ಸದನದೊಳಗೆ ಬಿಜೆಪಿಗೊಬ್ಬ 'ಸಮಾಜವಾದಿ ಆಪ್ತ': ಗ್ರೀಕ್ ನಾಟಕದ ದುರಂತ ನಾಯಕ ಮಾಧುಸ್ವಾಮಿ

Recommended Video

      Karnataka Crisis : ಬಿಜೆಪಿ ಆಪ್ತ ಜೆ ಸಿ ಮಾಧುಸ್ವಾಮಿ ಕಿರುಪರಿಚಯ | J C Madhuswamy

      ಆಡಳಿತ ನಡೆಸುವವರಿಗಾಗಲೀ, ವಿರೋಧ ಪಕ್ಷದರಿಗಾಗಲಿ ಸದನಗಳಲ್ಲಿ ಕಾರ್ಯಕ್ಷಮತೆ ತೋರಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನಿವಾರ್ಯ ಹಾಗೂ ಅಪೂರ್ವ ಅವಕಾಶ.

      ರಾಜ್ಯದಲ್ಲಿ 14 ತಿಂಗಳಿನಿಂದ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರಕಾರಕ್ಕೆ ಸದನ ಪಟುಗಳ ಕೊರತೆ ಕಾಣಿಸುತ್ತಿಲ್ಲ. ಆದರೆ ಪ್ರತಿಪಕ್ಷದಲ್ಲಿರುವ ಬಿಜೆಪಿ ನ್ಯೂನತೆ ಈ ವಿಚಾರದಲ್ಲಿ ಎದ್ದು ಕಾಣಿಸುತ್ತಿದೆ. ಕಳೆದ ಬಜೆಟ್ ಅಧಿವೇಶನದ ವೇಳೆ ವಿರೋಧ ಪಕ್ಷದ ನಾಯಕ ಬಿ. ಎಸ್. ಯಡಿಯೂರಪ್ಪ ಗುರುತರ ಆರೋಪವನ್ನು ಸದನದೊಳಗೆ ಎದುರಿಸುತ್ತಿದ್ದ ಸಮಯದಲ್ಲಿ, ಈಗ ನಡೆಯುತ್ತಿರುವ ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆಯಲ್ಲಿರಲಿ ಬಿಜೆಪಿ ಸದಸ್ಯರ ಕಾರ್ಯಕ್ಷಮತೆಯ ಪ್ರದರ್ಶನ ಅತ್ಯಂತ ಹೀನಾಯವಾಗಿದೆ.

      ಇದರ ನಡುವೆಯೂ ಬಿಜೆಪಿ ಪಾಳಯದಲ್ಲಿ ಆಪ್ತರಂತೆ ಕಮಲದ ಕೈ ಹಿಡಿಯುತ್ತಿರುವವರು ಜೆ. ಸಿ. ಮಾಧುಸ್ವಾಮಿ. ಅವತ್ತಿನ ಸಮಾಜವಾದಿ ರಾಜಕಾರಣದ ಮೂಸೆಯಲ್ಲಿ ಪಟ್ಟುಗಳನ್ನು ಕಲಿತ ಮಾಧುಸ್ವಾಮಿ ಇವತ್ತು ಬಿಜೆಪಿಯಲ್ಲಿದ್ದಾರೆ. ಅವರ ರಾಜಕೀಯ ಹಾದಿ ಹಾಗೂ ವೈಯಕ್ತಿಕ ಬದುಕನ್ನು ಇಣುಕಿ ನೋಡಿದರೆ ಇಂಟೆರೆಸ್ಟಿಂಗ್ ಅನ್ನಿಸವಂತಹ ಅಂಶಗಳು ಕಾಣಿಸುತ್ತಿವೆ. ಅವುಗಳನ್ನಿಲ್ಲಿ 'ಒನ್ ಇಂಡಿಯಾ ಕನ್ನಡ' ಕಟ್ಟಿಕೊಡುವ ಪ್ರಯತ್ನ ಮಾಡಿದೆ.

