ನಮ್ಮದು ಈಗ ಎಂಥ ಜೀವನ! ಪುರೋಹಿತರ ಕಷ್ಟ ಯಾರಿಗೆ ಹೇಳೋಣ?
ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಶಂಕರ್. ನನ್ನ ತಂದೆ, ತಾತ, ಮುತ್ತಾತ ಹೀಗೆ ಪರಾಂಪರಗತವಾಗಿ ನಮ್ಮದು ಪೌರೋಹಿತ್ಯ ವೃತ್ತಿ. ತುಮಕೂರಿನಲ್ಲಿ ವಾಸವಿದ್ದೀನಿ. ನಾನಾ ಮಾಧ್ಯಮಗಳಲ್ಲಿ, ಲೋಕಾಭಿರಾಮದ ಮಾತನಾಡುವಾಗ, ನಿಮಗೇನು ಸ್ವಾಮಿ ಪುರೋಹಿತರು, ಒಂದು ಮದುವೆ ಮಾಡಿಸಿದರೆ ಒಂದು ತಿಂಗಳು ಜೀವನ ಕಳೆದು ಹೋಗುತ್ತದೆ ಎನ್ನುವ ಮಾತುಗಳನ್ನು ನನ್ನದೇ ಕಿವಿಗಳಲ್ಲಿ ಕೇಳಿಸಿಕೊಂಡಿದ್ದೇನೆ.
ಇತ್ತೀಚೆಗೆ ಪುರೋಹಿತರು ಸಿನಿಮಾ, ಹೋಟೆಲ್ ಅಂತೆಲ್ಲ ಸುತ್ತಾಡುತ್ತಾರೆ. ಕಾರುಗಳನ್ನು ತಗೊಂಡು, ಮನೆಗಳನ್ನು ಕಟ್ಟಿಸಿಕೊಂಡಿದ್ದಾರೆ ಅನ್ನೋ ಮಾತನ್ನು ಕೇಳಿಸಿಕೊಂಡಿದ್ದೇನೆ. ದೇವರ ಪ್ರಸಾದವನ್ನೇ ನಿತ್ಯದ ಊಟ ಎಂದು ಸೇವಿಸುವ, ಮುಜರಾಯಿ ಇಲಾಖೆಯಿಂದ ಬರುವ ಮೂರು ಕಾಸು- ಆರು ಕಾಸಿನಲ್ಲಿ ಕಷ್ಟದ ಜೀವನ ಕಳೆಯುತ್ತಿರುವ ಪುರೋಹಿತರನ್ನೂ ನೋಡಿದ್ದೇನೆ.
ನಮ್ಮಂಥವರ ಸ್ಥಿತಿ ನಿಮ್ಮೆದುರು ಹೇಳಿಕೊಳ್ಳಬೇಕು. ಆ ಬಗ್ಗೆ ಬರೆಯಬೇಕು ಎನ್ನುವ ಉದ್ದೇಶದಿಂದ ಇದೊಂದು ಲೇಖನ. ನೀವು ಯಾವುದಾದರೂ ದಿನಸಿ ಅಂಗಡಿಗೆ ಹೋದರೆ, ಆಹಾರ ಪದಾರ್ಥಗಳು ವಿವಿಧ ಗ್ರೇಡ್ ಗಳಲ್ಲಿ ಸಿಗುತ್ತವೆ. ಮನೆಗೆ ದಿನಸಿ ತರುವವರಿಗೆ ಅಥವಾ ಅಡುಗೆ ಕಾಂಟ್ರ್ಯಾಕ್ಟ್ ಗಳನ್ನು ಒಪ್ಪಿಕೊಳ್ಳುವಂಥವರಿಗೆ ಈ ಬಗ್ಗೆ ಗೊತ್ತಿರುತ್ತದೆ.
ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ
ಮನೆಗಾದರೆ ಒಳ್ಳೆ ಗ್ರೇಡ್ ನದು, ಅಡುಗೆ ಕಾಂಟ್ರ್ಯಾಕ್ಟ್ ಗಳಿಗಾದರೆ ಎರಡನೇ ದರ್ಜೆಯ ಪದಾರ್ಥಗಳು ದೊರೆಯುತ್ತವೆ. ಆದರೆ ಎಲ್ಲ ಪೂಜೆ, ಪುನಸ್ಕಾರ, ಹೋಮ-ಹವನಗಳಿಗೂ ಹೀಗೇ ಇದೆ ಎಂಬುದು ನಿಮಗೆ ಗೊತ್ತಿದೆಯಾ?

ಪೂಜೆ ಕ್ವಾಲಿಟಿ ಪದಾರ್ಥಗಳೇ ಬೇರೆ ಸಿಗುತ್ತವೆ
ಹೋಮ ಹವನಗಳಿಗೆ ತಾಮ್ರದ ತಂಬಿಗೆ ಎಂದು ಬರೆದರೆ, ಅದ್ಯಾವ ಪರಿ ಸಣ್ಣದಾಗಿರುವ ತಂಬಿಗೆ ತರುತ್ತಾರೆಂದರೆ ಅದರೊಳಗೆ ಕೈ ಹಾಕಿ, ನಾಣ್ಯಗಳನ್ನು ಹೊರಗೆ ತೆಗೆಯಲು ಕೂಡ ಸಾಧ್ಯವಾಗುವುದಿಲ್ಲ. ಇನ್ನು ಕುಪ್ಪಸದ ಕಣ, ಟವೆಲ್ ಅಂತ ಬರೆದರೆ ಕರ್ಚೀಫ್ ಗೂ ಚಿಕ್ಕದಾದ ಬಟ್ಟೆ ತಂದಿರುತ್ತಾರೆ. ಹೇಗಿದ್ದರೂ ಅವುಗಳನ್ನು ಬಳಸಲ್ಲ, ಪುರೋಹಿತರಿಗೆ ಕೊಡುವುದನ್ನು ಎಷ್ಟಿದ್ದರೆ ಏನು ಎಂಬ ಧೋರಣೆ. ಇತ್ತೀಚೆಗೆ ಪೂಜೆಗೆ ಬರೆಯುವ ಪಟ್ಟಿಯಲ್ಲೇ ಬಳಸುವ ಗುಣಮಟ್ಟದ ಕುಪ್ಪುಸದ ಕಣ, ಟವೆಲ್, ಅಕ್ಕಿ, ಎಳ್ಳೆಣ್ಣೆ ಅಂತೆಲ್ಲ ಬರೆಯಬೇಕಾಗಿದೆ. ಇಷ್ಟಾದರೂ ಗ್ರಂಥಿಗೆ ಅಂಗಡಿಗೆ ತೆರಳಿದ ಮೇಲೆ, ಅಲ್ಲಿಂದ ಫೋನ್ ಮಾಡುತ್ತಾರೆ. ಈ ಪಟ್ಟಿ ಪ್ರಕಾರ ತರಬೇಕೆಂದರೆ ದುಬಾರಿ ಆಗುತ್ತದೆ. ಅಂಗಡಿಯವರೇ ಒಂದು ಪಟ್ಟಿ ಪ್ರಕಾರ ಪದಾರ್ಥಗಳನ್ನು ನೀಡಿದ್ದಾರೆ. ಅವುಗಳನ್ನೇ ತರುತ್ತಿದ್ದೀವಿ ಎನ್ನುತ್ತಾರೆ. ಇದು ನಮ್ಮ ಮೇಲೆ ಗೌರವದಿಂದ ಹೇಳುವುದಲ್ಲ. ಇದಕ್ಕೆ ಸುಮ್ಮನೆ ಒಪ್ಪಿಕೊಳ್ಳಿ. ಅಲ್ಲಿಂದ ವರಾತ ತೆಗೆಯಬೇಡಿ ಅಂತ ಎಚ್ಚರಿಕೆ.

ಹೋಮದಿಂದಲೇ ಅನಾರೋಗ್ಯವಾದರೆ ಏನು ಮಾಡೋದು?
ಇನ್ನು ತುಪ್ಪದ ವಿಚಾರಕ್ಕೆ ಬಂದರೆ, ನಂದಿನಿ ತುಪ್ಪ ಎಂದು ಬರೆದಿದ್ದರೆ, ಹೋಮಕ್ಕೆ ಬಳಸುವುದಕ್ಕೆ ಕಳಪೆ ದರ್ಜೆಯ ತುಪ್ಪ ತಂದಿರುತ್ತಾರೆ. ಈ ಹಿಂದೆಲ್ಲ ಹೋಮದ ಸಂದರ್ಭದಲ್ಲಿ ಹೊಗೆ ಆವರಿಸುತ್ತಿತ್ತಲ್ಲ, ಅದರಲ್ಲಿ ಅಯುರ್ವೇದ ಮೂಲಿಕೆ, ಸಮಿಧೆ, ಉತ್ತಮವಾದ ತುಪ್ಪ ಎಲ್ಲ ಅದರಲ್ಲಿ ಇರುತ್ತಿತ್ತು. ಆದರೆ ಈಗ ಹೋಮ ಆಗುವ ಜಾಗದಲ್ಲಿ ನಿಂತರೆ (ಎಲ್ಲ ಕಡೆ ಅಲ್ಲ, ಆದರೆ ಬಹುತೇಕ ಕಡೆ ಅದೇ ಪರಿಸ್ಥಿತಿ) ಕಣ್ಣುರಿ ಬಂದು ಬಿಡುತ್ತದೆ. ಶ್ವಾಸಕೋಶದ ಸಮಸ್ಯೆ ಆವರಿಸುತ್ತದೆ. ಸಣ್ಣ ಮಕ್ಕಳಿದ್ದರೆ, ವಯಸ್ಸಾದವರು, ಅನಾರೋಗ್ಯದಿಂದ ಬಳಲುತ್ತಿದ್ದವರು ಇದ್ದರೆ ಹೋಮ ಆಗುವ ಜಾಗದಲ್ಲಿ ಕೂರಬೇಡಿ ಅಂತ ನಾವು ಹೇಳಬೇಕಿದೆ. ಏಕೆಂದರೆ, ಅದಕ್ಕಾಗಿ ತಂದ ಪದಾರ್ಥಗಳ ಗುಣಮಟ್ಟ ಹಾಗಿರುತ್ತದೆ. ಒಳ್ಳೆಯದಾಗಲಿ, ಆಯುಷ್ಯ-ಆರೋಗ್ಯ ವೃದ್ಧಿಯಾಗಲಿ ಎಂದು ಮಾಡಿಸುವ ಹೋಮ-ಹವನದಿಂದಲೇ ಅನಾರೋಗ್ಯವಾದರೆ ಏನು ಮಾಡುವುದಕ್ಕೆ ಸಾಧ್ಯ?

ಗೌರವಯುತವಾಗಿ ಜೀವನ ನಡೆಸುವುದು ಬೇಡವೆ?
ಇನ್ನು ದಕ್ಷಿಣೆ ವಿಚಾರಕ್ಕೆ ಬಂದರೆ, ಪುರೋಹಿತರಿಗೆ ಆಸೆ ಜಾಸ್ತಿ ಆಗಿಹೋಗಿದೆ ಎಂಬುದು ಅತಿ ದೊಡ್ಡ ಆಕ್ಷೇಪ. ಪೌರೋಹಿತ್ಯ ಎಂಬುದು ಒಂದು ವೃತ್ತಿ. ಅತಿಯಾಸೆ ಯಾವ ವೃತ್ತಿಗೂ ಒಳ್ಳೆಯದಲ್ಲ. ಆದರೆ ವರ್ಷಗಟ್ಟಲೆ ಅಧ್ಯಯನ ಮಾಡಿ, ಶಾಸ್ತ್ರೋಕ್ತವಾಗಿ ಪೂಜೆ-ಪುನಸ್ಕಾರ ಮಾಡಿಸುವುದನ್ನು ಕಲಿತು, ಕಾಲಕಾಲಕ್ಕೆ ನೇಮಾನುಷ್ಠಾನವನ್ನು ಪಾಲಿಸುವ, ವರ್ಷದಲ್ಲಿ ಬಹುತೇಕ ಸಮಯ ನಸುಕಿನ ನಾಲ್ಕು ಗಂಟೆಗೆ ಎದ್ದು, ವೃತ್ತಿಯಲ್ಲಿ ತೊಡಗುವ ವ್ಯಕ್ತಿ ಒಂದು ಕಾರ್ಯಕ್ರಮಕ್ಕೆ ಇಷ್ಟು ಎಂದು ಸಂಭಾವನೆ ಕೇಳುವುದು ತಪ್ಪೆ? ನಮ್ಮ ಆಫೀಸಿನಲ್ಲಿ ಈ ಸಲ ಸರಿಯಾಗಿ ಸಂಬಳ ಹೆಚ್ಚಿಸಲಿಲ್ಲ ಎಂದು ಕೆಲಸ ಬದಲಿಸುವ, ತನ್ನ ಶ್ರಮವನ್ನು ಸರಿಯಾಗಿ ಗುರುತಿಸಲಿಲ್ಲ ಎಂದು ಶಪಿಸುವವರು ಕೂಡ, ಸ್ವಾಮಿ ದಕ್ಷಿಣೆ ಹೆಚ್ಚಾಯಿತು, ಕಡಿಮೆ ಮಾಡಿಕೊಳ್ಳಿ ಅಂತಾರೆ. ಹಾಗಂತ ಪುರೋಹಿತರು ಬಾಯಿಗೆ ಬಂದಂತೆ ಹೇಳಿದರೂ ಅವರು ಕೇಳಿದಷ್ಟು ನೀಡಬೇಕು ಅಂತ ನನ್ನ ವಾದವಲ್ಲ. ಗೌರವಯುತವಾಗಿ ಜೀವನ ನಡೆಸಲು ಬೇಕಾದಷ್ಟು ನಾವು ದುಡಿಯಲೇ ಬೇಕಲ್ಲವಾ?

ತಿರಸ್ಕಾರದಿಂದ ನೋಡುವ ಪರಿಣಾಮ ಏನಾಗಬಹುದು?
ಪುರೋಹಿತರಿಗೆ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡುವುದಕ್ಕೆ ಪೌರೋಹಿತ್ಯ ವೃತ್ತಿಯಲ್ಲಿ ಇರುವವರೇ ಹಿಂಜರಿಯುತ್ತಿದ್ದಾರೆ. ಪಂಚೆ ಉಡುವ, ಶಿಖೆ ಬಿಟ್ಟಿರುವ, ಹೋಟೆಲ್ ನಲ್ಲಿ ಅಥವಾ ಹೊರಗಿನ ಆಹಾರ ಸೇವಿಸದ ಪುರೋಹಿತರನ್ನು ಮದುವೆ ಆಗಲು ಹೆಣ್ಣುಮಕ್ಕಳು ಹಿಂಜರಿಯುತ್ತಾರೆ. ತಮ್ಮ ಪಾಲಿನ ಸವಾಲುಗಳನ್ನು ಎದುರಿಸುವ ಸಲುವಾಗಿ ಮೇಲಿನಂತೆ ಇರದ ಪುರೋಹಿತರ ಬಗ್ಗೆ ಜನರಿಗೆ ಒಂದು ತಾತ್ಸಾರ ಇರುತ್ತದೆ. ಮನೆ ಕಟ್ಟಿಕೊಳ್ಳುವುದು, ಕಾರು ಕೊಳ್ಳುವುದು ಇವೆಲ್ಲ ಕಣ್ಣಿಗೆ ಕುಕ್ಕುತ್ತದೆಯೇ ಹೊರತು ಅದಕ್ಕಾಗಿ ಪಟ್ಟ ಶ್ರಮ, ತೆಗೆದುಕೊಂಡ ಸಾಲ ಇವ್ಯಾವುದೂ ಕಾಣುವುದಿಲ್ಲ. ಹಾಗಂತ ಈ ವೃತ್ತಿಯಲ್ಲಿ ಎಲ್ಲರೂ ಸಜ್ಜನರು, ಸಭ್ಯರು ಎಂದು ವಾದಿಸುವುದು ನನ್ನ ಉದ್ದೇಶವಲ್ಲ. ಆದರೆ ಬಹುಸಂಖ್ಯಾತರು ಒಂದಲ್ಲ ಒಂದು ಸಮಸ್ಯೆ ಅನುಭವಿಸುತ್ತಲೇ ಇದ್ದಾರೆ. ಒಂದು ವೃತ್ತಿಯನ್ನು ಸಮಾಜವು ಅನುಮಾನದಿಂದ ಅಥವಾ ತಿರಸ್ಕಾರದಿಂದ ನೋಡಲು ಶುರು ಮಾಡಿದರೆ ಅದರ ಪರಿಣಾಮ ಏನಾಗಬಹುದು ಎಂದು ಯೋಚಿಸುವುದಕ್ಕೆ ಇದು ಸಕಾಲ.












Click it and Unblock the Notifications