ನೀರಲ್ಲಿ ಕಾರು ನಿಂತರೆ ಸ್ಟಾರ್ಟ್ ಮಾಡದಿರಿ ಜೋಕೆ; ಇನ್ಷೂರೆನ್ಸ್ ಟಿಪ್ಸ್
ಬೆಂಗಳೂರಿನಲ್ಲಿ ಭೀಕರ ಮಳೆ ಮತ್ತು ಪ್ರವಾಹ ಪರಿಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ಅದರಲ್ಲೂ ಔಟರ್ ರಿಂಗ್ ರೋಡ್ ಹಾಗು ಸುತ್ತಮುತ್ತಲ ಪ್ರತಿಷ್ಠಿತ ಪ್ರದೇಶಗಳೇ ಜಲಾವೃತವಾಗಿವೆ. ಅನೇಕ ಕಾರುಗಳು ನೀರಲ್ಲಿ ಸಿಲುಕಿಕೊಂಡಿರುವುದು, ಹಲವು ಕಾರುಗಳು ನೀರಲ್ಲಿ ತೇಲುತ್ತಿರುವ ದೃಶ್ಯಗಳು ನಮ್ಮ ಕಣ್ಮುಂದೆ ಇವೆ.
ಕಾರುಗಳಿಗೆ ಹಾನಿಯಾದರೆ ಅದರ ದುರಸ್ತಿಗೇ ಸಾವಿರಾರು ರೂಪಾಯಿ ಬೇಕಾಗುತ್ತದೆ. ಕೆಲ ಕಾರುಗಳಿಗೆ ಲಕ್ಷಗಟ್ಟಲೆ ಹಣ ಬೇಕು. ಕಾರುಗಳಿಗೆ ನಾವು ಸಾಮಾನ್ಯವಾಗಿ ಇನ್ಷೂರೆನ್ಸ್ ಮಾಡಿಸಿರುತ್ತೇವೆ. ಆದರೆ, ಎಲ್ಲಾ ವಿಮೆಗಳೂ ನೀರಿನ ಅವಘಡಕ್ಕೆ ಕವರ್ ಮಾಡುವುದಿಲ್ಲ ಎಂಬುದು ಗೊತ್ತಿರಲಿ.
ಅದರಲ್ಲೂ ಬೆಂಗಳೂರಿನಲ್ಲಿ ಈ ವರ್ಷದ ರೀತಿಯಲ್ಲಿ ಜಲಕಂಟಕ ಆಗುವುದು ಅಪರೂಪ. ಹೀಗಾಗಿ, ಜಲಪ್ರವಾಹಕ್ಕೆಂದು ಕಾರಿನ ವಿಮೆ ಮಾಡಿಸುವ ಬೆಂಗಳೂರಿಗರು ಕಡಿಮೆ. ಆದರೂ ಇಂಥ ಮಳೆ ಮತ್ತು ಪ್ರವಾಹ ಸ್ಥಿತಿ ಎದುರಾಗಿ ನಿಮ್ಮ ಕಾರು ನೀರಿನಲ್ಲಿ ಸಿಲುಕಿಕೊಂಡುಬಿಟ್ಟರೆ ಏನು ಮಾಡುವುದು? ವಿಮೆ ಹೇಗೆ ಕ್ಲೇಮ್ ಮಾಡುವುದು? ವಿಮೆ ಅನ್ವಯ ಆಗುವ ರೀತಿಯಲ್ಲಿ ಕಾರನ್ನು ಹೇಗೆ ನಿಭಾಯಿಸುವುದು?

