ಸರ್ಕಾರವೇ ಸಿದ್ದಗಂಗಾ ಶ್ರೀಗಳ ಮುಂದೆ ಕ್ಷಮಾಪಣೆ ಕೇಳಿತ್ತು ಆಗೊಮ್ಮೆ
ತುಮಕೂರು, ಜನವರಿ 21: ಸಿದ್ದಗಂಗಾ ಶ್ರೀಗಳು ಸರ್ವರಿಗೂ ಪ್ರಿಯರು, ಸರ್ವರಿಂದಲೂ ಗೌರವ ಪಡೆವವರು ಹೌದು, ಆದರೆ ಅವರಿಗೂ ಕೆಲವರು ಕಾಟ ಕೊಟ್ಟಿದ್ದರು. ಆದರೆ ಅದನ್ನು ಶ್ರೀಗಳು ಪ್ರೀತಿಯಿಂದಲೇ ಎದುರಿಸಿ ಅವರಿಂದಲೂ ಗೌರವ ಗಿಟ್ಟಿಸಿಕೊಂಡಿದ್ದರು.
ಹೌದು, ರಾಜ್ಯ ಸರ್ಕಾರದ ಮಂತ್ರಿಯೇ ಒಬ್ಬರು, ಸಿದ್ದಗಂಗಾ ಮಠದ ಮೇಲೆ ಆರೋಪ ಮಾಡಿಬಿಟ್ಟಿದ್ದರು. ಸಮಾನತೆ, ಧರ್ಮ ಸಹಿಷ್ಣುತೆಗೆ ಹೆಸರಾದ ಮಠದಲ್ಲಿ ತಾರತಮ್ಯದ ಆರೋಪವನ್ನು ಅವರು ಹೊರಿಸಿದ್ದರು.
'ಮಠದಲ್ಲಿ ದಲಿತ ವಿದ್ಯಾರ್ಥಗಳಿಗೆ ತಾರತಮ್ಯ ಮಾಡಲಾಗುತ್ತಿದೆ' ಎಂದು ಆಗಿನ ಮಂತ್ರಿಯೊಬ್ಬರು ಹೇಳಿದ್ದರು. ಆದರೆ ಸಕಲರನ್ನೂ ಸಮಾನವಾಗಿ ಕಾಣುವ ಸಿದ್ದಗಂಗಾ ಶ್ರೀಗಳ ಮನಸ್ಸಿಗೆ ಮಂತ್ರಿಯ ಮಾತುಗಳು ಬೇಸರ ತಂದಿತು.
ಮಂತ್ರಿಯ ಆ ಹೇಳಿಕೆಗೆ ಸಾರ್ವಜನಿಕರಿಂದಲೇ ಭಾರಿ ಆಕ್ಷೇಪ ವ್ಯಕ್ತವಾಗಿತ್ತು. ಮಂತ್ರಿಯ ಹೇಳಿಕೆ ಸಿದ್ದಗಂಗಾ ಶ್ರೀಗಳಿಗೆ ಬೇಸರ ತರಿಸಿತ್ತು. ಹಾಗಾಗಿ ಅವರು ನಿರ್ಣಯವೊಂದನ್ನು ಮಾಡಿದರು.

ಶ್ರೀಗಳು ಮಾಡಿದರೊಂದು ನಿರ್ಣಯ
ಮಂತ್ರಿ ಹೇಳಿಕೆಯಿಂದ ಬೇಸರಗೊಂಡ ಶ್ರೀಗಳು ನಿರ್ಣಯವೊಂದನ್ನು ಮಾಡಿ ಶಾಲೆ-ಕಾಲೇಜುಗಳನ್ನು ನಡೆಸಲು ಸರ್ಕಾರ ನೀಡುತ್ತಿದ್ದ ಅನುದಾನವನ್ನು ಪಡೆಯಲೇ ಇಲ್ಲ. ಮಠದ ಪೂರ್ಣ ಖರ್ಚಿನಲ್ಲಿ ಶಾಲೆ-ಕಾಲೇಜು, ವಿದ್ಯಾರ್ಥಿಗಳ ವಸತಿ, ಅನ್ನದಾಸೋಹ, ಆಸ್ಪತ್ರೆಗಳನ್ನು ನಡೆಸಲು ಪ್ರಾರಂಭಿಸಿದರು. ಸತತ ಮೂರು ವರ್ಷ ಸರ್ಕಾರದಿಂದ ಚಿಕ್ಕಾಸನ್ನೂ ಶ್ರೀಗಳು ಪಡೆಯಲಿಲ್ಲ.

ಮುಖ್ಯಮಂತ್ರಿಗಳೇ ಬಂದು ಕ್ಷಮೆ ಕೇಳಿದರು
ಕೊನೆಗೆ ಮಂತ್ರಿಗಳ ಮಾತಿನಿಂದ ಆದ ಪ್ರಮಾದದ ಅರಿವು ಅಂದಿನ ಮುಖ್ಯಮಂತ್ರಿಗಳಿಗೆ ಆಗಿ. ಮಠಕ್ಕೆ ಬಂದು ಶ್ರೀಗಳ ಬಳಿ ಸರ್ಕಾರದ ಅನುದಾನ ಪಡೆಯುವಂತೆ ಕೈಮುಗಿದರು. ಮಂತ್ರಿಯ ಅಸತ್ಯದ ಹೇಳಿಕೆಗೆ ಕ್ಷಮೆಯನ್ನೂ ಕೋರಿದರು. ಆ ನಂತರವಷ್ಟೆ ಸರ್ಕಾರದ ಅನುದಾನವನ್ನು ಪಡೆಯಲು ಶ್ರೀಗಳು ಒಪ್ಪಿದ್ದು.

ಸ್ವಂತ ಬಲದಿಂದಲೇ ಮಠ ಕಟ್ಟಲು ಶ್ರಮ
ಮುಂಚೆಯೂ ಸಹ ಮಠಾಧಿಪತಿಗಳಾದ ಆರಂಭದ ದಿನಗಳಲ್ಲಿ ಸಹ ಶ್ರೀಗಳು ಸ್ವಂತ ಬಲದಿಂದಲೇ ಮಠ ಕಟ್ಟಲು ಬಹು ಶ್ರಮ ವಹಿಸಿದ್ದರು. ಆಗಿನ ಸಮಯದಲ್ಲಿ ಮಠದ ಬಳಿ ಇದ್ದ ಜಮೀನಿನಲ್ಲಿ ಕೃಷಿ ಮಾಡಲು ಸ್ವತಃ ಶ್ರೀಗಳೇ ಇಳಿಯುತ್ತಿದ್ದರಂತೆ. ಇಂತಹಾ ಅದೆಷ್ಟೋ ಕತೆಗಳು ಶ್ರೀಗಳ ಸುತ್ತಾ ಇವೆ.

ತ್ರಿವಿದ ದಾಸೋಹಿ ಶ್ರೀಗಳು
ತ್ರಿವಿದ ದಾಸೋಹದಿಂದಲೇ ನಡೆದಾಡುವ ದೇವರು ಎಂಬ ಉಪಮೆ ಸಂಪಾದಿಸಿದ ಶಿವಕುಮಾರ ಸ್ವಾಮೀಜಿ ಅವರು, ಜೀವಿತಾವಧಿಯಲ್ಲಿ ಸಮಾಜಪರವಾಗಿ ಹೇಗೆ ಇರಬೇಕೆಂಬ ಉದಾಹರಣೆಯನ್ನು ಜನತೆಗೆ, ಮಠಗಳಿಗೆ, ಮಠಾಧೀಶರುಗಳಿಗೆ ನೀಡಿ ಹೋಗಿದ್ದಾರೆ.












Click it and Unblock the Notifications