಸ್ಎಲ್ಆರ್ ಎಂಬುದು ಲಗೇಜು ಬೋಗಿಗಳಾಗಿವೆ.
ಈ ಯಾತ್ರೆಯಲ್ಲಿ ಮಾಂಸಾಹಾರವನ್ನು ಒದಗಿಸಲಾಗುವುದಿಲ್ಲ. ಪ್ಯಾಂಟ್ರಿಯಲ್ಲೇ ತಯಾರಿಸಲಾಗುವ ಶುದ್ಧ ಸಸ್ಯಾಹಾರವನ್ನು ಯಾತ್ರಿಕರಿಗೆ ಒದಗಿಸಲಾಗುತ್ತದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications