ಪಾರ್ಲಿಮೆಂಟ್ ಸೆಂಗೋಲ್ ನಿಂದ ಸೆಂಥಿಲ್ ಬಾಲಾಜಿ ಬಂಧನದ ವರೆಗೆ: 'ರಾಜಕೀಯದ ಎರಡು ಮುಖಗಳು'
ದಕ್ಷಿಣ ಭಾರತದ ಕರ್ನಾಟಕ ಹೊರತು ಪಡಿಸಿದರೆ ಬಿಜೆಪಿಗೆ ಇತರ ರಾಜ್ಯಗಳಲ್ಲಿ ನೆಲೆಯಿಲ್ಲ. ಹಾಗಾಗಿಯೇ, ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಜೊತೆ ಒಡನಾಟ. ಅದರಲ್ಲೂ ತಮಿಳುನಾಡಿನಲ್ಲಿ ಬಿಜೆಪಿ-ಎಐಎಡಿಎಂಕೆ ನಡುವಿನ ಸಂಬಂಧ ಹಿಂದಿನಂತಿಲ್ಲ. ಲೋಕಸಭಾ ಚುನಾವಣೆ ಹತ್ತಿರ ಇರುವುದರಿಂದ ಈ ರಾಜ್ಯಗಳಲ್ಲಿ ಬಿಜೆಪಿ ಪ್ರಭುತ್ವವನ್ನು ಸ್ಥಾಪಿಸುವ ಅನಿವಾರ್ಯತೆಯಲ್ಲಿದೆ.
ಕಳೆದ ತಿಂಗಳು ಹೊಸ ಸಂಸತ್ತಿನ ಉದ್ಘಾಟನೆಯ ವೇಳೆ ತಮಿಳುನಾಡಿನ ಸೆಂಗೋಲ್ (ರಾಜದಂಡ) ಅನ್ನು ಅಲ್ಲಿ ಪ್ರತಿಷ್ಠಾಪಿಸಲಾಗಿತ್ತು. ತಮಿಳುನಾಡಿನ ಧಾರ್ಮಿಕ ಮುಖಂಡರು, ವಂಶಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವರ್ಣರಂಜಿತ/ವೈಭೋವೋಪಿತವಾಗಿ ನಡೆದ ಕಾರ್ಯಕ್ರಮಕ್ಕೆ ಅಲ್ಲಲ್ಲಿ ದೊಡ್ಡ ಡ್ರಾಮಾ ಎನ್ನುವ ಅಪಹಾಸ್ಯವೂ ಎದುರಾಯಿತು.
ಸೆಂಗೋಲ್ ಪ್ರತಿಷ್ಠಾಪನೆ ತಮಿಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮ ಎನ್ನುವ ಮೂಲಕ ಅಲ್ಲಿನ ಜನರಿಗೆ ಹತ್ತಿರವಾಗುವುದು ಒಂದು ಕಡೆ. ಇನ್ನೊಂದು ಕಡೆ, ಡಿಎಂಕೆ ಸರ್ಕಾರದ ಪ್ರಭಾವೀ ಸಚಿವ ಸೆಂಥಿಲ್ ಬಾಲಾಜಿ ಬಂಧನ ಕೂಡಾ ಕೇಂದ್ರದ ರಾಜಕೀಯದ ಒಂದು ಭಾಗ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಇಂತಹ ರಾಜಕೀಯವನ್ನು ಬಿಜೆಪಿ ಈಗಾಗಲೇ ಹಲವಾರು ರಾಜ್ಯದಲ್ಲಿ ಪ್ರಯೋಗಿಸಿದ್ದಾಗಿದೆ, ಅದರ ಇನ್ನೊಂದು ಭಾಗವೇ ತಮಿಳುನಾಡಿನ ಇತ್ತೀಚಿನ ಬೆಳವಣಿಗೆ.

ಚೆನ್ನೈನ ಸೆಕ್ರೆಟರಿಯೇಟ್ ನಲ್ಲಿ ಸತತ ಹದಿನೆಂಟು ತಾಸು ವಿಚಾರಣೆ
ಕೇಂದ್ರೀಯ ತನಿಖಾ ದಳವನ್ನು ತಮಗಿಷ್ಟ ಬಂದಂತೆ ಬಳಸಿಕೊಳ್ಳಲಾಗುತ್ತದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಲೇ ಬರುತ್ತಿವೆ. ಕೆಲವು ದಿನಗಳ ಹಿಂದೆ ಜಾರಿ ನಿರ್ದೇಶನಾಲಯ (Enforcement Directorate) ಚೆನ್ನೈನ ಸೆಕ್ರೆಟರಿಯೇಟ್ ನಲ್ಲಿ ಸತತ ಹದಿನೆಂಟು ತಾಸು ವಿಚಾರಣೆ ನಡೆಸಿ ಸೆಂಥಿಲ್ ಬಾಲಾಜಿಯವರನ್ನು ಬಂಧಿಸಿತ್ತು. ಇವರ ಮೇಲಿದ್ದ ಆರೋಪ ಹೊಸದೇನಲ್ಲ, ಹಾಗಾಗಿ ಇಡಿ ದಾಳಿ ಎನ್ನುವುದು ಕೇಂದ್ರದ ಅದೇ ಒತ್ತಡ ತಂತ್ರಗಾರಿಕೆ ಎಂದು ಹೇಳಲಾಗುತ್ತಿದೆ.
ಸೆಂಥಿಲ್ ಬಾಲಾಜಿ ಮೇಲೆ ಆರೋಪವಿತ್ತು
2011-15ರಲ್ಲಿ ಎಐಎಡಿಎಂಕೆ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಸೆಂಥಿಲ್ ಬಾಲಾಜಿ ಮೇಲೆ ಆರೋಪವಿತ್ತು, ಜೊತೆಗೆ, ಅವರು ಆ ವೇಳೆ ಅದೇ ಪಕ್ಷದಲ್ಲಿದ್ದರು ಕೂಡಾ. ಸೆಂಥಿಲ್ ತಮಿಳುನಾಡಿನ ಪಶ್ಚಿಮ ಭಾಗದ (ಕೊಯಂಬತ್ತೂರು, ತಿರುಪ್ಪೂರು, ನೀಲಗಿರೀಸ್ ಮುಂತಾದ ಜಿಲ್ಲೆಗಳು) ಪ್ರಭಾವೀ ನಾಯಕರೊಬ್ಬರಾಗಿದ್ದಾರೆ. ಏಕನಾಥ್ ಶಿಂಧೆ ರೀತಿಯಲ್ಲಿ ಅವರನ್ನು ಸೆಳೆಯಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸಿತ್ತು ಎಂದು ಹೇಳಲಾಗುತ್ತಿದೆ.

ಪರೋಕ್ಷವಾಗಿ ಸಿಎಂ ಸ್ಟಾಲಿನ್ ಅವರನ್ನು ಟಾರ್ಗೆಟ್ ಮಾಡಿರುವುದು
ಸೆಂಥಿಲ್ ಬಾಲಾಜಿ ಬಂಧನ ಎನ್ನುವುದು ಪರೋಕ್ಷವಾಗಿ ಸಿಎಂ ಸ್ಟಾಲಿನ್ ಅವರನ್ನು ಟಾರ್ಗೆಟ್ ಮಾಡಿರುವುದು, ಕಾರಣ, ಬಿಜೆಪಿ ವಿರುದ್ದ ಎಲ್ಲಾ ಪಕ್ಷಗಳು ಒಂದಾಗಬೇಕು ಎನ್ನುವ ಒಗ್ಗಟ್ಟಿನ ಮಂತ್ರವನ್ನು ಸ್ಟಾಲಿನ್ ಪ್ರಮುಖವಾಗಿ ಜಪಿಸುತ್ತಿರುವುದು. ಭ್ರಷ್ಟಾಚಾರ ಮಟ್ಟ ಹಾಕುಬೇಕು ಎನ್ನುವುದು ಸರಿ, ಆದರೆ, ತಮಗೆ ಬೇಕಾದ ಕರಪ್ಸನ್ ಗಳನ್ನು ಮಾತ್ರ ಟಾರ್ಗೆಟ್ ಮಾಡುವುದು ಕೂಡಾ, ಅಷ್ಟೇ ದೊಡ್ಡ ಭ್ರಷ್ಟಾಚಾರ ಎನ್ನುವುದು ಡಿಎಂಕೆ ನಾಯಕರ ಆರೋಪ.
ಅದರ ಒಂದು ಭಾಗವೇ ತೆಲುಗುದೇಶಂ ಜೊತೆ ಹತ್ತಿರವಾಗುತ್ತಿರುವುದು
ಕರ್ನಾಟಕದ ಚುನಾವಣೆಯನ್ನು ಬಿಜೆಪಿ ಹೀನಾಯವಾಗಿ ಸೋತ ನಂತರ, ಹಿಂದಿನ ಲೋಕಸಭಾ ಇಲೆಕ್ಷನ್ ನಲ್ಲಿ ಗೆದ್ದಷ್ಟು ಸೀಟನ್ನು ಗೆಲ್ಲುವ ವಿಶ್ವಾಸದಲ್ಲಿ ಅಮಿತ್ ಶಾ ಇಲ್ಲ. ಹಾಗಾಗಿ, ದಕ್ಷಿಣದ ರಾಜ್ಯಗಳ ಮೇಲೆ ಬಿಜೆಪಿಯ ಕಣ್ಣುಬಿದ್ದಿದೆ. ಅದರ ಒಂದು ಭಾಗವೇ ತೆಲುಗುದೇಶಂ ಜೊತೆ ಹತ್ತಿರವಾಗುತ್ತಿರುವುದು. ಅದೇ ದಾಟಿಯಲ್ಲಿ ಡಿಎಂಕೆ ಇಬ್ಬಾಗ ಮಾಡಲು ಹೊರಟಿರುವ ತಂತ್ರಗಾರಿಕೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಾಜಕೀಯದ ಒಂದೇ ನಾಣ್ಯದ ಎರಡು ಮುಖಗಳು
ಸೆಂಥಿಲ್ ಬಾಲಾಜಿ ಭ್ರಷ್ಟರೋ ಇಲ್ಲವೋ, ಫೈನಲ್ ತನಿಖಾ ವರದಿಯಲ್ಲಿ ಅದು ಗೊತ್ತಾಗಲಿದೆ. ಸೆಂಗೋಲ್ ಅನಾವರಣ ಮತ್ತು ಸೆಂಥಿಲ್ ಬಾಲಾಜಿ ಬಂಧನ ಎನ್ನುವುದು ರಾಜಕೀಯದ ಒಂದೇ ನಾಣ್ಯದ ಎರಡು ಮುಖಗಳು ಎಂದು ವಿಶ್ಲೇಷಿಸಲಾಗುತ್ತಿದೆ. ತಮಿಳುನಾಡು ಮತ್ತು ಕೇರಳದಂತಹ ರಾಜ್ಯಗಳು ಬಿಜೆಪಿಯನ್ನು ಈವರೆಗೆ ಸಾರಾಸಗಾಟವಾಗಿ ತಿರಸ್ಕರಿಸಿದ್ದಾರೆ. ಆದರೂ, ಮುಂದಿನ ರಾಜಕೀಯ ಬೆಳವಣಿಗೆಗಳ ಮೇಲೆ ಕುತೂಹಲ ಇದ್ದೇ ಇದೆ (ಮಾಹಿತಿ: ಡೆಕ್ಕನ್ ಹೆರಾಲ್ಡ್).












Click it and Unblock the Notifications