ಸೀಟು ಹಂಚಿಕೆಯಲ್ಲೂ ಪರಂಗೆ ಧರ್ಮ ಸಂಕಟ; ಗೆದ್ದು ಬೀಗಿದ ಸಿದ್ದು
Recommended Video
ಕಾಂಗ್ರೆಸ್ -ಜೆಡಿಎಸ್ ಮಧ್ಯೆ ಲೋಕಸಭೆ ಟಿಕೆಟ್ ಹಂಚಿಕೆ ಬುಧವಾರ ಅಂತಿಮವಾಗಿದೆ. ಕಾಂಗ್ರೆಸ್ ಗೆ ಇಪ್ಪತ್ತು ಹಾಗೂ ಜೆಡಿಎಸ್ ಗೆ ಎಂಟು ಕ್ಷೇತ್ರ ಅಂತಿಮವಾಗಿದೆ. ಇದರಲ್ಲೂ ಸಿದ್ದರಾಮಯ್ಯ ತಮ್ಮ ಶಕ್ತಿ ಏನು ಎಂಬುದನ್ನು ಸಾಬೀತು ಮಾಡಿದಂತಾಗಿದೆ. ಏಕೆಂದರೆ, ಇಲ್ಲೂ ತಮ್ಮ ಮಾತಿಗೆ ಇರುವ ಬೆಲೆಯನ್ನು ಉಳಿಸಿಕೊಂಡು, ಪಕ್ಷದೊಳಗಿನ ಹಾಗೂ ಹೊರಗಿನ ಪ್ರತಿಸ್ಪರ್ಧಿಗಳನ್ನು ಹಣಿದಿದ್ದಾರೆ.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಜೆಡಿಎಸ್ ನ ದೇವೆಗೌಡರ ಜತೆ ಮುಖಾಮುಖಿ ಆಗಬೇಕು. ಈ ಸ್ಪರ್ಧೆ ಖಂಡಿತಾ ತೀವ್ರ ಪೈಪೋಟಿಯಿಂದ ಕೂಡಿರುತ್ತದೆ. ದೇವೇಗೌಡರು ಹಾಸನದಿಂದ ಸ್ಪರ್ಧೆ ಮಾಡುವುದಿಲ್ಲ ಆಂತಾದ ತಕ್ಷಣ ಮೈಸೂರಿನಿಂದ ಕಣಕ್ಕೆ ಇಳಿಯಬಹುದು ಎಂಬ ಅಂದಾಜಿತ್ತು.
ಮೈಸೂರು ಉಳಿಸಿಕೊಂಡು, ತುಮಕೂರು ಬಿಟ್ಟುಕೊಟ್ಟ ಕಾಂಗ್ರೆಸ್!
ಹಾಗೇನಾದರೂ ಆಗಿದ್ದರೆ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರಿಗೆ ಭಾರೀ ಹಿನ್ನಡೆ ಆಗುತ್ತಿತ್ತು. ಈಗಾಗಲೇ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಸೇರಿ ಮೈಸೂರಿನಲ್ಲಿ ಜೆಡಿಎಸ್ ದೇ ಹವಾ ಎಂಬಂತೆ ಮಾಡಿದ್ದಾರೆ. ಪಕ್ಕದ ಚಾಮರಾಜನಗರದಲ್ಲಿ ಕಾಂಗ್ರೆಸ್ ನವರೇ ಪುಟ್ಟರಂಗ ಶೆಟ್ಟಿ ಸಚಿವರಾಗಿ ಇದ್ದರೂ ಅಷ್ಟೇನೂ ಪ್ರಭಾವಿ ಆಗಿಲ್ಲ.
