Maha Kumbh Mela 2025: ಮಹಾ ಕುಂಭಮೇಳದಿಂದ ದೇಶದ ಆರ್ಥಿಕ ವಿಕಸನ ಹೇಗೆ? ಇಲ್ಲಿದೆ ಲೆಕ್ಕಾಚಾರ
ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವವಾಗಿರುವ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳಕ್ಕೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ಸಂಪೂರ್ಣವಾಗಿ ಅಣಿಯಾಗಿದೆ. ತ್ರಿವೇಣಿ ಸಂಗಮದಲ್ಲಿ 2025ರ ಜನವರಿ 13ರಿಂದ ಫೆಬ್ರವರಿ 26ರವರೆಗೆ ಈ ಮಹಾ ಕುಂಭಮೇಳ ನಡೆಯಲಿದ್ದು, ಜಗತ್ತಿನಾದ್ಯಂತದಿಂದ ಸುಮಾರು 40 ಕೋಟಿ ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಮಹಾ ಕುಂಭಮೇಳದ ಸಿದ್ಧತೆಗಳು ಈಗಾಗಲೇ ಅಂತಿಮ ಹಂತದಲ್ಲಿದ್ದು, ಕೋಟ್ಯಂತರ ಭಕ್ತರಿಗಾಗಿ 10,000 ಹೆಕ್ಟೇರ್ಗಳ ವಿಶಾಲವಾದ ಪ್ರದೇಶದಲ್ಲಿ 1.5 ಲಕ್ಷ ಟೆಂಟ್ಗಳನ್ನು ನಿರ್ಮಿಸಲಾಗಿದೆ. ಜೊತೆಗೆ ಮೊದಲೆಂದಿಗಿಂತಲೂ ಈ ಬಾರಿ ಭಕ್ತರಿಗಾಗಿ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಉತ್ತಮವಾಗಿ ಮಾಡಲಾಗಿದೆ.

ಮಹಾ ಕುಂಭಮೇಳವು ಧಾರ್ಮಿಕವಾಗಿ ಮಾತ್ರವಲ್ಲದೇ ದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ವಿಕಾಸಕ್ಕೂ ಕಾರಣವಾಗುತ್ತದೆ. ಕಳೆದ ಬಾರಿ ಅಂದರೆ 2013ರಲ್ಲಿ ನಡೆದ ಮಹಾ ಕುಂಭಮೇಳವು ₹12,000 ಕೋಟಿಗಳಷ್ಟು ಆದಾಯವನ್ನು ಗಳಿಸಿದೆ. 2019ರಲ್ಲಿ ನಡೆದ ಕುಂಭ ಮೇಳವು 1.2 ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸಿದೆ. ಅಲ್ಲದೇ ಕುಂಭ ಮೇಳವು 6 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ಉದ್ಯೋಗವನ್ನು ಸೃಷ್ಟಿಸಿತ್ತು.
ಹೀಗಾಗಿ ಈ ಬಾರಿಯ ಮಹಾ ಕುಂಭಮೇಳಕ್ಕೆ ಹೆಚ್ಚಿನ ಹಣ ವ್ಯವಹಿಸಲಾಗಿದ್ದು, ಆದಾಯವನ್ನು ಕೂಡ ಗರಿಷ್ಠ ಮಟ್ಟದಲ್ಲಿ ನಿರೀಕ್ಷಿಸಲಾಗುತ್ತಿದೆ. ತಜ್ಞರ ಪ್ರಕಾರ ಈ ಬಾರಿಯ ಮಹಾ ಕುಂಭಮೇಳದಿಂದ ₹1.5 ಲಕ್ಷ ಕೋಟಿಯಿಂದ ₹2ಲಕ್ಷ ಕೋಟಿಯವರೆಗೆ ಆದಾಯ ಬರುವ ನಿರೀಕ್ಷೆ ಇದೆ. ಈ ಬಾರಿ ಭಕ್ತರಿಗೆ ಸಾರಿಗೆ, ಹೋಟೆಲ್, ಹೆಲಿಕಾಪ್ಟರ್ಗಳು ಮತ್ತು AI ಆಧಾರಿತ ಸೇವೆಗಳಂತಹ ಸುಧಾರಿತ ಮೂಲ ಸೌಲಭ್ಯಗಳು ಸಿಗಲಿದ್ದು, ಸೌಲಭ್ಯಗಳಂತೆ ಆದಾಯವು ಕೂಡ ಸುಧಾರಿಸಲಿದೆ ಎನ್ನುವುದು ಆಯೋಜಕರ ಲೆಕ್ಕಾಚಾರವಾಗಿದೆ.

ಉತ್ತರ ಪ್ರದೇಶದ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ಪ್ರಕಾರ, ಮಹಾ ಕುಂಭಮೇಳದಲ್ಲಿ ಪೂಜೆ ವಸ್ತುಗಳ ವ್ಯಾಪಾರದಲ್ಲಿ ₹ 2,000 ಕೋಟಿ ವ್ಯವಹಾರ ಆಗುವ ನಿರೀಕ್ಷೆ ಇದೆ. ಇನ್ನು 45 ದಿನಗಳ ಮೇಳದಲ್ಲಿ ಹೂವಿನ ವ್ಯಾಪಾರವು ಅಂದಾಜು ₹ 800 ಕೋಟಿ ಆಗಲಿದೆ. ಇನ್ನು ಭಕ್ತರಿಗೆ ಅಗತ್ಯವಿರುವ ದೈನಂದಿನ ಅಗತ್ಯದ ಮೂಲಭೂತ ವಸ್ತುಗಳಿಂದ ₹17,310 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವ್ಯವಹಾರ ನಡೆಯುವ ಸಾಧ್ಯತೆ ಇದೆ.

ಈ ಅಂದಾಜಿನ ಪ್ರಕಾರ, ಮಹಾ ಕುಂಭಮೇಳದ ಸಮಯದಲ್ಲಿ ದಿನಸಿ ಅಂದರೆ ಗೋಧಿ ಹಿಟ್ಟು, ಸಕ್ಕರೆ, ಚಹಾದಂತಹ ವಸ್ತುಗಳಿಂದ ₹4,000 ಕೋಟಿ, ಅಡುಗೆ ಎಣ್ಣೆಯಿಂದ ₹1,000 ಕೋಟಿ, ತರಕಾರಿಗಳು ₹2,000 ಕೋಟಿ, ಹಾಸಿಗೆ, ಹಾಸಿಗೆಗಳು, ಬೆಡ್ಶೀಟ್ಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳಿಂದ ₹500 ಕೋಟಿ, ಹಾಲು ಮತ್ತು ಇತರ ಡೈರಿ ಉತ್ಪನ್ನಗಳಿಂದ ₹4,000 ಕೋಟಿ, ಕಟ್ಟಿಗೆಯಿಂದ ₹50 ಕೋಟಿ, ಗಂಗಾಜಲ ಸಾಗಿಸಲು ಪ್ಲಾಸ್ಟಿಕ್ನಿಂದ ₹60 ಕೋಟಿ, ಕಾರು ಬಾಡಿಗೆ, ಆಟೋ ರಿಕ್ಷಾದಿಂದ ₹50 ಕೋಟಿ ಮತ್ತು ಇತರೆ ಸೇವೆಗಳಿಂದ ₹300 ಕೋಟಿ ವ್ಯವಹಾರವಾಗುವ ನಿರೀಕ್ಷೆಯಿದೆ. ಒಟ್ಟಾರೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಮಹಾ ಕುಂಭಮೇಳವು ದೇಶದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಭವ್ಯತೆಯ ಜೊತೆಗೆ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ವಿಕಾಸದಿಂದ ವಿಕಸಿತ ಭಾರತದ ಪರಿಕಲ್ಪನೆಗೆ ಬಲ ತುಂಬಲಿದೆ.












Click it and Unblock the Notifications