ಪ್ರವಾಸಿಗರನ್ನು ಅಚ್ಚರಿಗೊಳಿಸುವ ಶಿವನ ತಾಣಗಳು, ವ್ರತದ ಸಂಪೂರ್ಣ ಮಾಹಿತಿ
ಭುವನ ಜೀವನವೆಲ್ಲ ಶಿವನ ಲೀಲಾರಂಗ | ಅವನು ಶಿವನಿವನು ಶಿವ ಶಿವ ನೀನು ನಾನು || ತವಕಪಡಿಸುವ ನಮ್ಮ ಕರಳೆಸುವ ಕುಣಿಯಿಸುವ ಭುವವೆಲ್ಲ ಶಿವಲೀಲೆ - ಮರುಳ ಮುನಿಯ.
ಶಿವಭಕ್ತರ ಪಾಲಿಗೆ ಶಿವನಿಗಿಂತ ಆಪ್ತತೆ ಮೂಡಿಸುವ ದೈವ ಬೇರಿಲ್ಲ. ಜನ್ಮಕೊಟ್ಟ ತಂದೆಗಿಂತ ಹೆಚ್ಚಾಗಿ ಆತ್ಮಜ್ಯೋತಿಯ ದೀಪ ಬೆಳಗಿದೆ. ವಿಶ್ವಾತ್ಮನ ಲಿಂಗ ಸ್ಪರ್ಶಿಸಿದಾಗಿನ ಸಾರ್ಥಕತೆಯೇ ಒಂದೀಡಿ ಜೀವನದ ಸಾರ್ಥಕತೆಯಾಗಿ ಪರಿಣಮಿಸುವುದು.
ಹೀಗಾಗಿಯೇ ದೇಹ ಮತ್ತು ಆತ್ಮದ ನಡುವೆ ಪೂರ್ವ ಪರಿಚಯ ಥಳುಕು ಹತ್ತಿಕೊಳ್ಳುವ ನಿರೀಕ್ಷೆ ಹಾಗೂ ಆಧ್ಯಾತ್ಮಿಕತೆ ಮನಃ ಪ್ರಾಪ್ತಿಯಾಗುವ ಬಯೆಕೆ ಇಲ್ಲಿದೆ. ವ್ಯಕ್ತಿಗತವಾದ ಬೈತನ್ಯವು ಶುದ್ಧ ಚೈತನ್ಯವಾದ ಪರಮಾರ್ಥ ತತ್ವದಲ್ಲಿ ಒಂದಾಗುವುದೇ ಆತ್ಮಸಾಕ್ಷಾತ್ಕಾರ ಅಥವಾ ಈಶ್ವರ ದರ್ಶನ.
ಹುಟ್ಟಿದೆಲ್ಲವೂ ಮರಣ ಹೊಂದಲೇಬೇಕು. ಉತ್ಪತ್ತಿಯಾದುದೆಲ್ಲವೂ ನಾಶವಾಗಲೇಬೇಕು. ಇದು ಪ್ರಕೃತಿ ನಿಯಮ. ಈ ಘಟನೆಯನ್ನುಂಟು ಮಾಡುವ ತತ್ವ. ಈ ನಾಶದ ಹಿಂದಿರುವ ಶಕ್ತಿಯೇ ಶಿವ. ಶಿವ ಎಂದರೆ ಸಂತೋಷ ಕೊಡುವವನು ಎಂದರ್ಥ. ತ್ರಿಮೂರ್ತಿಗಳಲ್ಲಿ ಇವನೂ ಕೊನೆಯವನಾಗಿದ್ದು ತಮೋಗುಣದ ಪ್ರತೀಕವೂ ಹೌದು.
