ಸ್ವಾತಂತ್ರ್ಯ ದಿನಾಚರಣೆ : ಮಳೆಯ ಹಾಡು, ಅರ್ಧ ಭಾಷಣ, ಲಾಡು!
ಸ್ವಾತಂತ್ರ್ಯ ದಿನಾಚರಣೆ ಹತ್ತಿರವಾಗುತ್ತಿದೆ. ನನ್ನ ಶಾಲಾ ದಿನಗಳ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ, ಆ ಸಂಭ್ರಮ, ಸಡಗರವನ್ನು ಮತ್ತೊಮ್ಮೆ ನೆನಪು ಮಾಡಿಕೊಂಡರೆ ಇಂದಿಗೂ ಆನಂದವಾಗುತ್ತದೆ.
ನನ್ನೂರು ಅಪ್ಪಟ ಮಲೆನಾಡು ತೀರ್ಥಹಳ್ಳಿ. ಜೂನ್ ತಿಂಗಳಿನಲ್ಲಿ ಮಳೆ ಆರಂಭವಾದರೆ ಆಗಸ್ಟ್
ಅಂತ್ಯದ ತನಕವೂ ಮಳೆ ಸುರಿಯುತ್ತಲೇ ಇರುತ್ತದೆ. ಬಸ್, ಕಾರು ಕಂಡಿರದ ನಾವು ಪ್ರಾಥಮಿಕ
ಶಿಕ್ಷಣಕ್ಕಾಗಿ ಒಂದೂವರೆ ಕಿ.ಮೀ.ನಡೆದುಕೊಂಡೇ ಶಾಲೆಗೆ ಸಾಗಬೇಕಿತ್ತು
ನಾನು ಓದಿದ್ದು ಮೇಳಿಗೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ನಮ್ಮ ಶಾಲೆಯ ಸ್ವಾತಂತ್ರ್ಯ
ದಿನಾಚರಣೆ ನಮ್ಮ ಪಾಲಿಗೆ ದೊಡ್ಡ ಹಬ್ಬ. ಸಿ.ಪಿ.ಚಂದ್ರಶೇಖರ್ ಮಾಸ್ಟರ್ ಅವರಿಗೆ
ನಮ್ಮನ್ನು ಸಿದ್ಧಗೊಳಿಸವ ಜವಾಬ್ದಾರಿ ಕೊಟ್ಟಿರುತ್ತಿದ್ದರು. ದೈಹಿಕ ಶಿಕ್ಷಕರಾದ ಸ್ವಾಮಿ
ಮೇಷ್ಟ್ರು ಧ್ವಜಾರೋಹಣ, ಪ್ರಭಾತ್ ಫೇರಿ ಮುಂತಾದವುಗಳ ಹೊಣೆ ಹೊತ್ತುಕೊಳ್ಳುತ್ತಿದ್ದರು.

10 ದಿನ ಮೊದಲೇ ನಮ್ಮ ಆಟದ ಪಿರಿಯಡ್ಗೆ ಕತ್ತರಿ ಬೀಳುತ್ತಿತ್ತು. ಚಂದ್ರಶೇಖರ್ ಮಾಸ್ಟರ್
(ಸಿಪಿಸಿ) ಭಾಷಣ ಮಾಡುವವರ, ಹಾಡು ಹೇಳುವವರ ಪಟ್ಟಿ ಮಾಡುತ್ತಿದ್ದರು. 'ಧವಳ ಹಿಮದ ಗಿರಿಯ
ಮೇಲೆ ಅರುಣ ಧ್ವಜವ ಹಾರಿಸಿ' ಎಂಬ ಹಾಡನ್ನು ಬೋರ್ಡ್ ಮೇಲೆ ಬರೆದು ನಮಗೂ ಬರೆದುಕೊಳ್ಳಲು ಹೇಳುತ್ತಿದ್ದರು.
