Get Updates
Get notified of breaking news, exclusive insights, and must-see stories!

ಅನಿಷ್ಟಕ್ಕೆಲ್ಲ ಶನೀಶ್ವರ ಕಾರಣ ಅಲ್ಲ, ಕೈ ಕೆಲಸಗಳಿಗೆಲ್ಲ ಪರಮೇಶ್ವರ ಕಾರಣರಲ್ಲ!

Recommended Video

      ಅನಿಷ್ಟಕ್ಕೆಲ್ಲ ಶನೀಶ್ವರ ಕಾರಣ ಅಲ್ಲ, ಕೈ ಕೆಲಸಗಳಿಗೆಲ್ಲ ಪರಮೇಶ್ವರ ಕಾರಣರಲ್ಲ! | Oneindia Kannada

      ಅನಿಷ್ಟಕ್ಕೆಲ್ಲ ಶನೀಶ್ವರ ಕಾರಣ ಎಂಬಂತೆ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವುದಕ್ಕೆಲ್ಲ ಗೃಹ ಸಚಿವ ಡಾ. ಜಿ ಪರಮೇಶ್ವರ ಅವರೇ ಕಾರಣ ಎಂಬ ಗಾದೆಯೊಂದು ಹುಟ್ಟಿಕೊಂಡಿದೆ.

      ಇತ್ತೀಚೆಗೆ ಪ್ರತಾಪ್ ಚಂದ್ರ ಶೆಟ್ಟಿ ಅವರು ವಿಧಾನ ಪರಿಷತ್ ಸಭಾಪತಿ ಹುದ್ದೆಗೇರಿದ್ದು ಇದಕ್ಕೆ ಕಾರಣ. ಅಂದ ಹಾಗೆ ಈ ಜಾಗಕ್ಕೆ ಎಸ್.ಆರ್.ಪಾಟೀಲ ಅವರನ್ನು ತರಲು ಮಾಜಿ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಆದರೆ ಕೊನೇ ಘಳಿಗೆಯಲ್ಲಿ ಸಿದ್ದು ಟೆಕ್ನಿಕ್ಕಿನ ನೆತ್ತಿಗೆ ಹೊಡೆದ ಪರಮೇಶ್ವರ್ ಈ ಜಾಗ, ಪ್ರತಾಪ್ ಚಂದ್ರ ಶೆಟ್ಟರಿಗೆ ದಕ್ಕುವಂತೆ ಮಾಡಿದರು ಎಂಬುದು ಹಲವರ ವಾದ.

      ವಿಧಾನ ಪರಿಷತ್ ಸಭಾಪತಿ ಹುದ್ದೆಗೆ ಎಸ್.ಆರ್. ಪಾಟೀಲ ಅವರನ್ನು ತರುವಂತೆ ಸಿದ್ದರಾಮಯ್ಯ ಹೈಕಮಾಂಡ್ ವರಿಷ್ಠರಿಗೆ ಶಿಫಾರಸ್ಸು ಮಾಡಿದ್ದು ನಿಜ. ಹಾಗಂತ ಇದು ಆಗಲೇಬೇಕು ಎಂದು ಅವರೇನೂ ಹಠ ಹಿಡಿದಿರಲಿಲ್ಲ.

      ಬದಲಿಗೆ ಎಸ್.ಆರ್. ಪಾಟೀಲರಿಗೆ ಈ ಸ್ಥಾನ ಕೊಟ್ಟರೆ ಉತ್ತರ ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ ಎಂಬುದು ಬಾಹ್ಯ ಕಾರಣವಾದರೆ, ತಮ್ಮ ಆಪ್ತರೊಬ್ಬರಿಗೆ ಈ ಜಾಗ ದಕ್ಕಿದಂತಾಗುತ್ತದೆ ಎಂಬುದು ಸಿದ್ದರಾಮಯ್ಯ ಅವರ ಆಂತರಿಕ ಕಾರಣವಾಗಿತ್ತು.

      ಮಧ್ಯ ಪ್ರವೇಶಿಸಿದ ಆಸ್ಕರ್ ಫರ್ನಾಂಡಿಸ್

      ಮಧ್ಯ ಪ್ರವೇಶಿಸಿದ ಆಸ್ಕರ್ ಫರ್ನಾಂಡಿಸ್

      ಈ ವಿಷಯದಲ್ಲಿ ಇದ್ದಕ್ಕಿದ್ದಂತೆ ಮಧ್ಯೆ ಪ್ರವೇಶಿಸಿದವರು ಕೇಂದ್ರದ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡೀಸ್. ವಾಸ್ತವವಾಗಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಆಸ್ಕರ್ ಫರ್ನಾಂಡೀಸ್ ಗ್ಯಾಂಗಿನವರು. ಅವರಂತೆಯೇ ಪಕ್ಷ ನಿಷ್ಠರು.

      ಹೇಳಿದರೆ ತುಂಬ ಜನರಿಗೆ ಅಚ್ಚರಿಯಾಗಬಹುದು. ಎಸ್.ಎಂ. ಕೃಷ್ಣ ಅವರ ಕಾಲದಿಂದ ಇಲ್ಲಿಯವರೆಗೆ ಕನಿಷ್ಠ ಆರು ಸಲ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಮಂತ್ರಿಗಿರಿಯ ಆಫರ್ರು ದಕ್ಕಿದೆ.

      ಮಿಸ್ಟರ್ ಪ್ರತಾಪ್ ಚಂದ್ರ ಶೆಟ್ಟಿ, ಪಕ್ಷ ನಿಮ್ಮ ನಿಷ್ಠೆಯನ್ನು ಗುರುತಿಸಿದೆ. ಹೀಗಾಗಿ ಮಂತ್ರಿ ಸ್ಥಾನ ನೀಡಲು ತೀರ್ಮಾನಿಸಿದೆ. ನಾಳೆ ಪ್ರಮಾಣವಚನ ಸ್ವೀಕರಿಸಲು ರೆಡಿಯಾಗಿ ಎಂಬ ಮೆಸೇಜು ಪದೇ ಪದೇ ಅವರಿಗೆ ಬರುತ್ತಿತ್ತು. ಹಾಗೆಯೇ ಮರುದಿನ ಅದು ಠುಸ್ ಆಗುತ್ತಿತ್ತು.

      ಹಾಗಂತ ಪ್ರತಾಪ್ ಚಂದ್ರ ಶೆಟ್ಟಿ ಅವರೇನೂ ಬಹಿರಂಗವಾಗಿ ನೋವು ತೋಡಿಕೊಂಡವರಲ್ಲ, ಬದಲಿಗೆ ತಮಗಾದ ನಿರಾಸೆಯನ್ನು ತಾವೇ ನುಂಗಿಕೊಂಡು ಮೌನವಾಗಿದ್ದವರು.

      ಮೊದಲು ಹೆಸರು ಕೇಳಿಬಂದಿದ್ದು ಪಾಟೀಲರದು

      ಮೊದಲು ಹೆಸರು ಕೇಳಿಬಂದಿದ್ದು ಪಾಟೀಲರದು

      ಈ ಬಾರಿ ವಿಧಾನ ಪರಿಷತ್ ಸಭಾಪತಿ ಹುದ್ದೆಗೆ ಯಾರನ್ನು ತರುವುದು ಎಂಬ ಪ್ರಶ್ನೆ ಬಂದಾಗ ಎಸ್.ಆರ್. ಪಾಟೀಲರ ಹೆಸರು ಕೇಳಿತಲ್ಲ? ಆಗ ಆಸ್ಕರ್ ಫರ್ನಾಂಡೀಸ್ ಇದ್ದಕ್ಕಿದ್ದಂತೆ ಚುರುಕಾದರು. ಕೆಲ ಕಾಲದ ಹಿಂದೆ ತಾವೇ ಪ್ರತಾಪ್ ಚಂದ್ರ ಶೆಟ್ಟರಿಗೆ ನೀಡಿದ್ದ ಭರವಸೆ ಅವರಿಗೆ ನೆನಪಾಯಿತು. ಅದೆಂದರೆ, ಕಳೆದ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಪ್ರತಾಪ್ ಚಂದ್ರಶೆಟ್ಟಿ ನಿರ್ಧರಿಸಿದ್ದರು. ಹಾಗಂತ ಪಕ್ಷದ ಹಲ ನಾಯಕರಿಗೆ ಪತ್ರವನ್ನೂ ಬರೆದಿದ್ದರು.

