ಬಾಯ್ ಬಾಯ್ ಬಿಜೆಪಿ; ಕಾರ್ಯಕರ್ತರ ಕೋಪಾಗ್ನಿಯಲ್ಲಿ ಕಂಗಾಲಾಗುತ್ತಾ 'ಕಮಲ'!?
ಬೆಂಗಳೂರು, ಜುಲೈ 28: ಕರ್ನಾಟಕದ ಮಟ್ಟಿಗೆ ಕಾನೂನು ಸುವ್ಯವಸ್ಥೆ ಮತ್ತು ಭದ್ರತೆ ಎನ್ನುವುದು ಗಗನ ಕುಸುಮದಂತೆ ಗೋಚರಿಸುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಬಿಜೆಪಿ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ರೀತಿ ಪ್ರತಿಬಿಂಬಿಸುತ್ತಿದೆ.
ಶಿವಮೊಗ್ಗದಲ್ಲಿ ಹರ್ಷ ಹತ್ಯೆ, ದಕ್ಷಿಣ ಕನ್ನಡದಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯು ಸ್ವತಃ ಬಿಜೆಪಿಗರನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಭಾರತೀಯ ಜನತಾ ಪಕ್ಷದ ವಿರುದ್ಧ ಕಾರ್ಯಕರ್ತರು ಕೆರಳಿ ನಿಲ್ಲುವಂತೆ ಮಾಡಿದೆ. ಬಿಜೆಪಿ ಎನ್ನುವುದು ಈಗ ಬಿಡುತ್ತಿರುವ ಜನರ ಪಕ್ಷವಾಗಿ ಸುದ್ದಿ ಆಗುತ್ತಿದೆ. 2023ರ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಕೇಸರಿ ಪಡೆ ಕಕ್ಕಾಬಿಕ್ಕಿ ಆಗುತ್ತಿದೆ.
ಪ್ರವೀಣ್ ಹತ್ಯೆ: ಚಿತ್ರದುರ್ಗದಲ್ಲೂ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕಿಡಿ
ಎರಡು ದಿನಗಳಿಂದ ಬಿಜೆಪಿಗೆ ಬಾಯ್ ಬಾಯ್ ಎನ್ನುತ್ತಿರುವ ಕಾರ್ಯಕರ್ತರ ಸಂಖ್ಯೆ ಹೆಚ್ಚುತ್ತಿದೆ. ಬಿಜೆಪಿ ಸಹವಾಸವೇ ಬೇಡಪ್ಪಾ ಬೇಡ ಎನ್ನುತ್ತಾ ಪಕ್ಷದಿಂದ ಹೊರ ಹೋಗುತ್ತಿರುವ ಕಾರ್ಯಕರ್ತರ ನೋವಿನ ನುಡಿಗಳೇನು?, ಸ್ವಪಕ್ಷೀಯರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ಸೋತಿದೆಯೇ?, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಬಿಜೆಪಿ ಮೀನಾಮೇಷ ಎಣಿಸುತ್ತಿದೆಯೇ? ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆಯುವುದರಿಂದ ಕೇಸರಿ ಪಡೆಗೆ ಆಗುವ ನಷ್ಟವೇನು? ಸರ್ಕಾರದ ವೈಫಲ್ಯ ಪ್ರತಿಪಕ್ಷಗಳ ಪಾಲಿಗೆ ಲಾಭವಾಗುತ್ತದೆಯೇ ಎಂಬುದರ ಕುರಿತು ವಿಸ್ತೃತ ವರದಿಗಾಗಿ ಮುಂದೆ ಓದಿ.
ಫೆಬ್ರವರಿ ತಿಂಗಳಿನಲ್ಲಿ ಹರ್ಷನ ಕೊಲೆ
ಶಿವಮೊಗ್ಗದಲ್ಲಿ ನಡೆದ ಭಜರಂಗ ದಳ ಕಾರ್ಯಕರ್ತ ಹರ್ಷನ ಹತ್ಯೆಯು ರಾಜ್ಯಾದ್ಯಂತ ಸುದ್ದಿ ಮಾಡಿತು. ಕಳೆದ ಫೆಬ್ರವರಿ 20ರ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಎನ್.ಟಿ. ರಸ್ತೆಯ ಕಾಮತ್ ಪೆಟ್ರೋಲ್ ಬಂಕ್ ಸಮೀಪದ ಭಾರತೀ ಕಾಲೋನಿಯಲ್ಲಿ ಯುವಕರ ಗುಂಪೊಂದು ಭಜರಂಗ ದಳ ಕಾರ್ಯಕರ್ತ ಹರ್ಷನ ಮೇಲೆ ಏಕಾಏಕಿ ದಾಳಿ ನಡೆಸಿತು. ಮಾರಕಾಸ್ತ್ರಗಳಿಂದ ನಡೆಸಿದ ಹಲ್ಲೆಯಿಂದಾಗಿ ಹೊಟ್ಟೆ, ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದ ಹರ್ಷನನ್ನು ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ 26 ವರ್ಷದ ಹರ್ಷ ಮೃತಪಟ್ಟರು. ತದನಂತರ ಕಾರ್ಯಕರ್ತರು ಮತ್ತು ಕುಟುಂಬ ಸದಸ್ಯರ ಒತ್ತಡಕ್ಕೆ ಮಣಿದ ಸರ್ಕಾರ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡ(ಎನ್ಐಎ)ಕ್ಕೆ ಹಸ್ತಾಂತರಿಸಿತು.
ಪ್ರವೀಣ್ ಹತ್ಯೆ ಖಂಡಿಸಿ ಬಾಗಲಕೋಟೆ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳಿಂದ ರಾಜೀನಾಮೆ ನಿರ್ಧಾರ
ಕರಾವಳಿಯಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆ ಪಟ್ಟಣದಲ್ಲಿ ಜುಲೈ 26ರಂದು ರಾತ್ರಿ 9 ಗಂಟೆ ವೇಳೆ ಪ್ರವೀಣ್ ನೆಟ್ಟಾರು ಮೇಲೆ ದಾಳಿ ನಡೆಸಲಾಗಿತ್ತು. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು ಅಲ್ಲಿಂದ ಎಸ್ಕೇಪ್ ಆಗಿದ್ದರು. ಸ್ಥಳದಲ್ಲಿ ಕುಸಿದು ಬಿದ್ದ ಪ್ರವೀಣ್ ಅನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದರು.
ಫೆಬ್ರವರಿಯಲ್ಲಿ ಹರ್ಷ, ಜುಲೈನಲ್ಲಿ ಪ್ರವೀಣ್ ನೆಟ್ಟಾರು
ಫೆಬ್ರವರಿ ತಿಂಗಳಿನಲ್ಲಿ ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ನಡೆದು ಐದು ತಿಂಗಳ ಅಂತರದಲ್ಲೇ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಪ್ರವೀಣ್ ನೆಟ್ಟಾರು ಕೊಲೆಯು ಹಿಂದೂಗಳ ರಕ್ಷಣೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಹಿಂದೂ ಮತ್ತು ಬಿಜೆಪಿಯ ಪರ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ರಕ್ಷಣೆಯೇ ಇಲ್ಲವೇ ಎಂಬ ಅಭಿಪ್ರಾಯ ಸ್ವತಃ ಕಾರ್ಯಕರ್ತರಲ್ಲಿ ಮೂಡುತ್ತಿದೆ. ಈ ಎರಡು ಹತ್ಯೆಗಳಿಂದ ಬಿಜೆಪಿ ವಲಯದ ಕಾರ್ಯಕರ್ತರ ಮನಸ್ಥಿತಿಯನ್ನೇ ಬದಲಿಸುವಂತೆ ಮಾಡಿ ಬಿಟ್ಟಿದೆ.
ಗೃಹ ಸಚಿವರ ಹೇಳಿಕೆಯಿಂದ ಕೆರಳಿರುವ ಕಾರ್ಯಕರ್ತರು
ಶಿವಮೊಗ್ಗದಲ್ಲಿ ಈ ಹಿಂದೆ ಹರ್ಷದ ಹತ್ಯೆ ನಡೆದ ಸಂದರ್ಭದಲ್ಲಿಯೂ ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ "ಸೂಕ್ತ ತನಿಖೆ ನಡೆಸಿ, ಅಪರಾಧಿಗಳ ವಿರುದ್ಧ ಕಠಿಣ ಕ್ರಮ" ತೆಗೆದುಕೊಳ್ಳಲಾಗುವುದು ಎಂಬ ಹೇಳಿಕೆ ನೀಡಿದ್ದರು. ಪ್ರವೀಣ್ ನೆಟ್ಟಾರು ಹತ್ಯೆ ನಡೆದಿರುವ ಈ ಸಂದರ್ಭದಲ್ಲಿಯೂ ಅರಗ ಜ್ಞಾನೇಂದ್ರ ಅದೇ ಹೇಳಿಕೆಯನ್ನು ರಿಪೀಟ್ ಮಾಡಿರುವುದು ಕೇಸರಿ ಪಡೆಯ ಕಾರ್ಯಕರ್ತರನ್ನು ಕೆರಳಿ ನಿಲ್ಲುವಂತೆ ಮಾಡಿದೆ. ಕಠಿಣ ಕ್ರಮದ ಮಾತುಗಳನ್ನು ಆಡುವ ಸಚಿವರು ಅದ್ಯಾವ ರೀತಿ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ಕಾರ್ಯಕರ್ತರೇ ಪ್ರಶ್ನೆ ಮಾಡುತ್ತಿದ್ದಾರೆ.
ಬಿಜೆಪಿಯಲ್ಲಿ ಶುರುವಾಯ್ತು ರಾಜೀನಾಮೆ ಪರ್ವ
ಹಿಂದೂ ಅರ್ಥಾತ್ ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಕೆರಳಿದ ಕಾರ್ಯಕರ್ತರು ಕೇಸರಿ ಪಕ್ಷದಿಂದ ಹೊರ ನಡೆಯುವುದಕ್ಕೆ ಪ್ರಾರಂಭಿಸಿದ್ದಾರೆ. ಮೈಸೂರು, ಬಾಗಲಕೋಟೆ, ಚಿತ್ರದುರ್ಗ ಹೀಗೆ ಹಲವು ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಕಾರ್ಯಕರ್ತರು ಬಿಜೆಪಿಗೆ ರಾಜೀನಾಮೆ ಸಲ್ಲಿಸುತ್ತಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆಯು ಸರ್ಕಾರದ ವೈಫಲ್ಯವನ್ನು ತೋರುತ್ತಿದೆ. ನಮ್ಮವರಿಗೆ ರಕ್ಷಣೆ ನೀಡಲು ಅಸಮರ್ಥವಾದ ಪಕ್ಷದಲ್ಲಿ ಇರುವುದಕ್ಕೆ ನಮಗೆ ಮನಸ್ಸಿಲ್ಲ ಎಂಬ ಉತ್ತರವನ್ನು ಪಕ್ಷ ತೊರೆದ ಕಾರ್ಯಕರ್ತರು ಹೇಳುತ್ತಿದ್ದಾರೆ.
ಬಿಜೆಪಿ ವಿರುದ್ಧ ಮುನಿಸಿಕೊಂಡರೇ ಕಾರ್ಯಕರ್ತರು?
"ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತರಾಗಿ ದುಡಿಯುತ್ತಿರುವ ಕಾರ್ಯಕರ್ತರ ಜೀವಕ್ಕೆ ರಕ್ಷಣೆ ಇಲ್ಲದಂತೆ ಆಗಿದೆ. ಬಿಜೆಪಿಯ ಬಗ್ಗೆ ನಮಗೆ ಯಾವುದೇ ಅಸಮಾಧಾನವಿಲ್ಲ. ಆದರೆ ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆ ಪ್ರಕರಣಗಳಲ್ಲಿ ಕಠಿಣ ನಿಲುವು ತಾಳುವಲ್ಲಿ ಬಿಜೆಪಿ ಸರ್ಕಾರ ಸೋತಿದೆ. ಹಿಂದೂ ಮತ್ತು ಬಿಜೆಪಿ ಪರ ಕೆಲಸ ಮಾಡುತ್ತಿರುವುದು ನಮ್ಮ ಮನೆಯವರ ಆತಂಕಕ್ಕೆ ಕಾರಣವಾಗಿದೆ. ಸಂಘಟನೆ ಮತ್ತು ಪಕ್ಷದ ಪರ ಕೆಲಸವನ್ನು ಬಿಡುವಂತೆ ಕುಟುಂಬದ ಸದಸ್ಯರು ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ ಬಿಜೆಪಿಗೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಕಾರ್ಯಕರ್ತರು ಕಾರಣ ಕೊಡುತ್ತಿದ್ದಾರೆ.
ಬಿಜೆಪಿಗೆ ಹೊಡೆತ ಕೊಡುತ್ತಾ ಕಾರ್ಯಕರ್ತರ ರಾಜೀನಾಮೆ?
ರಾಜ್ಯದಲ್ಲಿ ವಿಧಾನಸಭೆಗೆ 2023ರಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿ ತನ್ನ ಕಾರ್ಯಕರ್ತರನ್ನು ಕಳೆದುಕೊಳ್ಳುತ್ತಿದೆ. ಇದು ಕಮಲ ಪಾಳಯಕ್ಕೆ ಡ್ಯಾಮೇಜ್ ಮಾಡುವ ಆತಂಕ ಹೆಚ್ಚಿದೆ. ಬಿಜೆಪಿಗೆ ರಾಜೀನಾಮೆ ಸಲ್ಲಿಸಿ ಹೊರ ನಡೆಯುತ್ತಿರುವ ಪಕ್ಷದ ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕಾದ ಸವಾಲು ಎದುರಾಗಿದೆ. ಇಲ್ಲದಿದ್ದರೆ ಪಕ್ಷ ಸಂಘಟನೆಗೆ ಭಾರಿ ಪೆಟ್ಟು ಬೀಳುವ ಭಯ ಸರ್ಕಾರವನ್ನೂ ಕಾಡುತ್ತಿದೆ. ಅದಾಗ್ಯೂ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಎದುರು ನೋಡಲಾಗುತ್ತಿದೆ. ಕಾರ್ಯಕರ್ತರ ಮನವೊಲಿಕೆಗೆ ಸರ್ಕಾರ ಎಂಥ ನಿಲುವು ತಾಳುತ್ತದೆ ಎಂಬುದು ಸದ್ಯಕ್ಕೆ ಕುತೂಹಲ ಕೆರಳಿಸಿದೆ.
Recommended Video