Sleep: ಸುಖನಿದ್ದೆಗೆ ಜಾರಬೇಕಾದರೆ ಏನೇನು ಮಾಡಬೇಕು ಗೊತ್ತಾ?
ನಮ್ಮ ಎಲ್ಲ ಆಯಾಸಗಳನ್ನು ಹೊಡೆದೋಡಿಸಿ ದೇಹವನ್ನು ಉಲ್ಲಾಸಗೊಳಿಸುವ ಶಕ್ತಿಯಿರುವುದು ನಿದ್ದೆಗೆ ಮಾತ್ರ. ಹೀಗಿರುವಾಗ ನಮ್ಮ ದಿನನಿತ್ಯದ ಜೀವನದಲ್ಲಿ ಆರೋಗ್ಯಕರ ನಿದ್ದೆಗೆ ಒತ್ತು ನೀಡುವುದು ಅತಿ ಮುಖ್ಯವಾಗಿದೆ. ನಾವು ಸೇವಿಸುವ ಆಹಾರದೊಂದಿಗೆ ನಿಯಮಿತ ನಿದ್ದೆಯೂ ಅವಶ್ಯಕ ಎಂಬುದರಲ್ಲಿ ಎರಡು ಮಾತಿಲ್ಲ. ಒಂದು ವೇಳೆ ನಿದ್ದೆಯಲ್ಲಿ ಏರುಪೇರಾದರೆ ಅದರ ಪರಿಣಾಮ ನೇರವಾಗಿ ನಮ್ಮ ಆರೋಗ್ಯದ ಮೇಲೆ ಬೀರುತ್ತದೆ ಎನ್ನುವುದನ್ನು ಮನಗಾಣಬೇಕಾಗಿದೆ.
ಸಾಮಾನ್ಯವಾಗಿ ನಿದ್ದೆ ಕಡಿಮೆ ಮಾಡುವವರಲ್ಲಿ ಖಿನ್ನತೆ, ಉದ್ವೇಗ, ಅಶಾಂತಿ ತಾಂಡವವಾಡುತ್ತಿರುತ್ತದೆ. ಮತ್ತೊಂದೆಡೆ ಸ್ವಾಭಾವಿಕ ನಿದ್ದೆ ದೇಹದಿಂದ ದೂರವಾಗಿ ನಿದ್ರೆ ಮಾತ್ರೆಯ ಮೂಲಕ ನಿದ್ದೆ ಮಾಡುವಂತಹ ಪರಿಸ್ಥಿತಿಯೂ ಬಂದೊದಗುತ್ತದೆ. ನಿದ್ದೆಯಿಂದ ದೇಹಕ್ಕೆ ವಿಶ್ರಾಂತಿ ದೊರೆಯುತ್ತದೆ. ಆಳವಾದ ನಿದ್ದೆಯಿಂದ ಒಬ್ಬ ವ್ಯಕ್ತಿಯು ಉದ್ವೇಗದಿಂದ ಮುಕ್ತಿ ಪಡೆಯುತ್ತಾನಂತೆ. ಏಕೆಂದರೆ ಮೆದುಳು ಮತ್ತು ಶರೀರಗಳಿಗೆ ಸಂಪೂರ್ಣವಾದ ವಿಶ್ರಾಂತಿ ನಿದ್ದೆಯಿಂದಷ್ಟೆ ದೊರೆಯಲು ಸಾಧ್ಯ.

ರಾತ್ರಿಯೆಲ್ಲಾ ನಿದ್ದೆ ಮಾಡಿದ್ದೇ ಆದರೆ, ಮುಂಜಾನೆ ಶರೀರ ಹಗುರವಾಗಿ ಉಲ್ಲಾಸ ಮೂಡುತ್ತದೆ. ಆದರೆ ನಿದ್ದೆಯ ಅಭಾವವಾದರೆ ಮನುಷ್ಯರಲ್ಲಿ ಸಿಡುಕು ಸ್ವಭಾವ ಹೆಚ್ಚಾಗಬಹುದು. ಶರೀರದಲ್ಲಿ ಸ್ನಾಯುಗಳು ದುರ್ಬಲವಾಗಿ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಎಷ್ಟೇ ಪ್ರಯತ್ನ ಮಾಡಿದರೂ ನಿದ್ದೆ ಬಾರದಿರುವುದು, ರಾತ್ರಿಯೆಲ್ಲಾ ಎಚ್ಚರವಾಗಿರುವುದು ಅಥವಾ ರಾತ್ರಿಯೆಲ್ಲಾ ನಿದ್ದೆಬಾರದೆ ಬೆಳಗಿನ ಜಾವ ತಡವಾಗಿ ನಿದ್ದೆ ಬರುವುದು ಇದು ಇನ್ ಸೋಮ್ನಿಯಾ (ಅನಿದ್ದೆ) ರೋಗದ ಲಕ್ಷಣಗಳಂತೆ.
ಅನಿದ್ದೆ ನಿವಾರಣೆಗೆ ಏನು ಮಾಡಬೇಕು?
ಈ ರೋಗ ಹಲವು ಕಾರಣಗಳಿದ್ದಾಗ ಬರುತ್ತದೆ. ಶರೀರದಲ್ಲಿ ಅತಿಯಾದ ವೇದನೆ, ಹಳೆಯ ಕೆಮ್ಮು, ಮಾನಸಿಕ ವಿಕೃತಿ, ಡಿಪ್ರೆಷನ್ ಮುಂತಾದವು ಅನಿದ್ದೆಗೆ ಕಾರಣವಾಗುತ್ತದೆ. ಅನಿದ್ದೆಯನ್ನು ನಿವಾರಿಸಲು ಉತ್ತಮ ನಿದ್ದೆಯನ್ನು ಪಡೆಯಲು ಯೋಗದಲ್ಲಿ ಕೆಲವು ಕ್ರಮಗಳನ್ನು ವಿವರಿಸಲಾಗಿದೆ. ನಿದ್ದೆ ಬಾರದಿದ್ದಾಗ ಔಷಧಿಗೆ ಶರಣಾಗದೆ ಯೋಗ ವಿಜ್ಞಾನದಲ್ಲಿ ಹೇಳಲಾಗಿರುವ ಕೆಲವು ವಿಶೇಷ ರೀತಿಯ ಆಸನಗಳನ್ನು ಮಾಡುವುದರ ಮೂಲಕ ನಿದ್ದೆಯನ್ನು ಪಡೆಯಬಹುದು ಎಂದು ಹೇಳಲಾಗಿದೆ.

ಶವಾಸನವನ್ನು ಮಾಡುವ ಮೂಲಕ ಅನಿದ್ದೆಯನ್ನು ದೂರ ಮಾಡಬಹುದಾಗಿದ್ದು, ಶವಾಸನ ಮಾಡುವಾಗ ಬೆನ್ನನ್ನು ನೆಲಕ್ಕೆ ಮಾಡಿ ನೀಳವಾಗಿ ಮಲಗಬೇಕು. ಅಂಗೈಗಳನ್ನು ಮೇಲಕ್ಕೆ ಕಾಣುವಂತೆ ಹಿಡಿದಿರಬೇಕು. ಎರಡು ಕಾಲುಗಳ ಮಧ್ಯೆ ಸುಮಾರು ಎರಡು ಅಡಿಗಳ ಅಂತರವಿರಬೇಕು. ಕಣ್ಣುಗಳನ್ನು ಮುಚ್ಚಿಕೊಂಡು ಶರೀರವನ್ನು ಸಂಪೂರ್ಣವಾಗಿ ಸಡಿಲಗೊಳಿಸಬೇಕು. ಶವಾಸನ ಮಾಡುವಾಗ ಶರೀರದ ಯಾವ ಭಾಗದಲ್ಲಿಯೂ ಕೂಡ ಬಿಗಿತವನ್ನು ಸಾಧಿಸಬಾರದು. ಆ ನಂತರ ಧ್ಯಾನವನ್ನು ಉಸಿರಾಟದತ್ತ ಹರಿಸಬೇಕು.
ಸುಖ ನಿದ್ದೆಗೆ ಏನೆಲ್ಲ ಮಾಡಬಹುದು ಗೊತ್ತಾ?
ಶ್ವಾಸ-ಉಚ್ಛಾಸವನ್ನು ಒಂದೇ ಎಂದು ಪರಿಗಣಿಸಿ ಒಂದು... ಎರಡು... ಹೀಗೆ ಎಣಿಸುತ್ತಾ ಹೋಗಬೇಕು. ಎಷ್ಟು ಸಾಧ್ಯವೋ ಅಷ್ಟು ಎಣಿಸುತ್ತಿರಬೇಕು. ಎಣಿಸುವ ಸಂಖ್ಯೆಯನ್ನು ಮರೆಯಬಾರದು. ಒಂದು ವೇಳೆ ಎಣಿಸುವ ಸಂಖ್ಯೆಯನ್ನು ಮರೆತರೂ ಶರೀರವನ್ನು ಕದಲಿಸಬಾರದು. ಹೀಗೆ ಮಾಡುವುದರಿಂದ ಮನಸ್ಸು ಹಾಗೂ ಶರೀರ ಹಗುರವಾಗುತ್ತದೆ. ಅನಿದ್ದೆಯಿಂದ ಬಳಲುವವರಿಗೆ ಶವಾಸನವು ತುಂಬಾ ಉಪಯುಕ್ತವಾಗಿದ್ದು ಭಯ ಚಿಂತೆ, ಶೋಕ, ಕಾಮ ಮುಂತಾದವುಗಳಿಂದ ಬಳಲುವವರು ಶವಾಸನ ಮಾಡುವುದರಿಂದ ಖಂಡಿತವಾಗಿಯೂ ಪರಿಹಾರ ದೊರೆಯುತ್ತದೆ ಎಂಬುದು ಶವಾಸನ ಮಾಡಿ ಪರಿಹಾರ ಕಂಡುಕೊಂಡವರ ಅಭಿಪ್ರಾಯವಾಗಿದೆ.
ಸುಖ ನಿದ್ದೆ ಬೇಕೆಂದರೆ ಪೂರ್ವ ದಿಕ್ಕಿಗೆ ತಲೆಮಾಡಿ ಮಲಗುವುದರಿಂದ, ನಿದ್ದೆ ಮಾಡುವ ಮೂರು ಗಂಟೆಗಳ ಮೊದಲು ಊಟ ಮಾಡುವುದರಿಂದ ಪಚನ ಕ್ರಿಯೆಗೆ ಹೆಚ್ಚಿನ ಭಾರ ಬೀಳುವುದರಿಂದ ನಿದ್ದೆಯು ಸುಲಭವಾಗಿ ಬರುತ್ತದೆ. ಇನ್ನು ಮಲಗುವ ಹಾಸಿಗೆಯು ಅತಿಗಟ್ಟಿಯಾಗಿಯೂ, ಮೆತ್ತಗಾಗಿಯೂ ಇರಬಾರದು. ಮಲಗುವ ಕೋಣೆ ಶಾಂತವಾಗಿದ್ದು, ಗಾಳಿ ಬೆಳಕಾಡುವಂತಿರಬೇಕು. ಮಲಗುವ ಮುನ್ನ ಸ್ನಾನ ಅಥವಾ ಕೈಕಾಲು ತೊಳೆದು ಮಲಗಬೇಕು.
ಎಷ್ಟೆಷ್ಟು ಗಂಟೆ ನಿದ್ದೆ ಮಾಡಿದರೆ ಒಳ್ಳೆಯದು?
ತಜ್ಞರ ಅಭಿಪ್ರಾಯದಂತೆ ಆರೋಗ್ಯವಂತ ಮನುಷ್ಯನಿಗೆ 6ರಿಂದ 8ಗಂಟೆಗಳ ನಿದ್ದೆ ಅವಶ್ಯವಿರುತ್ತದೆ. ಅಷ್ಟೇ ಅಲ್ಲ ವಯಸ್ಸಿಗೆ ಅನುಗುಣವಾಗಿ ನಿದ್ದೆಯು ಬೇಕಾಗುತ್ತದೆ. ಒಂದು ತಿಂಗಳ ಮಗುವಿಗೆ 21ಗಂಟೆ, ಆರು ತಿಂಗಳ ಮಗುವಿಗೆ 18ಗಂಟೆ, ಒಂದು ವರ್ಷದ ಮಗುವಿಗೆ 12ಗಂಟೆ, ನಾಲ್ಕು ವರ್ಷದ ಮಗುವಿಗೆ 11ಗಂಟೆ, 12 ವರ್ಷ ಮೇಲ್ಪಟ್ಟವರಿಗೆ 10ಗಂಟೆ, 16ವರ್ಷದವರಿಗೆ 8ಗಂಟೆ, 30ವರ್ಷ ಮೇಲ್ಪಟ್ಟವರಿಗೆ 6 ರಿಂದ 8ಗಂಟೆಗಳ ಕಾಲ ನಿದ್ದೆಯ ಅವಶ್ಯಕತೆಯಿರುತ್ತದೆ.
ಸಾಮಾನ್ಯವಾಗಿ ಶಾರೀರಿಕ ಹಾಗೂ ಮಾನಸಿಕವಾಗಿ ದಣಿಯುವವರಿಗೆ ನಿದ್ದೆಯು ಚೆನ್ನಾಗಿ ಬರುತ್ತದೆ. ನಿದ್ದೆಯಿಂದ ಆರೋಗ್ಯ ದೊರೆಯುತ್ತದೆ. ಹಾಗೆಂದು ಸದಾ ನಿದ್ದೆಯಲ್ಲೇ ತೊಡಗುವುದು ಆಲಸ್ಯ, ಸೋಮಾರಿತನವನ್ನು ಹುಟ್ಟು ಹಾಕುತ್ತದೆ. ಇದು ಆರೋಗ್ಯಕ್ಕೆ ಅಹಿತಕರವಾಗಿ ಪರಿಣಮಿಸುತ್ತದೆ. ಆದುದರಿಂದ ಸದಾ ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿ ನಿರ್ದಿಷ್ಟ ಸಮಯವನ್ನು ನಿದ್ದೆಗೆ ತೆಗೆದಿಡಿ. ಹಾಗೆಂದು ಸಮಯ ಸಿಕ್ಕಾಗಲೆಲ್ಲಾ ನಿದ್ದೆಗೆ ಜಾರುವುದು ಆರೋಗ್ಯಕರ ಲಕ್ಷಣವಲ್ಲ. ನಿದ್ದೆ ಮಾಡುವುದಕ್ಕೂ ಶಿಸ್ತಿದ್ದರೆ ಒಳ್ಳೆಯದು.
-
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ












Click it and Unblock the Notifications