ಭಾಷಣ ಮಾಡುವವರ ತಯಾರಿಯೂ ಆರಂಭವಾಗುತ್ತಿತ್ತು. ವಿವಿಧ ನಾಯಕರ ಜೀವನ ಚರಿತ್ರೆಯ
ಪುಸ್ತಕಗಳನ್ನು ತಂದು, ಅದರಲ್ಲಿ ಭಾಷಣ ಮಾಡಲು ಬೇಕಾದ ಅಂಶಗಳನ್ನು ಬರೆಸಿ ನಮ್ಮಿಂದ
ಅಭ್ಯಾಸ ಮಾಡಿಸುತ್ತಿದ್ದರು.
ನಮ್ಮ ಹುಡುಗಾಟಿಕೆಯೋ, ವಯಸ್ಸಿನ ಫಲವೂ ಅದರಲ್ಲಿರುವ ಇಸವಿಗಳು ಗೊಂದಲವಾಗತ್ತಿತ್ತು. ಹುಟ್ಟಿದ ಇಸವಿ ಬಿಟ್ಟು ಉಳಿದದ್ದು ಮರೆತು ಹೋಗುತ್ತಿತ್ತು, ಇಲ್ಲವೇ ತಪ್ಪಾಗುತ್ತಿತ್ತು. ಕಾರ್ಯಕ್ರಮದ ದಿನ ಎಡವಟ್ಟು ಆಗಬಾರದು ಎಂದು ಪ್ರೀತಿಯಿಂದ ಗದರಿ ಸಿಪಿಸಿ ಸರ್ ಗಟ್ಟು ಮಾಡಲು ಸೂಚನೆ ನೀಡುತ್ತಿದ್ದರು. ಆದರೂ, ಅತಿಥಿಗಳ ಮುಂದೆ ಕೈಕಟ್ಟಿ ನಿಂತಾಗ ಕಂಗೆಟ್ಟು, ಅರ್ಧ ಭಾಷಣ ಮಾತ್ರ ಓದಿ, ವಾಪಸ್ ಬಂದು ಕುಳಿತ ಉದಾಹರಣೆಗಳು ಸಾಕಷ್ಟಿವೆ.

ಧ್ವಜಾರೋರಣಕ್ಕೆ ವರುಣನ ಕಾಟ : ಮೊದಲೇ ಹೇಳಿದಂತೆ ನಮ್ಮದು ಮಲೆನಾಡು. ಮಳೆ ಧೋ ಎಂದು
ಸುರಿಯುತ್ತಿರುತ್ತಿತ್ತು. ಶಾಲೆಗೆ ನಡೆದುಕೊಂಡು ಬರುವಾಗ ಡಾಂಬರು ಕಾಣದ ನಮ್ಮೂರ ರಸ್ತೆಗಳಲ್ಲಿ ಸಾಗುವ ವಾಹನಗಳು ನಮಗೆ ಕೆಸರ ಅಭಿಷೇಕ ಮಾಡಿಸಿ ಬಿಡುತ್ತಿದ್ದವು. ಆದ್ದರಿಂದ, ಸ್ವಾತಂತ್ರ್ಯ ದಿಚಾಚರಣೆ
ದಿನ ನಾವು ತೊಟ್ಟ ಬಿಳಿಯ ಬಟ್ಟೆ ಕೆಂಪಾಗದಂತೆ ಕಾಪಾಡಿಕೊಳ್ಳುವುದು ಸವಾಲಾಗಿತ್ತು.
ಮಳೆಯ ನಡುವೆಯೇ ಆಗಸ್ಟ್ 14ರಂದು ಸಂಜೆ ಸ್ವಾಮಿ ಮಾಸ್ಟರ್ ಧ್ವಜದ ಕಂಬದ ಸುತ್ತಲೂ ಬಿಳಿಯ
ಮಾರ್ಕ್ ಹಾಕಿ, ಯಾರು ಎಲ್ಲಿ ನಿಲ್ಲಬೇಕು ಎಂದು ಅಭ್ಯಾಸ ಮಾಡಿಸುತ್ತಿದ್ದರು. ಹಸಿರು
ಜೆಡ್ಡಿನಿಂದ ನಾವೆಲ್ಲರೂ ಭಾರತದ ನಕ್ಷೆಯನ್ನು ಧ್ವಜಸ್ತಂಭದ ಎದುರು ಮಾಡಿದ್ದೆವು. ಅದರ
ಸುತ್ತಲೂ ಬಿಳಿ ಬಣ್ಣದಿಂದ ಮಾರ್ಕ್ ಮಾಡುತ್ತಿದ್ದೆವು.