      JC Madhuswamy

      ಯಾರೀ ಮಾಧುಸ್ವಾಮಿ?:
      ಜೆಸಿ ಮಾಧುಸ್ವಾಮಿ ಅವರ ಮೂಲ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಜಯಚಾಮರಾಜೇಂದ್ರ ಪುರ (ಜೆಸಿ ಪುರ). ಅದೊಂದು ಗ್ರಾಮ ಪಂಚಾಯಿತಿ ಕೇಂದ್ರ. ಶಾಸಕರಾಗಿದ್ದರು ಮಾಧುಸ್ವಾಮಿ ಈಗಲೂ ಅಲ್ಲೇ ವಾಸವಿದ್ದಾರೆ. ಮಾಧುಸ್ವಾಮಿ ಅವರ ಪಾಲಿಗೆ ಯಾವುದೇ ಎಲೆಕ್ಷನ್ ಇಲ್ಲ ಅಂದರೆ ಅವರು ಪೂರ್ಣಾವಧಿ ರೈತ. ಮಾಧುಸ್ವಾಮಿ ತಂದೆ ರೈತರು. ತಾಯಿ ಗೃಹಿಣಿ.

      ಜನತಾ ಪಕ್ಷ ಒಟ್ಟಿಗೆ ಇದ್ದಾಗ ಅದರಲ್ಲಿ ಮಾಧುಸ್ವಾಮಿ ಗುರುತಿಸಿಕೊಂಡಿದ್ದರು. ಆ ನಂತರ ರಾಮಕೃಷ್ಣ ಹೆಗ್ಗಡೆ ಜತೆ ಗುರುತಿಸಿಕೊಂಡರು. ಆ ನಂತರ ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಕೆಜೆಪಿಗೆ ಬಂದರು. ಆ ನಂತರ ಬಿಎಸ್ ವೈ ಮುನಿಸು ಮರೆತು ಮತ್ತೆ ಬಿಜೆಪಿಗೆ ಬಂದಾಗ ಅವರ ಜತೆ ಇವರೂ ಬಿಜೆಪಿಗೆ ಬಂದರು. ಈ ಕಾರಣಕ್ಕೆ ಮೂಲ ಬಿಜೆಪಿಗರು ಮಾಧುಸ್ವಾಮಿ ಅವರನ್ನು ವಿರೋಧಿಸುತ್ತಾರೆ ಎಂಬುದು ಲಭ್ಯ ಇರುವ ಮಾಹಿತಿ.

      ಮೈಸೂರಿನಲ್ಲಿ ವ್ಯಾಸಂಗ ಮಾಡುವಾಗ ಪೂರ್ಣಚಂದ್ರ ತೇಜಸ್ವಿ ಜತೆಗೆ ಮಾಧುಸ್ವಾಮಿ ಅವರ ಒಡನಾಟ ಇತ್ತು. ಸಮಾಜವಾದಿ ಆಲೋಚನೆ ಜತೆಗೊಂದು ಸಂಬಂಧ ಸೃಷ್ಟಿಯಾಗಿದ್ದಕ್ಕೆ ಇದೂ ಒಂದು ಕಾರಣ ಇರಬಹುದು ಎಂಬುದು ಮಾಧುಸ್ವಾಮಿ ಬಲ್ಲವರು ಹೇಳುವ ಮಾತುಗಳು. ಮಾಧುಸ್ವಾಮಿ ಅವರು ಲೋಹಿಯಾ ತತ್ವಗಳನ್ನು ಅಳವಡಿಸಿಕೊಂಡಿದ್ದವರು. ಶಾಂತವೇರಿ ಗೋಪಾಲ ಗೌಡರ ಅನುಯಾಯಿಗಳಾಗಿದ್ದವರು. ಜೆಪಿ (ಜಯಪ್ರಕಾಶ ನಾರಾಯಣ) ಚಳವಳಿ ವೇಳೆಯಲ್ಲಿ ಸಕ್ರಿಯರಾಗಿದ್ದರು.

      ಸಹಜವಾಗಿಯೇ ಆಳವಾದ ಅಧ್ಯಯನ ಹಿನ್ನೆಲೆ ಇವರಿಗಿದೆ. ಇವತ್ತಿಗೂ ಬಿಡುವಿನ ಸಮಯದಲ್ಲಿ ಓದುತ್ತಾರೆ. ಮಾಧುಸ್ವಾಮಿ ಅವರ ವಿದ್ಯಾಭ್ಯಾಸ ಆಗಿದ್ದು ಮೈಸೂರು ಹಾಗೂ ತುಮಕೂರಿನಲ್ಲಿ. ಬಿಎಸ್. ಸಿ., ಹಾಗೂ ಎಲ್. ಎಲ್. ಬಿ., ಮಾಡಿದ್ದಾರೆ.


      ಸಾರ್ವಜನಿಕ ಜೀವನ:
      ಕೆಎಂಎಫ್ ಆರಂಭವಾದ ಹೊಸದರಲ್ಲಿ ಮಾಧುಸ್ವಾಮಿ ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾಗಿದ್ದರು. ಆಗಿನ್ನೂ ಒಕ್ಕೂಟ ಕಣ್ಣು ಬಿಡುತ್ತಾ ಇತ್ತು. ಹಾಲು ಒಕ್ಕೂಟಕ್ಕೆ ಬುನಾದಿ ಹಾಕುವುದರಲ್ಲಿ ಇವರ ಪಾತ್ರ ಇತ್ತು. ಆ ಸಹಕಾರಿ ರಂಗದ ಅನುಭವವೂ ಮಾಧುಸ್ವಾಮಿ ಅವರಿಗೆ ಸಂಘಟನೆಯ ಸಾಮರ್ಥ್ಯ ತಂದುಕೊಟ್ಟಿತು.

      ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಧುಸ್ವಾಮಿ ಎಲ್.ಎಲ್.ಬಿ., ವ್ಯಾಸಂಗ ಮಾಡುವಾಗ ಸಹಪಾಠಿಗಳು.

      ಮಾಧುಸ್ವಾಮಿ ಅವರನ್ನು ಹತ್ತಿರದಿಂದ ಬಲ್ಲವರು ಥಟ್ಟನೆ ಹೇಳುವುದು ಅವರ ನೇರವಂತಿಕೆ ಬಗ್ಗೆ. "ನನಗೂ ಗೊತ್ತು ಸುಮ್ನಿರಯ್ಯ" ಎಂದು ಹೇಳುವ ಗುಣ ಇವರಿಗೂ ಇದೆ. ಸಮಾಜವಾದಿ ಹಿನ್ನೆಲೆಯ ಜೆ.ಎಚ್.ಪಟೇಲ್, ಸಿದ್ದರಾಮಯ್ಯ ಹಾಗೂ ಮಾಧುಸ್ವಾಮಿ ಇವರದೆಲ್ಲ ಒಂದೇ ಬಗೆಯ ಗುಣ ಎನ್ನುತ್ತಾರೆ ಇವರನ್ನು ಬಲ್ಲವರು.

      "ಇಂದಿಗೂ ಸದನಕ್ಕೆ ಹೋಗುವ ಮುಂಚೆ ತುಂಬ ಸಿದ್ಧತೆ ಮಾಡಿಕೊಂಡೇ ಮಾಧುಸ್ವಾಮಿ ಹೋಗುತ್ತಾರೆ. ಮೊದಲ ಸಲ ಶಾಸಕರಾದಾಗ ಕಲಾಪದಲ್ಲಿ ಚರ್ಚೆ ಆಗುವ ಸಂಗತಿ ಸುತ್ತ ಇರುವ ಕಾನೂನು ವಿಚಾರಗಳನ್ನು ಅಧ್ಯಯನ ಮಾಡುವ ಸಲುವಾಗಿಯೇ ತಮ್ಮ ಕಾರಿನಲ್ಲಿ ಕಾನೂನು ಪುಸ್ತಕಗಳನ್ನು ಇಟ್ಟುಕೊಂಡಿರುತ್ತಿದ್ದರು. ಬೆಂಗಳೂರಿನಿಂದ ಜೆ.ಸಿ. ಪುರಕ್ಕೂ ಅಲ್ಲಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣಿಸುವಾಗ ಓದಿಕೊಂಡು ಬರುತ್ತಿದ್ದರು. ಮಾರನೇ ದಿನ ಬೆಳಗ್ಗೆ ಮತ್ತೆ ಓದ್ತಾ ಇದ್ದರು," ಎನ್ನುತ್ತಾರೆ ಮಾಧುಸ್ವಾಮಿ ಬಲ್ಲವರು.