ಶಿವನ ವಿವಿಧ ಅವತಾರಗಳಾದ ರುದ್ರ, ನೀಲಕಂಠ, ಕಾಲಭೈರವ, ನಟರಾಜ, ದಕ್ಷಿಣಾಮೂರ್ತಿ, ವೀರಭದ್ರ ಇತ್ಯಾದಿ ಲೀಲಾ ಕಾರ್ಯಗಳ ಅವತಾರಗಳ ಚಿತ್ರಣವಿದೆ. ಗಣೇಶ ಜನನದ ಹಿನ್ನೆಲೆ ಮತ್ತು ಕಾರ್ತಿಕೇಯ ಅಥವಾ ಸುಭ್ರಮಣ್ಯ, ಧರ್ಮ ಶಾಸ್ತ್ರ ಅಯ್ಯಪ್ಪನ ಜನನದ ಉದ್ದೇಶಗಳೂ ಶಿವಪುರಾಣದಲ್ಲಿ ವರ್ಣಿಸಲಾಗಿದೆ.

ಆಹಾರ ನೀರು ಮುಟ್ಟದೆ ಉಪವಾಸ ಮಾಡಿ
ಶಿವರಾತ್ರಿಯು ಹಿಂದೂ ಧರ್ಮದವರಿಗೆ ಮಹತ್ವದ ಹಬ್ಬವಾಗಿದೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಕೈಲಾಸನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು. ಅಂದು ಆಚರಿಸುವ ಉಪವಾಸದಲ್ಲಿ. ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಭಕ್ತರು ಆಹಾರ ನೀರು ಮುಟ್ಟದೆ ಉಪವಾಸ ಕೈಗೊಳ್ಳುತ್ತಾರೆ. ಈ ಉಪವಾಸವು ಮಾನವರಲ್ಲಿ ರಜ ಮತ್ತು ತಾಮಸ ಗುಣಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ದೇಹಕ್ಕೆ ಆರೋಗ್ಯದೊಂದಿಗೆ ರಜ ತಾಮಸ ಗುಣಗಳನ್ನು ನಿಯಂತ್ರಣದಲ್ಲಿಡುವ ವಿಶೇಷ ಸಿದ್ದಿ ಶಿವರಾತ್ರಿ ವೃತಾ ಆಚರಣೆಯಿಂದ ಲಭ್ಯ. ರಜ ಗುಣಗಳೆಂದರೆ ಸಿಟ್ಟು, ಅಸೂಯೆ, ಮುಂತಾದವು. ತಾಮಸ ಗುಣಗಳೆಂದರೆ ಅಂಧಕಾರ, ಅಜ್ಞಾನ, ಪ್ರತಿರೋಧ, ಸಾವು ಮತ್ತು ವಿನಾಶ. ಶಿವರಾತ್ರಿಯ ಉಪವಾಸವು ಈ ಎರಡೂ ಕೆಟ್ಟ ಗುಣಗಳ ಮೇಲೆ ಹತೋಟಿಯನ್ನಿಡುವ ಶಕ್ತಿಯನ್ನು ನಮ್ಮಲ್ಲಿ ಉತ್ಪಾದಿಸುತ್ತದೆ. ವೃತಾಚರಣೆ ಮಾಡುವಾಗ ಕೆಲವೊಂದು ಸಿದ್ಧಾಂತಗಳನ್ನು ಅನುಸರಿಸಬೇಕಾಗುತ್ತದೆ.

ಎಂಟು ಪವಿತ್ರ ವೃತಗಳಲ್ಲಿ ಶಿವರಾತ್ರಿಯೂ ಒಂದು
ಶಿವರಾತ್ರಿಯಲ್ಲಿ ನಿತ್ಯ ಶಿವರಾತ್ರಿ, ಪಕ್ಷ ಶಿವರಾತ್ರಿ, ಮಾಸ ಶಿವರಾತ್ರಿ, ಯೋಗ ಶಿವರಾತ್ರಿ, ಮಹಾ ಶಿವರಾತ್ರಿ ಎಂದು ಐದು ಭಾಗಗಳಿವೆ. ಶಿವನ ಎಂಟು ಪವಿತ್ರ ವೃತಗಳಲ್ಲಿ ಶಿವರಾತ್ರಿಯೂ ಒಂದು. ಶಿವನು ತ್ರಿಲೋಕ ಸಂಚಾರಿ ಮತ್ತು ಬ್ರಹ್ಮ ಸ್ವರೂಪಿ ಎಂದು ಈ ಜಗತ್ತಿಗೆ ತೋರಿಸಲು ಭೂಮಿಯಿಂದ ಆಕಾಶದವರೆಗೂ ಎತ್ತರವಾಗಿ ಶಿವಲಿಂಗದ ರೂಪದಲ್ಲಿ ಜ್ಯೋತಿಯಾಗಿ ನಿಂತ ದಿನವೇ ಶಿವರಾತ್ರಿ. ಶಿವನನ್ನು ನಾವು ಮಾನವ ಮತ್ತು ಲಿಂಗರೂಪದಲ್ಲಿ ಪೂಜಿಸಬಹುದು. ಮಾನವ ರೂಪೀ ಶಿವನ ಅರ್ಚನೆ ಅಪರೂಪ. ಲಿಂಗ ರೂಪದ ಶಿವನನ್ನು ಪೂಜಿಸುವವರೇ ಹೆಚ್ಚು. ಲಿಂಗ ಎಂದರೆ ಚಿಹ್ನೆ ಅಥವಾ ಗುರುತು ಎಂದರ್ಥ, ಸಾಕಾರದಿಂದ ನಿರಾಕಾರಕ್ಕೆ ಸಾಗಲು ನೆರವಾಗುವ ಸಾಧನವೇ ಲಿಂಗ, ಶಿವಲಿಂಗವನ್ನು ಭಕ್ತಿಯಿಂದ ನಿರಂತರವಾಗಿ ಪೂಜಿಸಿದರೆ ಅಂತ್ಯದಲ್ಲಿ ಮೋಕ್ಷ ಪಡೆಯಬಹುದು.
ಶಿವ ಅಂದ್ರೆ ಕಲ್ಯಾಣ ಎಂದು ಅರ್ಥ. ಲೋಕ ಕಲ್ಯಾಣಕ್ಕಾಗಿ ಮತ್ತು ಕುಟುಂಬದ ಕಲ್ಯಾಣಕ್ಕಾಗಿ ರಾತ್ರಿ ಇಡೀ ಆ ಪರಶಿವನ ಧ್ಯಾನ ಮಾಡುವುದು. ಇದು ಮಾಘ ಮಾಸದ ಬಹಳ ಚತುರ್ದಶಿಯಂದು ಬರುವುದು. ಇದರ ಬಗ್ಗೆ ಒಂದು ಸಣ್ಣ ಕಥೆ ಇದೆ. ಶಿವಪುರಾಣದಲ್ಲಿ ಹೇಳಿರುವಂತೆ, ಒಮ್ಮೆ ಬ್ರಹ್ಮ ಮತ್ತು ವಿಷ್ಣು ಅವರುಗಳಲ್ಲಿ ಯಾರು ಶ್ರೇಷ್ಠರು ಎಂಬ ಬಗ್ಗೆ ಜಗಳವಾಯಿತು. ಇವರಿಬ್ಬರ ಜಗಳದಿಂದ ಬೇಸತ್ತ ಇತರ ದೇವರುಗಳು, ಮಧ್ಯಸ್ಥಿಕೆವಹಿಸಲು ಶಿವನನ್ನು ಕೇಳಿಕೊಂಡರು. ಆಗ ಶಿವನು ಉದ್ದನೆಯ ಬೆಂಕಿಯ ಕಂಬದಂತೆ ಇವರಿಬ್ಬರ ಮಧ್ಯೆ ನಿಂತನು. ಬೆಂಕಿಯ ತೀಕ್ಷ್ಣತೆಯನ್ನು ಕಂಡು ಇವರಿಬ್ಬರೂ ಇದರ ಮೂಲವನ್ನು ಹುಡುಕಲು ಹೊರಟರು. ಬ್ರಹ್ಮನು ಹಂಸದ ರೂಪವಾಗಿ ಆಕಾಶಕ್ಕೂ, ವಿಷ್ಣವು ವರಾಹ ರೂಪದಲ್ಲಿ ಭೂಮಿಯೊಳಗೂ ಹೊರಟರು.

