ಸಿಎಂ ಕುಮಾರಸ್ವಾಮಿ ಆರೋಗ್ಯ ಹೇಗಿದೆ? ಎಚ್ಡಿಕೆ ಭಾವ ಡಾ. ಮಂಜುನಾಥ್ ಸ್ಪಷ್ಟನೆ
Recommended Video

ಎರಡೆರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರಿಗೆ ಅವರ ಕುಟುಂಬದ ಸದಸ್ಯರು ಆರೋಗ್ಯದ ಮೇಲೆ ನಿಗಾ ಇಟ್ಟುಕೊಳ್ಳುವಂತೆ ಸೂಚಿಸುತ್ತಲೇ ಇರುತ್ತಾರೆ. ಕಳೆದ ಅಸೆಂಬ್ಲಿ ಚುನಾವಣೆಯ ವೇಳೆ, ಮಗನ ಆರೋಗ್ಯದ ಬಗ್ಗೆ ತಾಯಿ ಚೆನ್ನಮ್ಮ ಕೂಡಾ ಚಿಂತೆ ವ್ಯಕ್ತಪಡಿಸಿದ್ದರು.
ಕಳೆದ ವರ್ಷ ಸೆಪ್ಟಂಬರ್ ತಿಂಗಳಲ್ಲಿ, ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಕುಮಾರಸ್ವಾಮಿ ಅವರು ಅಕ್ಟೋಬರ್ 1ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ನಂತರ ಜೆ.ಪಿ.ನಗರದ ನಿವಾಸದಲ್ಲಿ ಸುಮಾರು ಒಂದು ತಿಂಗಳು ವಿಶ್ರಾಂತಿ ಪಡೆದಿದ್ದರು.
ಕುಮಾರಸ್ವಾಮಿಯವರ ಮೊದಲನೇ ಭಾವ ಡಾ. ಸಿ ಎನ್ ಮಂಜುನಾಥ್, ಜಯದೇವ ಆಸ್ಪತ್ರೆಯ ನಿರ್ದೇಶಕರು. ಖುದ್ದು, ಕಾರ್ಡಿಯಾಲಜಿಸ್ಟ್ ಆಗಿರುವ ಮಂಜುನಾಥ್ ಅವರು, ಕುಮಾರಸ್ವಾಮಿಯವರ ಆರೋಗ್ಯದ ಬಗ್ಗೆ 'ಒನ್ ಇಂಡಿಯಾ' ಜೊತೆಗಿನ ಸಂದರ್ಶನದಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ. ಜೊತೆಗೆ, ತಮ್ಮ ಮತ್ತು ಎಚ್ಡಿಕೆ ನಡುವಿನ ಒಡನಾಟವನ್ನೂ ಮೆಲುಕು ಹಾಕಿಕೊಂಡಿದ್ದಾರೆ.

ನಾನು ಮದುವೆಯಾದಾಗ ಕುಮಾರಸ್ವಾಮಿ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್ಸಿ ಒದುತ್ತಾ ಇದ್ದರು. ನನ್ನ ಮೊದಲನೇ ವರ್ಷದ ಎಂಡಿಯನ್ನು ಮೈಸೂರಿನಲ್ಲೇ ಮಾಡುತ್ತಿದ್ದೆ. ಅವರಲ್ಲಿ ವೆಸ್ಪಾ ಸ್ಕೂಟರ್ ಇತ್ತು, ಅದರಲ್ಲಿ ಪ್ರತೀದಿನ ನನ್ನನ್ನು ಬಸ್ ಸ್ಟ್ಯಾಂಡಿಗೆ ಬಿಡುತ್ತಿದ್ದರು ಎಂದು ಡಾ. ಮಂಜುನಾಥ್ ಹೇಳಿದ್ದಾರೆ.
ಅವರಿಗೆ ಮೊದಲಿನಿಂದಲೂ ಕುಟುಂಬ ಅಂದರೆ ತುಂಬಾ ಪ್ರೀತಿ..ತುಂಬಾ ಸಾಫ್ಟ್ ನೇಚರ್ ಮನುಷ್ಯ. ಕಾಯಿಲೆ ಅಥವಾ ಯಾರಾದರೂ ಸಾವನ್ನಪ್ಪಿದ ದೃಶ್ಯವನ್ನು ನೋಡಿದರೆ, ಅಳುವವರು..ತುಂಬಾ ತಾಳ್ಮೆಯ ಮನುಷ್ಯ, ಮಾವನವರಂತೆ ಬಡವರ ಬಗ್ಗೆ ವಿಶೇಷ ಕರುಣೆ ಅವರಿಗಿದೆ ಎಂದು ಮಂಜುನಾಥ್, ತಮ್ಮ ಭಾವನ ಗುಣವನ್ನು ಹೊಗಳಿದ್ದಾರೆ.

ವಿದ್ಯಾರ್ಥಿ ಜೀವನದಲ್ಲೂ ಅವರಿಗೆ ಸಿನಿಮಾ ಹುಚ್ಚು ಜಾಸ್ತಿ. ಮೊದಮೊದಲು, ಅದನ್ನೇ ತಮ್ಮ ವೃತ್ತಿಯನ್ನಾಗಿ ಆರಿಸಿಕೊಂಡಿದ್ದ ಕುಮಾರಸ್ವಾಮಿ ರಾಜಕೀಯಕ್ಕೆ ಬಂದದ್ದು ಆಕಸ್ಮಿಕ ಎಂದು ಮಂಜುನಾಥ್ ಸಂದರ್ಶನದಲ್ಲಿ ಹೇಳಿದ್ದಾರೆ.
ಕುಮಾರಸ್ವಾಮಿಯವರ ಆರೋಗ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, " ಅವರ ಆರೋಗ್ಯ ಈಗ ಚೆನ್ನಾಗಿದೆ. ಸರ್ಜರಿಯಾಗಿ ಒಂದು ವರ್ಷದ ಮೇಲಾಯಿತು. ವಾಲ್ ಬದಲಾವಣೆ ಮಾಡಿದ್ದಾಗಿದೆ, ಸಕ್ಕರೆ ಕಾಯಿಲೆಯೂ ಸರಿದಾರಿಗೆ ಬರುತ್ತಿದೆ" ಎಲ್ಲಾ ದೇವರ ಆಶೀರ್ವಾದ ಎಂದು ಡಾ. ಮಂಜುನಾಥ್ ಹೇಳಿದ್ದಾರೆ.












Click it and Unblock the Notifications