      ಆಗಿನಿಂದಲೂ ಅವರು ಜೆಸಿ ಪುರವನ್ನು ಬಿಟ್ಟವರಲ್ಲ. ಪ್ರತಿ ದಿನ ಬೆಳಗ್ಗೆ ಜಮೀನಿಗೆ ಹೋಗದೆ ಅವರ ದಿನವೇ ಶುರು ಆಗುತ್ತಿರಲಿಲ್ಲ ಎಂದು ನೆನಪಿಸಿಕೊಳ್ಳುತ್ತಾರೆ ಜೆಸಿ ಪುರದವರು. ಈಗಲೂ ಸದನ ಇಲ್ಲದೆ ಇದ್ದರೆ ಮಾಧುಸ್ವಾಮಿ ಅವರ ಪಾಲಿಗೆ ದಿನ ಶುರು ಆಗುವುದೇ ಜಮೀನಿಗೆ ಹೋಗುವುದರಿಂದ.

      ಮಾಧುಸ್ವಾಮಿ ಅವರ ಪತ್ನಿ ಹೆಸರು ತ್ರಿವೇಣಿ. ಇಬ್ಬರು ಮಕ್ಕಳು. ಒಂದು ಗಂಡು- ಒಂದು ಹೆಣ್ಣು. ಮಗ ವೈದ್ಯರು, ಹೆಸರು ಅಭಿಜ್ಞ. ಈಗ ಮಗಳು ಕೂಡ ಎಂಬಿಬಿಎಸ್ ಓದ್ತಾ ಇದ್ದಾರೆ. ಅವರ ಕೌಟುಂಬಿಕ ವಿವರದ ಬಗ್ಗೆ ಇಷ್ಟು ಮಾಹಿತಿ ಸಿಗುತ್ತದೆ.

      ಮಾಧುಸ್ವಾಮಿ ಅವರು ಗ್ರೀಕ್ ನಾಟಕದ ದುರಂತ ನಾಯಕನ ಥರ ಕಾಣ್ತಾರೆ. ಏಕೆಂದರೆ, ಅವರಲ್ಲಿ ಈಗಲೂ ಸಮಾಜವಾದಿ ಆಲೋಚನೆಗಳು ಇವೆ. ಆದರೆ ಅವುಗಳ ವಿರುದ್ಧ ನಡೆಯುತ್ತಾರೆ. ಈಗಲೂ ಬಿಜೆಪಿ ಸಮಾರಂಭಗಳಿಗೆ ಹೋದರೆ ಆ ಪಕ್ಷದ ಗುರುತಿನ ಚಿಹ್ನೆ ಹಾಕಲ್ಲ. ಅಂದರೆ ಅವರ ಚಿಹ್ನೆಯನ್ನು ತೋಳಿಗೋ, ಕೊರಳಿಗೋ ಹಾಕಲ್ಲ. ಬಿಜೆಪಿಯ ತತ್ವ- ಸಿದ್ಧಾಂತವನ್ನು ವಿರೋಧಿಸಿಕೊಂಡೆ ಬಂದವರು ಅವರು. ಆದರೆ ಬಿಜೆಪಿಗೆ ಹೋಗುವುದು ಸ್ಥಳೀಯವಾಗಿ ಅವರಿಗೆ ಅನಿವಾರ್ಯ ಆಯಿತು.

      ರಾಜಕೀಯ ಅನಿವಾರ್ಯ:
      "ಈ ಹಿಂದಿನ ಚುನಾವಣೆಗಳಲ್ಲಿ ಜಾತಿ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರಾದ ಕಿರಣ್ ಕುಮಾರ್ ಹಾಗೂ ಮಾಧುಸ್ವಾಮಿ ಮಧ್ಯ ಮತ ವಿಭಜನೆ ಆಗುತ್ತಿತ್ತು. ಇಬ್ಬರೂ ಲಿಂಗಾಯತರು. ಹೀಗಾಗಿ ಜೆಡಿಎಸ್ ನ ಸುರೇಶ್ ಬಾಬು ಗೆದ್ದು ಬಿಡುತ್ತಿದ್ದರು. ಈ ಸಲ ಸಂತೋಷ್ ಜಯಚಂದ್ರ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸದಿದ್ದರೆ ಮಾಧುಸ್ವಾಮಿ ಗೆಲ್ಲೋದು ಕಷ್ಟ ಇತ್ತು. ಪ್ರತಿ ಬಾರಿಗಿಂತ ಕಾಂಗ್ರೆಸ್ ಹೆಚ್ಚು ಮತ ಪಡೆದ ಕಾರಣ ಬಿಜೆಪಿಯ ಮಾಧುಸ್ವಾಮಿ ಗೆದ್ದರು" ಎನ್ನುತ್ತಾರೆ ಸ್ಥಳೀಯರು.

      ಈ ವಿಚಾರವನ್ನು ಸ್ವತಃ ಮಾಧುಸ್ವಾಮಿ ಅವರೇ ತಮ್ಮ ಆಪ್ತರಲ್ಲಿ ಕೂಡ ಹೇಳಿಕೊಂಡಿದ್ದಾರೆ. ಇನ್ನು ಸ್ವಭಾವದ ವಿಚಾರಕ್ಕೆ ಬಂದರೆ, "ನನಗೆ ಎಲ್ಲವೂ ಗೊತ್ತು" ಎಂಬ ಗತ್ತು ಮಾಧುಸ್ವಾಮಿ ಅವರಿಗೆ ಇದೆ. ಆ ಕಾರಣಕ್ಕೆ ಬೇರೆಯವರ ಅಭಿಪ್ರಾಯಕ್ಕೆ ಬೆಲೆ ಕೊಡಲ್ಲ. ಆ ಕಾರಣಕ್ಕೆ ಬೇರೆಯವರಿಗೆ ಗೌರವ ನೀಡಲ್ಲ ಎಂಬುದು ಅವರ ಬಗ್ಗೆ ಕೇಳಿಬರುವ ಆರೋಪ.

      ಆದರೆ, ಜನರ ಪಾಲಿಗೆ ಮಾಧುಸ್ವಾಮಿ ಅವರು ಬಿಸಿ ತುಪ್ಪ ಇದ್ದಂತೆ. ನುಂಗಕ್ಕೂ ಆಗಲ್ಲ, ಉಗುಳಕ್ಕೂ ಆಗಲ್ಲ. ಅಂಥ ಒಳ್ಳೆ ನಾಯಕನನ್ನು ದೂರ ಮಾಡಿಕೊಳ್ಳುವುದು ಜನರಿಗೆ ಇಷ್ಟ ಇಲ್ಲ. ಇಲ್ಲಿ ಇನ್ನೂ ಎರಡು ಸಂಗತಿ ಇದೆ. ಮಾಧುಸ್ವಾಮಿ ಅವರು ಇತರರನ್ನು ಬೆಳೆಯುವುದಕ್ಕೆ ಬಿಡಲ್ಲ ಹಾಗೂ ಆಳದಲ್ಲಿ ಲಿಂಗಾಯತ ಜಾತಿ ಪ್ರೇಮ ಇದೆ ಅನ್ನೋದನ್ನು ಚಿಕ್ಕನಾಯಕನಹಳ್ಳಿಯ ಜನರು ತುಂಬ ಸಣ್ಣ ಧ್ವನಿಯಲ್ಲಿ ಹೇಳುತ್ತಾರೆ.

      ಅವುಗಳೇನೇ ಇರಲಿ, ವಿಧಾನಸಭೆ ಅಧಿವೇಶನದ ವಿಚಾರ ಬಂದಾಗ ಮಾಧುಸ್ವಾಮಿ ಬಿಜೆಪಿ ಪಾಲಿಗೆ ಆಪ್ತರಾಗಿ ಕಾಣಿಸುತ್ತಿದ್ದಾರೆ. ಅವರ ತಿಳಿವಳಿಕೆ ಕೇಸರಿ ಪಾಳಯಕ್ಕೆ ಹಲವು ಸಂದರ್ಭಗಳಲ್ಲಿ ಕಾಪಾಡಿದ್ದಕ್ಕೆ ರಾಜ್ಯದ ಜನ ಸಾಕ್ಷಿಯಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+