ಮತ್ತೆ ಎದ್ದು ಬರುತ್ತಾರೆಯೇ ದೇವೇಗೌಡರು? ಸೋಲೆಂಬ ಬುಲ್ಡೋಜರ್ ಅಡಿಯಲ್ಲಿ ಜೆಡಿಎಸ್
ದೇವೇಗೌಡರ ಕುಟುಂಬಕ್ಕೆ ಸೋಲು ಹೊಸದಲ್ಲ. ಅವಮಾನ, ಸವಾಲು ಕೂಡ ಹೊಸದಲ್ಲ. ಆ ಕಾರಣದಿಂದಲೇ ಗೌಡರ ಕುಟುಂಬದವರು ದೊಡ್ಡ ಹುದ್ದೆಗಳನ್ನು ತಲುಪಲು ಸಾಧ್ಯವಾಗಿದೆ. ಸೋಲಿನಿಂದ ಅಧೀರರಾಗಿದ್ದರೆ ಅದೆಲ್ಲ ಸಾಧ್ಯವೇ ಇರಲಿಲ್ಲ. ಈಗಿನ ಸನ್ನಿವೇಶ ಜೆಡಿಎಸ್ ಪಾಲಿಗೆ ಸವಾಲಾಗಿದೆ. ಇಂಥ ಸನ್ನಿವೇಶಗಳಲ್ಲಿ ಈ ಹಿಂದೆಲ್ಲ ದೇವೇಗೌಡರು ತುಂಬು ವಿಶ್ವಾಸದಿಂದ ಹೇಳಿಕೆ ನೀಡುತ್ತಿದ್ದರು.
ನಾನು ಮತ್ತೆ ಎದ್ದು ಬರುತ್ತೇನೆ. ಮತ್ತೆ ಪಕ್ಷವನ್ನು ಕಟ್ಟುತ್ತೇನೆ. ಯಾರೆಲ್ಲ ಈಗ ಮಾತನಾಡುತ್ತಿದ್ದಾರಲ್ಲಾ ಅವರನ್ನು ಸುಮ್ಮನಾಗಿಸುತ್ತೇನೆ ಎಂದು ಹೇಳಿರುತ್ತಿದ್ದರು. ಆದರೆ ಗೌಡರದು ಮಾತಿಲ್ಲ. ಇನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಮೌನವಾಗಿದ್ದಾರೆ. ಇಬ್ಬರಿಗೂ ಗೊತ್ತಾಗಿದೆ, ಈಗ ಹೊಸದಾಗಿ ಆಟ ಶುರು ಮಾಡಿ ಗೆಲ್ಲುವುದಕ್ಕೆ ಏನೂ ಉಳಿದಿಲ್ಲ.
ಗೌಡ್ರು ಸೋಲಲು ನಿಖಿಲ್ ಕಾರಣ: ಕೆ ಎನ್ ರಾಜಣ್ಣ ಸ್ಫೋಟಕ ಹೇಳಿಕೆ
ನರೇಂದ್ರ ಮೋದಿ ಸುನಾಮಿ ಒಂದು ಕಡೆ. ಜೆಡಿಎಸ್ ನದು ಕುಟುಂಬ ರಾಜಕಾರಣ ಎಂಬ ಸಿಟ್ಟು ಮತ್ತೊಂದೆಡೆ. ಪ್ರಬಲ ಎದುರಾಳಿಗಳ ಜತೆ ಕೂಡಿಕೊಂಡೇ ಸರಕಾರ ನಡೆಸಬೇಕಿದೆ. ಈಗ ಕೈಗೆ ಸಿಕ್ಕಿರುವ ಅಧಿಕಾರವನ್ನು ಸಹ ಗೌರವದ ಪ್ರಶ್ನೆ ಎಂದು ಬಿಟ್ಟು ಬಂದರೆ ಅಲ್ಲಿಗೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಆರೋಗ್ಯ- ವಯಸ್ಸು ಕೂಡ ಜತೆಗಿಲ್ಲದ ಇಂಥ ಸನ್ನಿವೇಶದಲ್ಲಿ ಏನು ಮಾಡಲು ಸಾಧ್ಯ?