ಮಳೆಯ ನಡುವೆಯೇ ಧ್ವಜಾರೋಹಣ ಮಾಡುವುದು, ಪ್ರಭಾತ್ ಫೇರಿ ಹೋಗುವುದು ನಮಗೆ ಸವಾಲು
ಆಗಿತ್ತು. ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ, ನಾವು ಮುಂಜಾನೆ ಬೇಗನೆ ಎದ್ದು 7 ಗಂಟಗೆ
ಮನೆ ಬಿಟ್ಟರೆ 7.45ರ ಹೊತ್ತಿಗೆ ಶಾಲೆ ತಲುಪುತ್ತಿದ್ದೆವು. ಒಂದು ರೌಂಡ್ ಕಸಎಲ್ಲಾ
ಎತ್ತಿ, ಕುಡಿಯುವ ನೀರು ತುಂಬಿ, ವೇದಿಕೆ ಬಳಿ ಸುತ್ತಾಡಿ 8 ಗಂಟೆಗೆ ಧ್ವಜ ಸ್ತಂಭದ ಬಳಿ ಹಾಜರಾಗುತ್ತಿದ್ದೆವು.

ಮುಖ್ಯೋಪಾಧ್ಯಯರಿಂದ ಧ್ವಜಾರೋಹಣ, ನಂತರ ರಾಷ್ಟ್ರಗೀತೆ. ಬಳಿಕ ಶರು ಆಗುತ್ತಿತ್ತು ನಮ್ಮ
ಆಟ. ಪ್ರಭಾತ್ ಫೇರಿ ಹೊರಡುತ್ತಿದ್ದಂತೆ ಅಲ್ಲಿದ್ದವರು ಇಲ್ಲಿ, ಈ ಕಡೆ ಇದ್ದವರು ಆ ಕಡೆ
ಹೋಗಿ ಶಿಸ್ತಿನಿಂದ ಸಾಗುತ್ತಿದ್ದ ಲೈನ್, ಹಾದಿ ತಪ್ಪುತ್ತಿತ್ತು. ಸಾಲು ಬಿಟ್ಟು ಈಚೆ
ಬಂದವರು ಮಾಸ್ಟರ್ ಕಣ್ಣೋಟ ಕಂಡು ಮತ್ತೆ ಸಾಲಿನೊಳಕ್ಕೆ ಎಲ್ಲೋ ನುಗ್ಗಿ ಮತ್ತಷ್ಟು ಹದಗೆಡಿಸುತ್ತಿದ್ದರು.
ಶಾಲೆಯಿಂದ ಹೊರಟ ಪ್ರಭಾತ್ ಫೇರಿ ಭಾರತ್ ಮಾತಾಕೀ ಕೈ, ಮಹಾತ್ಮಾ ಗಾಂಧಿ ಜಿಂದಾಬಾದ್,
ವಂದೇ ಮಾತರಂ ಘೋಷಣೆಗಳೊಂದಿಗೆ ಮೇಲಿನ ಬೀದಿಯಿಂದ ಸಾಗಿ, ವೆಂಕಟರಮಣ ದೇವಾಲಯಕ್ಕೆ ಒಂದು ಸುತ್ತು ಹೊಡೆದು ಗ್ರಾಮ ಪಂಚಾಯಿತಿ ಮುಂದೆ ನಿಲ್ಲುತ್ತಿತ್ತು.
