ಬೆಂಗಳೂರಿಗರು ಸಹಾಯ 2.0 ಮೂಲಕ ದೂರು ನೀಡುವುದು ಹೇಗೆ?
ಬೆಂಗಳೂರು, ನವೆಂಬರ್ 27: ಬೆಂಗಳೂರು ನಗರದ ಜನರು ದೂರುಗಳನ್ನು ನೀಡಲು ಬಿಬಿಎಂಪಿ 'ಸಹಾಯ 2.0' ತಂತ್ರಾಶವನ್ನು ಅಭಿವೃದ್ಧಿಪಡಿಸಿದೆ. ನಮ್ಮ ಬೆಂಗಳೂರು ಅಪ್ಲಿಕೇಶನ್ನಲ್ಲಿ ಸಹ ಈ ತಂತ್ರಾಶ ಲಭ್ಯವಿದೆ.
ಹೊಸ ವೈಶಿಷ್ಟ್ಯತೆಗಳ ಜೊತೆಗೆ ಬಳಕೆದಾರರ ಸ್ನೇಹಿಯಾಗಿ 'ಸಹಾಯ 2.0' ತಂತ್ರಾಶವನ್ನು ಅಭಿವೃದ್ಧಿಗೊಳಿಸಲಾಗಿದೆ. ಬಿಬಿಎಂಪಿ ಸಹಾಯವಾಣಿ, ನಮ್ಮ ಬೆಂಗಳೂರು ಅಪ್ಲಿಕೇಶನ್ ಸೇರಿದಂತೆ ಜನರು ಎಲ್ಲಿ ದೂರು ನೀಡಿದರೂ ಅದು ಸಹ ಈ ತಂತ್ರಾಂಶದಲ್ಲಿ ದಾಖಲಾಗಲಿದೆ.
ರಸ್ತೆ ಗುಂಡಿ, ಪಾದಚಾರಿ ಮಾರ್ಗ, ಬೀದಿ ದೀಪ, ಕಸ ವಿಲೇವಾರಿ ಮುಂತಾದ ವಿಚಾರಗಳ ಕುರಿತು 'ಸಹಾಯ 2.0' ಮೂಲಕ ಜನರು ದೂರು ನೀಡಬಹುದು. ಈ ದೂರನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಬಿಬಿಎಂಪಿ ಅಗತ್ಯ ವ್ಯವಸ್ಥೆಯನ್ನು ಮಾಡಿದೆ.

ಜನರು ದೂರು ದಾಖಲು ಮಾಡಿದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಎಸ್ಎಂಎಸ್ ಮೂಲಕ ಮಾಹಿತಿ ಹೋಗಲಿದೆ. 'ನಮ್ಮ ಬೆಂಗಳೂರು' ಅಪ್ಲಿಕೇಶನ್ ಮೂಲಕ ಜನರು ದೂರಿನ ಸ್ಥಿತಿಗತಿ ತಿಳಿದುಕೊಳ್ಳಬಹುದಾಗಿದೆ.
ಅಧಿಕಾರಿಗಳಿಗೆ ದೂರಿನ ಸಂಕ್ಷಿಪ್ತ ವಿವರ, ಗೂಗಲ್ ಮ್ಯಾಪ್ ಸಮೇತ ಸಂಪೂರ್ಣ ವಿವರ ಮತ್ತು ಸ್ಥಳದ ಮಾಹಿತಿ ರವಾನೆಯಾಗುತ್ತದೆ. ಅಧಿಕಾರಿಗಳು ದೂರನ್ನು ಬಗೆಹರಿಸಲು ಸಹ ಕಾಲಮಿತಿಯನ್ನು ನಿಗದಿ ಮಾಡಲಾಗಿದೆ.
ಜನರು ನೀಡಿದ ದೂರು ನಿಗದಿತ ಕಾಲಮಿತಿಯಲ್ಲಿ ಬಗೆಹರಿಯದಿದ್ದರೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಗಲಿದೆ. ದೂರು ನೀಡಿದ ಜನರಿಗೂ ಸಹ ಪುನಃ ಮಾಹಿತಿ ತಿಳಿಯುವಂತೆ ವ್ಯವಸ್ಥೆ ತಂತ್ರಾಂಶ ಅಭಿವೃದ್ಧಿಗೊಳಿಸಲಾಗಿದೆ.
ದೂರು ಬಗೆಹರಿದ ಕೂಡಲೇ ಜನರಿಗೆ ಸಹ ಮಾಹಿತಿ ಹೋಗಲಿದೆ. ಅವರು ಪುನಃ ಅಭಿಪ್ರಾಯವನ್ನು ದಾಖಲು ಮಾಡಲು ಸಹ ಅವಕಾಶ ನೀಡಲಾಗಿದೆ. ಗೂಗಲ್ ಪ್ಲೇ ಸ್ಟೋರ್ ಮೂಲಕ ಜನರು 'ಸಹಾಯ 2.0' ಡೌನ್ ಲೋಡ್ ಮಾಡಿಕೊಳ್ಳಬಹುದು.












Click it and Unblock the Notifications