ಶ್ರದ್ಧಾ, ಭಕ್ತಿಯಿಂದ ಬಿಲ್ವಪತ್ರೆಯ ಮೂಲಕ ಅರ್ಚಿಸಿ
ಶಿವಲಿಂಗದಲ್ಲಿ ಸ್ವಯಂ ಭೂ ಮತ್ತು ಮಾನವ ನಿರ್ಮಿತ ಎಂದು ಎರಡು ವಿಧ. ಸ್ವಯಂ ಭೂ ಲಿಂಗ ಪ್ರಕೃತಿಯಲ್ಲಿ ಸಹಜವಾಗಿ ತನ್ನಿಂತಾನೇ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಉದಾಹರಣೆಯೆಂದರೆ ಅಮರನಾಥ ಗುಹೆಯಲ್ಲಿರುವ ಶಿವಲಿಂಗ, ಮಾನವ ನಿರ್ಮಿತ ಶಿವಲಿಂಗವೆಂದರೆ ಲೋಹ ಮತ್ತು ಶಿಲೆಗಳಿಂದ ಮತ್ತು ವಿಶೇಷ ಸಂದರ್ಭಗಳಲ್ಲಿ ಗಂಧ, ಬೆಲ್ಲ, ಮರಳು, ಹಿಟ್ಟು ಮತ್ತು ಹೂಗಳಿಂದ ನಿರ್ಮಿಸುವ ಲಿಂಗ, ಲೋಹ ಮತ್ತು ಶಿಲೆಗಳಿಂದ ಮಾಡಿದ ಲಿಂಗಗಳನ್ನು ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿ ನಿತ್ಯ ಪೂಜಿಸಲಾಗುತ್ತದೆ.
ಜ್ಯೋತಿರ್ಲಿಂಗ ಶಿವಲಿಂಗಗಳಲ್ಲಿ ಅತೀ ಮುಖ್ಯ ಮತ್ತು ಮಹತ್ವದ ಲಿಂಗಗಳೆಂದರೆ ಸೌರಾಷ್ಟ್ರದ ಸೋಮನಾಥೇಶ್ವರ, ಶ್ರೀಶೈಲದ ಮಲ್ಲಿಕಾರ್ಜುನ, ಉಜ್ಜಯಿನಿಯ ಮಹಾಕಾಲೇಶ್ವರ, ಓಂಕಾರದ ಮಾಮಲೇಶ್ವರ, ಪರಳಿಯ ವೈದ್ಯನಾಥೇಶ್ವರ, ಡಾಕಿಣ್ಯದ ಭೀಮೇಶ್ವರ, ರಾಮೇಶ್ವರಂನ ರಾಮೇಶ್ವರ, ಧರುತವನದ ನಾಗೇಶ್ವರ, ವಾರಣಾಸಿಯ ವಿಶ್ವೇಶ್ವರ, ಗೌತಮೀತಟದ ತ್ರ್ಯಂಬಕೇಶ್ವರ, ಹಿಮಾಲಯದ ಕೇದಾರೇಶ್ವರ ಮತ್ತು ಶಿವಾಲಯದ ಘುಷ್ಮೇಶ್ವರ ಸೇರಿ ಒಟ್ಟು 12 ಜ್ಯೋತಿರ್ಲಿಂಗಗಳು, ನಮ್ಮ ದೇಶದಲ್ಲಿ ಈ ಜ್ಯೋತಿರ್ಲಿಂಗಗಳಿಗೆ ವಿಶೇಷ ಸ್ಥಾನಮಾನಗಳಿವೆ.
ಶಿವನಿಗೆ 10,000 ಹೆಸರುಗಳಿಗೆ ಎಂದು ವ್ಯಾಸರು ತಿಳಿಸಿರುತ್ತಾರೆ. ಅದರಲ್ಲಿ 1008 ನಾಮಗಳು ಶಿವನ ಸಹಸ್ರನಾಮದಲ್ಲಿವೆ. ಇದರಲ್ಲಿ "ಓಂ ನಮಃ ಶಿವಾಯ" ಎಂಬುದು ಶಿವ ಪಂಚಾಕ್ಷರಿ ಮಂತ್ರವಾಗಿದೆ. ಮಹಾಶಿವರಾತ್ರಿಯ ಪುಣ್ಯ ಸ್ಪರ್ಶಕ್ಕಾಗಿ ಶಿವಾತ್ಮ ಲಿಂಗದ ಕವಲುಗಳಲ್ಲಿ ನಮ್ಮ ನಿಮ್ಮೆಲ್ಲರ ಹೃದಯಂಗಮ ವೇದ್ಯ "ಓಂ ನಮಃ ಶಿವಾಯ" ಬ್ರಹ್ಮಮುರಾರಿ ಸುರಾರ್ಜಿತಲಿಂಗಂ, ನಿರ್ಮಲಭಾಷಿತ ಶೋಭಿತಲಿಂಗಂ | ಜನ್ಮಜ ದುಃಖ ವಿನಾಶಕಲಿಂಗಂ, ತತ್ವಣಮಾಮಿ ಸದಾಶಿವ ಲಿಂಗಂ || ಶಿವನ 1008 ವಿಶೇಷ ನಾಮಗಳನ್ನು ಶಿವರಾತ್ರಿಯ ದಿನ ಶ್ರದ್ಧಾ, ಭಕ್ತಿಯಿಂದ ಬಿಲ್ವಪ್ರತಿಯ ಮೂಲಕ ಅರ್ಚಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ.

ಮಹಾಶಿವರಾತ್ರಿಯು 5ನೇ ಶತಮಾನದಿಂದ ಪ್ರಾರಂಭ
ಜೋನ್ಸ್ ಮತ್ತು ರಯಾನ್ ಪ್ರಕಾರ ಮಹಾಶಿವರಾತ್ರಿಯು 5ನೇ ಶತಮಾನದ ಪ್ರಾರಂಭವಾಯಿತು. ಮಹಾಶಿವರಾತ್ರಿ ಹಲವಾರು ಪುರಾಣಗಳಲ್ಲಿ, ವಿಶೇಷವಾಗಿ ಸ್ಕಂದ ಪುರಾಣ, ಲಿಂಗ ಪುರಾಣ ಮತ್ತು ಪದ್ಮ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಈ ಮಧ್ಯಕಾಲಿನ ಯುಗದ ಶೈವ ಗ್ರಂಥಗಳು ಈ ಉತ್ಸವದೊಂದಿಗೆ ಸಂಬಂಧಿಸಿದ ವಿವದ ಪೌರಾಣಿಕತೆಗಳನ್ನು ಪ್ರಸ್ತುತಪಡಿಸುತ್ತವೆ. ಆದರೆ ಲಿಂಗದಂತೆಯೇ ಶಿವನ ಪ್ರತಿಮೆಗಳಿಗೆ ಉಪವಾಸ ಮತ್ತು ಗೌರವವನ್ನೂ ಉಲ್ಲೇಖಿಸುತ್ತವೆ. ಶಿವಿಸಂ ಸಂಪ್ರದಾಯದಲ್ಲಿನ ಒಂದು ದಂತಕಥೆಯ ಪ್ರಕಾರ ಶಿವನು ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಸ್ವರ್ಗೀಯ ನೃತ್ಯವನ್ನು ನಿರ್ವಹಿಸುವ ರಾತ್ರಿ ಮತ್ತೊಂದು ದಂತಕಥೆಯ ಪ್ರಕಾರ ಶಿವ ಮತ್ತು ಪಾರ್ವತಿ ವಿವಾಹವಾದ ರಾತ್ರಿ.
ಶಿವನ ಮುಖ್ಯ ತಾಣಗಳು ಗೋಕರ್ಣ, ಯಾಣ, ಸಹಸ್ರಲಿಂಗ, ಕವಳಾಗುಹೆ, ಮುರ್ಡೇಶ್ವರ, ಬನವಾಸಿ, ಬನವಾಸಿ ಶ್ರೀಮಧುಕೇಶ್ವರ. ಬೆರಗಿನ ಭೈರವೇಶ್ವರ, ಜೀವವೈವಿಧ್ಯತೆ ಹೊಂದಿದ ದಟ್ಟ ಅಡವಿ ಮಧ್ಯದಲ್ಲಿರುವ ಯಾಣ ಪ್ರದೇಶ ಮಹಾ ಶಿವರಾತ್ರಿಯಂದು ಸಾವಿರಾರು ಭಕ್ತರು ಬೇಟಿ ನೀಡುವ ಪ್ರಮುಖ ಸ್ಥಳ. ಯಾಣಕ್ಕೆ ಧಾರ್ಮಿಕ ಮಹತ್ವದೊಂದಿಗೆ ಪ್ರಕೃತಿಯ ವೈಶಿಷ್ಟ್ಯ ಹೊಂದಿದೆ. ಎರಡು ಬೃಹದಾಕಾರದ ಶಿಲಾಶಿಖರಗಳು ಯಾಣ ತಾಣದಲ್ಲಿ ಬೆರಗುಗೊಳಿಸುತ್ತವೆ. ಭೈರವೇಶ್ವರ ಶಿಖರ (120 ಮೀಟರ್) ಮತ್ತು ಮೋಹಿನಿ ಶಿಖರ (90 ಮೀಟರ) ಎಂಬ ಎರಡು ನಿಸರ್ಗ ನಿರ್ಮಿತ ಶಿಲಾಮಯ ಶಿಖರಗಳು ಪ್ರವಾಸಿಗರನ್ನು ಅಚ್ಚರಿಗೊಳಿಸುತ್ತವೆ.

ಅಭಿಷೇಕ ಮಾಡಿದರೆ ಸಕಲ ಗ್ರಹಬಾಧೆಯೂ ನಿವಾರಣೆ
ಒಮ್ಮೆ ಸಂಪೂರ್ಣ ಮುಳುಗಿ ಹೋಗಿದ್ದ ಭೂಭಾಗಕ್ಕೆ ಮತ್ತೆ ಪುನರ್ಜನ್ಮ ನೀಡಿದ ಪರಶುರಾಮನ ಸೃಷ್ಟಿಯೇ ಗೋಕರ್ಣ ಎನ್ನಲಾಗುತ್ತದೆ. ಕೈಲಾಸದಿಂದ ವರಪ್ರಸಾದವಾಗಿ ರಾವಣ ಪಡೆದ ಆತ್ಮಲಿಂಗವನ್ನು ಬಾಲಗಣಪತಿಯ ತಂತ್ರಕ್ಕೆ ಧರೆಗೆ ಇಳಿಸಿದ ಎಂಬ ಪ್ರತೀತಿ ಇದೆ. ಈ ದಿವ್ಯ ಲಿಂಗವು ಕೃತಯುಗದಲ್ಲಿ ಬಿಳಿ, ತ್ರೇತಾಯುಗದಲ್ಲಿ ಬಹಳ ಕಂದು, ದ್ವಾಪರಾ ಯುಗದಲ್ಲಿ ಹಳದಿ ಹಾಗೂ ಕಲಿಯುಗದಲ್ಲಿ ಕಪ್ಪು ಬಣ್ಣದಿಂದ ಗೋಚರಿಸುತ್ತದೆ. ಘೋರ ಕಲಿಯುಗವು ಪ್ರಾಪ್ತವಾದಾಗ ಮೆತ್ತಗಾಗುತ್ತದೆ ಎಂದು ಹೇಳಲಾಗಿದೆ. ಗೋಕರ್ಣ ಕ್ಷೇತ್ರದಲ್ಲಿ ಸ್ಥಾಪಿಸಲ್ಪಟ್ಟ ಆತ್ಮಲಿಂಗಕ್ಕೆ ಕೋಟಿತೀರ್ಥದಲ್ಲಿ ಮಿಂದು, ಉಪವಾಸ ಮಾಡಿ, ಅಭಿಷೇಕ ಮಾಡಿದರೆ ಋಣ, ರೋಗಬಾಧೆ ನಿವಾರಣೆಯ ಜೊತೆಗೆ ಸಕಲ ಗ್ರಹಬಾಧೆಯೂ ನಿವಾರಣೆಯಾಗುತ್ತದೆ.