ಗ್ರಾಮ ಪಂಚಾಯಿತಿ ಕಚೇರಿ ಮುಂದೆ ನಡೆಯವ ಧ್ವಜಾರೋಹಣದಲ್ಲಿ ಎಲ್ಲರೂ ಪಾಲ್ಗೊಂಡು, ಧ್ವಜ
ವಂದನೆ ಸಲ್ಲಿಸಿದ ಬಳಿಕ ಕೆಳಗಿನ ಬೀದಿ ಮೂಲಕ ಮತ್ತೆ ಶಾಲೆ ಕಡೆ ಸಾಗುತ್ತಿತ್ತು. ಪ್ರಭಾತ್ ಫೇರಿ ನಡುವೆ ಮಳೆ ಬಂದರೆ ಮತ್ತಷ್ಟು ಅದ್ವಾನ ಉಂಟಾಗುತ್ತಿತ್ತು. ರಸ್ತೆಯ ಕೆಸರು, ಮಳೆಯ ತಂಡಿ ಎಲ್ಲಾ ಸೇರಿ ಸಾಕಪ್ಪ ಸಹವಾಸ ಎಂದು ಅನ್ನಿಸುತ್ತಿತ್ತು.
ಹಾಡು, ಲಾಡು, ಚಾಕ್ಲೇಟ್ : ಪ್ರಭಾತ್ ಫೇರಿ ಮುಗಿಸಿದ ಬಳಿಕ ಶಾಲೆಯ ಸಭಾ ಕಾರ್ಯಕ್ರಮ.
ಗ್ರಾಮ ಪಂಚಾಯಿತಿ ಅಧ್ಯಕ್ಷರು ಸಭಾ ಕಾರ್ಯಕ್ರಮದ ಮುಖ್ಯ ಅತಿಥಿ. ನಮ್ಮ ಸ್ನೇಹಿತರ ಹಾಡು,
ಅರ್ಧಂಬರ್ಧ ಭಾಷಣ, ಕೊನೆಯಲ್ಲಿ ಮುಖ್ಯ ಅತಿಥಿಗಳ ಭಾಷಣ. ಕಾರ್ಯಕ್ರಮದಲ್ಲಿ ಬೇಕಾದ ಹಾಗೆ
ಚಪ್ಪಾಳೆ ತಟ್ಟುವಂತಿರಲಿಲ್ಲ.
123..123 ಎಂದು ಹಿಂದಿನ ದಿನ ಅಭ್ಯಾಸ ಮಾಡಿದರೂ ಯಾರೋ ಮೊದಲು ಆರಂಭಿಸಿ ಮತ್ಯಾರೋ
ಚಪ್ಪಾಳೆ ಅಂತ್ಯಗೊಳಿಸುವಾಗ 1 ರಿಂದ 10ರ ವರೆಗೆ ಧ್ವನಿ ಕೇಳಿದಂತೆ ಆಗಿ, ಚಪ್ಪಾಳೆ ವಿಕಾರವಾಗಿ ಕೇಳಿಬರುತ್ತಿತ್ತು.
ಸಭಾ ಕಾರ್ಯಕ್ರಮದ ಬಳಿಕ ಗ್ರಾಮ ಪಂಚಾಯಿತಿ ವತಿಯಿಂದ ಲಾಡು ಹಂಚಲಾಗುತ್ತಿತ್ತು. ಶಾಲೆಯ
ವತಿಯಿಂದ ಚಾಕ್ಲೇಟ್ ವಿತರಣೆ. ಆದರೆ, ಕಾರ್ಯಕ್ರಮದ ಮುಗಿದ ಬಳಿಕ ಮನೆಯ ಕಡೆ ಸಾಗದೇ ನಾವು
ಫೀಲ್ಡ್ ದಾರಿ ಹಿಡಿಯುತ್ತಿದ್ದೆವು.
ಪ್ರಭಾತ್ ಫೇರಿ ಹೋಗುವಾಗ ಮಳೆಗೆ ಅಂಜುವ ನಾವು, ಆಟವಾಡುವಾದ ಅದನ್ನು ಗಮನಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ 11 ಗಂಟೆಗೆಲ್ಲ ಮುಗಿದರೂ ನಾವು ಮನೆ ಸೇರುವಾಗ ಗಡಿಯಾಗ 4 ಗಂಟೆ ತೋರಿಸುತ್ತಿರುತ್ತಿತ್ತು.












Click it and Unblock the Notifications