      ಆದರೆ ಜಯಪ್ರಕಾಶ್ ಹೆಗ್ಡೆ ಇದನ್ನು ಸದುಪಯೋಗ ಮಾಡಿಕೊಳ್ಳಬಹುದು ಎಂದು ಭಾವಿಸಿದ ಆಸ್ಕರ್ ಫರ್ನಾಂಡೀಸ್, ತಕ್ಷಣವೇ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಸಂಪರ್ಕಿಸಿ, ಈ ಸಲ ನೀವೇ ನಿಲ್ಲಿ, ನಿಮ್ಮನ್ನು ಪ್ರಮುಖವಾದ ಹುದ್ದೆಯೊಂದಕ್ಕೆ ತರುವ ನನ್ನ ಕನಸಾದರೂ ಈಡೇರಲಿ ಎಂದು ಮನ ಒಲಿಸಿದರು.

      ಸಿದ್ದುವನ್ನು ಸಂಪರ್ಕಿಸಿದ ಆಸ್ಕರ್

      ಸಿದ್ದುವನ್ನು ಸಂಪರ್ಕಿಸಿದ ಆಸ್ಕರ್

      ಆಸ್ಕರ್ ಫರ್ನಾಂಡೀಸ್ ಅವರು ನಿಮ್ಮನ್ನು ಪ್ರಮುಖ ಹುದ್ದೆಯೊಂದಕ್ಕೆ ಕರೆತರುವ ಕನಸು ನನಸಾಗಲಿ ಎಂದು ಯಾವಾಗ ಈ ಮಾತು ಹೇಳಿದರೋ? ಆಗ ಪ್ರತಾಪ್ ಚಂದ್ರ ಶೆಟ್ಟಿ ಅವರು ಮರು ಮಾತನಾಡಲಿಲ್ಲ. ಬದಲಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಅವರಿಗೆ ಹೇಗಾದರೂ ಮಾಡಿ ಮಂತ್ರಿಗಿರಿ ಕೊಡಿಸಬೇಕು ಎಂದು ಆಸ್ಕರ್ ಯತ್ನಿಸಿದರೂ ಅದು ಸಫಲವಾಗಿರಲಿಲ್ಲ.

      ಆದರೆ ಸದ್ಯದಲ್ಲೇ ಮಂತ್ರಿ ಮಂಡಲ ವಿಸ್ತರಣೆ ಮಾಡುವಾಗ ಲಿಂಗಾಯತ ಸಮುದಾಯಕ್ಕೆ ಒಂದು ಸ್ಥಾನ ಕೊಟ್ಟೇ ಕೊಡುತ್ತೇವಾದ್ದರಿಂದ ವಿಧಾನ ಪರಿಷತ್ ಸಭಾಪತಿ ಸ್ಥಾನವನ್ನು ಪ್ರತಾಪ್ ಚಂದ್ರ ಶೆಟ್ಟರಿಗೆ ಕೊಡೋಣ ಎಂದವರು ವರಿಷ್ಠರಿಗೆ ಹೇಳಿದರು.

      ಓಕೆ, ಈ ವಿಷಯದಲ್ಲಿ ನೀವು ಸಿದ್ದರಾಮಯ್ಯ ಅವರ ಜತೆಗೊಮ್ಮೆ ಮಾತನಾಡಿ ಎಂದು ಹೈಕಮಾಂಡ್ ವರಿಷ್ಠರು ಹೇಳಿದಾಗ, ಆಸ್ಕರ್ ಫರ್ನಾಂಡೀಸ್ ಅವರು ನೇರವಾಗಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದ್ದಾರೆ. ವಿಷಯ ಹೇಳಿದ್ದಾರೆ.

      ಸೇಡು ತೀರಿಸಿಕೊಳ್ಳುವವರಲ್ಲ ಪರಮೇಶ್ವರ

      ಸೇಡು ತೀರಿಸಿಕೊಳ್ಳುವವರಲ್ಲ ಪರಮೇಶ್ವರ

      ಎಷ್ಟೇ ಆದರೂ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಪರವಾಗಿ ನಿರಂತರವಾಗಿ ಬ್ಯಾಟಿಂಗ್ ಮಾಡಿದವರಲ್ಲಿ ಆಸ್ಕರ್ ಫರ್ನಾಂಡೀಸ್ ಕೂಡಾ ಒಬ್ಬರು. ಹೀಗಿರುವಾಗ ಅವರು ಮುಂದಿಟ್ಟ ಪ್ರಪೋಸಲ್ಲನ್ನು ಸಿದ್ದರಾಮಯ್ಯ ಯಾಕೆ ಬೇಡವೆನ್ನುತ್ತಾರೆ? ಹಾಗಂತಲೇ ಅವರೂ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಆ ಜಾಗಕ್ಕೆ ತರುವುದಾದರೆ ನನ್ನ ಅಭ್ಯಂತರವೇನೂ ಇಲ್ಲ ಎಂದಿದ್ದಾರೆ.

      ಯಾವಾಗ ಸಿದ್ದರಾಮಯ್ಯ ಅವರು ಈ ವಿಷಯದಲ್ಲಿ ಗ್ರೀನ್ ಸಿಗ್ನಲ್ ಕೊಟ್ಟರೋ? ಆಗ ಪ್ರತಾಪ್ ಚಂದ್ರ ಶೆಟ್ಟಿ ಅವರು ವಿಧಾನ ಪರಿಷತ್ ಸಭಾಪತಿಯಾಗಿ ಬಂದು ಕುಳಿತರು. ಆದರೆ ಇಡೀ ಬೆಳವಣಿಗೆ ಸಿದ್ದರಾಮಯ್ಯ ಅವರಿಗೆ ಪರಮೇಶ್ವರ್ ಟಾಂಗ್ ಕೊಟ್ಟ ಕತೆ ಎಂಬಂತೆ ಪ್ರತಿಬಿಂಬಿತವಾಯಿತು. ವಾಸ್ತವವಾಗಿ ಸಿದ್ದರಾಮಯ್ಯ ಅವರ ವಿಷಯದಲ್ಲಿ ಪರಮೇಶ್ವರ್ ಅವರಿಗೆ ಅಸಮಾಧಾನ ಇಲ್ಲವೆಂದೇನಲ್ಲ, ಆದರೆ ಸೇಡಿಗೆ ಸೇಡು ಎನ್ನುವುದು ಅವರ ಜಾಯಮಾನವಲ್ಲ.

      ಕಾಂಗ್ರೆಸ್ ಮತ್ತೆ ಮೇಲೇಳುವುದು ಖಚಿತ

      ಕಾಂಗ್ರೆಸ್ ಮತ್ತೆ ಮೇಲೇಳುವುದು ಖಚಿತ

      ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ತಾವು ಡಿಸಿಎಂ ಆಗಬೇಕು ಎಂಬ ಆಸೆ ಪರಮೇಶ್ವರ್ ಅವರಿಗಿತ್ತು. ಆದರೆ ಸಿದ್ದರಾಮಯ್ಯ ಅದಕ್ಕೆ ಅಡ್ಡಗಾಲು ಹಾಕಿದರು. ಆದರೆ ಸಮ್ಮಿಶ್ರ ಸರ್ಕಾರ ಬಂದ ಮೇಲೆ ಪರಮೇಶ್ವರ್ ಅವರ ಆಸೆಯೂ ಈಡೇರಿದೆ. ಮತ್ತು ರಾಜ್ಯ ಕಾಂಗ್ರೆಸ್ ನಲ್ಲಿ ಅವರು ಹೇಳಿದ ಮಾತುಗಳನ್ನು ಹೈಕಮಾಂಡ್ ಕೂಡಾ ಕೇಳುತ್ತಿದೆ. ಹೀಗಾಗಿ ಅವರು ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಡುವ ಮನ:ಸ್ಥಿತಿಯಲ್ಲಿಲ್ಲ.

      ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ಬೇರೆಯೇ ಲೆಕ್ಕಾಚಾರಗಳು ನಡೆಯುತ್ತಿವೆ. ಅದೆಂದರೆ, ಪಂಚರಾಜ್ಯಗಳ ಚುನಾವಣೆಯ ನಂತರ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಮೇಲಕ್ಕೇಳುವುದು ಬಹುತೇಕ ಖಚಿತವಾಗಿರುವುದರಿಂದ ಮತ್ತು ತೃತೀಯ ಶಕ್ತಿಯ ಬೆಂಬಲದೊಂದಿಗೆ ಕೇಂದ್ರದ ಅಧಿಕಾರ ಸೂತ್ರ ಹಿಡಿಯುವ ಲಕ್ಷಣಗಳು ಹೆಚ್ಚಾಗಿರುವುದರಿಂದ ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆದೊಯ್ಯಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ.

      ದೈಹಿಕ ಶಕ್ತಿಯ ಜತೆ, ಮಾನಸಿಕ ಶಕ್ತಿ

      ದೈಹಿಕ ಶಕ್ತಿಯ ಜತೆ, ಮಾನಸಿಕ ಶಕ್ತಿ

      ಕಳೆದ ಐದು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಪಾಳೆಯಕ್ಕೆ ಅನ್ನಭಾಗ್ಯ ಯೋಜನೆಯ ಸೌಲಭ್ಯ ದಕ್ಕಿಸಿಕೊಟ್ಟವರೇ ಸಿದ್ದರಾಮಯ್ಯ. ಇದೇ ಕೆಲಸವನ್ನು 1999ರಿಂದ 2004 ರವರೆಗೆ ಸಿಎಂ ಆಗಿದ್ದ ಎಸ್.ಎಂ. ಕೃಷ್ಣ ಕಲ್ಪಿಸಿಕೊಟ್ಟಿದ್ದರು.

      ಆದರೆ ಯಾವಾಗ ಅವರು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ವಿಫಲರಾದರೋ? ಅದೇ ಟೈಮಿಗೆ ಸರಿಯಾಗಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಅಧಿಕಾರ ಹಿಡಿಯಿತು. ಮತ್ತದರ ಪ್ರತಿಫಲವಾಗಿ ಕೃಷ್ಣ ಅವರಿಗೆ ಮಹಾರಾಷ್ಟ್ರದ ರಾಜ್ಯಪಾಲ ಹುದ್ದೆ ದಕ್ಕಿತು. ಕೇಂದ್ರದಲ್ಲಿ ವಿದೇಶಾಂಗ ಸಚಿವರಾಗುವ ಅವಕಾಶ ಲಭ್ಯವಾಯಿತು.

      ಹೋಲಿಸಿ ನೋಡಿದರೆ ಅವತ್ತು ಪಕ್ಷದ ಹೈಕಮಾಂಡ್ ಗೆ ಕೃಷ್ಣ ಅವರಿಂದ ಯಾವ ಹೆಲ್ಪು ಆಗಿತ್ತೋ? ಅದೇ ಹೆಲ್ಪು ಸಿದ್ದರಾಮಯ್ಯ ಅವರಿಂದಲೂ ಆಯಿತು. ಕೃಷ್ಣ ಅವರಾದರೆ ಟೈಮು ಟೈಮಿಗೆ ಪಕ್ಷದ ದೈಹಿಕ ಶಕ್ತಿ ಕುಸಿಯದಂತೆ ನೋಡಿಕೊಂಡರು. ಆದರೆ ಸಿದ್ದರಾಮಯ್ಯ ದೈಹಿಕ ಶಕ್ತಿಯ ಜತೆ, ಮಾನಸಿಕ ಶಕ್ತಿಯೂ ಕುಸಿಯದಂತೆ ನೋಡಿಕೊಂಡರು.

      ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ

      ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ

      ರಾಹುಲ್ ಗಾಂಧಿ ಅವರನ್ನು ಬಿಜೆಪಿ ಪಪ್ಪು, ಪಪ್ಪು ಎಂದು ಹಂಗಿಸುತ್ತಿದ್ದಾಗ ಸಿದ್ದರಾಮಯ್ಯ ಮಾತ್ರ ವೀರಾವೇಶದಿಂದ ಮೋದಿ ಸರ್ಕಾರದ ವಿರುದ್ಧ ಹೋರಾಡಿದ್ದರು. ಆ ಮೂಲಕ ರಾಹುಲ್ ಗಾಂಧಿ ಅವರಿಗೆ ಬಲ ತುಂಬಿದ್ದರು.

      ಈ ಮಧ್ಯೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಅದನ್ನು ಬೀಳಿಸುವ ಶಕ್ತಿ ಇದ್ದರೂ, ರಾಹುಲ್ ಗಾಂಧಿ ಅವರ ಮಾತಿಗೆ ಕಟ್ಟು ಬಿದ್ದ ಸಿದ್ದರಾಮಯ್ಯ ಸೈಲೆಂಟಾಗಿ ಸೈಡಿಗೆ ಸರಿದು ಬಿಟ್ಟರು.

      ಇಂತಹ ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆದೊಯ್ಯುವುದು ಈಗ ರಾಹುಲ್ ಗಾಂಧಿ ಲೆಕ್ಕಾಚಾರ. ಆ ಮೂಲಕ ಸಿದ್ದರಾಮಯ್ಯ ಅವರು ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರ ಮಾಡುವುದು ಒಂದು ಲೆಕ್ಕಾಚಾರವಾದರೆ, ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ತನ್ನ ಪಾಡಿಗೆ ನೆಮ್ಮದಿಯಾಗಿ ನಡೆಯಲಿ ಎಂಬುದು ಮತ್ತೊಂದು ಲೆಕ್ಕಾಚಾರ.

      ಪ್ರಧಾನಿ ಹುದ್ದೆ ಯಾರಿಗೆ ಸಿಗುತ್ತದೆಯೋ?

      ಪ್ರಧಾನಿ ಹುದ್ದೆ ಯಾರಿಗೆ ಸಿಗುತ್ತದೆಯೋ?

      ಇದಷ್ಟೇ ಅಲ್ಲ,ಮುಂದಿನ ಲೋಕಸಭಾ ಚುನಾವಣೆಯ ನಂತರ ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪ್ರಧಾನಿ ಹುದ್ದೆ ಯಾರಿಗೆ ಸಿಗುತ್ತದೆಯೋ? ಗೊತ್ತಿಲ್ಲ. ಹಾಗೊಂದು ವೇಳೆ ತೃತೀಯ ರಂಗದ ನಾಯಕರಿಗೆ ಆ ಹುದ್ದೆ ಬಿಟ್ಟು ಕೊಡುವ ಸನ್ನಿವೇಶ ಬಂದರೆ ರಾಹುಲ್ ಗಾಂಧಿ ಅದಕ್ಕೂ ಸಿದ್ಧವಾಗಿದ್ದಾರೆ.

      ಹಾಗೇನಾದರೂ ಆದರೆ ಸದ್ಯಕ್ಕೆ ರಾಷ್ಟ್ರೀಯ ಸಂಸದೀಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೇಶದ ಉಪಪ್ರಧಾನಿ ಹುದ್ದೆಯ ಮೇಲೆ ಕೂರಿಸುವುದು ಅವರ ಲೆಕ್ಕಾಚಾರ.

      ಖರ್ಗೆ ವಿಷಯದಲ್ಲಿ ರಾಹುಲ್ ಗಾಂಧಿ ಅವರಿಗೆ ವಿಶೇಷ

      ಖರ್ಗೆ ವಿಷಯದಲ್ಲಿ ರಾಹುಲ್ ಗಾಂಧಿ ಅವರಿಗೆ ವಿಶೇಷ

      ಯಥಾ ಪ್ರಕಾರ ಈ ಲೆಕ್ಕಾಚಾರಕ್ಕೂ ಎರಡು ಕಾರಣಗಳಿವೆ. ಒಂದು ಖರ್ಗೆಯವರ ಪಕ್ಷ ನಿಷ್ಠೆ. ಯಾವತ್ತೋ ಕರ್ನಾಟಕದ ಮುಖ್ಯಮಂತ್ರಿಯಾಗಬೇಕಿದ್ದ ಖರ್ಗೆ, ತಮಗೆ ಆ ಅವಕಾಶ ದಕ್ಕಲಿಲ್ಲ ಎಂದು ಪಕ್ಷದ ವಿರುದ್ಧ ತಿರುಗಿ ಬಿದ್ದವರಲ್ಲ, ಬದಲಿಗೆ ಪಕ್ಷ ಹೇಳಿದ ಕೆಲಸ ಮಾಡಿಕೊಂಡು ಬಂದವರು.

      ಹೀಗಾಗಿ ಖರ್ಗೆ ಅವರ ವಿಷಯದಲ್ಲಿ ರಾಹುಲ್ ಗಾಂಧಿ ಅವರಿಗೆ ವಿಶೇಷ ಆಸಕ್ತಿ ಇದೆ. ಮೋದಿ ಸರ್ಕಾರವನ್ನು ಸಂಸತ್ತಿನಲ್ಲಿ ಅದ್ಭುತವಾಗಿ ಎದುರಿಸಿದ ಅವರ ದೈತ್ಯ ಶಕ್ತಿಯ ಬಗ್ಗೆ ಗೌರವವೂ ಇದೆ. ಹಾಗೆಯೇ ರಾಷ್ಟ್ರ ಮಟ್ಟದಲ್ಲಿ ಪಕ್ಷ ಅಧಿಕಾರದ ಪಾಲುದಾರನಾದಾಗ ಖರ್ಗೆ ಅವರ ಮನಸ್ಸಿನಲ್ಲಿ ಸಿಎಂ ಆಗುವ ಬಯಕೆ ಹುಟ್ಟಲು ಅವಕಾಶ ನೀಡಬಾರದು ಎಂಬ ಎಚ್ಚರಿಕೆಯೂ ಇದೆ.

      ಯಾಕೆಂದರೆ, ಮುಂದಿನ ಲೋಕಸಭಾ ಚುನಾವಣೆಯ ನಂತರ ತೃತೀಯ ರಂಗ ಬಲಿಷ್ಠವಾಗಿ ತಮ್ಮ ಜತೆ ನಿಲ್ಲಬೇಕು ಎಂದರೆ ಮಾಜಿ ಪ್ರಧಾನಿ ದೇವೇಗೌಡರ ಸಾಥ್ ಇರಬೇಕು ಅನ್ನುವುದು ರಾಹುಲ್ ಗಾಂಧಿ ಅವರಿಗೆ ಗೊತ್ತು.

      ಹೀಗಾಗಿ ಕರ್ನಾಟಕದಲ್ಲಿರುವ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಯಾವ ಕೆಲಸವೂ ನಡೆಯಕೂಡದು ಎಂಬುದು ಅವರ ನಿರೀಕ್ಷೆ. ಹಾಗೊಂದು ವೇಳೆ ಮುಖ್ಯಮಂತ್ರಿಯ ಬದಲಾವಣೆಯಾಗಬೇಕು ಎಂದರೆ ಕುಮಾರಸ್ವಾಮಿ ಜಾಗಕ್ಕೆ ಅವರ ಸಹೋದರ ರೇವಣ್ಣ ಬರಲಿ, ನಮ್ಮವರು ಸಿಎಂ ಆಗುವುದು ಬೇಡ ಎಂದು ಈಗಾಗಲೇ ಅವರು ಪಕ್ಷದ ನಾಯಕರಿಗೆ ಹೇಳಿದ್ದಾರೆ.

      ಸ್ವಾಮಿ ಜಾಗಕ್ಕೆ ರೇವಣ್ಣ ಬಂದರೂ ಓಕೆ

      ಸ್ವಾಮಿ ಜಾಗಕ್ಕೆ ರೇವಣ್ಣ ಬಂದರೂ ಓಕೆ

      ಕುಮಾರಸ್ವಾಮಿ ಜಾಗಕ್ಕೆ ರೇವಣ್ಣ ಬಂದರೂ ಓಕೆ ಎನ್ನುವ ಮನ:ಸ್ಥಿತಿ ರಾಹುಲ್ ಗಾಂಧಿ ಅವರಲ್ಲಿರುವುದರಿಂದ ಯಾರೊಬ್ಬರೂ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಗೊಡವೆಗೆ ಹೋಗುವುದಿಲ್ಲ. ಹಾಗೆಯೇ ಮೊನ್ನೆ ಮೊನ್ನೆಯವರೆಗೂ ಕೈ ಪಾಳೆಯಕ್ಕೆ ರಾಷ್ಟ್ರ ಮಟ್ಟದಲ್ಲಿ ಬಲವಿರಲಿಲ್ಲ. ಆದರೆ ಈಗ ಹಲ ರಾಜ್ಯಗಳ ಅಧಿಕಾರ ಅದರ ಕೈಗೆ ಬಂದಿದೆ.

      ಹೀಗಾಗಿ ಸಹಜವಾಗಿಯೇ ಕಾಂಗ್ರೆಸ್ ಹೈಕಮಾಂಡ್ ಶಕ್ತಿ ಹೆಚ್ಚಿದೆ. ಶಕ್ತಿ ಹೆಚ್ಚಿದ ಹೈಕಮಾಂಡ್ ಮುಂದೆ ಸಂಘರ್ಷಕ್ಕಿಳಿಯುವ ಗೋಜಿಗೆ ರಾಜ್ಯ ಕಾಂಗ್ರೆಸ್ ನ ಯಾವ ನಾಯಕರೂ ಹೋಗುವುದಿಲ್ಲ. ಇದು ಸಧ್ಯದ ಪರಿಸ್ಥಿತಿ. ಆದರೆ ರಾಜಕಾರಣದ ಲೆಕ್ಕಾಚಾರ ಈ ಲೆವೆಲ್ಲಿಗೆ ತಲುಪಿದ್ದರೂ,ಹಲವರು ಪ್ರತಾಪ್ ಚಂದ್ರ ಶೆಟ್ಟಿ ಕೇಸನ್ನು ಹಿಡಿದುಕೊಂಡು ಬೆಟ್ಟ ಅಗೆಯಲು ಹೊರಟಿದ್ದಾರೆ.

      ಆದರೆ ಈ ರೀತಿ ಬೆಟ್ಟ ಅಗೆಯಲು ಹೋದರೆ ಸಿಗುವುದು ಹುಲಿಯಲ್ಲ, ಬರೀ ಇಲಿ ಮಾತ್ರ. ಹೀಗಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ನಡೆದಿದ್ದಕ್ಕೆಲ್ಲ ಪರಮೇಶ್ವರ ಕಾರಣ ಎಂಬ ಮನ:ಸ್ಥಿತಿಯಿಂದ ಹೊರಬರುವುದೇ ಲೇಸು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+