18 ತಿಂಗಳಲ್ಲಿ ಎಂಟಿಬಿ ನಾಗರಾಜ್ ಆಸ್ತಿ ಬೆಳೆದಿದ್ದು ಎಷ್ಟು ಗೊತ್ತೇ?
ಬೆಂಗಳೂರು, ನವೆಂಬರ್ 15: ಪಕ್ಷಕ್ಕೆ ಸೆಡ್ಡು ಹೊಡೆದು ರಾಜೀನಾಮೆ ನೀಡುವ ಮೂಲಕ ಸಮ್ಮಿಶ್ರ ಸರ್ಕಾರ ಪತನಗೊಳ್ಳುವಲ್ಲಿ ಕಾರಣರಾದ ಶಾಸಕರಲ್ಲಿ ಹೊಸಕೋಟೆಯ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜ್ ಒಬ್ಬರು. ಸಿದ್ದರಾಮಯ್ಯರ ಆಪ್ತರ ವಲಯದಲ್ಲಿ ಗುರುತಿಸಿಕೊಂಡಿದ್ದ ಎಂಟಿಬಿ, 'ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣುತ್ತಾರೆ' ಎಂದಿದ್ದರು. ಆದರೆ ಅನರ್ಹತೆಯ ಪ್ರಕರಣ ಸುತ್ತಿಕೊಂಡ ಬಳಿಕ ಅವರು ಸಿದ್ಧರಾಮಯ್ಯರ ಪರಮಶತ್ರುಗಳಲ್ಲಿ ಒಬ್ಬರೆಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್ನ ಅತ್ಯಂತ ಸಿರಿವಂತ ರಾಜಕಾರಣಿಗಳಲ್ಲಿ ಒಬ್ಬರಾದ ಎಂಟಿಬಿ, ಇತ್ತೀಚೆಗಷ್ಟೇ ಬಲು ದುಬಾರಿ ರೋಲ್ಸ್ ರಾಯ್ ಕಾರು ಖರೀದಿಸುವ ಮೂಲಕ ಗಮನ ಸೆಳೆದಿದ್ದರು. ಈಗ ಬಿಜೆಪಿ ಬಾವುಟ ಹಿಡಿಯುವ ಮೂಲಕ ಕಮಲ ಪಾಳೆಯಕ್ಕೆ ಜಿಗಿದಿರುವ ಎಂಟಿಬಿ, ಉಪ ಚುನಾವಣೆಯಲ್ಲಿ ಹೊಸಕೋಟೆಯ ಕಮಲ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಅವರ ಆಸ್ತಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅದೂ ಕಳೆದ ವಿಧಾನಸಭೆ ಚುನಾವಣೆ ನಡೆದ ಈವರೆಗಿನ 18 ತಿಂಗಳಿನಲ್ಲಿ ಎನ್ನುವುದು ಗಮನಾರ್ಹ.
ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್ ಡಿ ಕುಮಾರಸ್ವಾಮಿ ಅವರು ಜುಲೈ 23ರಂದು ವಿಶ್ವಾಸಮತ ಕಳೆದುಕೊಂಡು ಅಧಿಕಾರದಿಂದ ಕೆಳಕ್ಕಿಳಿದಿದ್ದರು. ಜುಲೈ 26ರಂದು ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಲ್ಲಿಯವರೆಗೂ ಮುಂಬೈನ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದ ಅನರ್ಹ ಶಾಸಕರು ಬೆಂಗಳೂರಿಗೆ ಮರಳಿದ್ದರು.
ಕರ್ನಾಟಕದ ಶ್ರೀಮಂತ ರಾಜಕಾರಣಿ ಎನಿಸಿರುವ ಎಂಟಿಬಿ ನಾಗರಾಜ್ ಅವರ ಆಸ್ತಿ ಕೇವಲ 18 ತಿಂಗಳಿನಲ್ಲಿ 185.7 ಕೋಟಿಯಷ್ಟು ಹೆಚ್ಚಾಗಿದೆ ಎನ್ನುತ್ತದೆ ಅವರು ಸಲ್ಲಿಸಿರುವ ಇತ್ತೀಚಿನ ಅಫಿಡವಿಟ್. ಆಗಸ್ಟ್ 2 ರಿಂದ 7ನೇ ದಿನಾಂಕದೊಳಗೇ ಅವರ ಖಾತೆಗೆ 53 ಕಂತುಗಳಲ್ಲಿ 48 ಕೋಟಿಗೂ ಹೆಚ್ಚು ಹಣ ಜಮೆಯಾಗಿದೆ. ಈ ಅವಧಿಯಲ್ಲಿ ಅವರು ಅನರ್ಹತೆಯ ಪ್ರಕರಣ ಎದುರಿಸುತ್ತಿದ್ದರು ಎನ್ನುವುದು ವಿಶೇಷ.
ಕಳೆದ 18 ತಿಂಗಳ ಅವಧಿಯಲ್ಲಿನ ಎಂಟಿಬಿ ನಾಗರಾಜ್ ಅವರ ಸಂಪತ್ತಿನ ಏರಿಕೆಯಲ್ಲಿ ಈ ಮೊತ್ತವು ಶೇ 25.84ರಷ್ಟು ಕಾಣಿಕೆ ಸಲ್ಲಿಸಿದೆ!