ಮೈಸೂರನ್ನು ಕಾಂಗ್ರೆಸ್ ಗೆ ಉಳಿಸಿಕೊಂಡ ಸಿದ್ದರಾಮಯ್ಯ
ಈಗೇನಾದರೂ ಮೈಸೂರಿನಿಂದ ವಿಜಯಶಂಕರ್ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ದೊರೆಯದಂತೆ ಆದರೆ ಬಹಳ ಕಷ್ಟ ಇದೆ. ಹಾಗೆ ನೋಡಿದರೆ ಕಳೆದ ಲೋಕಸಭೆ ಚುನಾವಣೆಯ ವೇಳೆ ಬಿಜೆಪಿಯಿಂದ ಸ್ಪರ್ಧಿಸಲು ಮೈಸೂರಿನಿಂದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು ವಿಜಯ್ ಶಂಕರ್. ಆದರೆ ಅವರನ್ನು ಹಾಸನಕ್ಕೆ ಸಾಗಹಾಕಲಾಯಿತು. ಮೈಸೂರು-ಕೊಡಗು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾದ ಪ್ರತಾಪ್ ಸಿಂಹ ಗೆಲುವು ಕಂಡರು. ಆ ನಂತರ ಸಿಟ್ಟಾದ ವಿಜಯ್ ಶಂಕರ್ ಕಾಂಗ್ರೆಸ್ ಗೆ ಸೇರ್ಪಡೆಯಾದರು. ಈ ಬಾರಿ ಅವರೇ ಸ್ಪರ್ಧೆಗೆ ಇಳಿಯುವ ಸಾಧ್ಯತೆ ನಿಚ್ಚಳವಾಗಿದೆ. ಇದೀಗ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಗೆ ಉಳಿಯುವಂತೆ ಮಾಡಿಕೊಂಡ ಸಿದ್ದರಾಮಯ್ಯ ಅಷ್ಟರ ಮಟ್ಟಿಗೆ ಗೆಲುವು ಕಂಡಿದ್ದಾರೆ.
ಜೆಡಿಎಸ್-ಕಾಂಗ್ರೆಸ್ಗೆ ಎಷ್ಟು ಸೀಟು?, ಮಾ.16ರಂದು ಅಧಿಕೃತ ಘೋಷಣೆ
ಸದಾನಂದ ಗೌಡರ ವಿರುದ್ಧ ದೇವೇಗೌಡರು
ಕಳೆದ ವಿಧಾನಸಭಾ ಚುನಾವಣೆ ವೇಳೆ ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಭಾರೀ ಚಟುವಟಿಕೆಯಿಂದ ಓಡಾಟ ನಡೆಸಿ, ಯತೀಂದ್ರ ಸೋಲಿಗಾಗಿ ಪ್ರಚಾರ ನಡೆಸಿದ್ದರು. ಅವಕಾಶ ಸಿಕ್ಕಾಗಲೆಲ್ಲ ಸಿದ್ದರಾಮಯ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಂಥ ಸದಾನಂದ ಗೌಡರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸರಿಯಾದ ಹೊಡೆತ ಕೊಡುವುದಕ್ಕೆ ಜೆಡಿಎಸ್ ನ ದೇವೇಗೌಡರಿಗಿಂತ ಬೇರೆ ಯಾರು ಸಮರ್ಥರು? ಅಂಥದ್ದೊಂದು ಸ್ಪರ್ಧೆಗೆ ಡಿವಿಎಸ್ ಎದುರುಗೊಳ್ಳುವಂತೆ ಮಾಡುವಲ್ಲಿ ಸಿದ್ದರಾಮಯ್ಯ ಪಾತ್ರ್ ಅಲ್ಲಗಳೆಯುವಂತಿಲ್ಲ.
ಪರಮೇಶ್ವರ್ ಪವರ್ ಬಗ್ಗೆಯೇ ಅನುಮಾನ
ಆದರೆ, ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದು ಮಾತ್ರ ಅಚ್ಚರಿ. ಅಲ್ಲಿ ಹಾಲಿ ಸಂಸದರಾಗಿ ಇರುವವರು ಕಾಂಗ್ರೆಸ್ ನ ಎಸ್.ಪಿ.ಮುದ್ದಹನುಮೇಗೌಡ. ಡಿಸಿಎಂ ಪರಮೇಶ್ವರ್ ಅವರಿಗೂ ಬಹಳ ಹತ್ತಿರ ಎಸ್ ಪಿಎಮ್. ಜತೆಗೆ ಕರ್ನಾಟಕದಿಂದ ಇರುವ ಕಾಂಗ್ರೆಸ್ ಸಂಸದರ ಪೈಕಿ ಚಟುವಟಿಕೆಯಾಗಿ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದವರು ಮುದ್ದಹನುಮೇಗೌಡ. ಇನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ಮಾತುಕತೆ ಆರಂಭವಾದ ಕ್ಷಣದಿಂದಲೂ ಹಾಲಿ ಎಲ್ಲೆಲ್ಲಿ ಕಾಂಗ್ರೆಸ್ ಗೆದ್ದಿದೆಯೋ ಆ ಕ್ಷೇತ್ರಗಳನ್ನು ಬಿಟ್ಟುಕೊಡುವುದಿಲ್ಲ ಅಂತಲೇ ಚರ್ಚೆ ಆಗುತ್ತಿತ್ತು. ಇದೀಗ ತುಮಕೂರು ಕ್ಷೇತ್ರ ಜೆಡಿಎಸ್ ಗೆ ಬಿಟ್ಟುಕೊಟ್ಟು, ಮೈಸೂರನ್ನು ಉಳಿಸಿಕೊಳ್ಳಲಾಗಿದೆ. ಪರಮೇಶ್ವರ್ ತವರು ಜಿಲ್ಲೆಯಲ್ಲಿ, ತಮ್ಮ ಆಪ್ತರಿಗೆ ಸೀಟು ಉಳಿಸಿಕೊಡಿಸಲಿಕ್ಕೆ ಆಗದಿದ್ದಲ್ಲಿ ಅವರ ಸಾಮರ್ಥ್ಯದ ಬಗ್ಗೆ ಎಂಥ ಸಂದೇಶ ರವಾನೆ ಆಗುತ್ತದೆ?
ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಯಾರಾಗಬಹುದು?
ಸಿದ್ದರಾಮಯ್ಯ ಸಮನ್ವಯ ಸಮಿತಿಯ ಅಧ್ಯಕ್ಷರು ಎಂಬುದೊಂದು ಬಿಟ್ಟರೆ ಬೇರೆ ಯಾವ ಪ್ರಮುಖ ಸಚಿವ ಸ್ಥಾನ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಅವರ ಬಳಿ ಇಲ್ಲ. ಆದರೆ ತಮ್ಮ ಮಾತಿಗೆ ಪಕ್ಷದೊಳಗೆ ಬೆಲೆ ಇದೆ ಎಂಬುದನ್ನು ಸಾಬೀತು ಮಾಡುವಲ್ಲಿ ಟಿಕೆಟ್ ಹಂಚಿಕೆಯನ್ನೂ ವೇದಿಕೆಯಾಗಿ ಅವರು ಬಳಸಿಕೊಂಡಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದು, ಟಿ.ಬಿ.ಜಯಚಂದ್ರ, ಕೆ.ಎನ್.ರಾಜಣ್ಣ ಹಾಗೂ ಖುದ್ದು ಪರಮೇಶ್ವರ್ ಆ ಪಕ್ಷದ ಪರವಾಗಿ ಕೆಲಸ ಮಾಡುತ್ತಾರಾ ಎಂಬುದೇ ಅನುಮಾನ. ಜೆಡಿಎಸ್ ಒಂದು ವೇಳೆ ಗೆದ್ದರೆ ಜಿಲ್ಲೆಯಾದ್ಯಂತ ಬಲಗೊಳ್ಳುತ್ತದೆ. ಒಂದು ವೇಳೆ ಸೋತರೆ ಕಾಂಗ್ರೆಸ್ ನವರು ದೋಸ್ತಿ ಪಕ್ಷಕ್ಕೆ ಸರಿಯಾಗಿ ಬೆಂಬಲ ನೀಡಲಿಲ್ಲ ಎಂಬಂತೆ ಆಗುತ್ತದೆ. ಈ ಮಧ್ಯೆ ಜೆಡಿಎಸ್ ನಿಂದ ತುಮಕೂರಿಗೆ ಯಾರು ಅಭ್ಯರ್ಥಿಯಾಗಬಹುದು ಎಂಬುದು ಕೂಡ ಕುತೂಹಲಕ್ಕೆ ಕಾರಣವಾಗಿದೆ.