ಎಲ್ಲವನ್ನೂ ಒಟ್ಟಿಗೆ ಮಾಡಿದ್ದು ಯಡವಟ್ಟಾಯಿತು
ಹಾಗೆ ನೋಡಿದರೆ, ದೇವೇಗೌಡರ ಕುಟುಂಬಕ್ಕೆ ಅಧಿಕಾರ ಹಾಗೂ ರಾಜಕಾರಣ ಹೊಸತಲ್ಲ. ಎಲ್ಲಿ ಚಿಗುಟಿದರೆ ಯಾರು ಬೊಂಬಡಾ ಬಜಾಯಿಸುತ್ತಾರೆ ಎಂದು ಚೆನ್ನಾಗಿ ಬಲ್ಲ ರಾಜಕಾರಣದ ಡಾಕ್ಟರ್ ದೇವೇಗೌಡರಿಗೆ ಕುಮಾರಸ್ವಾಮಿ ಬಗ್ಗೆ ಈಗಲೂ ಮಹತ್ವಾಕಾಂಕ್ಷೆಗಳಿವೆ. ತಮ್ಮ ಕಣ್ಣೆದುರೇ ಮೊಮ್ಮಕ್ಕಳಾದ ಪ್ರಜ್ವಲ್, ನಿಖಿಲ್ ಕೂಡ ಒಂದು ಹಂತಕ್ಕೆ ತಲುಪಲಿ ಎಂಬುದು ಅವರ ಲೆಕ್ಕಾಚಾರ ಆಗಿತ್ತು. ಆದರೆ ಎಲ್ಲವನ್ನೂ ಒಟ್ಟಿಗೆ ಮಾಡಿದ್ದು ಯಡವಟ್ಟಾಯಿತು. ಮೂಲಗಳ ಪ್ಪ್ರಕಾರ: ಹಾಸನದಲ್ಲೂ ಪ್ರಜ್ವಲ್ ಸೋಲಿಗೆ ಬಹುತೇಕ ರಣತಂತ್ರ ಆಗಿತ್ತು. ಆದರೂ ಅದು ಹೇಗೋ ದಡ ಮುಟ್ಟಲು ಸಫಲವಾಗಿದ್ದಾರೆ. ಒಂದು ವೇಳೆ ಅಲ್ಲಿ ಸೋತಿದ್ದರೆ ಪರಿಸ್ಥಿತಿ ಮತ್ತೂ ಭಯಂಕರ ಆಗಿರುತ್ತಿತ್ತು.
ಜೆಡಿಎಸ್ ಗೆದ್ದಿದ್ದರೆ ಹೊಸ ಇತಿಹಾಸ ಸೃಷ್ಟಿ
ಸುಮ್ಮನೆ ಅಂದುಕೊಳ್ಳಿ, ಒಂದು ವೇಳೆ ತುಮಕೂರು, ಹಾಸನ ಹಾಗೂ ಮಂಡ್ಯ ಮೂರೂ ಕಡೆ ಜೆಡಿಎಸ್ ಗೆದ್ದಿದ್ದರೆ ಹೊಸ ಇತಿಹಾಸ ಸೃಷ್ಟಿ ಆಗಿರುತ್ತಿತ್ತು. ತಾತ, ಇಬ್ಬರು ಮೊಮ್ಮಕ್ಕಳು ಸಂಸತ್ ಪ್ರವೇಶಿಸುತ್ತಿದ್ದರು. ಒಬ್ಬ ಮಗ ಮುಖ್ಯಮಂತ್ರಿ, ಮತ್ತೊಬ್ಬ ಮಗ ಲೋಕೋಪಯೋಗಿ ಸಚಿವ, ಸೊಸೆ ಶಾಸಕಿ, ಮತ್ತೊಬ್ಬ ಸೊಸೆ ಜಿಲ್ಲಾ ಪಂಚಾಯಿತಿ ಸದಸ್ಯೆ. ಎಲ್ಲಿಂದ ಎಲ್ಲಿಯವರೆಗೆ ನೋಡಿದರೂ ಗೌಡರ ಕುಟುಂಬವೇ. ಇದೇನು ಕುಟುಂಬ ರಾಜಕಾರಣವೋ ಅಥವಾ ರಾಜಕಾರಣಿಗಳ ಕುಟುಂಬವೋ ಎಂಬುದನ್ನು ಜನರೇ ತೀರ್ಮಾನ ಮಾಡಬೇಕು. ಆದರೆ ಗೌಡರ ಲೆಕ್ಕಾಚಾರಗಳು ಮೋದಿ ಸುನಾಮಿಯಲ್ಲಿ ಕೊಚ್ಚಿ ಹೋಗಿದೆ.