ಶೇ 15.5ರಷ್ಟು ಸಂಪತ್ತು ಏರಿಕೆ
ಎಂಟಿಬಿ ಮತ್ತು ಅವರ ಪತ್ನಿ ಶಾಂತಕುಮಾರಿ ಅವರ ಒಟ್ಟು ಆಸ್ತಿ 1,201.50 ಕೋಟಿ ರೂ. ಎನ್ನುತ್ತದೆ ಇತ್ತೀಚಿನ ಅಫಿಡವಿಟ್. ಅವರು 2018ರ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಸಲ್ಲಿಸಿದ್ದ ಅಫಿಡವಿಡ್ಗೆ ಹೋಲಿಸಿದರೆ ಇದು ಶೇ 15.5ರಷ್ಟು ಸಂಪತ್ತು ಪ್ರಮಾಣ ಹೆಚ್ಚಳವಾಗಿರುವುದನ್ನು ತೋರಿಸುತ್ತದೆ.

149 ಕೋಟಿ ರೂ ಹೆಚ್ಚಳ
2018 ಮತ್ತು 2019ರಲ್ಲಿ ಎಂಟಿಬಿ ಸಲ್ಲಿಸಿರುವ ಅಫಿಡವಿಟ್ಗಳನ್ನು ತುಲನೆ ಮಾಡಿದರೆ ಅವರ ಚರ ಆಸ್ತಿಗಳ ಪ್ರಮಾಣವು 104.53 ಕೋಟಿ ರೂ.ನಷ್ಟು ಹೆಚ್ಚಳವಾಗಿರುವುದು ತಿಳಿಯುತ್ತದೆ. ಅವರ ಪತ್ನಿ ಶಾಂತಕುಮಾರಿ ಅವರ ಚರ ಆಸ್ತಿ 44.95 ಕೋಟಿ ರೂ.ನಷ್ಟು ಏರಿಕೆಯಾಗಿದೆ.

53 ಬಾರಿ ಹಣ ಜಮೆ
ಜುಲೈ 27 ಮತ್ತು ಆಗಸ್ಟ್ 2 ರಿಂದ 7ನೇ ತಾರೀಕಿನ ಅವಧಿಯಲ್ಲಿ ಎಂಟಿಬಿ ಅವರ ಕೆನರಾ ಬ್ಯಾಂಕ್ ಖಾತೆಗೆ 53 ಬಾರಿ ಹಣ ಜಮೆಯಾಗಿದೆ. ಇದರಲ್ಲಿ ಹೆಚ್ಚಿನ ಸಲ 90 ಲಕ್ಷ ರೂ.ನಂತೆ ಜಮೆ ಮಾಡಲಾಗಿದೆ. ಇವುಗಳಲ್ಲದೆ ಬೇರೆ ಅವಧಿಗಳಲ್ಲಿ ಕೂಡ ಅವರ ಖಾತೆಗೆ ಹಣ ಜಮೆಯಾಗಿದ್ದು, ಎಂಟಿಬಿ ಅದನ್ನು ಸಹ ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದಾರೆ.

48 ಕೋಟಿ ರೂ ಜಮೆ
ನಾಲ್ಕು ದಿನಗಳ ನಂತರ ಎಂಟಿಬಿ ನಾಗರಾಜ್ ಅವರ ಹೆಸರಿನಲ್ಲಿ 15 ಕಂತುಗಳಲ್ಲಿ 13.91 ಕೋಟಿ ರೂ. ಜಮೆಯಾಗಿತ್ತು. ಇನ್ನೆರಡು ದಿನಗಳ ಬಳಿಕ 21 ವಿಭಿನ್ನ ಕಂತುಗಳಲ್ಲಿ 18.61 ಕೋಟಿ ರೂ. ಜಮೆಯಾಗಿತ್ತು. ಆಗಸ್ಟ್ 5ರಂದು 16 ವಿವಿಧ ಕಂತುಗಳಲ್ಲಿ ಒಟ್ಟು 14.86 ಕೋಟಿ ರೂ. ಮತ್ತು ಆಗಸ್ಟ್ 7ರಂದು ಕೊನೆಯ ಕಂತಿನಲ್ಲಿ 92.91 ಲಕ್ಷ ರೂ ಜಮೆ ಮಾಡಲಾಗಿತ್ತು. ಈ ಎಲ್ಲ ಜಮೆಗಳೂ 90 ಲಕ್ಷಕ್ಕೂ ಅಧಿಕ ಮೊತ್ತದ್ದಾಗಿವೆ. ಆದರೆ ಒಂದು ಕೋಟಿಗಿಂತ ಕಡಿಮೆ ಮೊತ್ತದ್ದಾಗಿವೆ. ಹೀಗೆ ಜಮೆಯಾದ ಒಟ್ಟು ಮೊತ್ತ 48,31,95,142 ರೂ.

2018ರಲ್ಲಿ ಎಷ್ಟಿತ್ತು? ಈಗ ಎಷ್ಟಿದೆ?
2018ರಲ್ಲಿ ಎಂಟಿಬಿ ನಾಗರಾಜ್ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ ಅವರ ಬಳಿ ಇದ್ದ ಒಟ್ಟು ಆಸ್ತಿ ಮೌಲ್ಯ 7,09,39,08,094 ರೂ. ಅವರ ಪತ್ನಿ ಶಾಂತಕುಮಾರಿ ಅವರ ಆಸ್ತಿ 3,06,41,21,258 ರೂ. ಈಗ ಎಂಟಿಬಿ ಅವರ ಆಸ್ತಿ 8,44,73,93,923 ರೂ.ಗೆ ಹೆಚ್ಚಳವಾಗಿದೆ. ಅಂದರೆ 1,29,65,64,619 ರೂ.ನಷ್ಟು ಆಸ್ತಿ ಒಂದೂವರೆ ವರ್ಷದಲ್ಲಿ ಹೆಚ್ಚಾಗಿದೆ. ಅವರ ಪತ್ನಿ ಶಾಂತಕುಮಾರಿ ಆಸ್ತಿ ಹೊಸ ಅಫಿಡವಿಟ್ ಪ್ರಕಾರ 3,56,76,51,906 ರೂ. ಇದ್ದು, ಹಳೆಯ ಅಫಿಡವಿಟ್ಗೆ ಹೋಲಿಸಿದರೆ 50,35,30,648 ರೂ. ನಷ್ಟು ಹೆಚ್ಚಳವಾಗಿದೆ.

600 ಕೋಟಿಗೂ ಅಧಿಕ ಚರ ಆಸ್ತಿ
ಎಂಟಿಬಿ ನಾಗರಾಜ್ ಅವರ ಬಳಿ 43 ಲಕ್ಷ ರೂ. ನಗದು ಹಣವಿದೆ. ಅವರ ಪತ್ನಿ ಬಳಿ 4.50 ಲಕ್ಷ ರೂ. ನಗದು ಇದೆ. ಅವರ ಉಳಿತಾಯ ಖಾತೆಯಲ್ಲಿ 4,53,32,109 ರೂ. ಇದ್ದರೆ, ಅವರ ಪತ್ನಿಯ ಉಳಿತಾಯ ಖಾತೆಯಲ್ಲಿ 27,04,502 ರೂ ಇದೆ. ಎಂಟಿಬಿ ಬಳಿ ಇರುವ ಚರ ಆಸ್ತಿಯ ಒಟ್ಟು ಮೌಲ್ಯ 424.97 ಕೋಟಿ ರೂ. ಇನ್ನು ಅವರ ಪತ್ನಿ ಬಳಿ ಇರುವ ಚರ ಆಸ್ತಿ ಮೌಲ್ಯ 167.34 ಕೋಟಿ ರೂ. 4 ಕೋಟಿ ರೂ ಮೌಲ್ಯದ ಆಭರಣಗಳಿವೆ.

600 ಕೋಟಿ ರೂ ಸ್ಥಿರ ಆಸ್ತಿ
ಕೃಷಿ ಜಮೀನು, ಕೃಷಿಯೇತರ ಜಮೀನು, ವಾಣಿಜ್ಯ ಕಟ್ಟಡಗಳು, ಮನೆಗಳು ಸೇರಿದಂತೆ ಎಂಟಿಬಿ ಅವರ ಬಳಿ 419.76 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿ ಇದೆ. ಅವರ ಪತ್ನಿ ಶಾಂತಕುಮಾರಿ ಬಳಿ 189.41 ಕೋಟಿ ರೂ ಸ್ಥಿರ ಆಸ್ತಿ ಇದೆ. 79 ಕೋಟಿ ರೂ. ಮೌಲ್ಯದ ನಿವಾಸ ಕಟ್ಟಡಗಳು ಇಬ್ಬರ ಹೆಸರಿನಲ್ಲಿ ಇವೆ. 67 ಕೋಟಿ ರೂ ಮೌಲ್ಯದ ವಾಣಿಜ್ಯ ಕಟ್ಟಡಗಳಿವೆ.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ












Click it and Unblock the Notifications