ಗಾಡಿ ಸ್ಟಾರ್ಟ್ ಮಾಡದಿರಿ
ಒಂದು ವೇಳೆ ನಿಮ್ಮ ಕಾರು ಮಳೆ ನೀರಿನಲ್ಲಿ ನಿಂತುಬಿಟ್ಟರೆ, ಅಥವಾ ನೀರಿನಲ್ಲಿ ನಿಮ್ಮ ಕಾರು ಮುಳುಗಿಬಿಟ್ಟರೆ ಬಹಳ ಹುಷಾರಾಗಿರಬೇಕು. ಅಂಥ ಸಂದರ್ಭದಲ್ಲಿ ಎಂಜಿನ್ ಸ್ಟಾರ್ಟ್ ಮಾಡಬೇಡಿ. ಹಾಗೊಂದು ವೇಳೆ ಮಾಡಿದರೆ ನೀರು ನಿಮ್ಮ ಎಂಜಿನ್ನೊಳಗೆ ಹೋಗಿ ಲಾಕ್ ಆಗುವಂತೆ ಮಾಡಬಹುದು. ಇದನ್ನು ಹೈಡ್ರೋಸ್ಟಾಟಿಕ್ ಲಾಕ್ ಸ್ಥಿತಿ ಎನ್ನುತ್ತಾರೆ. ಎಂಜಿನ್ ಓಡುತ್ತಲೇ ನೀರು ಎಂಜಿನ್ನೊಳಗೆ ಹೋಗಿ ಪಿಸ್ಟನ್, ಬೇರಿಂಗ್, ಕ್ರ್ಯಾಂಕ್ಶಾಫ್ಟ್ಗೆ ಹಾನಿ ಮಾಡುತ್ತದೆ. ಈ ರೀತಿ ಕೆಟ್ಟುಹೋದ ಎಂಜಿನ್ನ ದುರಸ್ತಿಗೆ ಬಹಳ ಖರ್ಚಾಗುತ್ತದೆ. ಇನ್ಷೂರೆನ್ಸ್ ಕೂಡ ಕವರ್ ಆಗುವುದಿಲ್ಲ.
ಹೀಗಾಗಿ, ನೀರಿನಲ್ಲಿ ಕಾರು ನಿಂತಿದ್ದರೆ ಇಗ್ನಿಶನ್ ಆನ್ ಮಾಡುವ ಗೋಜಿಗೂ ಹೋಗಬೇಡಿ. ಬದಲಾಗಿ ನೀವು ಇನ್ಷೂರೆನ್ಸ್ ಮಾಡಿಸಿದ ಕಂಪನಿಗೆ ಕರೆ ಮಾಡಿ ತಿಳಿಸಿ. ಅಥವಾ ನೀವು ಕಾರು ಖರೀದಿಸಿದ ಡೀಲರ್ ಮೂಲಕ ಕಾರನ್ನು ಟೋವಿಂಗ್ ಮಾಡಿ ಡೀಲರ್ನ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಯೇ ಕಾರಿನ ಪರಿಶೀಲನೆ ಮತ್ತು ದುರಸ್ತಿಯನ್ನು ಮಾಡಿಸಿ.
ಸೀಟು ಇತ್ಯಾದಿ ಭಾಗಕ್ಕೆ ಹಾನಿಯಾಗಿದ್ದರೆ?
ಕಾರಿನೊಳಗೆ ನೀರು ನುಗ್ಗಿದರೆ ಎಂಜಿನ್ ಮಾತ್ರವಲ್ಲದೆ ಸೀಟು, ಮ್ಯೂಸಿಕ್ ಸಿಸ್ಟಂ ಮತ್ತಿತರ ಅನೇಕ ಭಾಗಗಳಿಗೆ ಹಾನಿಯಾಗುತ್ತದೆ. ಇವು ಕಾರನ್ನು ಕೊಳ್ಳುವಾಗ ಜೊತೆಯಲ್ಲಿ ಬಂದ ಭಾಗಗಳಾಗಿದ್ದರೆ ಮೂಲ ಇನ್ಸೂಷರೆನ್ಸ್ನಲ್ಲಿ ಕವರ್ ಆಗುತ್ತದೆ. ಆದರೆ, ಪ್ರತ್ಯೇಕವಾಗಿ ಖರೀದಿ ಮಾಡಿ ಅಳವಡಿಸಿದ್ದರೆ ವಿಮೆ ಅನ್ವಯ ಆಗುವುದಿಲ್ಲ. ನಿಮ್ಮ ಇನ್ಷೂರೆನ್ಸ್ನಲ್ಲಿ ನೀವು ಇಂಥ ಬಿಡಿಭಾಗಗಳನ್ನೂ ಕವರೇಜ್ನಲ್ಲಿ ಒಳಗೊಳ್ಳುವಂತೆ ಆಡ್ ಆನ್ ಮಾಡಿಸಿದ್ದರೆ ಮಾತ್ರ ಇವುಗಳಿಗೆ ಆಗುವ ಹಾನಿಗೆ ವಿಮೆ ಕ್ಲೇಮ್ ಮಾಡಬಹುದು.