ಆದರ್ಶಯುತವಾದ ಮೈತ್ರಿ ಸರಕಾರ ಅಲ್ಲ
ಸದ್ಯಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಇಬ್ಬರ ಆರೋಗ್ಯವೂ ಸರಿ ಇಲ್ಲ. ಮೈತ್ರಿ ಸರಕಾರದಲ್ಲಿ ಕುಮಾರಸ್ವಾಮಿ ಬಗ್ಗೆ ಕಾಂಗ್ರೆಸ್ ನವರಿಗೆ ಸಮಾಧಾನ ಇಲ್ಲ. ದಿನ ಬೆಳಗಾದರೆ ಸಿದ್ದರಾಮಯ್ಯ ಗುಂಪಿನಿಂದ ಒಂದು ಬಾಂಬ್ ಸಿಡಿದರೆ, ಅದಕ್ಕೆ ಉತ್ತರವಾಗಿ ಕುಮಾರಸ್ವಾಮಿ ಬೆಂಬಲಿಗರಿಂದ ಮತ್ತೊಂದು ಬಾಂಬ್. ಒಟ್ಟಿನಲ್ಲಿ ಇದು ಕೂಡಿ ಬಾಳುವ ಆದರ್ಶ ಸರಕಾರ ಅಲ್ಲ ಎಂಬ ಅಭಿಪ್ರಾಯ ಜನರಲ್ಲಿ ಮೂಡಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅದು ಪ್ರತಿಫಲನ ಆಗಿರುವುದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ಜತೆ ಸೇರಿ ಜೆಡಿಎಸ್ ಬೀದಿಗೆ ಬಂತೋ ಕಾಂಗ್ರೆಸ್ ಹಳ್ಳ ಹಿಡಿಯಿತೋ ಆ ಪ್ರಶ್ನೆಯಿಂದಲೇ ಎರಡೂ ಪಕ್ಷಗಳು ಬಡಿದಾಡುವ ಸಾಧ್ಯತೆ ಇದೆ.
ಆಪರೇಷನ್ ಕಮಲಕ್ಕೆ ತಾವಾಗಿಯೇ ಬರಬಹುದು
ಸರಕಾರದಲ್ಲಿ ಹೀಗೇ ಮುಂದುವರಿಯುವ ಅನಿವಾರ್ಯ ಕಾಂಗ್ರೆಸ್- ಜೆಡಿಎಸ್ ಎರಡಕ್ಕೂ ಎದುರಾದಂತೆ ಇದೆ. ಏಕೆಂದರೆ ಬಿಜೆಪಿಯು ರಾಜ್ಯದಲ್ಲಿ ಇಂಥ ಅದ್ಭುತ ಗೆಲುವು ದಾಖಲಿಸಿದ ವೇಳೆಯಲ್ಲಿ ಚುನಾವಣೆಗೆ ಹೋದರೆ ಲಾಭ ಬಿಜೆಪಿಗೇ ಸಿಗುತ್ತದೆ. ಇನ್ನು ಈಗಿರುವ ಅಸಮಾಧಾನಿತರನ್ನು ಗಟ್ಟಿಯಾಗಿ ಹಿಡಿದುಕೊಳ್ಳದಿದ್ದಲ್ಲಿ ಅವರೆಲ್ಲ ಸುಲಭವಾಗಿ ಬಿಜೆಪಿ ಕಡೆಗೆ ತಿರುಗಿ ಬಿಡುತ್ತಾರೆ. ಈಗಿನ ಲೋಕಸಭಾ ಚುನಾವಣೆ ಫಲಿತಾಂಶದಿಂದ ಬಿಜೆಪಿಗೆ ನೂರಾನೆ ಬಲ ಬಂದಿದೆ. ಆಪರೇಷನ್ ಕಮಲ ಎಂಬುದನ್ನು ಅವರು ಮಾಡುವುದಿರಲಿ, ಇತರ ಪಕ್ಷಗಳಿಂದ ತಾವಾಗಿಯೇ ಹುಡುಕಿಕೊಂಡು ಬಂದುಬಿಡಬಹುದು ಹಾಗಿದೆ ಪರಿಸ್ಥಿತಿ. ಕರ್ನಾಟಕದಲ್ಲಿ ಪ್ರಮುಖವಾದ ಪ್ರಾದೇಶಿಕ ಪಕ್ಷ ಜೆಡಿಎಸ್ ಹಾಗೂ ಅತ್ಯಂತ ಹಿರಿಯ, ಪ್ರಮುಖ ನಾಯಕ ದೇವೇಗೌಡರ ಕುಟುಂಬದ ಮುಂದಿನ ಹಾದಿ ಏನು?