Explainer: ಗುಜರಾತ್ನಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ? ಚುನಾವಣೋತ್ತರ ಸಮೀಕ್ಷೆ ಹೇಳಿದ್ದೇನು?
ನವದೆಹಲಿ, ಡಿಸೆಂಬರ್ 05: ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಗುಜರಾತ್ನಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ. ಗುಜರಾತ್ನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ ಎಂಬ ಮಾತುಗಳು ಕೇಳಿಬಂದಿದ್ದರೂ, ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾಗಿರುವ ಗುಜರಾತ್ನಲ್ಲಿ ಗೆಲ್ಲುವುದು ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದೆ. ಭಾರತ್ ಜೋಡೊ ಯಾತ್ರೆಯಲ್ಲಿ ಮಗ್ನವಾಗಿರುವ ಕಾಂಗ್ರೆಸ್ ಮಾತ್ರ ಗುಜರಾತ್ನಲ್ಲಿ ಅಬ್ಬರದ ಪ್ರಚಾರ ಮಾಡಿರಲಿಲ್ಲ. ಆದರೆ, ದೆಹಲಿ ಹಾಗೂ ಪಂಜಾಬ್ನಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿರುವ ಆಮ್ ಆದ್ಮಿ ಪಕ್ಷವು ಗುಜರಾತ್ನಲ್ಲಿ ನೆಲೆ ಕಂಡುಕೊಳ್ಳುವ ಯತ್ನ ನಡೆಸಿದೆ.
ಗುಜರಾತ್ ಚುನಾವಣೋತ್ತರ ಸಮೀಕ್ಷೆ ಹೇಳಿದ್ದೇನು?
ಗುಜರಾತ್ ಚುನಾವಣೆಯ ಎರಡನೇ ಹಂತದ ಮತದಾನ ಇಂದು ನಡೆದಿದೆ. ಡಿಸೆಂಬರ್ 8ರಂದು ಫಲಿತಾಂಶ ಹೊರಬೀಳಲಿದೆ. ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಹಾಗೂ ಸಮೀಕ್ಷಾ ಸಂಸ್ಥೆಗಳು ಸೇರಿ ಮಾಡಿರುವ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರ ಹಿಡಿಯಲಿದೆ. ವಿವಿಧ ಸಂಸ್ಥೆಗಳು ನಡೆಸಿದೆ ಚುನಾವಣೋತ್ತರ ಸಮೀಕ್ಷೆಗಳ ಅಂಕಿಅಂಶಗಳು ಈ ರೀತಿಯಾಗಿವೆ...
News X
BJP:
117-140
Congress:
34-51
AAP:
6-13
Others:
1-2
Republic TV P-MARQ
BJP:
128-148
Congress:
30-42
AAP:
0-3
Others:
1-2
TV9 Gujarati
BJP:
125-130
Congress:
40-50
AAP:
40-50
Other:
3-5
Times Now-ETG
BJP:
131
Congress:
41
AAP:
6
Others:
4
ಕಳೆದ ಬಾರಿಗಿಂತ ಹೆಚ್ಚು ಲಾಭ ಪಡೆಯಲಿದೆಯಾ ಬಿಜೆಪಿ?
2017ರಲ್ಲಿ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 99 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಅದರ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ 77 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿಯ ಬಲವು 111 ಈಗ ಆಗಿದೆ. ಕಳೆದ ಐದು ವರ್ಷಗಳಲ್ಲಿ ಹಲವಾರು ನಾಯಕರು ಬೇರೆ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿಗೆ ಇದು ಲಾಭವಾಗಿ ಪರಿಣಮಿಸಲಿದೆ ಎಂಬುದು ಸಮೀಕ್ಷೆಗಳಿಂದ ತಿಳಿದುಬಂದಿದೆ.
ಕಳೆದ ಬಾರಿ ಬಿಜೆಪಿಯೊಂದಿಗೆ ಮುನಿಸಿಕೊಂಡಿದ್ದ ಪಾಟೀದಾರ್, ಒಬಿಸಿ ಸಮುದಾಯಗಳು
ಕಳೆದ ಬಾರಿಯ ಚುನಾವಣೆಯಲ್ಲಿ ಪಾಟೀದಾರ್ ಹಾಗೂ ಒಬಿಸಿ ಸಮುದಾಯಗಳು ಬಿಜೆಪಿ ಜೊತೆ ಮುನಿಸಿಕೊಂಡಿದ್ದವು. ಇದರ ಪರಿಣಾಮವಾಗಿ ಬಿಜೆಪಿ 99 ಸ್ಥಾನಗಳನ್ನು ಪಡೆದಿತ್ತು. ಕಾಂಗ್ರೆಸ್ ಪ್ರಬಲ ವಿರೋಧ ಪಕ್ಷವಾಗಿ ಗುಜರಾತ್ನಲ್ಲಿ ಹೊರಹೊಮ್ಮಿತ್ತು. ಆದರೆ, ಈ ಬಾರಿಯ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್ ಹಾಗೂ ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಇದು ಬಿಜೆಪಿಗೆ ಲಾಭ ತಂದು ಕೊಡಲಿದೆ ಎಂಬ ಮಾತುಗಳೂ ಕೇಳಿ ಬಂದಿವೆ. ಇದು ಸಮೀಕ್ಷೆಗಳಿಂದಲೂ ತಿಳಿದುಬರುತ್ತಿದೆ.
ಗುಜರಾತ್ನಲ್ಲಿ ಕಾಂಗ್ರೆಸ್ನ ಮೌನ ಪ್ರಚಾರ ಕೆಲಸ ಮಾಡುವುದಿಲ್ಲವೇ?
ಬಿಜೆಪಿ ಹಾಗೂ ಎಎಪಿ ಪಕ್ಷಗಳು ಗುಜರಾತ್ನಲ್ಲಿ ಅಬ್ಬರದ ಪ್ರಚಾರ ಮಾಡಿವೆ. ಆದರೆ, ಭಾರತ್ ಜೋಡೊ ಯಾತ್ರೆಯಲ್ಲಿ ನಿರತವಾಗಿರುವ ಕಾಂಗ್ರೆಸ್ ಮಾತ್ರ ಮೌನ ಪ್ರಚಾರಕ್ಕೆ ಶರಣಾಗಿದೆ. ಗುಜರಾತ್ನ ಹಳ್ಳಿಗಳಲ್ಲಿ ತನ್ನ ಬೇರುಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ನಾಯಕರು ಗ್ರಾಮೀಣ ಭಾಗಗಳಿಗೆ ತೆರಳಿ ಪ್ರಚಾರ ನಡೆಸಿದ್ದರು. ಆದರೆ, ಕಾಂಗ್ರೆಸ್ ತಂತ್ರವು ಗುಜರಾತ್ ಚುನಾವಣೆಯಲ್ಲಿ ಫಲಿಸುವುದಿಲ್ಲ ಎಂಬ ಮಾತುಗಳನ್ನು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.
ಗುಜರಾತ್ನಲ್ಲಿ ನೆಲೆ ಕಂಡುಕೊಳ್ಳಲಿದೆಯೇ ಆಮ್ ಆದ್ಮಿ ಪಕ್ಷ?
ದೆಹಲಿ ಹಾಗೂ ಪಂಜಾಬ್ನಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿರುವ ಎಎಪಿ ಗುಜರಾತ್ನಲ್ಲಿ ನೆಲೆ ಕಂಡುಕೊಳ್ಳಲು ಯತ್ನ ನಡೆಸಿದೆ. ಆ ಹಿನ್ನೆಲೆಯಲ್ಲಿ ಎಎಪಿಯ ಪ್ರಮುಖ ನಾಯಕರಾದ ಅರವಿಂದ್ ಕೇಜ್ರಿವಾಲ್, ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಗುಜರಾತ್ನಲ್ಲಿ ಹಲವು ಸಭೆ ಹಾಗೂ ರೋಡ್ಶೋಗಳನ್ನು ನಡೆಸಿದ್ದಾರೆ. ಶಿಕ್ಷಣ, ಕುಡಿಯುವ ನೀರು, ಉದ್ಯೋಗ ಸೇರಿದಂತೆ ಮೂಲಭೂತ ಸಮಸ್ಯೆಗಳ ಬಗ್ಗೆ ಎಎಪಿ ನಾಯಕರು ಮಾತನಾಡಿದ್ದಾರೆ. ಈ ಚುನಾವಣೆಯಲ್ಲಿ ಎಎಪಿಯು ಎರಡಂಕಿ ತಲುಪಿದರೆ, ಅದು ದೊಡ್ಡ ಸಾಧನೆ ಎಂದೇ ಹೇಳಬಹುದು. ಕೇಜ್ರಿವಾಲ್ ಅವರ ರಾಷ್ಟ್ರ ರಾಜಕಾರಣದ ಕನಸು ನನಸಾಗಲು ಗುಜರಾತ್ ವಿಧಾನಸಭೆ ಫಲಿತಾಂಶ ಮೆಟ್ಟಿಲಾಗಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ದಟ್ಟವಾಗಿದೆ.