ದಸರಾದಲ್ಲಿ ಅಂಬಾರಿ ಹೊತ್ತ ದ್ರೋಣ-ರಾಜೇಂದ್ರರ ಸಮಾಧಿ ನೋಡಿದ್ದೀರಾ?

ಐತಿಹಾಸಿಕ ಮೈಸೂರು ದಸರಾ ಸುಮಾರು ನಾಲ್ಕು ಶತಮಾನಗಳಿಂದ ಆಚರಣೆಯಾಗುತ್ತಾ ಬರುತ್ತಿದೆ. ಅವತ್ತಿನಿಂದ ಇವತ್ತಿನ ತನಕವೂ ದಸರಾದ ರೂವಾರಿಗಳಾಗಿ ಆನೆಗಳು ಕಾರ್ಯನಿರ್ವಹಿಸುತ್ತಿವೆ. ಆನೆಗಳಿಲ್ಲದ ದಸರಾವನ್ನು ನಾವು ಊಹಿಸುವುದೇ ಕಷ್ಟ.

ಹಿಂದಿನ ಕಾಲದಲ್ಲಿ ಅರಮನೆ ಆವರಣದಲ್ಲಿ ನಡೆಯುತ್ತಿದ್ದ ದಸರಾ ಆಚರಣೆ ಸಂದರ್ಭ ಆನೆ ಮೇಲೆ ಕುಳಿತು ಮಹಾರಾಜರು ಮೆರವಣಿಗೆ ನಡೆಸುತ್ತಿದ್ದರು. ಮಹಾರಾಜರ ಕಾಲದಲ್ಲಿ ಮೈಸೂರು ದಸರಾಗೆ ಆನೆಗಳನ್ನು ಎಚ್.ಡಿ.ಕೋಟೆಯಿಂದ ಕರೆ ತರಲಾಗುತ್ತಿತ್ತು. ಎಚ್.ಡಿ.ಕೋಟೆಯ ಕಾಕನಕೋಟೆಯಲ್ಲಿ ಕಾಡಾನೆಗಳನ್ನು ಖೆಡ್ಡಾದ ಮೂಲಕ ಸೆರೆ ಹಿಡಿದು ಬಳಿಕ ಪಳಗಿಸಲಾಗುತ್ತಿತ್ತು. ಇವತ್ತಿಗೂ ಎಚ್.ಡಿ.ಕೋಟೆಯ ಸಾಕಾನೆಗಳಿಗೂ ಮೈಸೂರು ದಸರಾಕ್ಕೂ ಅವಿನಾಭಾವ ಸಂಬಂಧವಿರುವುದನ್ನು ನಾವು ಕಾಣಬಹುದಾಗಿದೆ. ಮುಂದೆ ಓದಿ...

 ಆನೆಗಳ ಪ್ರೀತಿಗೆ ಸಾಕ್ಷಿಯಾದ ಸಮಾಧಿ

ಆನೆಗಳ ಪ್ರೀತಿಗೆ ಸಾಕ್ಷಿಯಾದ ಸಮಾಧಿ

ಇನ್ನು ಆನೆಗಳ ಬಗ್ಗೆ ಎಷ್ಟೊಂದು ಪ್ರೀತಿ, ಕಾಳಜಿ ವಹಿಸಲಾಗುತ್ತಿತ್ತು ಎನ್ನುವುದಕ್ಕೆ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಗೆ ಬರುವ ಬಳ್ಳೆ ಆನೆ ಶಿಬಿರದಲ್ಲಿರುವ ಆನೆಗಳ ಸಮಾಧಿ ಸಾಕ್ಷಿಯಾಗಿದೆ. ಇಲ್ಲಿ ಎರಡು ಆನೆಗಳ ಸಮಾಧಿಗಳಿವೆ. ಇವು ಒಂದು ಕಾಲದಲ್ಲಿ ಮೈಸೂರು ದಸರಾದ ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತು ಸಾಗಿದ ದ್ರೋಣ ಮತ್ತು ರಾಜೇಂದ್ರ ಆನೆಗಳ ಸಮಾಧಿಯಾಗಿವೆ. ಈ ಸಮಾಧಿಗಳನ್ನು ಸುಮಾರು ಹತ್ತು ಹದಿನೈದು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಈ ಸಮಾಧಿಗಳನ್ನು ಇಂದಿಗೂ ಇಲ್ಲಿನ ಮಾವುತ ಕಾವಾಡಿಗಳು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಅತ್ತ ಕಡೆ ಹೋದಾಗಲೆಲ್ಲ ಅದಕ್ಕೊಂದು ನಮನ ಸಲ್ಲಿಸಿ ಬರುತ್ತಾರೆ. ಅಷ್ಟೇ ಅಲ್ಲ ಶಿಬಿರದಲ್ಲಿರುವ ಆನೆಗಳಿಂದ ಆಗಾಗ್ಗೆ ಸಲಾಮ್ ಹೊಡೆಸುತ್ತಾರೆ.

 ಬಳ್ಳೆ ಆನೆ ಶಿಬಿರದಲ್ಲಿದ್ದ ದೈತ್ಯ ಗಜಗಳು

ಬಳ್ಳೆ ಆನೆ ಶಿಬಿರದಲ್ಲಿದ್ದ ದೈತ್ಯ ಗಜಗಳು

ಮೈಸೂರು ದಸರಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದ ದ್ರೋಣ ಮತ್ತು ರಾಜೇಂದ್ರ ಆನೆಗಳು ಎಚ್.ಡಿ.ಕೋಟೆಯ ಬಳ್ಳೆ ಆನೆ ಶಿಬಿರದಲ್ಲಿದ್ದವು. ಈ ಆನೆಗಳು ಇತರೆ ಆನೆಗಳಿಗಿಂತ ಸಾಧು ಮತ್ತು ದೈತ್ಯ ಬಲ ಹೊಂದಿದ್ದವು. ಮೈಸೂರು ದಸರಾ ವೇಳೆ ತಮ್ಮದೇ ಆದ ಗತ್ತು ಗೈರತ್ತು, ಗಾಂಭೀರ್ಯದ ನಡಿಗೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದವು. ದ್ರೋಣ ಜಂಬೂಸವಾರಿಯಲ್ಲಿ 18 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದರೆ, ರಾಜೇಂದ್ರ ಮೂರು ಬಾರಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದನು. ವಯಸ್ಸಾಗಿದ್ದ ರಾಜೇಂದ್ರನಿಗೆ ಹೆಚ್ಚು ಬಾರಿ ಅಂಬಾರಿ ಹೊರುವ ಅವಕಾಶ ದೊರೆತಿಲ್ಲವಾದರೂ ಜಂಬೂಸವಾರಿಯಲ್ಲಿ ಇತರೆ ಆನೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗುತ್ತಿದ್ದನು.

 ಆನೆಗಳ ಸಮಾಧಿಗೂ ಪೂಜೆ

ಆನೆಗಳ ಸಮಾಧಿಗೂ ಪೂಜೆ

ದ್ರೋಣ ದೃಢಕಾಯನಾಗಿದ್ದನಾದರೂ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದನು. ಆತನ ಸಾವು ಎಲ್ಲರಿಗೂ ನೋವು ತರಿಸಿತ್ತು. ಅದರಲ್ಲಿಯೂ ಶಿಬಿರದಲ್ಲಿ ಆತನ ಒಡನಾಟದಲ್ಲಿದ್ದ ಮಾವುತ ಕಾವಾಡಿಗಳಿಗೆ ದಿಕ್ಕೇ ತೋಚದಂತಾಗಿತ್ತು. ಆ ದುಃಖ ಮರೆಯಲು ಬಹಳಷ್ಟು ದಿನಗಳೇ ಬೇಕಾಯಿತು. ಎಲ್ಲರ ಕಣ್ಮಣಿಯಾಗಿದ್ದ ಈ ಸಾಕಾನೆಗಳ ನೆನಪಿಗಾಗಿ ಅಂದಿನ ಅರಣ್ಯಾಧಿಕಾರಿಗಳು ಸ್ಪಂದಿಸಿ ಸಮಾಧಿ ನಿರ್ಮಿಸಿದರು ಎಂದು ಹೇಳಲಾಗಿದೆ. ಕಳೆದ ವರ್ಷವೂ ದ್ರೋಣ ಎಂಬ ಆನೆ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು. ಅರಣ್ಯದಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಾಸ್ತಮ್ಮ ಪೂಜಾ ಮಹೋತ್ಸವದ ಸಂದರ್ಭ ದ್ರೋಣ ಮತ್ತು ರಾಜೇಂದ್ರರ ಸಮಾಧಿಗೂ ಪೂಜಾ ಕಾರ್ಯ ನಡೆಯುವುದು ವಿಶೇಷವಾಗಿದೆ.

Photo: ಪ್ರಾತಿನಿಧಿಕ ಚಿತ್ರ

 ಕಬಿನಿ ಹಿನ್ನೀರಲ್ಲಿ ಕಾಣಿಸುವ ದೈತ್ಯಗಜ

ಕಬಿನಿ ಹಿನ್ನೀರಲ್ಲಿ ಕಾಣಿಸುವ ದೈತ್ಯಗಜ

ಇದೆಲ್ಲದರ ನಡುವೆ ಕಬಿನಿ ಹಿನ್ನೀರಲ್ಲಿ ಅಪರೂಪಕ್ಕೆ ದೈತ್ಯಗಜವೊಂದು ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು. ಅರಣ್ಯ ಇಲಾಖೆ ಮೂಲಗಳ ಪ್ರಕಾರ ಈ ಆನೆಗೆ ಅಂದಾಜು 70ಕ್ಕೂ ಹೆಚ್ಚು ವಯಸ್ಸಿರಬಹುದಂತೆ. ಇದರ ಕೋರೆ ಅಂದಾಜು 4 ಅಡಿ ಇದೆಯಂತೆ. ದೈತ್ಯ ದೇಹ ಹೊಂದಿದ ಈ ಆನೆಯ ಹಣೆ ಭಾಗ ಅಗಲವಾಗಿ, ಕಿವಿಯು ಮೊರದಗಲವಿದೆ. ನಿಧಾನವಾಗಿ ಹೆಜ್ಜೆ ಹಾಕುತ್ತಾ ಸಾಗುವ ಈ ಆನೆಯ ನಡಿಗೆಯಲ್ಲಿಯೂ ಗಾಂಭೀರ್ಯತೆಯಿದೆ. ನಾಡಿಗೆ ಬಂದು ಉಪಟಳ ಮಾಡಿದ ನಿದರ್ಶನವಿಲ್ಲ. ಹಿಂಡಿನೊಂದಿಗೆ ಮೊದಲೆಲ್ಲ ಕಾಣಿಸಿಕೊಳ್ಳುತ್ತಿದ್ದಾದರೂ ಇತ್ತೀಚೆಗೆ ಹೆಚ್ಚಾಗಿ ಏಕಾಂಗಿಯಾಗಿ ಮೇವು ತಿನ್ನುತ್ತಾ, ನೀರು ಕುಡಿಯುತ್ತಾ ಸಾಗುತ್ತಿರುತ್ತದೆಯಂತೆ.

Photo: ಪ್ರಾತಿನಿಧಿಕ ಚಿತ್ರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+