ಟಯರ್, ಟ್ಯೂಬ್, ಬ್ಯಾಟರಿಗೆ ಹಾನಿಯಾಗಿದ್ದರೆ?
ಇವುಗಳಿಗೆ ಹಾನಿಯಾದರೆ ಕ್ಲೇಮ್ ಮಾಡಬಹುದು. ಆದರೆ, ಝೀರೋ ಡಿಪ್ರಿಶಿಯೇಶನ್ ಪಾಲಿಸಿ ಮಾಡಿಸಿದ್ದರೆ ಪೂರ್ಣ ಕ್ಲೇಮ್ ಆಗುತ್ತದೆ. ಒಂದು ವೇಳೆ ಝೀರೋ ಡಿಪ್ರಿಶಿಯೇಶನ್ ಪಾಲಿಸಿ ಮಾಡಿಸದೇ ಇದ್ದರೆ ಶೇ. 50ರಷ್ಟು ಮಾತ್ರ ಸಿಗುತ್ತದೆ.
ಕಾಂಪ್ರಹೆನ್ಸಿವ್ ಇನ್ಷೂರೆನ್ಸ್ ಪಾಲಿಸಿ
ಪ್ರವಾಹ ಇತ್ಯಾದಿ ನೈಸರ್ಗಿಕ ವಿಕೋಪದಿಂದ ಕಾರಿಗೆ ಹಾನಿಯಾಗಿದ್ದರೆ ಅದನ್ನು ಎಲ್ಲಾ ವಿಮೆಗಳೂ ಕವರ್ ಮಾಡುವುದಿಲ್ಲ. ಅದಕ್ಕೆ ನೀವು ಸಮಗ್ರ ವಿಮೆ ಪಾಲಿಸಿಯನ್ನು ಮಾಡಿಸುವುದು ಉತ್ತಮ. ಕಾಂಪ್ರೆಹೆನ್ಸಿವ್ ಇನ್ಷೂರೆನ್ಸ್ ಪಾಲಿಸಿಯು ಪ್ರವಾಹ, ಭೂಕಂಪ, ಚಂಡಮಾರುತ ಇತ್ಯಾದಿ ನೈಸರ್ಗಿಕ ವಿಕೋಪ ಅವಘಡಗಳನ್ನು ಕವರ್ ಮಾಡುತ್ತದೆ. ಹಾಗೆಯೇ, ಅಪಘಾತ, ಬೆಂಕಿ ಅವಘಡ, ಮಾನವ ಸೃಷ್ಟಿತ ದುರಂತ, ಕಳವು ಇತ್ಯಾದಿ ಸಂದರ್ಭದಲ್ಲೂ ವಿಮೆ ಕ್ಲೇಮ್ ಆಡಲು ಅವಕಾಶ ಕೊಡುತ್ತದೆ.
ನೀವು ನೈಸರ್ಗಿಕ ವಿಕೋಪ ಹೆಚ್ಚು ಇರುವ ಪ್ರದೇಶಗಳಲ್ಲಿ ಇದ್ದರೆ ಅಥವಾ ಅಂಥ ಪ್ರದೇಶಗಳಿಗೆ ಆಗಾಗ್ಗೆ ಹೋಗಿ ಬರುತ್ತೀರೆಂದಾದರೆ ಕಾಂಪ್ರೆಹೆನ್ಸಿವ್ ಇನ್ಷೂರೆನ್ಸ್ ಪಾಲಿಸಿ ಮಾಡಿಸುವುದು ಉತ್ತಮ. ಇದರ ಪ್ರೀಮಿಯಂ ತುಸು ದುಬಾರಿ ಎನಿಸಿದರೂ ಕಾರಿನ ರಿಪೇರಿಗೆ ತಗಲುವು ದುಬಾರಿ ವೆಚ್ಚವನ್ನು ಪರಿಗಣಿಸಿದರೆ ಪಾಲಿಸಿ ಉತ್ತಮ ಮತ್ತು ಸುರಕ್ಷಿತ ಎನಿಸುತ್ತದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications