ಭಾರತ್ ಜೋಡೋ ಯಾತ್ರೆಯಲ್ಲಿ ಹೃದಯ ತಟ್ಟುವ ಅನು'ರಾಗಾ'
ನವದೆಹಲಿ, ಸೆಪ್ಟೆಂಬರ್ 13: ರಾಜಕೀಯ ಎಂಬುದೇ ಸೋಲು-ಗೆಲುವಿನ ಆಟ. ತಂತ್ರಗಾರಿಕೆಯ ಮೂಲಕ ಗೆಲುವಿನ ದಾರಿಯಲ್ಲಿ ಗುರಿ ಮುಟ್ಟುವವರೇ ಇಲ್ಲಿ ಚಾಂಪಿಯನ್ ಎನಿಸಿಕೊಳ್ಳುತ್ತಾರೆ. ಅಂಥದ್ದೇ ದಾರಿಯಲ್ಲಿ ಸಾಗಿದ ವ್ಯಕ್ತಿಗಳು ಕೆಲವು ಬಾರಿ ತಮ್ಮ ಯಾತ್ರೆಗಿಂತ ನಡುವಳಿಕೆಗಳಿಗೆ ಸುದ್ದಿ ಆಗುತ್ತಿದೆ.
ಮಾನವೀಯತೆ, ಮನುಷ್ಯತ್ವ, ಆದರ್ಶ ಗುಣಗಳು, ರೀತಿ-ನೀತಿ ಸಿದ್ಧಾಂತಗಳು ಹಾಗೂ ವರ್ತನೆಗಳು ಕೆಲವು ಬಾರಿ ರಾಜಕೀಯ ನಾಯಕರು ಜನರಿಂದ ಶಹಬ್ಬಾಶ್ ಗಿರಿಯನ್ನು ಗಿಟ್ಟಿಸಿಕೊಳ್ಳುತ್ತಾರೆ. ಇದೆಲ್ಲ ರಾಜಕೀಯದಿಂದ ಹೊರತಾಗಿ ನೋಡಬೇಕಾದ ದೃಷ್ಟಿಕೋನವೇ ಆಗಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ 41257 ರೂ. ಟೀ-ಶರ್ಟ್ ಧರಿಸಿದರೇ ರಾಹುಲ್ ಗಾಂಧಿ!?
ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ತೋರಿದ ಹಾಗೂ ತೋರುತ್ತಿರುವ ವರ್ತನೆಯು ಅದೇ ರೀತಿ ಸುದ್ದಿ ಮಾಡುತ್ತಿದೆ. ಜನರ ಮಧ್ಯೆ ನಿಂತುಕೊಂಡ ನಾಯಕರ ಜನರಿಂದಲೇ ಭೇಷ್ ಎನಿಸಿಕೊಳ್ಳುತ್ತಿದ್ದಾರೆ. ಕೆಲವು ಚಿತ್ರಗಳು ಮತ್ತು ಘಟನೆಗಳು ರಾಹುಲ್ ಗಾಂಧಿಯವರ ಮಾನವೀಯ ಮುಖಕ್ಕೆ ಹಿಡಿದ ಕೈಗನ್ನಡಿಯಂತೆ ಗೋಚರಿಸುತ್ತವೆ. ಮನಸು ಮುಟ್ಟುವ, ಹೃದಯ ತಟ್ಟುವ ಅಂಥ ಚಿತ್ರಗಳೊಂದಿಗೆ ಅವು ಸಾರುವ ಸಂದೇಶ ಎಂಥದ್ದು ಎಂಬುದನ್ನು ಈ ವರದಿಯಲ್ಲಿ ಚಿತ್ರಸಹಿತವಾಗಿ ನೋಡೋಣ.
ಕಾಂಗ್ರೆಸ್ಸಿಗೆ ಗೆಲುವಿನ ಗುರಿ; ಭಾರತ್ ಜೋಡೋ ಯಾತ್ರೆಯೇ ದಾರಿ
2024ರ ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಗುರಿ ಹೊತ್ತು ಸಾಗುತ್ತಿರುವ ಕಾಂಗ್ರೆಸ್ಸಿಗೆ ಭಾರತ್ ಜೋಡೋ ಯಾತ್ರೆಯೇ ದಾರಿಯಾಗಿದೆ. ಇದೇ ದಾರಿಯಲ್ಲಿ ಸಾಗಿದ ರಾಹುಲ್ ಗಾಂಧಿ, ಈಗ ರಾಷ್ಟ್ರಮಟ್ಟದಲ್ಲಿ ಸದ್ದು ಆಗುತ್ತಿದ್ದಾರೆ, ಸದ್ದು ಮಾಡುತ್ತಿದ್ದಾರೆ. ಕಾಂಗ್ರೆಸ್ ಆರಂಭಿಸಿದ ಭಾರತ್ ಜೋಡೋ ಯಾತ್ರೆ ಭಾಗವಾಗಿ 150 ದಿನಗಳ ಕಾಲ ಕನ್ಯಾಕುಮಾರಿ To ಕಾಶ್ಮೀರದವರೆಗೂ 3570 ಕಿಲೋ ಮೀಟರ್ ನಡೆಯುತ್ತಿದ್ದಾರೆ. ಐದು ತಿಂಗಳ ಯಾತ್ರೆಯು 3,500 ಕಿಲೋಮೀಟರ್ ಮತ್ತು 12ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಂಚರಿಸಲಿದ್ದು, ಪ್ರತಿನಿತ್ಯ 25 ಕಿ.ಮೀ ನಡೆಯುತ್ತಿದ್ದಾರೆ.
ಕಂಟೇನರ್ನಲ್ಲೇ ರಾಹುಲ್ ಗಾಂಧಿ ಪ್ರಯಾಣ
ಭಾರತ್ ಜೋಡೋ ಯಾತ್ರೆಗೆ ಹೊರಟಿರುವ ಕಾಂಗ್ರೆಸ್ ರಾಜಕುಮಾರನಿಗೆ ಯಾವುದೇ ರೀತಿಯ ಐಶಾರಾಮಿ ಸವಲತ್ತುಗಳನ್ನು ನೀಡಿಲ್ಲ. ಕಂಟೇನರ್ಗಳಲ್ಲಿ ಮಲಗುವ ಹಾಸಿಗೆ, ಶೌಚಾಲಯ ಮತ್ತು ಎಸಿಗಳನ್ನು ಸಹ ಅಳವಡಿಸಲಾಗಿದೆ. ಪ್ರಯಾಣದ ಸಮಯದಲ್ಲಿ, ತಾಪಮಾನ ಮತ್ತು ಪರಿಸರವು ಅನೇಕ ಪ್ರದೇಶಗಳಲ್ಲಿ ಭಿನ್ನವಾಗಿರುತ್ತದೆ. ಈ ಸ್ಥಳ ಬದಲಾವಣೆಯೊಂದಿಗೆ ತೀವ್ರವಾದ ಶಾಖ ಮತ್ತು ತೇವಾಂಶವನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆಗಳನ್ನು ಮಾಡಲಾಗಿದೆ. ಇದೆಲ್ಲದರ ಹೊರತಾಗಿ ರಾಹುಲ್ ಗಾಂಧಿಯ ಮಾನವೀಯತೆಗೆ ಯಾತ್ರೆಯುದ್ದಕ್ಕೂ ನಡೆದ ಕೆಲವು ಘಟನೆಗಳೇ ಸಾಕ್ಷಿಯಾಗಿವೆ.
ತಾಯಿಯೊಬ್ಬರನ್ನು ಎದೆಗಪ್ಪಿಕೊಂಡು ಸಂತೈಸಿದ ರಾಜಕುಮಾರ
ತಮಿಳುನಾಡಿನ ಕನ್ಯಾಕುಮಾರಿಯಿಂದ ಶುರುವಾದ ಭಾರತ್ ಜೋಡೋ ಯಾತ್ರೆಯು 100 ಕಿಲೋ ಮೀಟರ್ ಪೂರ್ಣಗೊಳಿಸಿದೆ. ಕೇರಳಕ್ಕೆ ತಲುಪಿರುವ ಯಾತ್ರೆಯ ಮಧ್ಯೆ ಅಸ್ವಸ್ಥಗೊಂಡ ವೃದ್ಧೆಯೊಬ್ಬರನ್ನು ರಾಹುಲ್ ಗಾಂಧಿ ತಮ್ಮ ಎದೆಗಪ್ಪಿಕೊಂಡು ಸಮಾಧಾನಪಡಿಸಿದರು. ತಾಯಿಗೆ ನೀರು ಕುಡಿಸಿ, ಸಂತೈಸಿದರು. ಇದೇ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಮಕ್ಕಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ರಾಹುಲ್ ಗಾಂಧಿ
ಕಾಂಗ್ರೆಸ್ಸಿನ ಭಾರತ್ ಜೋಡೋ ಯಾತ್ರೆಯು ಕೇರಳದಲ್ಲಿ ಸಂಚರಿಸುತ್ತಿದೆ. ರಾಹುಲ್ ಗಾಂಧಿ ಜನರ ಮಧ್ಯೆ ಹೆಜ್ಜೆ ಹಾಕುತ್ತಾ ಸಾಗಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಯಾತ್ರೆಯನ್ನು ಬೆಂಬಲಿಸುತ್ತಾ ಬಂದ ಮುದ್ದು ಮಕ್ಕಳೊಂದಿಗೆ ಮಮತೆಯೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ, ಹೂಗುಚ್ಛ ಹಿಡಿದು ನಿಂತ ಪುಟಾಣಿಗಳ ಜೊತೆಗೆ ಒಂದು ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಬಾವುಟ ಹಿಡಿದ ಬಾಲಕನಿಗೆ ಜೊತೆಗಾರನಾದ 'ರಾಗಾ'
ಭಾರತ್ ಜೋಡೋ ಯಾತ್ರೆಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಕಾಂಗ್ರೆಸ್ ಯಾತ್ರೆಯಲ್ಲಿ ಜನರು ಹೆಜ್ಜೆ ಹಾಕುತ್ತಿದ್ದಾರೆ. ಇದರ ಮಧ್ಯೆ ಕೇಸರಿ, ಬಿಳಿ, ಹಸಿರು ಬಾವುಟ ಹಿಡಿದುಕೊಂಡು ನಡೆಯುತ್ತಿರುವ ಬಾಲಕನಿಗೆ ರಾಹುಲ್ ಗಾಂಧಿ ಜೊತೆಗಾರರಾಗಿ ನಡೆದರು. ಈ ಚಿತ್ರ ಕೂಡ ಅವರಲ್ಲಿನ ಮುಗ್ಧತೆಗೆ ಹಿಡಿದ ಕೈಗನ್ನಡಿಯಂತೆ ಕಂಗೊಳಿಸುತ್ತಿತ್ತು.
ಕಾಂಗ್ರೆಸ್ ಕಾರ್ಯಕರ್ತನೇ ಕುಬ್ಜ ವ್ಯಕ್ತಿ
ತಮಿಳುನಾಡಿದ ಕನ್ಯಾಕುಮಾರಿಯಲ್ಲಿ ಸಾಗುತ್ತಿದ್ದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯ ಜೊತೆಗೆ ಹೆಜ್ಜೆ ಹಾಕಿದ ಅದೊಬ್ಬ ವ್ಯಕ್ತಿ ಎಲ್ಲರ ಗಮನ ಸೆಳೆದನು. ಕುಬ್ಜನಾಗಿ ಕಂಗೊಳಿಸುತ್ತಿದ್ದ ವ್ಯಕ್ತಿಯೊಂದಿಗೆ ಸರಿಸಮನಾಗಿ ರಾಹುಲ್ ಗಾಂಧಿ ನಡೆದುಕೊಂಡು ಹೋದರು. ಅದೇ ವೇಳೆ ಕ್ಲಿಕ್ಕಿಸಿದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ರಾಹುಲ್ ಗಾಂಧಿ ಅಂಗೈಯಲ್ಲಿ ಪಾರಿವಾಳ
ಕನ್ಯಾಕುಮಾರಿಯಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು ರಾಹುಲ್ ಗಾಂಧಿಯೊಬ್ಬ ಪಕ್ಷಿಪ್ರೇಮಿ ಎಂಬುದನ್ನು ಸಾರಿ ಹೇಳುವಂತಿತ್ತು. ಅಂಗೈಯಲ್ಲಿ ಪಾರಿವಾಳವನ್ನು ಹಿಡಿದುಕೊಂಡ ಕಾಂಗ್ರೆಸ್ ನಾಯಕನು ಫೋಟೋಗೆ ಫೋಸ್ ಕೊಟ್ಟರು. ಇನ್ನೊಂದು ಕಡೆ ಅದೇ ಕನ್ಯಾಕುಮಾರಿಯಲ್ಲಿ ಶಾಲೆಯ ಕ್ರೀಡಾಪಟುಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಕೈಯಲ್ಲಿ ಬಾಸ್ಕೆಟ್ ಬಾಲ್ ಹಿಡಿದುಕೊಂಡಿದ್ದು, ಆತ್ಮೀಯತೆಯನ್ನು ಸಾರಿ ಹೇಳುವಂತಿತ್ತು.
ಬೀದಿ ಬದಿ ವ್ಯಾಪಾರಿ ಅಂಗಡಿಯಲ್ಲಿ ಖಡಕ್ ಚಾಯ್
ಕೇರಳದಲ್ಲಿ ಕಾಂಗ್ರೆಸ್ ಯಾತ್ರೆಯಲ್ಲಿ ಸಾಗಿದ ರಾಹುಲ್ ಗಾಂಧಿ ತಮ್ಮ ಸರಳತೆಯನ್ನು ತೋರಿದರು. ಬೀದಿ ಬದಿ ವ್ಯಾಪಾರಿಯ ಅಂಗಡಿಗೆ ತೆರಳಿದ ಅವರು, ಖಡಕ್ ಚಾಯ್ ಕುಡಿದು ರೆಸ್ಟ್ ಮಾಡಿದರು. ಇದೇ ವೇಳೆ ಕಾಂಗ್ರೆಸ್ ನಾಯಕನೊಂದಿಗೆ ಚಾಯ್ ವಾಲಾ ಕೂಡ ಫೋಟೋಗೆ ಫೋಸ್ ಕೊಟ್ಟರು.