ಮುರ್ಡೇಶ್ವರ ದೇವಸ್ಥಾನವು ಅತ್ಯಂತ ಪುರಾತನವಾದದ್ದು, ಕ್ರಮೇಣ ದೇವಸ್ಥಾನ ಜೀರ್ಣವಾಗುತ್ತಾ ಬಂದಾಗ ಯಾವುದೇ ಆದಾಯವಿಲ್ಲದ ದೇವಸ್ಥಾನವನ್ನು ಅಭಿವೃದ್ಧಿಪಡಿಸಿದ ಕನಸು ಕಂಡವರು ಮುರ್ಡೇಶ್ವರದವರೇ ಆದ ಆರ್.ಎನ್.ಶೆಟ್ಟಿ ಅವರು, ಅಂದು ಅವರು ಕಂಡ ಕನಸನ್ನು ನನಸಾಗಿಸುತ್ತಾ ಬಂದಂತೆ ದೇವಸ್ಥಾನವು ಪ್ರಸಿದ್ಧಿಗೆ ಬರತೊಡಗಿತು. ಇಂದು ಅತ್ಯಂತ ಹೆಚ್ಚಿನ ಭಕ್ತರನ್ನು ಹೊಂದಿದ ದೇವಸ್ಥಾನ, ದೇವಸ್ಥಾನದ ಹಿಂಭಾಗದಲ್ಲಿ ಭವ್ಯ ಶಿವನ ವಿಗ್ರಹ ನಿರ್ಮಿಸಲಾಗಿದ್ದು, ಇದು ಪ್ರಪಂಚದಲ್ಲಿಯೇ ಎರಡನೇ ಎತ್ತರದ ಶಿವನ ವಿಗ್ರಹವಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ವಸತಿ ಗ್ರಹಗಳನ್ನು, ಅಲ್ಲಲ್ಲಿ ವಿವಿಧ ಆಕೃತಿಗಳನ್ನು ನಿರ್ಮಿಸಿ ಕೇವಲ ದೇವಸ್ಥಾನವಷ್ಟೇ ಅಲ್ಲದೇ ಸುತ್ತಮುತ್ತಲಿನ ಸ್ಥಳವನ್ನೂ ಕೂಡ ಸುಂದರಗೊಳಿಸಿ ಜನಾರ್ಕಷಣೆಯ ಕೇಂದ್ರವನ್ನಾಗಿಸಲಾಗಿದೆ. ಈ ಸ್ಥಳದಲ್ಲಿ ಮಹಾಶಿವರಾತ್ರಿ ಆಚರಿಸಲು ಭಕ್ತರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬರುತ್ತಾರೆ.

ಭೈರುಂಬೆ ಸಮೀಪದಲ್ಲಿರುವ ಸಹಸ್ರಲಿಂಗ ಪ್ರದೇಶ
ಸಹಸ್ರಲಿಂಗ - ಶಾಲ್ಮಲಾ ನದಿ ಕಣಿವೆ ಸಹಸ್ರಲಿಂಗ ನಿಸರ್ಗದ ಮಡಿಲಿನಲ್ಲಿರುವ ಶಿವನ ತಾಣ. ಶಿರಸಿಯ ಭೈರುಂಬೆ ಸಮೀಪದಲ್ಲಿ ಸಹಸ್ರಲಿಂಗ ಪ್ರದೇಶವಿದೆ. ಝುಳು ಝುಳು ಹರಿಯುವ ನದಿಯ ಮಧ್ಯದಲ್ಲಿ ಶಿಲಾ ಬಂಡೆಗಳ ಮೇಲೆ ಅಲ್ಲಲ್ಲಿ ಶಿವಲಿಂಗಗಳು ಇರುವುದು ಇಲ್ಲಿನ ವೈಶಿಷ್ಟ್ಯ, ಅಂತೆಯೇ ಸಾವಿರಾರು ಭಕ್ತರು ಮಹಾ ಶಿವರಾತ್ರಿಯಂದು ಇಲ್ಲಿಗೆ ಆಗಮಿಸಿ ನದಿ ನೀರಿನಿಂದ ಶಿವಲಿಂಗಗಳಿಗೆ ಅಭಿಷೇಕ ಮಾಡಿ ಅರ್ಚಿಸುತ್ತಾರೆ. ಕಡಿಮೆ ನೀರಿನ ಹರಿವಿನಲ್ಲಿ ಮುಳುಗೆದ್ದು ಬಿಸಿಲಝಳ ನಿವಾರಿಸಿಕೊಳ್ಳುತ್ತಾರೆ.
ಶ್ರೀಮಧುಕೇಶ್ವರ ದೇವಾಲಯವು ವರದಾ ನದಿಯ ದಂಡೆಯ ಪೌರಾಣಿಕ ಮಹತ್ವದ ಸ್ಥಳ ಬನವಾಸಿ ಬಹು ಸಂಖ್ಯೆಯ ಭಕ್ತಾದಿಗಳು ಶಿವರಾತ್ರಿಯಂದು ಭೇಟಿ ನೀಡುವ ಮತ್ತೊಂದು ಮಹತ್ವದ ಶಿವನ ತಾಣ. ಶಿರಸಿ ತಾಲೂಕಿನ ವಾನಳ್ಳಿ ಸಮೀಪದ ಶಿವಗಂಗಾ ಜಲಪಾತ, ಗಣೇಶಪಾಲ್ಸ್, ವಿಭೂತಿ ಜಲಪಾತ, ಹೆಗ್ಗರಣಿ ಸಮೀಪ ಉಂಚಳ್ಳಿ ಜಲಪಾತ ಮುಂತಾದ ತಾಣಗಳು ಶಿವರಾತ್ರಿಯ ದಿನದಂದು ಸಾವಿರಾರು ಜನರು ಭೇಟಿ ನೀಡುತ್ತಾರೆ.
ಕವಳಾಗುಹೆ, ಗುಹೆಯೊಳಗೆ ನುಸುಳಿ ಹೋದಾಗ ಕಾಣಿಸುವ ನಿಸರ್ಗ ನಿರ್ಮಿತ ಶಿವಲಂಗ ದಾಂಡೇಲಿ ಸಮೀಪದ ಕವಳಾ ಗುಹೆ, ಶಿವರಾತ್ರಿಯ ದಿನದಂದು ಸಾವಿರಾರು ಭಕ್ತರು ಭೇಟ್ಟಿ ನೀಡುತ್ತಾರೆ. ಭಾರತದ ಪ್ರಮುಖ ಜ್ಯೋತಿರ್ಲಿಂಗ ಶಿವ ದೇವಸ್ಥಾನಗಳು ವಾರಣಾಸಿ ಮತ್ತು ಸೋಮನಾಥ ದೇವಸ್ಥಾನ.
ಮಹಾಶಿವರಾತ್ರಿಗೆ ತನ್ನದೇ ಆದ ಇತಿಹಾಸ, ಪರಂಪರೆ, ಕಥೆ, ಜನಜೀವನ, ನಂಬಿಕೆ, ಸಂಸ್ಕೃತಿಯ ಗಾಡ ಪ್ರಭಾವ ಮಹಾಶಿವರಾತ್ರಿಗೆ ಇದೆ. ಈ ಸುಸಂದರ್ಭ ಮತ್ತುಷ್ಟು ಭಕ್ತರ ಮನೋಕಾಮನೆ ಈಡೇರಿಸುವ ಪುಣ್ಯಭೂಮಿಯಾಗಿ ಮಹಾಶಿವರಾತ್ರಿ ಎಲ್ಲರಿಗೂ ಸನ್ಮಂಗಳವುಂಟು ಮಾಡಲಿ ಎಂದು ಶಿವನಲ್ಲಿ ಪ್ರಾರ್ಥಿಸುತ್ತೇನೆ.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications